ಈ ಚಿತ್ರವನ್ನ ರೀಮೇಕ್ ಮಾಡೋಕೆ 35 ಕೋಟಿ ಚೆಕ್ ಪಡೆದಿದ್ದಾರಂತೆ ಶಾಹೀದ್.!
ತೆಲುಗು ಬ್ಲಾಕ್ ಬಸ್ಟರ್ 'ಅರ್ಜುನ್ ರೆಡ್ಡಿ' ಚಿತ್ರವನ್ನ ಹಿಂದಿಯಲ್ಲಿ ರೀಮೇಕ್ ಮಾಡಿ ಗೆದ್ದು ಬೀಗಿದ ಶಾಹೀದ್ ಕಪೂರ್, ಈಗ ಮತ್ತೊಂದು ರೀಮೇಕ್ ಚಿತ್ರಕ್ಕೆ ಸಜ್ಜಾಗಿದ್ದಾರೆ.
ಈ ಚಿತ್ರಕ್ಕಾಗಿ ಶಾಹೀದ್ ಕಪೂರ್ ಬರೋಬ್ಬರಿ 35 ಕೋಟಿ ರೂಪಾಯಿಯ ಚೆಕ್ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಈಗ ಬಾಲಿವುಡ್ ನಲ್ಲಿ ಸದ್ದು ಮಾಡ್ತಿದೆ. ಕಬೀರ್ ಸಿಂಗ್ ಸಿನಿಮಾದ ಒಂದು ಯಶಸ್ಸು ಶಾಹೀದ್ ಕಪೂರ್ ವೃತ್ತಿ ಜೀವನದ ದಿಕ್ಕನ್ನು ಇಷ್ಟು ದೊಡ್ಡ ಮಟ್ಟಕ್ಕೆ ಬದಲಾಯಿಸಿಬಿಡ್ತಾ ಎಂಬ ಅಚ್ಚರಿ ಈಗ ಸಾಮಾನ್ಯರನ್ನು ಕಾಡ್ತಿದೆ.
ಅಷ್ಟಕ್ಕೂ, ಶಾಹೀದ್ ಕಪೂರ್ ರೀಮೇಕ್ ಮಾಡಲು ಹೊರಟಿರುವ ಚಿತ್ರ ಯಾವುದು ಎಂದು ನೋಡಿದ್ರೆ, ತೆಲುಗಿನ ಸೂಪರ್ ಹಿಟ್ ಸಿನಿಮಾ ಜೆರ್ಸಿ. ನಾನಿ ಮತ್ತು ಶ್ರದ್ಧಾ ಶ್ರೀನಾಥ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಈ ಚಿತ್ರ ದೊಡ್ಡ ಹಿಟ್ ಆಗಿತ್ತು.

ಗೌತಮ್ ತಿನ್ನಾನುರಿ ಈ ಚಿತ್ರ ನಿರ್ದೇಶನ ಮಾಡಿದ್ದರು. ಇದೀಗ, ಹಿಂದಿಯಲ್ಲೂ ಇವರೇ ನಿರ್ದೇಶನದ ಜವಾಬ್ದಾರಿಯನ್ನ ಹೊತ್ತುಕೊಂಡಿದ್ದಾರೆ. 35 ಕೋಟಿ ಚೆಕ್ ಮಾತ್ರವಲ್ಲ, ಶೇಕಡಾ 30 ರಷ್ಟು ಲಾಭವನ್ನ ಕೂಡ ಶಾಹೀದ್ ಪಡೆದುಕೊಳ್ಳಲಿದ್ದಾರೆ ಎಂದು ಬಾಲಿವುಡ್ ಚಿತ್ರ ವಿಶ್ಲೇಷಕರು ಹೇಳುತ್ತಿದ್ದಾರೆ.
ಬಿಟೌನ್ ನಲ್ಲಿ ಸಲ್ಮಾನ್ ಖಾನ್, ಶಾರೂಖ್ ಖಾನ್, ಅಕ್ಷಯ್ ಕುಮಾರ್ ಅಂತಹ ಸ್ಟಾರ್ ನಟರು, ಸಂಭಾವನೆ ಜೊತೆಗೆ ಚಿತ್ರದಿಂದ ಬಂದ ಲಾಭದಲ್ಲಿ ಶೇಕಡಾವಾರು ಲೆಕ್ಕದಲ್ಲಿ ಹಣ ಪಡೆಯುತ್ತಾರೆ. ಇಂತಹ ಹೊಸ ನಿಯಮವನ್ನ ಈಗ ಶಾಹೀದ್ ಕಪೂರ್ ಕೂಡ ಆರಂಭಿಸಿದ್ದಾರಂತೆ.
ಎಲ್ಲ ಅಂದುಕೊಂಡಂತೆ ಆಗಿದ್ದರೇ, ಈ ಚಿತ್ರದ ಹಿಂದಿ ರೀಮೇಕ್ ನಲ್ಲಿ ಶಾಹೀದ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ನಟಿಸಬೇಕಿತ್ತು. ಕೊಡಗಿನ ಕುವರಿಗೆ ಆಫರ್ ಮಾಡಲು ಚಿತ್ರತಂಡ ಯೋಜಿಸಿದ್ದರಂತೆ. ಸದ್ಯಕ್ಕೆ ನಾಯಕಿ ಯಾರು ಎಂಬುದು ಅಂತಿಮವಾಗಿಲ್ಲ. ಮುಂದಿನ ಆಗಸ್ಟ್ ತಿಂಗಳಲ್ಲಿ ಜೆರ್ಸಿ ಹಿಂದಿ ರೀಮೇಕ್ ತೆರೆಗೆ ಬರಲಿದೆ.


Click it and Unblock the Notifications











