'ಕನ್ನಡದ ಅತ್ಯುತ್ತಮ ನಿರ್ದೇಶಕ' ಎನ್ನುವುದು ಬೇಡ 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಕೊಟ್ಟ ಸಲಹೆ
ಸೈಮಾ ಪ್ರಶಸ್ತಿ ವಿತರಣೆ ಸಮಾರಂಭ ಬೆಂಗಳೂರಿನಲ್ಲಿ ನಡೆದಿದ್ದು, ಈ ಅದ್ಧೂರಿ ಕಾರ್ಯಕ್ರಮದಲ್ಲಿ ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳು, ತಂತ್ರಜ್ಞರು, ನಟರು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಸ್ಯಾಂಡಲ್ವುಡ್ನ ಹಲವು ಪ್ರತಿಷ್ಠಿತ ಸಿನಿಮಾಕರ್ಮಿಗಳು, ನಟರು ಈ ವರ್ಣಮಯ ಕಾರ್ಯಕ್ರಮಕ್ಕೆ ಆಗಮಿಸಿ, ಪ್ರಶಸ್ತಿ ಪಡೆದರು ಮತ್ತು ಕೆಲವರು ಪ್ರಶಸ್ತಿ ವಿತರಿಸಿದರು.
ಡಾಲಿ ಧನಂಜಯ್ ನಟನೆಯ 'ಬಡವ ರಾಸ್ಕಲ್' ಸಿನಿಮಾದ ನಿರ್ದೇಶಕ ಶಂಕರ್ ಗುರು ಅವರಿಗೆ ಅತ್ಯುತ್ತಮ ಚೊಚ್ಚಲ ಸಿನಿಮಾ ನಿರ್ದೇಶಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಸಲಹೆಯೊಂದನ್ನು ಸಹ ವಿವೇಕ್ ನೀಡಿದರು.

ಶಂಕರ್ಗುರುಗೆ ಪ್ರಶಸ್ತಿ ನೀಡುತ್ತಾ ಮಾತನಾಡಿದ ವಿವೇಕ್ ಅಗ್ನಿಹೋತ್ರಿ, ''ನಿಮಗೆ, ಭಾರತದ ಅತ್ಯುತ್ತಮ ಚೊಚ್ಚಿಲ ಸಿನಿಮಾ ನಿರ್ದೇಶಕ ಪ್ರಶಸ್ತಿ ಕನ್ನಡ ಭಾಷೆ ಸಿನಿಮಾಕ್ಕಾಗಿ ದೊರೆತಿದೆ. ಇನ್ನುಮುಂದೆ ನಾವು ಹೀಗೆ ಕರೆಯಬೇಕಾಗಿದೆ. ತೆಲುಗು, ತಮಿಳು ಎಂದು ಭಿನ್ನತೆ ಮಾಡುವುದಕ್ಕಿಂತಲೂ ಎಲ್ಲರೂ ಒಂದು ಎಂಬ ಭಾವನೆ ಮೆರೆಸಬೇಕಾಗಿದೆ'' ಎಂದಿದ್ದಾರೆ.
ಇದೇ ವಿಷಯವನ್ನು ಟ್ವಿಟ್ಟರ್ನಲ್ಲೂ ಹಂಚಿಕೊಂಡಿರುವ ವಿವೇಕ್ ಅಗ್ನಿಹೋತ್ರಿ, ''ಶಂಕರ್ ಗುರು ಅವರಿಗೆ 'ಬಡವ ರಾಸ್ಕಲ್' ಸಿನಿಮಾಕ್ಕಾಗಿ ಅತ್ಯುತ್ತಮ ಚೊಚ್ಚಿಲ ಸಿನಿಮಾ ನಿರ್ದೇಶಕ ಪ್ರಶಸ್ತಿ ನೀಡಿದ್ದು ಗೌರವ ತಂದಿದೆ. ಅತ್ಯುತ್ತಮ ಕನ್ನಡ/ತೆಲುಗು ನಿರ್ದೇಶಕ ಎಂದು ಕರೆಯುವುದಕ್ಕಿಂತ, ಕನ್ನಡ ಭಾಷೆಯ ಅತ್ಯುತ್ತಮ ಭಾರತೀಯ ನಿರ್ದೇಶಕ ಎಂದು ಕರೆಯಲು ಪ್ರಾರಂಭಿಸೋಣ. ನಾನು ಇದನ್ನೇ ನಂಬುತ್ತೇನೆ ಮತ್ತು ಕೇಳಲು ಬಯಸುತ್ತೇನೆ'' ಎಂದಿದ್ದಾರೆ ವಿವೇಕ್ ಅಗ್ನಿಹೋತ್ರಿ.
ಸೈಮಾ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ಖ್ಯಾತನಾಮ ನಟರು, ನಿರ್ದೇಶಕರು ಭಾಗಿಯಾಗಿದ್ದರು. ಶಿವರಾಜ್ ಕುಮಾರ್, ಯಶ್, ದರ್ಶನ್, ರಣ್ವೀರ್ ಸಿಂಗ್, ಅಲ್ಲು ಅರ್ಜುನ್, ಸುಕುಮಾರ್, ಟೊವಿನೊ ಥೋಮಸ್ ಇನ್ನೂ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಮತ್ತು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.


Click it and Unblock the Notifications











