ಶಾರುಖ್ ಮಗನಿಗೆ 14 ದಿನ ಜೈಲು: ಜಾಮೀನು ವಿಚಾರಣೆ ನಾಳೆ
ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ಗೆ ಇಂದು ಜಾಮೀನು ದೊರೆತಿಲ್ಲ. ಬದಲಿಗೆ ಹದಿನಾಲ್ಕು ದಿನಗಳ ಕಾಲ ಆರ್ಯನ್ ಅನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡ್ರಗ್ಸ್ ಪ್ರಕರಣದಲ್ಲಿ ಎನ್ಸಿಬಿಯಿಂದ ಬಂಧಿತವಾಗಿರುವ ಆರ್ಯನ್ ಖಾನ್ ಅನ್ನು ಅಕ್ಟೋಬರ್ 07ರವರೆಗೆ ಎನ್ಸಿಬಿ ವಶಕ್ಕೆ ನೀಡಿ ಈ ಹಿಂದೆ ಕೋರ್ಟ್ ಆದೇಶ ನೀಡಿತ್ತು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯವು ಆರ್ಯನ್ ಖಾನ್ ಅನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳಿಸಿತು.
ಆರ್ಯನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರಾದರೂ ಜಾಮೀನು ಅರ್ಜಿಯನ್ನು ಇಂದು ವಿಚಾರಣೆ ಮಾಡಲು ಸಾಧ್ಯವಿಲ್ಲವೆಂದು, ಜಾಮೀನು ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಬೆಳಿಗ್ಗೆ 12 ಗಂಟೆಗೆ ಮಾಡುವುದಾಗಿ ನ್ಯಾಯಾಧೀಶರು ಹೇಳಿದರು.

ನ್ಯಾಯಾಲಯದ ಆದೇಶದಂತೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮುಂಬೈನ ಬೈಕುಲ್ಲಾ ಜೈಲಿಗೆ ತೆರಳಬೇಕಿದೆ. ಬೈಕುಲ್ಲಾ ಜೈಲಿನಲ್ಲಿ ರಾತ್ರಿ ಹೊತ್ತು ಕೋವಿಡ್ ವರದಿ ಇಲ್ಲದ ಖೈದಿಗಳಿಗೆ ಪ್ರವೇಶವಿಲ್ಲವಾದ್ದರಿಂದ ಇಂದಿನ ರಾತ್ರಿಯನ್ನು ಎನ್ಸಿಬಿ ಕಚೇರಿಯಲ್ಲಿಯೇ ಕಳೆಯಲಿರುವ ಆರ್ಯನ್ ಖಾನ್ ಅನ್ನು ನಾಳೆ ಕೋವಿಡ್ ವರದಿ ಬಳಿಕ ಜೈಲಿಗೆ ಕಳಿಸಲಾಗುತ್ತದೆ.
ವಿಚಾರಣೆ ವೇಳೆ ಎನ್ಸಿಬಿ ಪರ ವಾದ ಮಂಡಿಸಿದ ವಕೀಲ ಅನಿಲ್ ಸಿಂಗ್, ''ಆರ್ಯನ್ ಖಾನ್ ಹೇಳಿಕೆ ಮೇರೆಗೆ ಅಚಿತ್ ಕುಮಾರ್ ಅನ್ನು ಬಂಧಿಸಲಾಗಿದ್ದು ಆತನಿಂದ ಮಾದಕ ವಸ್ತುಗಳನ್ನು ಬರಾಮತ್ತು ಮಾಡಲಾಗಿದೆ. ಅಲ್ಲದೆ ಇವರು ವಿದೇಶಿ ಪ್ರಜೆಗಳೊಂದಿಗೂ ಸಂಪರ್ಕ ಹೊಂದಿರುವುದಾಗಿ ಗೊತ್ತಾಗಿದೆ. ಹಾಗಾಗಿ ಇವರಿಬ್ಬರ ಮುಖಾ-ಮುಖಿ ವಿಚಾರಣೆ ನಡೆಯಬೇಕಿದೆ'' ಎಂದರು.
ಆರ್ಯನ್ ಪರ ವಕೀಲರು ವಾದ ಮಂಡಿಸಿ, ''ಪಾರ್ಟಿಗೂ ಆರ್ಯನ್ಗೂ ಸಂಬಂಧವಿಲ್ಲ. ಪಾರ್ಟಿ ಆಯೋಜಕರೇ ಬೇರೆ. ಆರ್ಯನ್ ಅತಿಥಿಯಾಗಿ ಹೋಗಿದ್ದರಷ್ಟೆ. ಅಲ್ಲದೆ ಆರ್ಯನ್ ಬಳಿ ಯಾವುದೇ ಡ್ರಗ್ಸ್ ದೊರೆತಿಲ್ಲ'' ಎಂದರು.
ಆರ್ಯನ್ ಖಾನ್ ಮತ್ತು ಬಂಧಿತ ಇತರರಿಗೂ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತು. ಎಲ್ಲ ಆರೋಪಿಗಳನ್ನು ಎನ್ಸಿಬಿಯು ವಶಕ್ಕೆ ಕೇಳಿತಾದರೂ ಅದು ಸಾಧ್ಯವಿಲ್ಲವೆಂದು, ಈಗಾಗಲೇ ಸಾಕಷ್ಟು ಸಮಯವನ್ನು ವಿಚಾರಣೆಗೆ ನೀಡಲಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
ಆರ್ಯನ್ ಖಾನ್ ಪ್ರಕರಣ ಸಾಕಷ್ಟು ಚರ್ಚೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಾಕಿದೆ. ಇಂದು ವಿಚಾರಣೆ ವೇಳೆ, ಆರ್ಯನ್ ಜೊತೆ ಬಂಧಿತನಾಗಿರುವ ಅರ್ಬಾಜ್ ಸೇಠ್ ಹೇಳಿರುವ ಮಾತುಗಳು ಬಹುವಾಗಿ ಚರ್ಚೆ ಕಾರಣವಾಗಿವೆ. ವಿಚಾರಣೆ ವೇಳೆ ಮಾತನಾಡಿರುವ ಅರ್ಬಾಜ್ ಸೇಠ್, ''ನಮ್ಮ ಬಳಿ ಡ್ರಗ್ಸ್ ಇರಲಿಲ್ಲ. ಎನ್ಸಿಬಿ ಅಧಿಕಾರಿಗಳೇ ಡ್ರಗ್ಸ್ ಅನ್ನು ನಮ್ಮ ಬ್ಯಾಗಿನ ಒಳಗೆ ಇಟ್ಟರು. ಬೇಕಿದ್ದರೆ ಕ್ರೂಸ್ ಶಿಪ್ನ ಸಿಸಿಟಿವಿ ದೃಶ್ಯವಾಗಳಿಗಳನ್ನು ಪರಿಶೀಲಿಸಿ'' ಎಂದು ಹೇಳಿದರು. ವಕೀಲರು ಆಗಿರುವ ಅರ್ಬಾಜ್ ಸೇಠ್ ತಂದೆ, ನಿನ್ನೆಯೇ ಪ್ರಕರಣದ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದರು.
ಆರ್ಯನ್ ಖಾನ್ ಬಂಧನದ ಪ್ರಕರಣದಲ್ಲಿ ಎನ್ಸಿಬಿ ಕಾರ್ಯಾಚರಣೆ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಎನ್ಸಿಬಿ ಕಾರ್ಯಾಚರಣೆಯಲ್ಲಿ ಖಾಸಗಿ ವ್ಯಕ್ತಿಗಳು ಅದರಲ್ಲೂ ಬಿಜೆಪಿಗೆ ಸೇರಿದ ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ರಾಜಕೀಯ ಪಕ್ಷ ಎನ್ಸಿಪಿ ಆರೋಪ ಮಾಡಿದೆ. ಜೊತೆಗೆ ಎನ್ಸಿಬಿಯೇ 'ಆರ್ಯನ್ ಬಳಿ ಡ್ರಗ್ಸ್ ದೊರೆತಿಲ್ಲ' ಎಂದು ಹೇಳಿದೆ. ಆರ್ಯನ್ ಡ್ರಗ್ಸ್ ಸೇವಿಸಿರುವುದಕ್ಕೂ ಸಾಕ್ಷ್ಯವಿಲ್ಲ ಎಂದಿದೆ ಹಾಗಿದ್ದ ಮೇಲೆ ಆತನ ಬಂಧನವಾಗಿದ್ದು ಹೇಗೆ? ಏಕೆ? ಎಂದು ಸಹ ಹಲವರು ಪ್ರಶ್ನೆ ಕೇಳಿದ್ದಾರೆ. ಎನ್ಸಿಬಿ ದಾಳಿ ಮಾಡಿದ ಪಾರ್ಟಿಯಲ್ಲಿ 1500 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಆದರೆ ಎನ್ಸಿಬಿ ಕೇವಲ ಎಂಟು ಮಂದಿಯನ್ನು ವಶಕ್ಕೆ ಪಡೆಯಿತು. ಆ ನಂತರ ಕೇವಲ ಮೂರು ಮಂದಿಯನ್ನು ಬಂಧಿಸಿತು. ಪಾರ್ಟಿಯನ್ನು ಅರೇಂಜ್ ಮಾಡಿದ್ದ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯನ್ನು ಪ್ರಶ್ನೆಯೇ ಮಾಡಿರಲಿಲ್ಲ. ಇನ್ನು ಹಲವು ವಿಷಯಗಳ ಬಗ್ಗೆ ನೆಟ್ಟಿಗರು ಪ್ರಶ್ನೆಗಳನ್ನು ಎತ್ತಿದ್ದಾರೆ.


Click it and Unblock the Notifications











