''ನಿಮ್ಮ ಈ ಸುಳ್ಳು ಸುದ್ದಿಯಿಂದ ನನ್ನ ಮಗಳ ಆತಂಕ ಹೆಚ್ಚಾಗಿದೆ,ನಾನಿನ್ನೂ ಸತ್ತಿಲ್ಲ ಬದುಕಿದ್ದೇನೆ''- ಶ್ರೇಯಸ್ ತಲ್ಪಡೆ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜನ ಸಾಮಾನ್ಯರು ಯಾವುದಾದರು ಒಂದು ಸುದ್ದಿಯನ್ನು ಟಿವಿ ಮತ್ತು ನ್ಯೂಸ್ ಪೇಪರ್ಗಳನ್ನು ನೋಡಿದ ನಂತರ ನಂಬುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈಲ್ನಲ್ಲಿಯೇ ಎಲ್ಲ ಸುದ್ದಿ ಕೆಲವೇ ಸೆಕೆಂಡ್ನಲ್ಲಿ ತಲುಪಿ ಬಿಡುತ್ತಾವೆ.
ಇನ್ನೂ ಸಾಮಾಜಿಕ ಜಾಲತಾಣವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ ಗೆ ತಳ್ಳಿ ತನ್ನ ಕಂಬಂಧ ಬಾಹುಗಳಿಂದ ಜನರನ್ನು ಆಕ್ರಮಿಸಿಕೊಂಡಿದೆ. ಆದರೆ, ಈ ಸೋಶಿಯಲ್ ಮೀಡಿಯಾದಲ್ಲಿ ಬಿತ್ತರವಾಗುವ ಸುದ್ದಿಗಳಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎನ್ನುವುದನ್ನು ಅರಿಯುವಷ್ಟರಲ್ಲಿ ಆ ಸುದ್ದಿ ಎಲ್ಲಿಂದ ಎಲ್ಲೆಲ್ಲಿಗೋ ತಲುಪಿ, ಮತ್ಯಾವುದೋ ಪ್ರಮಾದವನ್ನು ಸೃಷ್ಟಿಸಿರುತ್ತೆ. ಇದಕ್ಕೆ ಶ್ರೇಯಸ್ ತಲ್ಪಡೆಯ ಕುರಿತು ಹಬ್ಬಿರುವ ಸುಳ್ಳು ಸುದ್ದಿ ತಾಜಾ ಉದಾಹರಣೆ.

ಹೌದು, ಹಂತ ಹಂತವಾಗಿ ಬಾಲಿವುಡ್ನಲ್ಲಿ ಬದುಕು ಕಟ್ಟಿಕೊಂಡ ಶ್ರೇಯಸ್ ತಲ್ಪಡೆಯ ಕುರಿತು, ಕೆಲವರು ಇಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಶ್ರೇಯಸ್ ಇಹಲೋಕ ತ್ಯಜಿಸಿದ್ದಾರೆ ಎಂದು ಹುಯಿಲೆಬ್ಬಿಸಿದ್ದಾರೆ. ಈ ಸುದ್ದಿ ಸಹಜವಾಗಿಯೇ ಶ್ರೇಯಸ್ ತಲ್ಪಡೆಗೆ ತಲುಪಿದೆ. ಮನಸಿಗೆ ಆಘಾತವೂ ಆಗಿದೆ. ಹೀಗಾಗಿಯೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಬ್ಬಿರುವ ಸುದ್ದಿ ಸುಳ್ಳು ಎಂದು ಸ್ಪಷ್ಟೀಕರಣವನ್ನೂ ಕೊಟ್ಟಿದ್ದಾರೆ. ಈ ತರ ನೋವು ಕೊಡಬೇಡಿ ಎಂಬ ಮನವಿಯನ್ನೂ ಮಾಡಿಕೊಂಡಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಶ್ರೇಯಸ್ ತಲ್ಪಡೆ. ನಾನು ಜೀವಂತವಾಗಿದ್ದೇನೆ, ಸಂತೋಷವಾಗಿದ್ದೇನೆ ಮತ್ತು ಆರೋಗ್ಯದಿಂದ ಇದ್ದೇನೆ ಎಂದಿದ್ದಾರೆ. ನನ್ನ ಸಾವನ್ನೂ ತಮ್ಮ ಹಾಸ್ಯಕ್ಕೆ ಯಾರಾದರೂ ಬಳಿಸಿಕೊಂಡಿದ್ದರೆ, ನಾನು ಅರ್ಥ ಮಾಡಿಕೊಳ್ಳುತ್ತೇನೆ ಆದರೆ ಈ ತರಹದ ಸುದ್ದಿಯಿಂದ, ನನ್ನ ಕುಟುಂಬ ವರ್ಗದ ಮೇಲೆ ಪರಿಣಾಮ ಬೀರುತ್ತೆ ಎಂದಿದ್ದಾರೆ. ಕಳೆದ ವರ್ಷ ಹೃದಯಾಘಾತಕ್ಕೊಳಗಾದ ನಂತರ ನನ್ನ ಮಗಳಿಗೆ ನನ್ನ ಆರೋಗ್ಯದ ಕುರಿತು ಹೆಚ್ಚಿನ ಆತಂಕ ಇದೆ. ಈ ತರಹದ ಸುಳ್ಳು ಸುದ್ದಿಗಳಿಂದ ಆ ಆತಂಕ ಇನ್ನೂ ಹೆಚ್ಚಾಗುತ್ತೆ ಎಂದಿರುವ ಶ್ರೇಯಸ್, ಇದೆಲ್ಲದರಿಂದ ಆಕೆಯ ಗೆಳೆಯರು ಮತ್ತು ಶಿಕ್ಷಕರಿಂದ ಅನವಶ್ಯಕ ಪ್ರಶ್ನೆಗಳನ್ನು ಆಕೆ ಎದುರಿಸುವಂತಾಗಿದೆ ಎಂದಿದ್ದಾರೆ.
ಮುಂದುವರೆದು ಸತ್ಯಾ ಸತ್ಯತೆಯನ್ನು ಅರಿಯದೇ ಈ ಸುದ್ದಿಯನ್ನು ನಂಬಿ ಬೇರೆಯವರಿಗೆ ವಿಷಯ ತಲುಪಿಸುತ್ತಿರುವವರು, ಸಾವಿನ ವಿಚಾರವನ್ನು ಸಂಭ್ರಮಿಸುತ್ತಿರುವವರು, ದಯವಿಟ್ಟು ಇದನ್ನೆಲ್ಲ ಇಲ್ಲಿಗೆ ನಿಲ್ಲಿಸಿ ಎಂದಿರುವ ಶ್ರೇಯಸ್, ನನ್ನ ಮತ್ತು ನನ್ನ ಕುಟುಂಬದ ಭಾವನೆಗಳ ಜೊತೆ ಆಟವಾಡಬೇಡಿ ಎಂದು ಮನವಿಯನ್ನೂ ಮಾಡಿಕೊಂಡಿದ್ಧಾರೆ. ಬೇರೆಯವರ ಜೀವಕ್ಕೆ ಹಾನಿಯಾಗುವಂತೆ ಹಾಸ್ಯವನ್ನು ಮಾಡಬೇಡಿ ಎಂದಿದ್ಧಾರೆ.
ಅಂದ್ಹಾಗೇ ಕಳೆದ ವರ್ಷಡಿಸೆಂಬರ್ 14ರಂದು ಹೃದಯಾಘಾತಕ್ಕೊಳಗಾಗಿ, ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆಗೆ ಶ್ರೇಯಸ್ ತಲ್ಪಡೆ ಒಳಗಾಗಿದ್ದರು.ನಾನು ಧೂಮಪಾನ ಮಾಡುವುದಿಲ್ಲ. ರೆಗ್ಯುಲರ್ಆಗಿ ಮದ್ಯಪಾನ ಕೂಡ ಮಾಡಲ್ಲ. ತಿಂಗಳಿಗೆ ಒಮ್ಮೆ ಕುಡಿಯುತ್ತೇನೆ ಅಷ್ಟೇ. ತಂಬಾಕು ಸೇವಿಸಲ್ಲ. ನನ್ನ ಕೊಲೆಸ್ಟ್ರಾಲ್ ಪ್ರಮಾಣ ಸ್ವಲ್ಪ ಜಾಸ್ತಿ ಇತ್ತು ಎಂಬುದು ನಿಜ. ಆದರೆ ಈ ದಿನಗಳಲ್ಲಿ ಅದನ್ನು ನಾರ್ಮಲ್ಅಂತಾರೆ. ಅದಕ್ಕೆ ನಾನು ಔಷದಿ ಪಡೆಯುತ್ತಿದ್ದೆ. ಅದು ಗಣನೀಯವಾಗಿ ಕಡಿಮೆ ಆಗಿದೆ. ಮಧುಮೇಹ ಇಲ್ಲ, ಅಧಿಕ ರಕ್ತದೊತ್ತಡ ಇಲ್ಲ. ಎಲ್ಲವೂ ಸರಿಯಾಗಿದೆ ಎಂದರೆ ಹೃದಯಾಘಾತಕ್ಕೆ ಕಾರಣ ಏನಿರಬಹುದು ಎಂಬ ಪ್ರಶ್ನೆ ಮಾಡಿದ್ದರು.ಕೊವಿಡ್ ಲಸಿಕೆಯಿಂದನೇ ನನಗೆ ಹೃದಯಾಘಾತವಾಗಿರಬಹುದು ಎಂದು ಅನುಮಾನವನ್ನೂ ಶ್ರೇಯಸ್ ತಲ್ಪಡೆ ವ್ಯಕ್ತಪಡಸಿದ್ದರು.


Click it and Unblock the Notifications











