ದೀಪಾವಳಿಗೆ ಒಂದೊಳ್ಳೆ ಸಂದೇಶ ನೀಡಿದ ನಟ ಶಾರುಖ್ ಖಾನ್
ಬಾಲಿವುಡ್ನಲ್ಲಿ ಕಳೆದ ಒಂದು ತಿಂಗಳಿನಿಂದಲೂ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವಿಚಾರದಲ್ಲಿ ಸುದ್ದಿ ಆಗುತ್ತಿದ್ದಾರೆ. ಅದನ್ನು ಹೊರತುಪಡಿಸಿ, ಸಿನಿಮಾ ಶೂಟಿಂಗ್, ಜಾಹೀರಾತು ಚಿತ್ರೀಕರಣ ಹೀಗೆ ಎಲ್ಲೂ ಉತ್ಸಾಹ ತೋರದ ನಟ ಶಾರುಖ್, ಮಗನನ್ನು ಜೈಲಿನಿಂದ ಹೊರತರುವ ವರೆಗೂ ತನ್ನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳೊದಿಲ್ಲ ಅನ್ನುವಂತಹ ಸಾಕಷ್ಟು ಮಾತುಗಳು ಕೂಡ ಕೇಳಿ ಬಂದವು. ಆದರೆ ನಟ ಶಾರುಖ್ ಮನಸ್ಸಿನಲ್ಲಿ ಚಿಂತೆ ಇದ್ದರೂ, ಮಗನ ಬಂಧನದ ಬಗ್ಗೆ ಬೇಸರ ಇದ್ದರೂ ಪ್ರತಿಷ್ಠಿತ ಕ್ಯಾಡ್ಬರಿ ಜಾಹೀರಾತಿನ ಮೂಲಕ ಪುಟಿದೆದ್ದು ಬಂದಿದ್ದಾರೆ.
ಶಾರುಖ್ ಖಾನ್ ಕ್ಯಾಡ್ಬರಿ ಚಾಕಲೇಟ್ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಪ್ರತೀ ಬಾರಿಯಂತೆ ಈ ಸಲವು ದೀಪಾವಳಿ ಹಬ್ಬಕ್ಕೆ ವಿಶೇಷ ಕಾನ್ಸೆಪ್ಟ್ ಮೂಲಕ ಜಾಹೀರಾತು ಚಿತ್ರೀಕರಿಸಲಾಗಿದೆ. ಇದರಲ್ಲಿ ಶಾರುಖ್ ಖಾನ್ ಕೂಡ ಭಾಗಿ ಆಗಿದ್ದು, ಈ ಜಾಹೀರಾತು ಇದೀಗ ಬಿಡುಗಡೆ ಕೂಡ ಆಗಿದೆ. ಒಂದೊಳ್ಳೆ ಸಂದೇಶವನ್ನು ಜನರಿಗೆ ಈ ಆಡ್ ಮೂಲಕ ತೋರಿಸಲಾಗಿದ್ದು, ಶಾರುಖ್ ಖಾನ್ ಅವರು ಈ ಒಂದೇ ಒಂದು ಜಾಹಿರಾತಿನ ಮೂಲಕ ಜನರ ಮನ ಗೆದ್ದಿದ್ದಾರೆ ಅದಕ್ಕೆ ಕಾರಣ ಆಗಿರೋದು ಈ ಕ್ಯಾಡ್ಬರಿ ಜಾಹೀರಾತು.
ಜಾಹೀರಾತುಗಳೆಂದರೆ ಅದು ಜನರು ನಂಬುವಂತೆ ಇರಬೇಕು. ಹೆಚ್ಚಾಗಿ ಮನಸ್ಸು ಮುಟ್ಟಬೇಕು. ಜಾಹೀರಾತುಗಳ ಮೂಲಕ ನೈಜತೆಯನ್ನು ಪ್ರದರ್ಶಿಸಬೇಕು. ಈಗಾಗಲೇ ಕೊರೋನಾ ಬಂದು ಇಡೀ ಮನುಕುಲವೆ ನಲುಗಿ ಹೋಗಿದೆ. ಅದರಲ್ಲೂ ಈ ಸಣ್ಣ ವ್ಯಾಪಾರಿಗಳು, ಅಂಗಡಿ ವ್ಯಾಪಾರಸ್ಥರು, ಬಟ್ಟೆ ಮಾರಾಟಗಾರರು ಹೀಗೆ ಹಲವರು ನಷ್ಟವನ್ನು ಭರಿಸಲಾಗದೇ ಈಗಲೂ ಪರದಾಡುತ್ತಿದ್ದಾರೆ. ಆದರೆ, ಜನ ಮಾತ್ರ ಆನ್ಲೈನ್ ಶಾಪಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಇದು ಬೇಡ ದೀಪಾವಳಿಯ ಸಂತಸ ಸಿಗೋದು ನಮ್ಮ ಪಕ್ಕದ ಲೋಕಲ್ ಶಾಪ್ಗಳಲ್ಲಿ ವಸ್ತುಗಳನ್ನು ಖರೀದಿಸಿದಾಗ ಅನ್ನುವ ಸಂದೇಶ ಈ ಕ್ಯಾಡ್ಬರಿ ಜಾಹೀರಾತಿನಲ್ಲಿ ಮನಮುಟ್ಟುವಂತೆ ತೋರಿಸಲಾಗಿದೆ.

ಇದರಲ್ಲಿ ಸಣ್ಣ ಸಣ್ಣ ಅಂಗಡಿ ಮಾಲೀಕರು, ಬಟ್ಟೆ ಅಂಗಡಿ ಮಾಲಿಕ, ಮೋಬೈಲ್ ಶಾಪ್ ಯುವಕರು ಲಾಕ್ಡೌನ್ ಸಂದರ್ಭದಲ್ಲಿ ಆಗಿದ್ದ ಕಷ್ಟಗಳಿಂದ ನಾವು ಈಗಲೂ ಹೇಗೆ ಕಷ್ಟ ಅನುಭವಿಸುತ್ತೇವೆ ಎಂಬ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ. ವಿಶೇಷ ಅಂದರೆ ನಟ ಶಾರುಖ್ ದೀಪಾವಳಿಗೆ ತಾನು ತೊಟ್ಟಿರುವ ಶೂ, ಗಾಗಲ್ಸ್, ಶೇರ್ವಾನಿ, ಮತ್ತು ಸ್ವೀಟ್ ಗಳನ್ನು ಲೋಕಲ್ ಸ್ಟೋರ್ಗಳಿಂದಲೆ ತೆಗೆದುಕೊಂಡಿದ್ದೇನೆ, ನೀವು ಕೂಡ ನಿಮ್ಮ ಸುತ್ತಮುತ್ತಲಿನ ಸಣ್ಣ ವ್ಯಾಪಾರಸ್ಥರನ್ನು ಪ್ರೋತ್ಸಾಹಿಸಿ ಎಂದು ಕೇಳಿಕೊಂಡಿದ್ದಾರೆ.
ಇನ್ನು ಈ ಜಾಹೀರಾತಿನಲ್ಲಿ ಶಾರುಖ್ ಖಾನ್ ಸಾಕಷ್ಟು ಲೋಕಲ್ ಶಾಪ್ಗಳ ಹೆಸರನ್ನು ಬಳಕೆ ಮಾಡಿದ್ದಾರೆ. ಈ ಜಾಹೀರಾತು ಚಿತ್ರೀಕರಣಕ್ಕೂ ಮುಂಚೆ ಸಾಕಷ್ಟು ಪ್ರಚಾರ ಮಾಡಲಾಗಿತ್ತು. ನಿಮ್ಮ ಶಾಪ್ಗಳ ಬಗ್ಗೆ ಶಾರುಖ್ ಖಾನ್ ಆಡ್ನಲ್ಲಿ ಮಾತನಾಡಬೇಕಾದರೆ, ನಿಮ್ಮ ಉದ್ದಿಮೆ ಮತ್ತು ಸಂಪೂರ್ಣ ಮಾಹಿತಿ, ಹಾಗೂ ಲಾಕ್ಡೌನ್ನಿಂದ ಆಗಿರುವ ಕಷ್ಟಗಳ ಬಗ್ಗೆ ತಿಳಿಸಬೇಕು ಎಂದು ಹೇಳಲಾಗಿತ್ತು. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆ ಸಿಕ್ಕಿದ್ದು, ಆಯ್ದ ಒಂದಷ್ಟು ಶಾಪ್ಗಳ ಹೆಸರನ್ನು ಶಾರುಖ್ ಬಳಸಿದ್ದಾರೆ. ಇದನ್ನು ನೋಡಿದ ಅಂಗಡಿ ಮಾಲಿಕರು ನಮ್ಮ ಅಂಗಡಿ ಬಗ್ಗೆ ಶಾರುಖ್ ಮಾತನಾಡಿರೋದು ಖುಷಿಯಾಗಿದೆ ಎಂದಿದ್ದಾರೆ.

ಎರೆಡು ನಿಮಿಷಕ್ಕೂ ಹೆಚ್ಚು ಈ ಜಾಹೀರಾತು ಇದ್ದು ಕಳೆದ ವರ್ಷವು ದೀಪಾವಳಿಗೆ ಕ್ಯಾಡ್ಬರಿ ಕಂಪೆನಿ ಇದೇ ರೀತಿಯ ಜಾಹೀರಾತನ್ನು ಮಾಡಿತ್ತು. ಈ ಬಾರಿ ಕೂಡ "ನಾಟ್ ಜಸ್ಟ್ ಆ ಕ್ಯಾಡ್ಬರಿ ಆಡ್" ಎಂದು ಟ್ಯಾಗ್ಲೈನ್ ನೀಡುವ ಮೂಲಕ ವಿಶೇಷವಾಗಿ ಹಾಗೂ ನೈಜವಾಗಿ ಜನರ ಮನಮುಟ್ಟುವಂತೆ ಜಾಹೀರಾತನ್ನು ಹೊರತಂದಿದ್ದಾರೆ. ಈ ಜಾಹೀರಾತಿಗೆ ಉತ್ತಮ ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು, ಸಿನಿಮಾ ಇಂಡಸ್ಟ್ರಿಯ ಸಾಕಷ್ಟು ಮಂದಿ ಇದನ್ನು ಶೇರ್ ಮಾಡಿಕೊಂಡಿದ್ದಾರೆ. ಇಷ್ಟು ದಿನ ಶಾರುಖ್ ಯಾವುದೇ ಚಟುವಟಿಗೆಗಳಲ್ಲಿ ತೊಡಗಿಸಿಕೊಂಡಿರಲಿಲ್ಲ. ಹೀಗಾಗಿ ಈ ಜಾಹೀರಾತಿನಲ್ಲಿ ಶಾರುಖ್ ಕಾಣಿಸಿಕೊಂಡಿರೊದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications











