ಶಿಲ್ಪಾ ಶೆಟ್ಟಿ ವಿರುದ್ಧ ತನಿಖೆಗೆ ಆದೇಶ ನೀಡಿದ ಮುಂಬೈ ಕೋರ್ಟ್, ಬಳಕುವ ಬಳ್ಳಿ ಮಾಡಿದ ತಪ್ಪೇನು..?
ಈಗೀಗ ಸೆಲೆಬ್ರೆಟಿಗಳ ಮೇಲೆ ವಂಚನೆ, ದ್ರೋಹ, ಚೆಕ್ ಬೌನ್ಸ್ ಆರೋಪಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಮೇಲೆ ಗೋಲ್ಡ್ ಸ್ಕಿಮ್ ವಂಚನೆಯ ಆರೋಪ ಕೇಳಿ ಬಂದಿದೆ. ತನಿಖೆ ನಡೆಸುವಂತೆ ಮುಂಬೈನ ನ್ಯಾಯಾಲಯ ಪೊಲೀಸರಿಗೆ ಆದೇಶವನ್ನೂ ನೀಡಿದೆ.
ಹೌದು. ನಿಮಗೆ ನೆನಪಿದ್ದರೆ.. ಕೆಲ ದಿನದ ಹಿಂದೆಯಷ್ಟೇ, ಮಂಗ್ಳೂರು ಮೀನು ಮತ್ತು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾಗೆ ಇ.ಡಿ ಶಾಕ್ ನೀಡಿತ್ತು. ಕಳೆದ ಕೆಲ ವರ್ಷಗಳಿಂದ ಈ ದಂಪತಿ ಮೇಲೆ ಕಣ್ಣಿಟ್ಟಿದ್ದ ಜಾರಿ ನಿರ್ದೇಶನಾಲಯ ಇಬ್ಬರಿಗೂ ಸೇರಿದ ಬರೋಬ್ಬರಿ 97 ಕೋಟಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿಯನ್ನೂ ಕೂಡ ಮಾಡಿತ್ತು. ವಶಪಡಿಸಿಕೊಂಡ ಆಸ್ತಿಯಲ್ಲಿ ಶಿಲ್ಪಾ ಶೆಟ್ಟಿ ಹೆಸರಿನಲ್ಲಿದ್ದ ಜುಹುದಲ್ಲಿರುವ ಬಂಗಲೆ ಇತ್ತು. ಅಲ್ಲದೆ ಪುಣೆಯ ಬಂಗಲೆಯೂ ಸೇರಿತ್ತು.ಇದಲ್ಲದೇ ರಾಜ್ ಕುಂದ್ರಾ ಹೆಸರಿನಲ್ಲಿದ್ದ ಕೆಲವು ಷೇರುಗಳನ್ನು ಇಡಿ ವಶಪಡಿಸಿಕೊಂಡಿತ್ತು.

ಜಾರಿ ನಿರ್ದೇಶನಾಲಯ ಮಾಡಿದ್ದ ಈ ದಾಳಿಯಿಂದ ಮೊದಲೇ ಹೈರಾಣಾಗಿದ್ದ ಶಿಲ್ಪಾ ಶೆಟ್ಟಿಗೆ ಇನ್ನೊಂದು ಆಘಾತವಾಗಿದೆ. ಹಣ ಹೂಡಿಕೆ ಮಾಡಿ ಚಿನ್ನ ಪಡೆಯುವ ಯೋಜನೆಯಲ್ಲಿ ವಂಚನೆ ಮಾಡಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ, ಅವರ ಪತಿ ರಾಜ್ ಕುಂದ್ರಾ, ಹಾಗೂ ಇನ್ನಿತರೆ ಮೂವರ ವಿರುದ್ಧ ತನಿಖೆ ನಡೆಸುವಂತೆ ಸ್ಥಳೀಯ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.
ಹೌದು, ಅಸಲಿಗೆ.. 2019ರಲ್ಲಿ ಪೃಥ್ವಿರಾಜ್ ಕೊಠಾರಿ ಎಂಬ ವ್ಯಕ್ತಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಒಡೆತನದ ಕಂಪನಿಯಲ್ಲಿ ಪಂಚ ವಾರ್ಷಿಕ ಯೋಜನೆ ಅಡಿಯಲ್ಲಿ ₹90,38,600 ರೂಪಾಯಿಯನ್ನ ಹೂಡಿಕೆ ಮಾಡಿದ್ದರು. ಈ ಹೂಡಿಕೆಗೆ 5,000 ಗ್ರಾಂ 24-ಕ್ಯಾರೆಟ್ ಚಿನ್ನವನ್ನು ತಲುಪಿಸುವ ಭರವಸೆಯನ್ನು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ನೀಡಿದ್ದರು. ಆದರೆ.. ಆ ಭರವಸೆ ಇಲ್ಲಿಯವರೆಗೆ ಭರವಸೆಯಾಗಿಯೇ ಉಳಿದಿದೆ. ಇಲ್ಲಿವರೆಗೆ ಪೃಥ್ವಿರಾಜ್ ಕೊಠಾರಿ ಕೈಗೆ ಚಿನ್ನ ಬಂದು ಸೇರಲಿಲ್ಲ. ಈ ಕಾರಣಕ್ಕೆ.. ಕೆರಳಿ ಕೆಂಡವಾಗಿದ್ದ ಪೃಥ್ವಿರಾಜ್ ವಂಚನೆ ಪ್ರಕರಣ ದಾಖಲಿಸಿದ್ದರು.

ಈಗ ಈ ಗೋಲ್ಡ್ ಸ್ಕೀಮ್ ನಲ್ಲಿ ಹೂಡಿಕೆದಾರರಿಗೆ ವಂಚಿಸಿದ ಆರೋಪ ಮೇಲೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಹಾಗೂ ಇತರರ ವಿರುದ್ಧ ದಾಖಲಾಗಿರುವ ದೂರಿನ ಬಗ್ಗೆ ತನಿಖೆ ನಡೆಸುವಂತೆ ಮುಂಬೈ ನ್ಯಾಯಾಲಯ ಪೊಲೀಸರಿಗೆ ನಿರ್ದೇಶಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎನ್ಪಿ ಮೆಹ್ತಾ ಅವರು ಮಂಗಳವಾರ ಹೊರಡಿಸಿದ ಆದೇಶದಲ್ಲಿ, ಕುಂದ್ರಾ ದಂಪತಿ ಮಾಲೀಕತ್ವದ ಸತ್ಯುಗ್ ಗೋಲ್ಡ್ ಪ್ರೈವೇಟ್ ಲಿಮಿಟೆಡ್, ಅದರ ಇಬ್ಬರು ನಿರ್ದೇಶಕರು ಮತ್ತು ಉದ್ಯೋಗಿಗಳು ವಂಚನೆ ಎಸಗಿರುವುದು "ಪ್ರಾಥಮಿಕ ತನಿಖೆಯಿಂದ ದೃಢವಾಗಿದೆ". ಹೀಗಾಗಿ ರಿದ್ಧಿ ಸಿದ್ಧಿ ಬುಲಿಯನ್ಸ್ನ ವ್ಯವಸ್ಥಾಪಕ ನಿರ್ದೇಶಕ ಪೃಥ್ವಿರಾಜ್ ಕೊಠಾರಿ ಅವರು ಸಲ್ಲಿಸಿರುವ ದೂರಿನ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯವು ಬಿಕೆಸಿ ಪೊಲೀಸ್ ಠಾಣೆಗೆ ಸೂಚಿಸಿದೆ. ಇಷ್ಟೇ ಅಲ್ಲ ಈ ವಂಚನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೂಡ ನ್ಯಾಯಾಧೀಶರು ಪೊಲೀಸರಿಗೆ ಸೂಚಿಸಿದ್ದಾರೆ.


Click it and Unblock the Notifications











