ಈ ವರ್ಷ ಗಣೇಶ ಹಬ್ಬ ಆಚರಣೆಗೆ ನಟಿ ಶಿಲ್ಪಾ ಶೆಟ್ಟಿ ಬ್ರೇಕ್; ಕಾರಣ ಏನು?
ವಿಘ್ನ ನಿವಾರಕ ಗಣೇಶ ಹಬ್ಬಕ್ಕೆ ಇನ್ನೊಂದು ದಿನ ಬಾಕಿಯಿದೆ. ಮನೆ ಮನಗಳಲ್ಲಿ, ದೇಶದ ಬೀದಿ ಬೀದಿಗಳಲ್ಲಿ ಗಣೇಶ ಚತುರ್ಥಿ ಸಂಭ್ರಮ ಕಳೆಗಟ್ಟುತ್ತದೆ. ಸಿನಿಮಾ ತಾರೆಯರು ಅದರಲ್ಲೂ ಮುಖ್ಯವಾಗಿ ಬಾಲಿವುಡ್ ನಟ-ನಟಿಯರು ಈ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ನಟಿ ಶಿಲ್ಪಾ ಶೆಟ್ಟಿ ಮನೆಯಲ್ಲಿ ಕೂಡ ಗಣೇಶ ಹಬ್ಬ ಜೋರು. ಆದರೆ ಈ ಬಾರಿ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದಾರೆ.
ಮುಸ್ಲಿಂ ಬಾಂಧವರು ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವುದನ್ನು ನೋಡಿದ್ದೇವೆ. ಬಾಲಿವುಡ್ ಖಾನ್ತ್ರಯರ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಖಾನ್ ಕೂಡ ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಸಲ್ಲು ಮನೆ ಗಣೇಶೋತ್ಸವದ ಪೂಜೆಯಲ್ಲಿ ಬಾಲಿವುಡ್ ತಾರೆಯರು ಭಾಗಿ ಆಗುತ್ತಾರೆ. ಇನ್ನು ಕರಾವಳಿ ಮೂಲದ ಶಿಲ್ಪಾ ಶೆಟ್ಟಿ ಕೂಡ ಪ್ರತಿವರ್ಷ ಸಡಗರ ಸಂಭ್ರಮದಿಂದ ಗಣೇಶನನ್ನು ಪೂಜಿಸುತ್ತಾ ಬರ್ತಿದ್ದಾರೆ.

ಗಣೇಶ ಮೂರ್ತಿಯನ್ನು ಮನೆಗೆ ಸ್ವಾಗತಿಸುವುದರಿಂದ ಹಿಡಿದು ಪೂಜೆ ಮಾಡಿ ನೀರಿಗೆ ವಿಸರ್ಜನೆ ಮಾಡುವವರೆಗೆ ಶಿಲ್ಪಾ ಮನೆಯಲ್ಲಿ ಹಬ್ಬದ ಸಡಗರ ಜೋರಾಗಿರುತ್ತದೆ. ಮನೆ ಬಳಿ ಡ್ಯಾನ್ಸ್ ಮಾಡುತ್ತಲೇ ಗಣೇಶನನ್ನು ಸ್ವಾಗತಿಸುತ್ತಾರೆ. ವಿಸರ್ಜನೆ ವೇಳೆ ಕೂಡ ಹೆಜ್ಜಾ ಹಾಕುತ್ತಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗುತ್ತಿರುತ್ತದೆ. ಕುಟುಂಬದಲ್ಲಿ ಇತ್ತೀಚೆಗೆ ಡೆದ ದುಃಖಕರ ಘಟನೆಯಿಂದಾಗಿ ಈ ಬಾರಿ ಗಣೇಶ ಚತುರ್ಥಿ ಆಚರಿಸುವುದಿಲ್ಲ ಎಂದು ಶಿಲ್ಪಾ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ಪೋಸ್ಟ್ನಲ್ಲಿ, "ಇತ್ತೀಚೆಗೆ ನಮ್ಮ ಕುಟುಂಬ ಸದಸ್ಯರೊಬ್ಬರನ್ನು ಕಳೆದುಕೊಂಡಿದ್ದೇವೆ. ಸಂಪ್ರದಾಯದಂತೆ 13 ದಿನಗಳ ಶೋಕಾಚರಣೆಯನ್ನು ಆಚರಿಸುತ್ತೇವೆ. ಮನೆಯಲ್ಲಿ ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸಲಾಗುವುದು: ಎಂದು ಅವರು ತಿಳಿಸಿದ್ದಾರೆ. "ಗಣಪತಿ ಬಪ್ಪಾ ಮೊರಿಯಾ, ಪುಡ್ಚ್ಯಾವರ್ಷಿ ಲವ್ಕರ್ ಯಾ" ಎಂದು ಬರೆದುಕೊಂಡಿದ್ದಾರೆ.

ಎಲ್ಲಾ ಹಬ್ಬಗಳು ಕುಂದ್ರಾ ಮನೆಯಲ್ಲಿ ಕಳೆಕಟ್ಟುತ್ತದೆ. ಆದರೆ ಈ ವರ್ಷ ಗಣೇಶ ಹಬ್ಬವನ್ನು ಆಚರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಮುಂಬೈ ಪೊಲೀಸರು, ರಾಜ್ಕುಂದ್ರಾ ಅವರ ಮಾಜಿ ಕಂಪನಿ ಬೆಸ್ಟ್ ಡೀಲ್ ಟಿವಿ ಜೊತೆಗಿನ 60 ಕೋಟಿ ರೂ.ಗಳ ಸಾಲದ ವಿವಾದಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರಾಜ್ ತಮಗೆ ವಂಚಿಸಿದ್ದಾರೆ ಎಂದು ನಗರದ ಉದ್ಯಮಿಯೊಬ್ಬರು ಆರೋಪಿಸಿದ್ದಾರೆ. ಆದರೆ ದಂಪತಿಯ ವಕೀಲರು ಈ ಆರೋಪಗಳನ್ನು ನಿರಾಕರಿಸಿದ್ದು, ಅವು ಆಧಾರರಹಿತ ಎಂದು ಹೇಳಿದ್ದಾರೆ.
ಶಿಲ್ಪಾ ಶೆಟ್ಟಿ ಸದ್ಯ ಕನ್ನಡದ 'ಕೆಡಿ' ಚಿತ್ರದಲ್ಲಿ ನಟಿಸಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ಧ್ರುವ ಸರ್ಜಾ ಹೀರೊ ಆಗಿ ನಟಿಸುತ್ತಿದ್ದಾರೆ. ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇನ್ನು ಚಿತ್ರದಲ್ಲಿ ಸತ್ಯವತಿ ಎಂಬ ಪವರ್ಫುಲ್ ಪಾತ್ರದಲ್ಲಿ ಕರಾವಳಿ ಸುಂದರಿ ಬಣ್ಣ ಹಚ್ಚಿದ್ದಾರೆ. ಇತ್ತೀಚಿಗೆ ಚಿತ್ರದ ಟೀಸರ್ ಬಿಡುಗಡೆಗಾಗಿ ತಂಡ ಪ್ಯಾನ್ ಇಂಡಿಯಾ ಟೂರ್ ಮಾಡಿತ್ತು. ಈ ವೇಳೆ ಶಿಲ್ಪಾ ಕೂಡ ಜೊತೆಗಿದ್ದರು.
ಎರಡು ವರ್ಷಗಳ ಹಿಂದೆ ಬಂದಿದ್ದ 'ಸುಖೀ' ಶಿಲ್ಪಾ ಶೆಟ್ಟಿ ನಟಿಸಿದ ಕೊನೆಯ ಸಿನಿಮಾ. ಇದೀಗ 'ಕೆಡಿ' ಚಿತ್ರದ ಮೂಲಕ ಬಾಲಿವುಡ್ನಲ್ಲಿ ಕೂಡ ಕಮಾಲ್ ಮಾಡಲಿದ್ದಾರೆ. ಕೊನೆ ಹಂತದ ಚಿತ್ರೀಕರಣ ನಡೀತಿದ್ದು ಶೀಘ್ರದಲ್ಲೇ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











