ಚುನಾವಣಾ ಚಾಣಕ್ಯನ ಜೀವನ ಆಧರಿಸಿದ ಸಿನಿಮಾದಲ್ಲಿ ಶಾರುಖ್
ಬಾಲಿವುಡ್ನ ಬಾದ್ಶಾ ಶಾರುಖ್ ಖಾನ್ಗೆ ಹಿಟ್ ಸಿನಿಮಾ ಒಂದು ಕೈಗೆಟುಕಿ ಬಹಳ ಸಮಯವೇ ಆಗಿದೆ. 2013 ರ 'ಚೆನ್ನೈ ಎಕ್ಸ್ಪ್ರೆಸ್' ನಂತರ ಅಂಥಹುದೇ ದೊಡ್ಡ ಹಿಟ್ ಒಂದು ಶಾರುಖ್ಗೆ ಈವರೆಗೆ ಸಿಕ್ಕಿಲ್ಲ. 'ಡಿಯರ್ ಜಿಂದಗಿ' ಹೆಸರು ಮಾಡಿತಾದರೂ ದೊಡ್ಡ ಹಿಟ್ ಎನಿಸಿಕೊಳ್ಳಲಿಲ್ಲ.
2018 ರಲ್ಲಿ ಬಿಡುಗಡೆ ಆದ 'ಜೀರೋ' ಸಿನಿಮಾದ ಬಳಿಕ ದೊಡ್ಡ ಗ್ಯಾಪ್ ತೆಗೆದುಕೊಂಡಿದ್ದ ಶಾರುಖ್ ಖಾನ್ ಇದೀಗ ಆಕ್ಷನ್ ಸಿನಿಮಾದೊಂದಿಗೆ ಪ್ರೇಕ್ಷಕರೆದುರು ಬರಲು ತಯಾರಾಗಿದ್ದು 'ಪಠಾಣ್' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.
'ಪಠಾಣ್' ನಂತರ ಮುಂದಿನ ಸಿನಿಮಾವಾಗಿ ಶಾರುಖ್ ಆಯ್ಕೆ ಕುತೂಹಲ ಮೂಡಿಸಿದೆ. ಚುನಾವಣಾ ಚಾಣಕ್ಯನ ಪ್ರಶಾಂತ್ ಕಿಶೋರ್ ಜೀವನ ಸಿನಿಮಾ ಆಗುತ್ತಿದ್ದು ಸಿನಿಮಾದಲ್ಲಿ ಪ್ರಶಾಂತ್ ಕಿಶೋರ್ ಪಾತ್ರದಲ್ಲಿ ಶಾರುಖ್ ಖಾನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಚುನಾವಣಾ ಚಾಣಕ್ಯ, ರಾಜಕೀಯ ಪಂಡಿತ ಎಂದೇ ಹೆಸರಾಗಿರುವ ಪ್ರಶಾಂತ್ ಕಿಶೋರ್ ಜೂನ್ 11 ರಂದು ಸಂಜೆ ಶಾರುಖ್ ಖಾನ್ ನಿವಾಸಕ್ಕೆ ಭೇಟಿ ಕೊಟ್ಟು ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಪ್ರಶಾಂತ್ ಕಿಶೋರ್ ಜೀವನ ಕುರಿತ ಸಿನಿಮಾವನ್ನು ಶಾರುಖ್ ಒಡೆತನದ ರೆಡ್ ಚಿಲ್ಲೀಸ್ ಸಂಸ್ಥೆಯೇ ನಿರ್ಮಾಣ ಮಾಡಲಿದೆ.

ಪ್ರಶಾಂತ್ ಕಿಶೋರ್ ಸಹಾಯದಿಂದ ಸಿಎಂ ಆಗಿದ್ದಾರೆ ಹಲವರು
ಪ್ರಶಾಂತ್ ಕಿಶೋರ್ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ ತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ. 2014 ರಲ್ಲಿ ಮೋದಿ ಅಭೂತಪೂರ್ವ ಜಯ ಸಾಧಿಸಿದಾಗ ಬಿಜೆಪಿಯು ಪ್ರಶಾಂತ್ ಕಿಶೋರ್ ಸೇವೆ ಬಳಸಿಕೊಂಡಿತ್ತು. ಬಿಹಾರದಲ್ಲಿ ನಿತೀಶ್ ಕುಮಾರ್ ಸಹ ಪ್ರಶಾಂತ್ ಸೇವೆ ಬಳಸಿಕೊಂಡಿದ್ದರು. ಆಂಧ್ರದ ಜಗನ್ ಮೋಹನ್ ರೆಡ್ಡಿ ಸಹ ಪ್ರಶಾಂತ್ ಸಹಾಯ ಪಡೆದೇ ಸಿಎಂ ಆಗಿದ್ದು.

ಬಿಜೆಪಿಯನ್ನು ಕಟ್ಟಿ ಹಾಕಿದ ಪ್ರಶಾಂತ್ ಕಿಶೋರ್
ಎಲ್ಲಕ್ಕಿಂತಲೂ ಮುಖ್ಯವಾಗಿ, ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗಷ್ಟೆ ಅಭೂತಪೂರ್ವ ಜಯ ಸಾಧಿಸಿದ ದೀದಿ ಮಮತಾ ಬ್ಯಾನರ್ಜಿ ಸಹ ಪ್ರಶಾಂತ್ ಕಿಶೋರ್ ಸಹಾಯ ಪಡೆದಿದ್ದರು. 'ಬಿಜೆಪಿಯು ಎರಡಂಕಿ ದಾಟಿದರೆ ನಾನು ಟ್ವಿಟ್ಟರ್ನಿಂದ ನಿವೃತ್ತಿ ಪಡೆಯುತ್ತೇವೆ. ಈ ಟ್ವೀಟ್ ಅನ್ನು ಸೇವ್ ಮಾಡಿಟ್ಟುಕೊಳ್ಳಿ' ಎಂದು ಬಹಿರಂಗವಾಗಿ ಸವಾಲೆಸೆದಿದ್ದ ಪ್ರಶಾಂತ್ ಕಿಶೋರ್, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಎರಡಂಕಿ ದಾಟಲು ಬಿಟ್ಟಿರಲಿಲ್ಲ.

ಪ್ರಶಾಂತ್ ಕಿಶೋರ್ ಕಾರ್ಯ ವೈಖರಿಯ ಪರಿಚಯ
ಆದರೆ ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ ಬಂದ ನಂತರ ಪ್ರಶಾಂತ್ ಕಿಶೋರ್ ತಾವು ಚುನಾವಣೆ ತಜ್ಞರಾಗಿ ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂದು ಹೇಳಿ ನಿವೃತ್ತಿ ಘೋಷಿಸಿದರು. ಆದರೆ ಇದೀಗ ಅವರ ಜೀವನ ಆಧರಿಸಿ ಸಿನಿಮಾ ನಿರ್ಮಾಣ ಆಗುತ್ತಿರುವುದು ಪ್ರಶಾಂತ್ ಕಿಶೋರ್ ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು, ಅವರು ಬಳಸುತ್ತಿದ್ದ ತಂತ್ರಗಳೇನು ಎಂಬುದು ಗೊತ್ತಾಗಲಿದೆ.
Recommended Video

ಸಿನಿಮಾ ಅಥವಾ ವೆಬ್ ಸರಣಿ?
ಇನ್ನೊಂದು ಮಾಹಿತಿ ಪ್ರಕಾರ, ಶಾರುಖ್ ಖಾನ್ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಪ್ರಶಾಂತ್ ಕಿಶೋರ್ ಜೀವನ ಆಧರಿಸಿದ ವೆಬ್ ಸರಣಿ ನಿರ್ಮಾಣ ಮಾಡುತ್ತಿದ್ದು, ಶಾರುಖ್ ಅದರಲ್ಲಿ ನಟಿಸುವುದಿಲ್ಲ ಬದಲಿಗೆ ನಿರ್ಮಾಣ ಅಷ್ಟೇ ಮಾಡುತ್ತಾರೆ. ಹಾಗಾಗಿಯೇ ಈ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಕೆಲವೇ ದಿನಗಳಲ್ಲಿ ಸತ್ಯ ಹೊರಗೆ ಬರಲಿದೆ.


Click it and Unblock the Notifications