ರಾಜ್ ಕುಂದ್ರಾ ಪ್ರಕರಣ: ಶಿಲ್ಪಾ ಶೆಟ್ಟಿ ಪೊಲೀಸರಿಗೆ ನೀಡಿರುವ ಹೇಳಿಕೆ ಬಹಿರಂಗ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಜುಲೈ 19ರಂದು ಬಂಧನಕ್ಕೆ ಒಳಗಾದರು. ಇದೀಗ ಮುಂಬೈ ಪೊಲೀಸರು ರಾಜ್ ಕುಂದ್ರಾ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇನ್ನು ಕೆಲವು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಇದೀಗ 1467 ಪುಟಗಳ ದೋಷಾರೋಪ ಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದಾರೆ. ಇದರಲ್ಲಿ 43 ಮಂದಿ ಸಾಕ್ಷಿಧಾರರ ಹೇಳಿಕೆಗಳು ದಾಖಲಾಗಿವೆ. ಐದು ವ್ಯಕ್ತಿಗಳು 164 ಸಿಆರ್ಪಿಸಿ ಪ್ರಕಾರ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಾರೆ.
ದೋಷಾರೋಪ ಪಟ್ಟಿಯಲ್ಲಿ ನಟಿ ಶಿಲ್ಪಾ ಶೆಟ್ಟಿ ಹೇಳಿಕೆಯೂ ದಾಖಲಾಗಿದೆ. ರಾಜ್ ಕುಂದ್ರಾ ಪ್ರಕರಣದಲ್ಲಿ ಬಹಿರಂಗವಾಗಿ ಈವರೆಗೂ ಏನೂ ಮಾತನಾಡದೇ ಇರುವ ಶಿಲ್ಪಾ ಶೆಟ್ಟಿ, ಪೊಲೀಸರ ಮುಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ.
ವಿಯಾನ್ ಇಂಡಸ್ಟ್ರಿಯ ನನ್ನ ಹುದ್ದೆಗೆ 2020ರಲ್ಲಿಯೇ ನಾನು ರಾಜೀನಾಮೆ ನೀಡಿದ್ದೆನೆ. ರಾಜೀನಾಮೆ ನೀಡಲು ವೈಯಕ್ತಿಕ ಕಾರಣಗಳಿದ್ದವು. ನಾನು ನನ್ನ ಕೆಲಸದಲ್ಲಿ ಸದಾ ಬ್ಯುಸಿಯಾಗಿರುತ್ತಿದ್ದೆ. ಹಾಗಾಗಿ ರಾಜ್ ಕುಂದ್ರಾ ಮಾಡುತ್ತಿದ್ದ ವ್ಯವಹಾರಗಳ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ಹಾಟ್ಶಾಟ್ಸ್ ಮತ್ತು ಬಾಲಿಲೈಫ್ ಅಪ್ಲಿಕೇಶನ್ಗಳ ಬಗ್ಗೆಯೂ ನನಗೇನೂ ಗೊತ್ತಿರಲಿಲ್ಲ'' ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

ಶಿಲ್ಪಾ ಶೆಟ್ಟಿಗೆ ಕ್ಲೀನ್ ಚಿಟ್
ರಾಜ್ ಕುಂದ್ರಾ ಬಂಧನವಾದ ಸಮಯದಲ್ಲಿ ಶಿಲ್ಪಾ ಶೆಟ್ಟಿ ವಿರುದ್ಧವೂ ಆರೋಪ ಕೇಳಿಬಂದಿತ್ತು. ಮುಂಬೈ ಪೊಲೀಸರು ಸಹ ಶಿಲ್ಪಾ ಶೆಟ್ಟಿಗೆ ಕ್ಲೀನ್ ಚಿಟ್ ನೀಡಿಲ್ಲವೆಂದೇ ಹೇಳಿದ್ದರು. ಆದರೆ ಆ ನಂತರ ತನಿಖೆ ಮುಂದುವರೆದಂತೆ ಶಿಲ್ಪಾ ಶೆಟ್ಟಿಗೂ ಪ್ರಕರಣಕ್ಕೆ ಸಂಬಂಧವಿಲ್ಲವೆಂಬ ನಿರ್ಣಯಕ್ಕೆ ಬಂದ ಪೊಲೀಸರು, ಆರೋಪಿ ಪಟ್ಟಿಗೆ ಶಿಲ್ಪಾ ಶೆಟ್ಟಿಯವರನ್ನು ಸೇರಿಸಲಿಲ್ಲ.

ಶಿಲ್ಪಾ ಶೆಟ್ಟಿ ವಿರುದ್ಧ ಮಾಧ್ಯಮಗಳಲ್ಲಿ ಆರೋಪ
ಆದರೆ ಪ್ರಕರಣ ಆದ ಸಮಯದಲ್ಲಿ ಶಿಲ್ಪಾ ಶೆಟ್ಟಿ ವಿರುದ್ಧ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ಮೂದಲಿಕೆಗಳು, ಸುಳ್ಳು ಸುದ್ದಿಗಳು ಹರಿದಾಡಿದವು. ಇದಕ್ಕೆ ಪೂರಕವೆಂಬಂತೆ ರಾಜ್ ಕುಂದ್ರಾ ವಿರುದ್ಧ ಆರೋಪ ಮಾಡಿದ ನಟಿಯರಲ್ಲಿ ಒಬ್ಬರು, ''ಶಿಲ್ಪಾ ಶೆಟ್ಟಿಗೂ ಅಶ್ಲೀಲ ವಿಡಿಯೋ ಉದ್ಯಮದ ಬಗ್ಗೆ ಗೊತ್ತಿತ್ತು, ನನ್ನ ಚಿತ್ರಗಳು, ವಿಡಿಯೋಗಳನ್ನು ಶಿಲ್ಪಾ ಶೆಟ್ಟಿ ಮೆಚ್ಚಿಕೊಂಡಿದ್ದರು'' ಎಂದರು. ಇದು ಶಿಲ್ಪಾ ಶೆಟ್ಟಿ ಮೇಲೆ ಮಾಧ್ಯಮ, ಸಾಮಾಜಿಕ ಜಾಲತಾಣದ ದಾಳಿ ಹೆಚ್ಚಾಗಲು ಕಾರಣವಾಯ್ತು.

ನ್ಯಾಯಾಲಯದ ಮೆಟ್ಟಿಲೇರಿದ ಶಿಲ್ಪಾ ಶೆಟ್ಟಿ
ತಮ್ಮ ವಿರುದ್ಧ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಆರೋಪಗಳು ಹೆಚ್ಚಾದಾಗ ಅದರ ವಿರುದ್ಧ ನ್ಯಾಯಾಲಯದ ಮೆಟ್ಟಿಲನ್ನು ಶಿಲ್ಪಾ ಶೆಟ್ಟಿ ಏರಿದರು. ಆದರೆ ಅಲ್ಲಿ ಅವರಿಗೆ ಹೆಚ್ಚಿನ ಸಹಾಯವೇನೂ ದೊರಕಲಿಲ್ಲ. ಆದರೆ ಕೆಲವು ನಟಿಯರು, ನಟರು ಸಾಮಾಜಿಕ ಜಾಲತಾಣದ ಮೂಲಕ ಶಿಲ್ಪಾ ಶೆಟ್ಟಿ ಬೆಂಬಲಕ್ಕೆ ನಿಂತರು. ಶಿಲ್ಪಾ ಶೆಟ್ಟಿ ಸಹ ತಮ್ಮ ಮೇಲೆ ಹಾಗೂ ಮಕ್ಕಳ ಮೇಲೆ ವಾಗ್ದಾಳಿಳಿ ಮಾಡಬೇಡಿ, ಸುಳ್ಳು ಸುದ್ದಿ ಹರಡಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದರು.

ಸಾಮಾನ್ಯ ಜೀವನಕ್ಕೆ ಮರಳುತ್ತಿರುವ ಶಿಲ್ಪಾ
ಜುಲೈ 19ರಂದು ರಾಜ್ ಕುಂದ್ರಾ ಬಂಧನವಾದ ಬಳಿಕ ಶಿಲ್ಪಾ ಶೆಟ್ಟಿ ಪ್ರಕರಣದ ಬಗ್ಗೆ ಈವರೆಗೆ ಬಹಿರಂಗ ಹೇಳಿಕೆ ನೀಡಿಲ್ಲ. ಹಲವು ದಿನ ಮೌನವಾಗುಳಿದಿದ್ದ ಶಿಲ್ಪಾ ಶೆಟ್ಟಿ ಇತ್ತೀಚೆಗೆ ಸಾಮಾನ್ಯ ಜೀವನಕ್ಕೆ ಮರಳಿದ್ದಾರೆ. ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದ 'ಸೂಪರ್ ಡ್ಯಾನ್ಸರ್' ರಿಯಾಲಿಟಿ ಶೋಗೆ ಶಿಲ್ಪಾ ಶೆಟ್ಟಿ ವಾಪಸ್ಸಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಗಣೇಶ ಹಬ್ಬವನ್ನು ಸಂಪ್ರದಾಯ ಬದ್ಧವಾಗಿ ಆಚರಣೆ ಮಾಡಿದ್ದಾರೆ. ಇಂದು ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದ್ದಾರೆ.


Click it and Unblock the Notifications











