ಆರ್ಯನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ
ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ಗೆ ಇಂದು ಸಹ ಜಾಮೀನು ದೊರೆಯಲಿಲ್ಲ. ಈ ಹಿಂದೆ ಆರ್ಯನ್ ಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬಾಂಬೆ ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾ ಗೊಳಿಸಿತ್ತು.
ಇದೀಗ ಎನ್ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು ಇಂದು ಆರ್ಯನ್ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ನಾಳೆಗೆ (ಅಕ್ಟೋಬರ್ 14)ಕ್ಕೆ ಮುಂದೂಡಿದೆ.
ಆರ್ಯನ್ಗೆ ಜಾಮೀನು ನೀಡಬಾರದೆಂದು ವಾದಿಸಿದ ಎನ್ಸಿಬಿ ಪರ ವಕೀಲರು, ಆರ್ಯನ್ ಖಾನ್ ಹಾಗೂ ಇತರ ಬಂಧಿತರು ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದರು. ''ಆರ್ಯನ್ ಖಾನ್ ಬಳಿ ಡ್ರಗ್ಸ್ ಸಿಗದೇ ಇರಬಹುದು ಆದರೆ ಆರ್ಯನ್ಗೆ ಡ್ರಗ್ಸ್ ಪೆಡ್ಲರ್ಗಳ ಜೊತೆ ಸಂಪರ್ಕವಿತ್ತು. ಡ್ರಗ್ಸ್ ಪೆಡ್ಲರ್ಗಳ ಜೊತೆ ವ್ಯವಹಾರವಿತ್ತು. ಆರೋಪಿಗಳು ವಿದೇಶಿ ವಹಿವಾಟುಗಳನ್ನು ನಡೆಸಿದ್ದು ಇದರಲ್ಲಿ ಆರ್ಯನ್ ಖಾನ್ನದ್ದೂ ಪಾತ್ರವಿದೆ'' ಎಂದರು. ಜೊತೆಗೆ, ''ಆರ್ಯನ್ ಖಾನ್ ಈ ಹಿಂದೆ ಡ್ರಗ್ಸ್ ಖರೀದಿ ಮಾಡಿದ್ದರು ಅದಕ್ಕೆ ಪುರಾವೆಗಳು ಇವೆ'' ಎಂದರು.

ಅದಕ್ಕೂ ಮುನ್ನಾ ಆರ್ಯನ್ ಪರ ವಾದ ಮಂಡಿಸಿದ ಅನಿಲ್ ದೇಸಾಯಿ, ''ನನ್ನ ಕಕ್ಷೀದಾರನ ಬಳಿ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ ಹಾಗಿದ್ದರೂ ಆತನನ್ನು ಬಂಧನದಲ್ಲಿರಿಸಿರುವುದು ಸರಿಯಲ್ಲ'' ಎಂದರು. ''ಆರ್ಯನ್ ಖಾನ್ಗೆ ಜಾಮೀನು ನೀಡಿದರೆ ತನಿಖೆ ನಿಂತು ಹೋಗುವುದಿಲ್ಲ. ತನಿಖೆ ಪ್ರಗತಿಯಲ್ಲಿರುವುದಕ್ಕೆ ಆರ್ಯನ್ ಖಾನ್ಗೆ ಜಾಮೀನು ನೀಡುವುದಕ್ಕೂ ಸಂಬಂಧವಿಲ್ಲ'' ಎಂದು ವಾದಿಸಿದರು ಅನಿಲ್.
''ಆರ್ಯನ್ ಖಾನ್ ಒಂದು ವಾರದ ಮಟ್ಟಿಗೆ ಎನ್ಸಿಬಿ ವಶದಲ್ಲಿಯೇ ಇದ್ದರು. ಆತನ ಹೇಳಿಕೆಯನ್ನು ಎರಡು ಬಾರಿ ಎನ್ಸಿಬಿ ದಾಖಲು ಮಾಡಿದೆ. ಹಾಗಿದ್ದಾಗ್ಯೂ ತನಿಖೆ ಪ್ರಗತಿಯಲ್ಲಿದೆ ಎಂದು ಆರ್ಯನ್ ಅನ್ನು ಬಂಧನದಲ್ಲಿರುವುದು ಸೂಕ್ತವಲ್ಲ'' ಎಂದರು ಅನಿಲ್.
ನಾಳೆ (ಅಕ್ಟೋಬರ್ 14)ರ ಮಧ್ಯಾಹ್ನ 2:45 ಕ್ಕೆ ಜಾಮೀನು ಅರ್ಜಿಯ ವಿಚಾರಣೆ ಮುಂದುವರೆಯಲಿದೆ. ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಇಲ್ಲಿ ಅನಿಲ್ ದೇಸಾಯಿ, ಆರ್ಯನ್ ಪರವಾಗಿ ವಾದ ಮಂಡಿಸುತ್ತಿದ್ದಾರೆ.
ಅಕ್ಟೋಬರ್ 02 ರಂದು ಎನ್ಸಿಬಿಯು ಆರ್ಯನ್ ಅನ್ನು ವಶಕ್ಕೆ ಪಡೆದಿತ್ತು. ಮುಂಬೈನಲ್ಲಿ ಐಶಾರಾಮಿ ಕ್ರೂಸ್ ಒಂದರ ಮೇಲೆ ದಾಳಿ ನಡೆಸಿದ್ದ ಎನ್ಸಿಬಿ ಆರ್ಯನ್ ಖಾನ್, ಆತನ ಗೆಳೆಯ ಅರ್ಬಾಜ್ ಸೇಠ್ ಹಾಗೂ ಇನ್ನೂ ಆರು ಮಂದಿಯನ್ನು ವಶಕ್ಕೆ ಪಡೆದಿತ್ತು. ಅಕ್ಟೋಬರ್ 03 ರಂದು ಆರ್ಯನ್ ಖಾನ್, ಅರ್ಬಾಜ್ ಸೇಠ್ ಹಾಗೂ ಮಾಡೆಲ್ ಮುನ್-ಮುನ್ ಧಮೇಚಾ ಅವರುಗಳನ್ನು ಬಂಧಿಸಲಾಗಿತ್ತು. ಆರ್ಯನ್ ಬಳಿ ಯಾವುದೇ ಮಾದಕ ವಸ್ತು ಸಿಕ್ಕಿರಲಿಲ್ಲವಾದರೂ ಅವರನ್ನು ಬಂಧಿಸಲಾಯ್ತು. ಕೆಲವು ದಿನಗಳ ಬಳಿಕ ಆರ್ಯನ್ ಅತಿಥಿಯಾಗಿ ಹೋಗಿದ್ದ ಪಾರ್ಟಿಯನ್ನು ಆಯೋಜನೆ ಮಾಡಿದ್ದ ಸಂಸ್ಥೆಯ ನಾಲ್ವರು ಸಿಬ್ಬಂದಿಗಳನ್ನು ಬಂಧಿಸಲಾಯ್ತು.
ಆರ್ಯನ್ ಪ್ರಕರಣದಲ್ಲಿ ಎನ್ಸಿಬಿಯ ಕಾರ್ಯವಿಧಾನದ ಬಗ್ಗೆ ಹಲವು ಅನುಮಾನಗಳು ಎದ್ದಿವೆ. ಅಕ್ಟೋಬರ್ 02ರಂದು ಎನ್ಸಿಬಿ ಮಾಡಿದ ಕಾರ್ಯಾಚರಣೆಯಲ್ಲಿ ಇಲಾಖೆಯವರಲ್ಲದ ವ್ಯಕ್ತಿಗಳು ಭಾಗಿಯಾಗಿದ್ದಾರೆ. ತನ್ನನ್ನು ತಾವು ಖಾಸಗಿ ಪತ್ತೆದಾರ ಎಂದು ಹೇಳಿಕೊಳ್ಳುವ ಮಾಜಿ ಅಪರಾಧಿ ಒಬ್ಬ ಹಾಗೂ ಬಿಜೆಪಿ ಮುಖಂಡನೊಬ್ಬ ಎನ್ಸಿಬಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ಈಗ ಪ್ರಶ್ನೆಗೆ ಕಾರಣವಾಗಿದೆ.


Click it and Unblock the Notifications











