ಗಾಯನದಿಂದ ಶ್ರೇಯಾ ಘೋಷಾಲ್ ಬ್ರೇಕ್? ಲಿಪ್ ಸಿಂಕ್ ಮಾಡಿದ್ರೆ ಹಾಡುವುದನ್ನೇ ನಿಲ್ಲಿಸ್ತಾರಂತೆ ಈ ಗಾಯಕಿ…
ಬಾಲಿವುಡ್ನ ಸೆನ್ಸೇಷನಲ್ ಗಾಯಕ ಅರಿಜಿತ್ ಸಿಂಗ್ ಇತ್ತೀಚೆಗಷ್ಟೇ ಹಿನ್ನೆಲೆ ಗಾಯನದಿಂದ ವಿರಾಮ ಪಡೆಯುವ ಬಗ್ಗೆ ಸುಳಿವು ನೀಡಿದ್ದರು. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಶಾಕ್ ಆಗಿದ್ದರು. ಈಗ ಅರಿಜಿತ್ ಬೆನ್ನಲ್ಲೇ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಕೂಡ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
ಶ್ರೇಯಾ ಘೋಷಾಲ್ ಅವರ ಈ ಮಾತುಗಳು ಈಗ ಚಿತ್ರರಂಗದಲ್ಲಿ ಸಂಚಲನ ಮೂಡಿಸಿವೆ. ಅರಿಜಿತ್ ನಿರ್ಧಾರವನ್ನು ಬೆಂಬಲಿಸಿರುವ ಶ್ರೇಯಾ, ತಮಗೂ ವಿರಾಮದ ಅಗತ್ಯವಿದೆ ಎಂಬ ಮನದ ಮಾತನ್ನು ಹಂಚಿಕೊಂಡಿದ್ದಾರೆ. ಸಂಗೀತದ ಮೇಲಿರುವ ಅವರ ನಿಷ್ಠೆ ಮತ್ತು ಪ್ರಾಮಾಣಿಕತೆ ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

ಲೈವ್ ಕಾನ್ಸರ್ಟ್ಗಳಲ್ಲಿ ಗಾಯಕರು ಮಾಡುವ 'ಲಿಪ್ ಸಿಂಕ್' ಬಗ್ಗೆ ಶ್ರೇಯಾ ಕಟುವಾಗಿ ಮಾತನಾಡಿದ್ದಾರೆ. ಸಂಗೀತವೆಂದರೆ ಅದು ಆತ್ಮದಿಂದ ಬರಬೇಕು ಎಂಬುದು ಅವರ ವಾದ. ಇದೇ ವಿಚಾರವಾಗಿ ಎಬಿಪಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಅವರು ಮನಬಿಚ್ಚಿ ಮಾತನಾಡಿದ್ದಾರೆ.
ಅರಿಜಿತ್ ಸಿಂಗ್ ನಿರ್ಧಾರಕ್ಕೆ ಶ್ರೇಯಾ ಸಾಥ್....
ಅಂದಹಾಗೆ ಅರಿಜಿತ್ ಸಿಂಗ್ ಸಿನಿಮಾ ಹಾಡುಗಳಿಂದ ದೂರ ಸರಿಯಲು ನಿರ್ಧರಿಸಿದ್ದು ದೊಡ್ಡ ಚರ್ಚೆಯಾಗಿತ್ತು. ಈ ಬಗ್ಗೆ ಮಾತನಾಡಿದ ಶ್ರೇಯಾ, ಅರಿಜಿತ್ ಅವರ ನಿರ್ಧಾರ ನಿಜಕ್ಕೂ ಧೈರ್ಯಶಾಲಿ ಎಂದು ಬಣ್ಣಿಸಿದ್ದಾರೆ. ಅಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಅಪ್ರತಿಮ ಮನೋಬಲ ಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ನನಗೂ ಕೂಡ ಕೆಲವೊಮ್ಮೆ ವಿರಾಮ ಬೇಕು ಎನಿಸುತ್ತದೆ. ಅರಿಜಿತ್ ಅತ್ಯಂತ ಧೈರ್ಯದಿಂದ ಈ ಹೆಜ್ಜೆ ಇಟ್ಟಿದ್ದಾರೆ" ಎಂದು ಶ್ರೇಯಾ ಹೇಳಿದ್ದಾರೆ. ಅರಿಜಿತ್ ಅವರನ್ನು ಕೇವಲ ಗಾಯಕನಾಗಿ ನೋಡದೆ, ಸಂಗೀತದೊಂದಿಗೆ ಆಳವಾದ ಸಂಬಂಧ ಹೊಂದಿರುವ ವ್ಯಕ್ತಿ ಎಂದು ಅವರು ಹೊಗಳಿದ್ದಾರೆ.
ಲಿಪ್ ಸಿಂಕ್ ಮಾಡಲ್ಲ
ಸಂಗೀತ ಲೋಕದಲ್ಲಿ ಲೈವ್ ಪರ್ಫಾರ್ಮೆನ್ಸ್ ಅಂದರೆ ಅದು ಶ್ರೇಯಾ ಘೋಷಾಲ್ ಅವರಿಗೆ ಅತ್ಯಂತ ಪ್ರೀತಿ. ಆದರೆ ಇತ್ತೀಚಿನ ದಿನಗಳಲ್ಲಿ ವೇದಿಕೆಯ ಮೇಲೆ ಲಿಪ್ ಸಿಂಕ್ ಮಾಡುವ ಸಂಸ್ಕೃತಿ ಹೆಚ್ಚುತ್ತಿದೆ. ಈ ಬಗ್ಗೆ ಶ್ರೇಯಾ ಅವರಿಗೆ ತೀವ್ರ ಅಸಮಾಧಾನವಿದೆ.
"ವೇದಿಕೆಯ ಮೇಲೆ ಲಿಪ್ ಸಿಂಕ್ ಮಾಡುವುದು ನನಗೆ ಇಷ್ಟವಿಲ್ಲ. ಅದರಿಂದ ನನಗೆ ತುಂಬಾ ಅನಾನುಕೂಲವಾಗುತ್ತದೆ. ಯಾವ ದಿನ ನಾನು ನಿಜವಾಗಿ ಹಾಡಲು ಸಾಧ್ಯವಿಲ್ಲವೋ, ಅಂದೇ ನಾನು ಹಾಡುವುದನ್ನು ನಿಲ್ಲಿಸುತ್ತೇನೆ" ಎಂದು ಅವರು ಖಡಕ್ ಆಗಿ ಹೇಳಿದ್ದಾರೆ. ರಿಯಾಜ್ ಮತ್ತು ಧ್ವನಿ ಇರುವವರೆಗೆ ಮಾತ್ರ ತಾವು ವೇದಿಕೆ ಏರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಸಂಗೀತವೇ ಅವರಿಗೆ ಎಲ್ಲವೂ...
ಅರಿಜಿತ್ ಸಿಂಗ್ ಬಗ್ಗೆ ಶ್ರೇಯಾ ಅವರಿಗೆ ಅಪಾರ ಗೌರವವಿದೆ. ಅರಿಜಿತ್ ಕೇವಲ ಪ್ರಚಾರಕ್ಕಾಗಿ ಅಥವಾ ಹಣಕ್ಕಾಗಿ ಸಂಗೀತ ಮಾಡುವುದಿಲ್ಲ. ಅವರು ತಮ್ಮ ಹೃದಯದ ಸಂತೋಷಕ್ಕಾಗಿ ಹಾಡುತ್ತಾರೆ ಎಂದು ಶ್ರೇಯಾ ಗುರುತಿಸಿದ್ದಾರೆ.
"ಅವರಿಗೆ ಸಂಗೀತಕ್ಕಿಂತ ದೊಡ್ಡದು ಯಾವುದೂ ಇಲ್ಲ. ಅವರು ತಮಗೆ ಖುಷಿ ಕೊಡುವ ಕೆಲಸವನ್ನಷ್ಟೇ ಮಾಡುತ್ತಾರೆ. ಇದೇ ಕಾರಣಕ್ಕೆ ಜನರು ಅವರನ್ನು ಅಷ್ಟೊಂದು ಪ್ರೀತಿಸುತ್ತಾರೆ" ಎಂದು ಶ್ರೇಯಾ ವಿಶ್ಲೇಷಿಸಿದ್ದಾರೆ. ಅರಿಜಿತ್ ಅವರ ಪ್ರಾಮಾಣಿಕತೆಯೇ ಅವರ ಯಶಸ್ಸಿನ ರಹಸ್ಯ ಎಂಬುದು ಶ್ರೇಯಾ ಅವರ ಮಾತು.
ಅಭಿಮಾನಿಗಳ ಬಗ್ಗೆ ಗಾಯಕರಿಗಿರಲಿ ಜವಾಬ್ದಾರಿ...
ವೇದಿಕೆಯ ಮೇಲೆ ಪ್ರದರ್ಶನ ನೀಡುವಾಗ ಕಲಾವಿದರು ಸದಾ ಜಾಗರೂಕರಾಗಿರಬೇಕು ಎಂದು ಶ್ರೇಯಾ ನಂಬಿದ್ದಾರೆ. ಕಲಾವಿದರಿಗೂ ವೈಯಕ್ತಿಕ ನೋವುಗಳು, ಸಮಸ್ಯೆಗಳು ಇರುತ್ತವೆ. ಆದರೆ ಅದನ್ನು ವೇದಿಕೆಯ ಮೇಲೆ ತೋರಿಸಬಾರದು ಎಂಬುದು ಅವರ ನಿಲುವು.
"ಜನರು ನಮ್ಮ ಬಳಿ ಸಂಗೀತ ಕೇಳಲು ಬರುತ್ತಾರೆ. ಅವರು ತಮ್ಮ ಸಮಸ್ಯೆಗಳನ್ನು ಮರೆತು ಸ್ಫೂರ್ತಿ ಪಡೆಯಲು ಬರುತ್ತಾರೆ. ಸಂಗೀತವು ಜನರ ನೋವನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಹಾಗಾಗಿ ನಾವು ಅವರಿಗೆ ಉತ್ತಮ ಅನುಭವ ನೀಡಬೇಕು" ಎಂದು ಶ್ರೇಯಾ ಹೇಳಿದ್ದಾರೆ.
ಚಪ್ಪಾಳೆಯೇ ನನಗೆ ಶಕ್ತಿ...
ಶ್ರೇಯಾ ಘೋಷಾಲ್ ಇಂದಿಗೂ ಇಷ್ಟೊಂದು ಎನರ್ಜಿಯಿಂದ ಹಾಡಲು ಕಾರಣವೇನು ಗೊತ್ತೇ? ಅದು ಪ್ರೇಕ್ಷಕರಿಂದ ಸಿಗುವ ಪ್ರೀತಿ. ಪ್ರೇಕ್ಷಕರ ಚಪ್ಪಾಳೆ ಮತ್ತು ಕಿರುಚಾಟವೇ ತಮಗೆ ಅತಿದೊಡ್ಡ ಸ್ಫೂರ್ತಿ ಎಂದು ಅವರು ಹೇಳಿಕೊಂಡಿದ್ದಾರೆ.
"ಮನಸ್ಸು ಸಂತೋಷವಾಗಿದ್ದಾಗ ಶಕ್ತಿ ತಾನಾಗಿಯೇ ಬರುತ್ತದೆ. ಪ್ರೇಕ್ಷಕರ ಸಂವಹನ ನನ್ನನ್ನು ಮತ್ತಷ್ಟು ಉತ್ಸಾಹದಿಂದ ಹಾಡುವಂತೆ ಮಾಡುತ್ತದೆ" ಎಂದು ಶ್ರೇಯಾ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ, ಅರಿಜಿತ್ ಮತ್ತು ಶ್ರೇಯಾ ಅವರ ಈ ಮಾತುಗಳು ಸಂಗೀತ ಲೋಕದಲ್ಲಿ ಹೊಸ ಸಂಚಲನ ಮೂಡಿಸಿರುವುದಂತೂ ಸುಳ್ಳಲ್ಲ.


Click it and Unblock the Notifications











