59 ವರ್ಷ ವಯಸ್ಸಿನಲ್ಲಿ ಚಕಚಕನೆ ಮರ ಏರಿ ಹಣ್ಣು ಕಿತ್ತ ಸೂಪರ್ ಸ್ಟಾರ್
ಸ್ಟಾರ್ ನಟರು ವಯಸ್ಸಾದರೂ ಹೀರೊ ಆಗಿಯೇ ತೆರೆಮೇಲೆ ನಟಿಸೋಕೆ ಇಷ್ಟಪಡುತ್ತಾರೆ. ತಮ್ಮ ಮಗಳ ವಯಸ್ಸಿನ ನಟಿಯರ ಜೊತೆ ರೊಮ್ಯಾನ್ಸ್ ಮಾಡುತ್ತಾರೆ. ವಯಸ್ಸಾದ ಬಳಿಕ ವಯಸ್ಸಿಗೆ ತಕ್ಕ ಪಾತ್ರ ಮಾಡಬೇಕು, ಯುವಕರಂತೆ ಮಿಂಚುವ ಆಸೆ ಯಾಕೆ ಎಂದು ಕೆಲವೊಮ್ಮೆ ನೆಟ್ಟಿಗರು ಟ್ರೋಲ್ ಮಾಡುತ್ತಿರುತ್ತಾರೆ.
ರಜನಿಕಾಂತ್, ಚಿರಂಜೀವಿ, ಬಾಲಯ್ಯ, ಕಮಲ್ ಹಾಸನ್, ಶಾರುಖ್ ಖಾನ್, ಸಲ್ಮಾನ್ ರೀತಿಯ ನಟರು ವಯಸ್ಸು 50 ದಾಟಿದರೂ ತೆರೆಮೇಲೆ ಹೀರೊ ಆಗಿಯೇ ನಟಿಸುತ್ತಿದ್ದಾರೆ. ತಲೆಗೆ ಡೈ ಹೊಡೆದುಕೊಂಡು 30ರ ಯುವಕರಂತೆ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಮೋಹನ್ ಲಾಲ್, ಮಮ್ಮುಟ್ಟಿ ಸೇರಿದಂತೆ ಕೆಲವರು ಮಾತ್ರ ಇದ್ದಕ್ಕೆ ತದ್ವಿರುದ್ಧ ಎನ್ನುವಂತೆ ವಯಸ್ಸಿಗೆ ತಕ್ಕ ಪಾತ್ರ ಮಾಡುತ್ತಾರೆ. ಶಿವಣ್ಣ ರೀತಿಯ ಕೆಲವರು ಮಾತ್ರ ವಯಸ್ಸು 60 ದಾಟಿದರೂ ಸಿಕ್ಕಾಪಟ್ಟೆ ಎನರ್ಜಿಟಿಕ್ ಆಗಿ ತೆರೆಮೇಲೆ ಮಿಂಚುತ್ತಾರೆ.

ವಯಸ್ಸಿನ ವಿಚಾರಕ್ಕೆ ಇತ್ತೀಚೆಗೆ ನಟ ಸಲ್ಮಾನ್ ಖಾನ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಸಲ್ಲು ಸೋಫಾ ಮೇಲೆ ಕೂರಲು ಎದ್ದು ನಿಲ್ಲಲು ಕಷ್ಟಪಟ್ಟಿದ್ದರು. ಆ ವೀಡಿಯೋ ವೈರಲ್ ಆಗಿತ್ತು. ಇನ್ನು 'ಸಿಂಕದರ್' ಚಿತ್ರದಲ್ಲಿ ಸಲ್ಮಾನ್ ಖಾನ್ ಜೋಡಿಯಾಗಿ ರಶ್ಮಿಕಾ ಮಂದಣ್ಣ ಡ್ಯುಯೆಟ್ ಹಾಡಿದ್ದರು. ಮಗಳ ವಯಸ್ಸಿನ ನಟಿ ಜೊತೆ ರೊಮ್ಯಾನ್ಸ್ ಎಲ್ಲಾ ಬೇಕಾ? ಎಂದು ಕೆಲವರು ಮೂದಲಿಸಿದ್ದರು.
'ಸಿಂಕದರ್' ಸಿನಿಮಾ ಟ್ರೈಲರ್ ಲಾಂಚ್ ವೇದಿಕೆಯಲ್ಲಿ ಸಲ್ಲು, ರಶ್ಮಿಕಾ ವಯಸ್ಸಿನ ಬಗ್ಗೆ ಚರ್ಚೆ ಆಯಿತು. ಈ ವೇಳೆ ಎದುರಾದ ಪ್ರಶ್ನೆಗೆ "ರಶ್ಮಿಕಾ ಅವರ ತಂದೆಗೆ ಇಲ್ಲದ ಸಮಸ್ಯೆ ನಿಮಗ್ಯಾಕೆ?" ಎನ್ನುವ ಅರ್ಥದಲ್ಲಿ ಸಲ್ಲು ಮರುಪ್ರಶ್ನೆ ಹಾಕಿದ್ದರು. ಸದ್ಯ ಸಲ್ಮಾನ್ ಖಾನ್ ಮರ ಏರಿ ಹಣ್ಣು ಕೀಳುತ್ತಿರುವ ವೀಡಿಯೋ ವೈರಲ್ ಆಗ್ತಿದೆ. ವಯಸ್ಸು 59 ಆಗಿದ್ದರೂ ಸಲ್ಲುಮಿಯಾ ಅನಾಯಾಸವಾಗಿ ಮರ ಏರಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಹಾಕುತ್ತಿದ್ದಾರೆ. "ಬೆರ್ರಿ ನಿಮಗೆ ಒಳ್ಳೆಯದು" ಎಂದು ಕ್ಯಾಪ್ಷನ್ ಕೊಟ್ಟು ವೀಡಿಯೋ ಹಂಚಿಕೊಂಡಿದ್ದಾರೆ.
ವಯಸ್ಸು 59 ಆಗಿದ್ದೂ ಸಲ್ಲು ಭಾಯ್ ಜೋಶ್ ಕಮ್ಮಿ ಆಗಿಲ್ಲ, ಆ ವಯಸ್ಸಿನಲ್ಲಿ ನಾವು ಅಷ್ಟು ಲವಲವಿಕೆಯಿಂದ ಇರ್ತೀವಾ? ಕಷ್ಟ ಕಷ್ಟ. ಆದಷ್ಟು ಫಿಟ್ ಆಗಿ ಇರಬೇಕು, ಸಲ್ಲುಮಿಯಾನ ನೋಡಿ ಕಲಿಯಬೇಕು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಸಲ್ಲುಗೆ ಪ್ರಾಣ ಬೆದರಿಕೆ ಇದೆ. ಹಾಗಾಗಿ ಸಾಕಷ್ಟು ಭದ್ರತೆ ನಡುವೆ ಓಡಾಡುತ್ತಿರುತ್ತಾರೆ. 'ಸಿಕಂದರ್' ಸಿನಿಮಾ ಚಿತ್ರೀಕರಣ, ಪ್ರಚಾರದ ಕಾರ್ಯಕ್ರಮಗಳಿಗೆ ಸಾಕಷ್ಟು ಭದ್ರತೆ ನಡುವೆ ಭಾಗವಹಿಸುವಂತಾಯಿತು.
ಎ. ಆರ್ ಮುರುಗದಾಸ್ ನಿರ್ದೇಶನದ 'ಸಿಕಂದರ್' ಸಿನಿಮಾ ಈದ್ ಸಂಭ್ರಮದಲ್ಲಿ ಬಂದು ಸೋತಿತ್ತು. ಹಾಗಾಗಿ ಸದ್ಯ ಸಲ್ಲು ತಮ್ಮ ಪನ್ವೆಲ್ ಫಾರ್ಮ್ಹೌಸ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅಲ್ಲೇ ಮರ ಏರಿ ಹಣ್ಣು ಕಿತ್ತಿರುವ ವೀಡಿಯೋ ಹಂಚಿಕೊಂಡಿದ್ದಾರೆ. ತಮ್ಮ ಫಿಟ್ನೆಸ್ ಬಗ್ಗೆ ಮಾತನಾಡುವವರಿಗೆ ತಿರುಗೇಟು ನೀಡಿದ್ದಾರೆ. ಸಲ್ಮಾನ್ ಖಾನ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಕೂಡ ಮೂಡಿದೆ.
ತೆಲುಗು ನಿರ್ದೇಶಕ ಹರೀಶ್ ಶಂಕರ್ ಇತ್ತೀಚೆಗೆ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿದ್ದಾರೆ. ಮೈತ್ರಿ ಮೂವಿಮೇಕರ್ಸ್ ಬ್ಯಾನರ್ ಅಡಿಯಲ್ಲಿ ದೊಡ್ಡ ಸಿನಿಮಾ ನಿರ್ಮಾಣಕ್ಕೆ ಪ್ಲ್ಯಾನ್ ನಡೀತಿದೆ ಎನ್ನಲಾಗ್ತಿದೆ. ಇನ್ನು 'ಭಜರಂಗಿ ಭಾಯಿಜಾನ್' ಸಿನಿಮಾ ಸೀಕ್ವೆಲ್ ಮಾಡುವ ಪ್ರಯತ್ನವೂ ಶುರುವಾಗಿದೆ ಎಂದು ಬಾಲಿವುಡ್ ಮಾಧ್ಯಮಗಳು ವರದೆ ಮಾಡಿವೆ. ಈಗಾಗಲೇ ಅದಕ್ಕಾಗಿ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಸಿದ್ಧಪಡಿಸಿದ್ದಾರೆ. ಶೀಘ್ರದಲ್ಲೇ ಸಲ್ಲುಮಿಯಾ ಹೊಸ ಸಿನಿಮಾ ಘೋಷಣೆ ಆಗಲಿದೆ.


Click it and Unblock the Notifications











