ಪ್ರಪಂಚ ಗೆದ್ದ 'ಧುರಂಧರ್' ಬೆನ್ನಿಗೆ ಚೂರಿ ಹಾಕಿದ ಬಾಲಿವುಡ್ ; ಸ್ವಂತ ಮನೆಯಲ್ಲೇ ಏಕಾಂಗಿಯಾದ ರಣ್ವೀರ್ ಸಿಂಗ್ -ಆದಿತ್ಯ ಧರ್
ಬೆಳ್ಳಿತೆರೆಯಲ್ಲಿ ''ಧುರಂಧರ್'' ಧಗಧಗಿಸುತ್ತಿದೆ. ಬಾಕ್ಸಾಫೀಸ್ನಲ್ಲಿ ಹಣ ಮಳೆ ಧೋ ಎಂದು ಸುರಿಯುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಿದ್ಧಾರೆ. ತಮ್ಮ ವೈಯಕ್ತಿಕ ಬದುಕಿನ ನೋವು, ಕಷ್ಟ, ಕಾರ್ಪಣ್ಯ ಮರೆತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಸಂಭ್ರಮ ಪಡುತ್ತಿದ್ದಾರೆ.
ಆದರೆ .. ಬಾಲಿವುಡ್ನ ಭವ್ಯವಾದ ಬಂಗಲೆಗಳನ್ನು ಮಾತ್ರ ದಿವ್ಯ ಮೌನ ಆವರಿಸಿದೆ. ಚಿಕ್ಕ ಪುಟ್ಟ ಹಿಟ್ ಚಿತ್ರಕ್ಕೆಲ್ಲಾ ರಾತ್ರಿಯಿಡೀ ಪಾರ್ಟಿ ಮಾಡುವ ಹಿಂದಿ ಉದ್ಯಮ ''ಧುರಂಧರ್ 2'' ವಿಚಾರದಲ್ಲಿ ವಹಿಸಿರುವ ಈ ಮೌನ ಈಗ ಹಲವು ಪ್ರಶ್ನೆಗಳಿಗೆ ಎಡೆ ಮಾಡಿ ಕೊಟ್ಟಿದೆ. ಬಾಲಿವುಡ್ನವರ ಯೋಗ್ಯತೆ ಮತ್ತು ಅರ್ಹತೆಯ ಕುರಿತು ಕೂಡ ಚರ್ಚೆಗೆ ನಾಂದಿಯನ್ನು ಹಾಡಿದೆ.

ಹೌದು, ಅಸಲಿಗೆ ಬಾಲಿವುಡ್ನಲ್ಲಿ ಗುಂಪುಗಾರಿಕೆ ಇದೆ ಎನ್ನುವ ಮಾತು ಮೊದಲಿಂದ ಇದೆ. ಸ್ವಜನಪಕ್ಷಪಾತ ಇಲ್ಲಿ ತಾಂಡವವಾಡುತ್ತಿದೆ. ಸುಲಭಕ್ಕೆ ಇಲ್ಲಿ ಹೊರಗಡೆಯವರನ್ನು ಈ ಬಾಲಿವುಡ್ನವರು ಒಳಗಡೆ ಸೇರಿಸಿಕೊಳ್ಳುವುದಿಲ್ಲ. ಬಾಗಿಲು ತೆಗೆದು ಅಪ್ಪಿಕೊಳ್ಳುವುದಿಲ್ಲ. ಸುಶಾಂತ್ ಸಿಂಗ್ ರಜಪೂತ್ ನೇಣಿಗೆ ಕೊರಳೊಡ್ಡಿದ್ದಾಗ ಇಂತಹದ್ದೇ ಚರ್ಚೆಗಳು ನಡೆದಿದ್ದವು ಕೂಡ.
ಎಷ್ಟೇ ಪ್ರತಿಭಾವಂತರಾಗಿದ್ದರು ಕೂಡ ನಿಮ್ಮ ಸರ್ನೇಮ್ ಅಥವಾ ನೀವು ಯಾವ 'ಕ್ಯಾಂಪ್'ಗೆ ಸೇರಿದವರು ಎಂಬುದು ಮಾತ್ರ ಇಲ್ಲಿ ಮುಖ್ಯವಾಗುತ್ತದೆ. ಬಾಲಿವುಡ್ನ ಈ ಮನೋಭಾವ ''ಧುರಂಧರ್ 2'' ಚಿತ್ರದ ಅತ್ಯಮೋಘ, ಅಭೂತಪೂರ್ವ ಗೆಲುವಿನಿಂದ ಮತ್ತೊಮ್ಮೆ ಜಗಜ್ಜಾಹೀರಾಗಿದೆ ಅಷ್ಟೇ.
ವಿಪರ್ಯಾಸ ಅಂದರೆ ಧುರಂಧರ್ ಅಬ್ಬರಕ್ಕೆ ದಕ್ಷಿಣ ಭಾರತೀಯ ಚಿತ್ರರಂಗ ದಂಗಾಗಿದೆ. ರಜನಿಕಾಂತ್, ರಾಜಮೌಳಿ, ಶಿವರಾಜ್ ಕುಮಾರ್, ಮಹೇಶ್ ಬಾಬು, ಅಲ್ಲು ಅರ್ಜುನ್ ಹೀಗೆ ಸೌತ್ನ ದಿಗ್ ದಿಗ್ಗಜರೆಲ್ಲಾ ರಣ್ವೀರ್ ಸಿಂಗ್ ಮತ್ತು ಆದಿತ್ಯ ಧರ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ಧಾರೆ. ಅಪ್ಪಿಕೊಂಡು ಮುದ್ದಾಡುತ್ತಿದ್ದಾರೆ.
ಆದರೆ.. ಇಲ್ಲಿಯವರೆಗೆ ಬಾಲಿವಡ್ನ ದಂತಕತೆ ಶ್ರೀಯುತ ಅಮಿತಾಬ್ ಬಚ್ಚನ್ ಅವರಿಗೆ ''ಧುರಂಧರ್'' ಚಿತ್ರತಂಡಕ್ಕೆ ಶುಭ ಕೋರಲು ಪುರುಸೊತ್ತು ಸಿಕ್ಕಿಲ್ಲ. ಖಾನ್ತ್ರಯರಂತೂ ''ಧುರಂಧರ್ 2'' ತಮ್ಮದೇ ಭಾಷೆಯ ಚಿತ್ರ ಎನ್ನುವುದನ್ನೇ ಮರೆತಿದ್ಧಾರೆ.

ಕೇವಲ ಇವರಷ್ಟೇ ಅಲ್ಲ ಕಂಗನಾ ರಣಾವತ್, ಅನುಪ್ ಖೇರ್, ಕರಣ್ ಜೋಹರ್ ಹೀಗೆ ನಾಲ್ಕೈದು ಜನ ಹೊರತು ಪಡಿಸಿದರೆ ಯಾರೊಬ್ಬರು ''ಧುರಂಧರ್ 2'' ಚಿತ್ರದ ಕುರಿತು ಮಾತನಾಡುವ ಗೋಜಿಗೆ ಹೋಗಿಲ್ಲ. ರಣ್ವೀರ್ ಸಿಂಗ್ ಮತ್ತು ಆದಿತ್ಯ ಧರ್ ಹಾಗೂ ತಂಡಕ್ಕೆ ಅಭಿನಂದನೆ ಸಲ್ಲಿಸಿಲ್ಲ. ಈ ಹಿನ್ನೆಲೆ ಸ್ವಂತ ಮನೆಯಲ್ಲಿದ್ದರೂ ಕೂಡ ರಣವೀರ್ ಸಿಂಗ್ ಮತ್ತು ಆದಿತ್ಯ ಧರ್ ಅನಾಥರಾದಂತೆ ಆಗಿದ್ದಾರೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಪ್ಯಾನ್ ಇಂಡಿಯಾ ಅಲೆಯಿಂದಾಗಿ ''ಬಾಲಿವುಡ್'' ಬೆಚ್ಚಿ ಬಿದ್ದು ವರ್ಷಗಳೇ ಆಗಿವೆ. ಮೊದಲೆಲ್ಲ ದಕ್ಷಿಣ ಭಾರತೀಯ ಚಿತ್ರರಂಗವನ್ನು ಲೇವಡಿ ಮಾಡುತ್ತಿದ್ದ ಹಿಂದಿ ಉದ್ಯಮ ಈ ಪ್ಯಾನ್ ಇಂಡಿಯಾ ಗಾಳಿಯಿಂದ ಚಡಪಡಿಸುತ್ತಿದೆ. ಒಂದಾದ ಮೇಲೊಂದು ಸಿನಿಮಾಗಳು ನೆಲಕ್ಕುರುಳುತ್ತಿವೆ.
ಈ ಹಿನ್ನೆಲೆ ''ಧುರಂಧರ್ 2'' ಚಿತ್ರದ ಈ ಗೆಲುವನ್ನು ಬಾಲಿವುಡ್ನವರು ತಮಗೆ ಸಿಕ್ಕ ಜೀವದಾನ ಇದು ಎಂದುಕೊಳ್ಳಬೇಕಿತ್ತು. ಸಂಭ್ರಮ ಪಡಬೇಕಿತ್ತು. ಆದರೆ ಆಗಲೇ ಹೇಳಿದಂತೆ ಸದ್ಯ ಬಾಲಿವುಡ್ನಲ್ಲಿ ಸ್ಮಶಾನ ಮೌನ ಇದೆ.
ಹೀಗಾಗಿಯೇ ಕೆರಳಿರುವ ಹಲವರು ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ನವರ ಮುಖಕ್ಕೆ ಕ್ಯಾಕರಿಸಿ ಉಗಿಯುತ್ತಿದ್ದಾರೆ. ಚರ್ಚೆ ಮಾಡುತ್ತಿದ್ದಾರೆ. ಒಬ್ಬ ಸ್ಟಾರ್ ಕಿಡ್ ನಟಿಸಿದ ಸಾಧಾರಣ ಟ್ರೈಲರ್ಗೆ ನೂರಾರು ಸೆಲೆಬ್ರಿಟಿಗಳು ಶೇರ್ ಮಾಡುತ್ತಾರೆ, ಆದರೆ ರಣವೀರ್ ಸಿಂಗ್ ಅವರಂತಹ ಶ್ರಮಜೀವಿ ಐತಿಹಾಸಿಕ ಬ್ಲಾಕ್ಬಸ್ಟರ್ ಕೊಟ್ಟರೂ ಯಾರು ಮೌನ ಮುರಿಯುವುದಿಲ್ಲ ಎಂದು ಕಿಡಿ ಕಾರುತ್ತಿದ್ದಾರೆ. ರಣವೀರ್ ಸಿಂಗ್ ಅವರ ಪ್ರತಿಭೆಗೆ ಬೇರೆ ಯಾರದ್ದೋ ಟ್ವೀಟ್ನ ಅವಶ್ಯಕತೆಯಿಲ್ಲ, ಆದರೆ ಈ ಮೌನದಿಂದ ಬಾಲಿವುಡ್ನವರ ಬಣ್ಣ ಬಯಲಾದಂತೆ ಆಗಿದೆ ಎಂದು ಆಕ್ರೋಶ ಹೊರ ಹಾಕುತ್ತಿದ್ಧಾರೆ.
ಒಟ್ನಲ್ಲಿ ಪ್ರಪಂಚವನ್ನೇ ಗೆದ್ದರೂ ನಮ್ಮವರಾಗಲು ಸಾಧ್ಯ ಇಲ್ಲ ಎನ್ನುವ ಸಂದೇಶವನ್ನು ಬಾಲಿವುಡ್ ಈ ಮೂಲಕ ರಣ್ವೀರ್ ಸಿಂಗ್ ಮತ್ತು ಆದಿತ್ಯ ಧರ್ ಗೆ ನೀಡಿದಂತೆ ಇದೆ. ಈ ಮನಸ್ಥಿತಿಯೇ ಬಾಲಿವುಡ್ನಿಂದ ಪ್ರೇಕ್ಷಕರು ದೂರ ಸರಿಯಲು ಮುಖ್ಯ ಕಾರಣ ಎಂದರೆ ಅದು ತಪ್ಪಾಗಲಿಕ್ಕಿಲ್ಲ.


Click it and Unblock the Notifications











