ರಾಜ್ ಕುಂದ್ರ ಬಂಧನದ ಬಳಿಕ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದ ಬಗ್ಗೆ ಶಮಿತಾ ಶೆಟ್ಟಿ ಪ್ರತಿಕ್ರಿಯೆ
ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಇತ್ತೀಚೆಗಷ್ಟೇ ಬಿಗ್ ಬಾಸ್ ಒಟಿಟಿ ಶೋ ಮುಗಿಸಿ ಮನೆಗೆ ಮರಳಿದ್ದಾರೆ. ಬಿಗ್ ಬಾಸ್ ಒಟಿಟಿಯಲ್ಲಿ ಶಮಿತಾ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಶಿಲ್ಪಾ ಶೆಟ್ಟಿ ಸಹೋದರಿ ಬಿಗ್ ಬಾಸ್ ಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಸುದ್ದಿ ಬ್ರೇಕ್ ಆಗುತ್ತಿದ್ದಂತೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿತ್ತು. ಕಾರಣ ಅದೆ ಸಮಯದಲ್ಲಿ ಶಮಿತಾ ಶೆಟ್ಟಿ ಭಾವ, ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಜೈಲು ಸೇರಿದ್ದರು.
ರಾಜ್ ಕುಂದ್ರ ಬಂಧನದ ಬಳಿಕ ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ ಸೇರಿದಂತೆ ಇಡೀ ಕುಟುಂಬ ಸಿಕ್ಕಾಪಟ್ಟೆ ಟ್ರೋಲ್ ಗೆ ಗುರಿಯಾಗಿದ್ದರು. ರಾಜ್ ಕುಂದ್ರ ಬಂಧನದಿಂದ ಮುಜುಗರಕ್ಕೊಳಗಾಗಿದ್ದ ಶಿಲ್ಪಾ ಶೆಟ್ಟಿ ಮತ್ತು ಸಹೋದರಿ ಶಮಿತಾ ಶೆಟ್ಟಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿತ್ತು. ಅದೇ ಸಮಯದಲ್ಲಿ ಶಮಿತಾ ಶೆಟ್ಟಿ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದರು. ಹಾಗಾಗಿ ಶಮಿತಾ ಮೇಲೆ ಕುತೂಹಲ ಹೆಚ್ಚಾಯಿತು.
ಬಿಗ್ ಮನೆಯಲ್ಲಿ ಶಮಿತಾ ಏನಾದರೂ ಹೇಳಬಹುದಾ, ಹೇಗೆ ನಡೆದುಕೊಳ್ಳಲಿದ್ದಾರೆ ಎನ್ನುವ ಕುತೂಹವೂ ಹೆಚ್ಚಾಗಿತ್ತು. ಆದರೆ ಬಿಗ್ ಬಾಸ್ ಶಮಿತಾ ಈ ಬಗ್ಗೆ ಯಾವುದೇ ಮಾತು ಆಡಿಲ್ಲ. ಇದೀಗ ಕಷ್ಟದ ಸಮಯವನ್ನು ಎದುರಿಸಿದ ಬಗ್ಗೆ ಶಮಿತಾ ಬಹಿರಂಗ ಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಶಮಿತಾ, "ನನಗೆ ಮೊದಲು ತುಂಬಾ ಕಷ್ಟವಾಗಿತ್ತು. ಏಕೆಂದರೆ ಆಗ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ನಾನು ಯಾವುದೇ ತಪ್ಪಿಲ್ಲದಿದ್ದರೂ ಭಾರಿ ಟ್ರೋಲ್ ಗೆ ಒಳಗಾಗುತ್ತಿದೆ. ಆ ಸಮಯದಲ್ಲಿ ನನ್ನ ಕುಟುಂಬ ಕೂಡ ಮನೆಯಲ್ಲಿ ಲಾಕ್ ಆಗುವುದನ್ನು ಬಯಸಿತ್ತು. ಅಲ್ಲದೆ ಬಿಗ್ ಬಾಸ್ ಗೆ ಹೋಗುವುದು ಮೊದಲೇ ಒಪ್ಪಂದ ಆಗಿತ್ತು. ಹಾಗಾಗಿ ಇದರಿಂದ ಹಿಂದೆ ಸರಿಯಲು ನಾನು ಬಯಸಿಲ್ಲ. ನನ್ನ ಮಾತಿಗೆ ಅಂಟಿಕೊಂಡು ಮುಂದುವರೆಯಲು ಬಯಸುತ್ತೇನೆ. ಶೋ ಖಂಡಿತವಾಗಿ ನಡೆಯಬೇಕು" ಎಂದು ಹೇಳಿದರು.

"ಈ ಸಮಯದಲ್ಲಿ ಜನರು ಕೆಲಸ ವಿಲ್ಲದೇ ಮನೆಯಲ್ಲಿ ಕುಳಿತಿದ್ದಾರೆ. ಕೆಲಸ ಕಳೆದುಕೊಂಡಿದ್ದಾರೆ. ನನಗೆ ಮನೆಯಲ್ಲೇ ಕುಳಿತುಕೊಳ್ಳಲು ಹಣ ನೀಡಲಾಗುತ್ತಿದೆ. ಹಾಗಿರುವಾಗ ನಾನೇಕೆ ಇಲ್ಲ ಎಂದು ಹೇಳಲಿ?" ಎಂದು ಶಮಿತಾ ಹೇಳಿದ್ದಾರೆ. ಶಮಿತಾ ಶೆಟ್ಟಿ ಬಿಗ್ ಮನೆಯಿಂದ ಹೊರ ಬಂದ ಬಳಿಕ ನಟಿ ಶಿಲ್ಪಾ ಶೆಟ್ಟಿಯನ್ನು ಭೇಟಿಯಾಗಿದ್ದಾರೆ. ಅಕ್ಕನ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದರು.
ರಾಜ್ ಕುಂದ್ರ ಅವರನ್ನು ಜುಲೈ 19 ರಂದು ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳು ಬಂಧಿಸಿದ್ದರು. ಜುಲೈ 20 ರಂದು ಅವರನ್ನು ಜೆಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಅದೇ ದಿನ ರಂದು ಕಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಜುಲೈ 23ರವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ನಂತರ ಪೊಲೀಸ್ ಕಸ್ಟಡಿ ಅವಧಿಯನ್ನು ನ್ಯಾಯಾಲಯ ಜುಲೈ 27 ರವರೆಗೆ ವಿಸ್ತರಿಸಿತು. ಇದರ ನಂತರ, ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ರಾಜ್ ಕುಂದ್ರಾ ಮತ್ತು ಸಹಚರ ರಯಾನ್ ಥೋರ್ಪೆ ವಿರುದ್ಧ ಸುಮಾರು 1,500 ಪುಟಗಳ ಚಾರ್ಜ್ ಶೀಟ್ ನ್ನು ಮುಂಬೈ ಪೊಲೀಸರಿಂದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಈ ಪ್ರಕರಣದಲ್ಲಿ ರಾಜ್ ಕುಂದ್ರಾ "ಮುಖ್ಯ ಆರೋಪಿ" ಎಂದು ಉಲ್ಲೇಖಿಸಿದ್ದರು.
ಸೆಪ್ಟಂಬರ್ 20ರಂದು ರಾಜ್ ಕುಂದ್ರ ಅವರಿಗೆ ಜಾಮೀನು ನೀಡಲಾಯಿತು. ಹೈ ಕೋರ್ಟ್ ಜಾಮೀನು ನೀಡಿದ ಹಿನ್ನೆಲೆ ಸೆಪ್ಟೆಂಬರ್ 21, ಮಂಗಳವಾರ ಬೆಳಿಗ್ಗೆ 10:30 ಕ್ಕೆ ಬೈಕುಲ್ಲಾ ಜೈಲಿನಿಂದ ಹೊರಬಂದರು. ಜೈಲಿನಿಂದ ಹೊರಬಂದ ಬಳಿಕ ರಾಜ್ ಕುಂದ್ರ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಶಿಲ್ಪಾ ಶೆಟ್ಟಿ ಕೂಡ ಇದುವರೆಗೂ ಪತಿಯ ಜೊತೆ ಕಾಣಿಸಿಕೊಂಡಿಲ್ಲ.


Click it and Unblock the Notifications











