ಅಕ್ಷಯ್ ಕುಮಾರ್ ಕಾರಣದಿಂದ ಚಿತ್ರರಂಗ ತೊರೆಯುವ ನಿರ್ಧಾರ ಮಾಡಿದ್ದೆ ಎಂದ ನಟಿ
ವಿಭಿನ್ನ ಬಗೆಯ, ದೇಶಭಕ್ತಿ ಸಾರುವ ಪಾತ್ರಗಳ ಮೂಲಕ ಜನರ ಪ್ರೀತಿಗೆ ಒಳಗಾಗಿರುವವರು ನಟ ಅಕ್ಷಯ್ ಕುಮಾರ್. ಆದರೆ ಅಕ್ಷಯ್ ವಿರುದ್ಧ ಒಂದು ಆರೋಪ ಕೇಳಿಬಂದಿದೆ. ಅದೂ ಜನಾಂಗೀಯ ನಿಂದನೆಯ ಆರೋಪ.
Recommended Video
ನಿಜ. ಅಕ್ಷಯ್ ಕುಮಾರ್ ಅವರಿಂದ ವರ್ಣದ್ವೇಷದ ಟೀಕೆಗೆ ಗುರಿಯಾದ ಕಾರಣ ತಾವು ಚಿತ್ರರಂಗವನ್ನೇ ತೊರೆಯುವಂತಾಯಿತು ಎಂದು ನಟಿ ಶಾಂತಿಪ್ರಿಯಾ ಹೇಳಿದ್ದಾರೆ. 1991ರಲ್ಲಿ 'ಸೌಗಂಧ' ಎಂಬ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜತೆ ನಟಿಸುವ ಮೂಲಕ ಶಾಂತಿಪ್ರಿಯಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಶಾಂತಿಪ್ರಿಯಾ, ತಮಗಾಗಿದ್ದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್ನ ಆರಂಭದ ದಿನಗಳು ಮತ್ತು ತಮ್ಮ ಕಪ್ಪು ಬಣ್ಣದ ಚರ್ಮದಿಂದಾಗಿ ಅನುಭವಿಸಿದ ಕಹಿಯನ್ನು ತಿಳಿಸಿದ್ದಾರೆ. ಈ ಕಹಿಯಾದ ನೋವಿಗೆ ಕಾರಣ ಅಕ್ಷಯ್ ಕುಮಾರ್. ಇದರಿಂದ ಚಿತ್ರರಂಗವನ್ನೇ ತೊರೆಯಲು ನಿರ್ಧರಿಸಿದ್ದೆ ಎಂದೂ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ...

ಬಣ್ಣವನ್ನು ಲೇವಡಿ ಮಾಡಿದ ಜನರು
ಮಹಿಳೆಯರು ಬೆಳ್ಳಗಿದ್ದರೇನೇ ಸುಂದರ ಎನ್ನುವುದನ್ನು ಸೌಂದರ್ಯದ ಮಾನದಂಡವನ್ನಾಗಿ ಇರಿಸಲಾಗಿದೆ. ಅದರಲ್ಲಿಯೂ ಚಿತ್ರರಂಗದಲ್ಲಿ ದೈಹಿಕ ಸೌಂದರ್ಯ ಬಹಳ ಮುಖ್ಯ. ಚಿತ್ರರಂಗಕ್ಕೆ ಆಯ್ಕೆ ಮಾಡುವಾಗ ಅವರ ಚರ್ಮದ ಬಣ್ಣವನ್ನೂ ಪರಿಗಣಿಸುತ್ತಾರೆ. ಅಕ್ಷಯ್ ಕುಮಾರ್ ಮಾತ್ರವಲ್ಲ, ಬಹುತೇಕ ಪುರುಷರು ತಮ್ಮೆಡೆಗೆ ಜನಾಂಗೀಯ ಲೇವಡಿಯ ಜೋಕ್ಗಳನ್ನು ಮಾಡಿದ್ದಾರೆ ಎಂದು ಶಾಂತಿಪ್ರಿಯಾ ಹೇಳಿದ್ದಾರೆ.

ಎಲ್ಲರ ಎದುರು ಅವಮಾನ
ಸೌಗಂಧ್ ಚಿತ್ರದ ಬಳಿಕ ಅಕ್ಷಯ್ ಜತೆ 'ಇಕ್ಕೆ ಪೆ ಇಕ್ಕಾ' ಚಿತ್ರದಲ್ಲಿ ನಟಿಸಿದ್ದೆ. ಅದು ಮಾಡರ್ನ್ ಯುವತಿಯ ಪಾತ್ರ. ನಾನು ಕಿರಿದಾದ ಉಡುಗೆಗಳನ್ನು ತೊಡಬೇಕಿತ್ತು. ಉಡುಪಿನ ಜತೆ ನಾನು ಕಾಲುಚೀಲಗಳನ್ನು ಧರಿಸುತ್ತಿದ್ದೆ. ಅಕ್ಷಯ್ ನನ್ನನ್ನು ಎಷ್ಟು ಅಣಕಿಸುತ್ತಿದ್ದರು ಎನ್ನುವುದು ನೆನಪಿದೆ. ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಕಾಲುಚೀಲದ ಕಾರಣದಿಂದ ನನ್ನ ಕಾಲು ಮತ್ತಷ್ಟು ಕಪ್ಪು ಕಾಣಿಸುತ್ತಿತ್ತು. ಅಕ್ಷಯ್ ಅಲ್ಲದೆ ಸೆಟ್ನಲ್ಲಿ ಪಂಕಜ್ ಧೀರ್, ಚಾಂದಾನಿ, ಪೃಥ್ವಿ, ರಾಜ್ ಸಿಪ್ಪಿ, ಮೇಕಪ್ ಮ್ಯಾನ್ ಸೇರಿದಂತೆ ಅನೇಕರು ಇದ್ದರು. ಸುಮಾರು ನೂರು ಮಂದಿ ಇದ್ದರು. ಅವರೆಲ್ಲರ ಮುಂದೆ ಅಕ್ಷಯ್, 'ಶಾಂತಿಪ್ರಿಯಾಳ ಕಾಲುಗಳಲ್ಲಿ ದೊಡ್ಡದಾಗಿ ರಕ್ತ ಹೆಪ್ಪುಗಟ್ಟಿದೆ' ಎಂದರು.

ರಕ್ತ ಹೆಪ್ಪುಗಟ್ಟಿದ್ದೆಲ್ಲಿ?
ಅದನ್ನು ಅವರು ಅನೇಕ ಸಲ ಪುನರಾವರ್ತಿಸಿದರೂ ನನಗೆ ಅರ್ಥವಾಗಿರಲಿಲ್ಲ. ನನ್ನ ಕಾಲುಗಳಲ್ಲಿ ರಕ್ತ ಎಲ್ಲಿ ಹೆಪ್ಪುಗಟ್ಟಿದೆ ಎಂದು ಅವರನ್ನು ಕೇಳಿದಾಗ, ನಿನ್ನ ಮೊಣಕಾಲುಗಳನ್ನು ನೋಡಿಕೊ ಎಂದರು. ಇದು ನನಗೆ ಆಘಾತ ಮತ್ತು ಮುಜುಗರ ಉಂಟುಮಾಡಿತು. ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಗೊತ್ತಾಗಲಿಲ್ಲ. ಬೇರೆಯವರ ಬಗ್ಗೆಯೇ ಯೋಚಿಸಲು ಆರಂಭಿಸಿದೆ. ನನಗೆ ಅಲ್ಲಿರಲು ಕಸಿವಿಸಿ ಆಗತೊಡಗಿತು. ಎಲ್ಲರ ಎದುರು ಅಕ್ಷಯ್ ಹೇಗೆ ಆ ರೀತಿ ಜೋಕ್ ಮಾಡುತ್ತಾರೆ ಎಂದೇ ಯೋಚಿಸತೊಡಗಿದ್ದೆ.

ನಾನೇಕೆ ಕಪ್ಪುಬಣ್ಣದವಳಾದೆ?
ಈ ಘಟನೆ ಬಳಿಕ ನನ್ನ ಕಪ್ಪು ಬಣ್ಣದ ಚರ್ಮದ ಬಗ್ಗೆ ಜಿಗುಪ್ಸೆ ಮತ್ತು ಮುಜುಗರ ಉಂಟಾಗತೊಡಗಿತ್ತು. ನನ್ನನ್ನು ನಾನೇ ದ್ವೇಷಿಸಿಕೊಳ್ಳತೊಡಗಿದ್ದೆ. ನಾನೇಕೆ ಕಪ್ಪು ಬಣ್ಣದವಳಾಗಿ ಹುಟ್ಟಿದೆ ಎಂದು ತಾಯಿಯನ್ನು ಪ್ರಶ್ನಿಸತೊಡಗಿದೆ. ನನ್ನಲ್ಲಿ ಅದು ಮಾನಸಿಕವಾಗಿ ಕಾಡಿತ್ತು ಎಂದು ಶಾಂತಿಪ್ರಿಯಾ ವಿವರಿಸಿದ್ದಾರೆ. ಶಾಂತಿಪ್ರಿಯಾ ಮೂಲತಃ ಆಂಧ್ರಪ್ರದೇಶದವರು. ಅಂದಹಾಗೆ ಇವರು ಖ್ಯಾತ ನಟಿ ಭಾನುಪ್ರಿಯಾ ಸಹೋದರಿ. ಕನ್ನಡದಲ್ಲಿ 'ಅಂತಿಂತ ಗಂಡು ನಾನಲ್ಲ' ಎಂಬ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಹಿಂದಿ, ತೆಲುಗು ಮತ್ತು ತಮಿಳಿನ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ.

ಅಕ್ಷಯ್ ಇಂದು ಬದಲಾಗಿದ್ದಾರೆ
ಅದು ಪ್ರಬುದ್ಧತೆಯ ಕೊರತೆಯಿಂದ ಆಗಿರುವ ತಪ್ಪು ಎಂದು ಈಗ ಆಲೋಚಿಸುತ್ತೇನೆ. ಏಕೆಂದರೆ ಈಗ ಎಲ್ಲರೂ ಬೆಳೆದಿದ್ದಾರೆ. ಆಗ ಅದರ ಸಂವೇದನೆ ಇರಲಿಲ್ಲ. ಅಕ್ಷಯ್ ಇಂದು ಬದಲಾಗಿರುವ ವ್ಯಕ್ತಿ. ಅವರು ನನಗೆ ಬಹಳ ಉತ್ತಮ ಸ್ನೇಹಿತ. ಆಗ ತನ್ನ ಜೋಕ್ ಒಬ್ಬರನ್ನು ತೀವ್ರವಾಗಿ ನೋಯಿಸುತ್ತದೆ ಎನ್ನುವುದು ಅವರಿಗೆ ಗೊತ್ತಿರಲಿಲ್ಲ. ಜನಾಂಗೀಯ ಜೋಕ್ಗಳು ಒಬ್ಬರ ಜೀವನವನ್ನೇ ಕುಗ್ಗಿಸಬಹುದು ಎನ್ನುವುದು ಎಲ್ಲರಿಗೂ ತಿಳಿದಿರಬೇಕು ಎಂಬ ಕಾರಣಕ್ಕೆ ಈ ಘಟನೆಯನ್ನು ಹೇಳಬೇಕಾಯಿತು ಎಂದಿದ್ದಾರೆ.


Click it and Unblock the Notifications











