ಬಾಲಿವುಡ್ ಪಾಲಾದ 'ಕನ್ನಡ'ದ ಅಶ್ವತ್ಥಾಮ ; ಶಿವಣ್ಣ ಜಾಗಕ್ಕೆ ಬಂದ ಶಾಹಿದ್ ಕಪೂರ್..!
ನಿಮಗೆ ನೆನಪಿದೆಯಾ.. ನಾಲ್ಕು ವರ್ಷಗಳ ಹಿಂದೆ ಸಿನಿಮಾ ಒಂದು ಘೋಷಣೆಯಾಗಿತ್ತು. ಆ ಸಿನಿಮಾದ ಹೆಸರು ಅಶ್ವತ್ಥಾಮ. ಚಿತ್ರದ ಕಥಾನಾಯಕ ಡಾ.ಶಿವರಾಜ್ ಕುಮಾರ್ ಅವರಾದರೆ, ನಿರ್ದೇಶನದ ಜವಾಬ್ದಾರಿಯನ್ನ ವಹಿಸಿಕೊಂಡಿದ್ದವರು ಅವನೇ ಶ್ರೀಮನ್ನಾರಾಯಣ ಖ್ಯಾತಿಯ ಸಚಿನ್ ರವಿ. ಇನ್ನೂ ಆಗ ಒಂದಾದ ಮೇಲೊಂದು ಸಿನಿಮಾಗಳನ್ನ ನಿರ್ಮಾಣ ಮಾಡ್ತಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರದ ನಿರ್ಮಾಪಕರಾಗಿದ್ದರು.
ಆ ಕಾಲಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸಿನಿಮಾ ಇದು. ಯಾಕೆಂದರೆ ಶಿವಣ್ಣ ಅವರ ಜೊತೆ ಈ ಸಿನಿಮಾವನ್ನ ಸಚಿನ್ ರವಿ ಅನೌನ್ಸ್ ಮಾಡುವ ಮೊದಲು ಅನೂಪ್ ಭಂಡಾರಿ ಕೂಡ ಸುದೀಪ್ ಅವರಿಗಾಗಿ ಅಶ್ವತ್ಥಾಮ ಹೆಸರಿನ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಈ ಕಾರಣಕ್ಕೆ ಎರಡು ಅಭಿಮಾನಿ ಬಣದ ನಡುವೆ ಟ್ವೀಟ್ ವಾರ ನಡೆದಿತ್ತು. ಕಾಲಾನುಕ್ರಮೇಣ ಹಾಗೇ ತಣ್ಣಗಾಯಿತು ಕೂಡ.

ಸದ್ಯದ ಬ್ರೇಕಿಂಗ್ ನ್ಯೂಸ್ ಏನೆಂದರೆ ಕನ್ನಡದ ಪಾಲಾಗಬೇಕಿದ್ದ ಅಶ್ವತ್ಥಾಮ ಬಾಲಿವುಡ್ ನ ತೆಕ್ಕೆಗೆ ಬಿದ್ದಿದ್ದಾನೆ. ಈ ಕುರಿತು ಮುಂಬೈನಲ್ಲಿ ಮಂಗಳವಾರ ನಡೆದ ಪ್ರೈಮ್ ವಿಡಿಯೋ ಕಾರ್ಯಕ್ರಮದಲ್ಲಿ ಅಧಿಕೃತ ಘೋಷಣೆಯೂ ಆಗಿದೆ.
ಇನ್ನೂ ಇದೇ ಸಮಯದಲ್ಲಿ ಮಾತನಾಡಿರುವ ಸಚಿನ್ ರವಿ ʻʻಅಶ್ವತ್ಥಾಮನ ಕುರಿತ ಕತೆ ಹೇಳುವ ನನ್ನ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರಿಸಿದ್ದೇನೆ. ಉಳಿದಿದ್ದು ಆ ಶ್ರೀಕೃಷ್ಣನಿಗೆ ಬಿಡುತ್ತೇನೆʼʼ ಎಂದಿದ್ದಾರೆ. ''ನನ್ನ ಬಾಲ್ಯದಿಂದಲೂ ಅಶ್ವತ್ಥಾಮನ ಪಾತ್ರ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಈ ಪಾತ್ರದ ಬಗ್ಗೆಯೇ ಚಿತ್ರ ಮಾಡುವ ಯೋಜನೆ ಹೊಂದಿದ್ದೆ. ಕಡೆಗೂ ನನ್ನ ಕಲ್ಪನೆಯ ಚಿತ್ರ ಸೆಟ್ಟೇರುತ್ತಿದೆ ಎಂಬ ಸಂಭ್ರಮ ನನ್ನದು'' ಎಂದಿದ್ದಾರೆ.

ಇಂಟ್ರೆಸ್ಟಿಂಗ್ ಅಂದರೆ ಅಶ್ವತ್ಥಾಮ ಹಿಂದಿಯಲ್ಲಿ ನಿರ್ಮಾಣವಾಗ್ತಿದೆ. ಆದರೆ ಈ ಸಿನಿಮಾ ಕನ್ನಡಕ್ಕೂ ಡಬ್ ಆಗ್ತಿದೆ. ಈ ಮೂಲಕ ಮಹಾಭಾರತದ ಈ ಅಶ್ವತ್ಥಾಮ ಕಥೆಯನ್ನ ಕನ್ನಡದಲ್ಲಿಯೇ ಕಣ್ತುಂಬಿಕೊಳ್ಳುವ ಸುವರ್ಣ ಅವಕಾಶವನ್ನ ಕನ್ನಡಿಗರಿಗೆ ನೀಡಿದ್ದಾರೆ ಸಚಿನ್ ರವಿ ಹಾಗೂ ಶಾಹಿದ್ ಕಪೂರ್. ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು, ಮಲಯಾಳಂನಲ್ಲಿ ಅಶ್ವತ್ಥಾಮ ಅಬ್ಬರಿಸಲಿದ್ದಾನೆ.
ಇನ್ನೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಖಾಲಿ ಮಾಡಿದ ಜಾಗವನ್ನ ರಕುಲ್ ಪ್ರೀತ್ ಸಿಂಗ್ ಗಂಡ ಜಾಕಿ ಭಗ್ನಾನಿ ಆಕ್ರಮಿಸಿಕೊಂಡಿದ್ದಾರೆ. ಇವರ ಅಕ್ಕ ಪಕ್ಕದಲ್ಲಿ ವಿಷ್ಣು ಭಗ್ನಾನಿ, ದೀಪ್ತಿಕಾ ದೇಶಮುಖ್ ಇದ್ದಾರೆ.

ಅಂದ್ಹಾಗೇ ಶಾಹಿದ್ ಕಪೂರ್ ಅವರಿಗೆ ಸಚಿನ್ ರವಿ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಇಂದು ನಿನ್ನೆಯದಲ್ಲ. ಕಳೆದ ವರ್ಷದಿಂದ ಇಂಥಹದ್ದೊಂದು ಸುದ್ದಿ ಹರಿದಾಡ್ತಾನೇ ಇತ್ತು. ಆಗ ಶಾಹಿದ್ ಕಪೂರ್ ಜೊತೆ ಮುಂದಿನ ಸಿನಿಮಾ ಬಗ್ಗೆ ಮಾತುಕತೆ ನಡೆಸುತ್ತಿರುವುದು ನಿಜ. ಆದರೆ ಇದು ಅಶ್ವತ್ಥಾಮ ಸಿನಿಮಾ ಅಲ್ಲ. ಶಿವಣ್ಣ ಅವರಿಗೆ ಮಾಡಿದ ಕಥೆಯಂತೂ ಖಂಡಿತ ಅಲ್ಲ. ಇದು ಬೇರೆಯದ್ದೇ ಕಥೆ. ಶಾಹಿದ್ ಕಪೂರ್ ಜೊತೆ ಪೌರಾಣಿಕ ಸಿನಿಮಾ ಮಾಡಲು ಪ್ರಯತ್ನಿಸುತ್ತಿದ್ದೇನೆ. ಹಲವು ದಿನಗಳಿಂದ ಈ ಸ್ಕ್ರಿಪ್ಟ್ ನನ್ನ ಬಳಿ ಇದೆ. ಮಾತುಕತೆ ಅಂತಿಮವಾಗಿ ಎಲ್ಲಾ ಅಧಿಕೃತವಾದ ಬಳಿಕ ಮಾಹಿತಿ ನೀಡುತ್ತೇನೆ ಎಂದಿದ್ದರು ಸಚಿನ್ ರವಿ. ಆದರೆ ಈಗ ಅಶ್ವತ್ಥಾಮನನ್ನೇ ಬಾಲಿವುಡ್ ನ ಕರೆದುಕೊಂಡು ಹೋಗಿ ನಿಲ್ಲಿಸಿದ್ದಾರೆ
ಒಟ್ಟಿನಲ್ಲಿ ಕನ್ನಡದಲ್ಲಿ ನಿರ್ಮಾಣವಾಗಬೇಕಿದ್ದ ಸಿನಿಮಾ, ಬಾಲಿವುಡ್ ನವರ ಪಾಲಾಗಿದೆ. ಅವನೇ ಶ್ರೀಮನ್ನಾರಾಯಣ ಚಿತ್ರದ ನಂತರ ಹೆಚ್ಚು ಕಡಿಮೆ ನಾಲ್ಕು ವರ್ಷದ ವನವಾಸವನ್ನ ಮುಗಿಸಿರುವ ಸಚಿನ್ ರವಿ, ಅಶ್ವತ್ಥಾಮನ ಹಿಂದಿಯಲ್ಲಿ ಹೇಗೆ ಕಣಕ್ಕಿಳಿಸುತ್ತಾರೆ, ಅಶ್ವತ್ಥಾಮನ ಅವತಾರದಲ್ಲಿ ಶಾಹಿದ್ ಕಪೂರ್ ಹೇಗೆ ಕಾಣ್ತಾರೆ ಅನ್ನುವುದನ್ನ ಕಾದು ನೋಡಬೇಕಿದೆ.


Click it and Unblock the Notifications











