"ಅಲ್ಲಾ ಎಷ್ಟು ಆಯಸ್ಸು ಕೊಟ್ಟಿದ್ದಾನೋ ಅಷ್ಟೇ"; ಜೀವ ಬೆದರಿಕೆ ಬಗ್ಗೆ ಮೌನ ಮುರಿದ ಸಲ್ಲು
ಬಾಲಿವುಡ್ ನಟ ಸಲ್ಮಾನ್ ಖಾನ್ ಇತ್ತೀಚೆಗೆ ಜೀವ ಭಯದಲ್ಲೇ ದಿನದೂಡುವಂತಾಗಿದೆ. ಬಿಟೌನ್ ಬ್ಯಾಡ್ಬಾಯ್ಗೆ ಹತ್ಯೆ ಬೆದರಿಕೆ ಬಂದಿರುವುದು ಗೊತ್ತೆ ಇದೆ. ಆಗಾಗ್ಗೆ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ನೇರವಾಗಿ ಅಥವಾ ಪರೋಕ್ಷವಾಗಿ ಜೀವ ಬೆದರಿಕೆ ಒಡ್ಡುತ್ತಿದ್ದಾನೆ.
ಜೀವ ಬೆದರಿಕೆ ಇರುವ ಕಾರಣ ಸಲ್ಲು ನಿವಾಸಕ್ಕೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ವರ್ಷ ಇಬ್ಬರು ದುಷ್ಕರ್ಮಿಗಳು ಸಲ್ಮಾನ್ ಖಾನ್ ನೆಲೆಸಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಎದುರು 4 ಸುತ್ತು ಗುಂಡು ಹಾರಿಸಿ ಪರಾರಿ ಆಗಿದ್ದರು. ಈ ವಿಚಾರ ಬಾಲಿವುಡ್ನಲ್ಲಿ ಸಂಚಲನ ಸೃಷ್ಟಿಸಿತ್ತು. ಲಾರೆನ್ಸ್ ಬಿಷ್ಣೋಯ್ ತಂಡದ ಸದಸ್ಯರೇ ಈ ಕೃತ್ಯ ಎಸಗಿರುವುದು ಬಯಲಾಗಿತ್ತು.

ಸಲ್ಮಾನ್ ಖಾನ್ ಪ್ರತಿ ಕ್ಷಣ ಆತಂಕದಲ್ಲೇ ಕಳೆಯುವಂತಾಗಿದೆ. ತಮ್ಮ ಭದ್ರತೆ ಹೆಚ್ಚಿಸಿಕೊಂಡಿದ್ದಾರೆ. ಹೆಚ್ಚು ಬಹಿರಂಗವಾಗಿ ಓಡಾಡುವುದಿಲ್ಲ. ಸಿನಿಮಾ ಚಿತ್ರೀಕರಣ, ಬಿಗ್ಬಾಸ್ ಶೋ ಹೀಗೆ ಎಲ್ಲೇ ಹೋದರೂ ಭದ್ರತೆ ಹೆಚ್ಚಾಗಿರುತ್ತದೆ. ಸಲ್ಲು ನಟನೆಯ 'ಸಿಕಂದರ್' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಈದ್ ಸಂಭ್ರಮದಲ್ಲಿ ವಿಶ್ವದಾದ್ಯಂತ ಆಕ್ಷನ್ ಎಂಟರ್ಟೈನರ್ ಸಿನಿಮಾ ಬಿಡುಗಡೆ ಆಗುತ್ತಿದೆ.
ಎ. ಆರ್ ಮುರುಗದಾಸ್ ನಿರ್ದೇಶನದ 'ಸಿಕಂದರ್' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಪ್ರಚಾರದ ವೇಳೆ ಜೀವ ಬೆದರಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಸಲ್ಲು ಉತ್ತರಿಸಿದ್ದಾರೆ. "ಎಲ್ಲಾ ಆ ದೇವರು, ಅಲ್ಲಾ ಕೈಯಲ್ಲಿದೆ. ಆತ ಏನು ಬರೆದಿದ್ದಾನೋ ಅದು ನಡೆಯುತ್ತದೆ. ದೇವರು ಎಷ್ಟು ಆಯಸ್ಸು ಕೊಟ್ಟಿದ್ದಾನೋ ಅಷ್ಟೇ ಜೀವಿಸುತ್ತೇನೆ. ಇದೆಲ್ಲಾ ದೇವರ ಇಚ್ಛೆ" ಎಂದಿದ್ದಾರೆ.
"ಕೆಲವೊಮ್ಮೆ, ಇಷ್ಟೊಂದು ಭದ್ರತಾ ಸಿಬ್ಬಂದಿ ಜೊತೆ ಓಡಾಡುವುದು ಸಮಸ್ಯೆಯಾಗುತ್ತದೆ". ಭಾರೀ ಭದ್ರತೆಯಲ್ಲೇ ನಡೆದ ಸುದ್ದಿಗೋಷ್ಠಿಯಲ್ಲಿ ಸಲ್ಮಾನ್ ಖಾನ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. "ಗ್ಯಾಲಕ್ಸಿ.. ಶೂಟ್.. ಶೂಟ್ ಗ್ಯಾಲಕ್ಸಿ, ಬೇರೆ ಏನಿಲ್ಲ" ಎಂದು ಮನೆ, ಶೂಟಿಂಗ್ ಬಿಟ್ಟರೆ ಬೇರೆ ಎಲ್ಲೂ ಹೋಗೋಕೆ ಸಾಧ್ಯವಾಗುತ್ತಿಲ್ಲ ಎಂದು ಸಲ್ಮಾನ್ ಖಾನ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
1998ರಲ್ಲಿ, 'ಹಮ್ ಸಾಥ್ ಸಾಥ್ ಹೈ' ಸಿನಿಮಾ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಹಾಗೂ ಸಹ ಕಲಾವಿದರಾದ ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ ಮತ್ತು ನೀಲಂ ಕೃಷ್ಣಮೃಗ ಬೇಟೆಯಾಡಿದ ಆರೋಪ ಹೊತ್ತಿದ್ದರು. ಜೋಧ್ಪುರ ಬಳಿಯ ಕಾಡಿನಲ್ಲಿ ಕೃಷ್ಣಮೃಗ ಕೊಂದಿದ್ದರು ಎಂದು ದೂರು ದಾಖಲಾಗಿತ್ತು. ಅಂದಿನಿಂದ ಸಲ್ಮಾನ್ ಖಾನ್ಗೆ ಬೆದರಿಕೆ ಶುರುವಾಯಿತು. ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಹಾಗೂ ಆತನ ಗ್ಯಾಂಗ್ ಕೃಷ್ಣಮೃಗವನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಹಾಗಾಗಿ ಅವರು ಸಲ್ಮಾನ್ ಖಾನ್ಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಲಾಗ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಸಲ್ಮಾನ್ ಖಾನ್ ನಟನೆಯ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಸಲ್ಲು ಸಿನಿಮಾಗಳಿಗೆ ಮೊದಲಿನ ಕ್ರೇಜ್ ಇಲ್ಲ. ಇನ್ನು ಈದ್ ಸಂಭ್ರಮದಲ್ಲಿ ತೆರೆಗೆ ಬಂದಿರುವ ಸಲ್ಲಾನ್ ಖಾನ್ ಸಿನಿಮಾಗಳು ಬಾಕ್ಸಾಫೀಸ್ ಶೇಕ್ ಮಾಡಿವೆ. ಈ ವರ್ಷ 'ಸಿಕಂದರ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಚಿತ್ರದ ಸಾಂಗ್ಸ್, ಟ್ರೈಲರ್ ಹಿಟ್ ಆಗಿ ಕುತೂಹಲ ಮೂಡಿಸಿದೆ.
ಹಬ್ಬದ ಸಂಭ್ರಮದಲ್ಲಿ ಭಾನುವಾರ(ಮಾರ್ಚ್ 30) 'ಸಿಕಂದರ್' ಸಿನಿಮಾ ತೆರೆಗೆ ಬರ್ತಿದೆ. ತಮಿಳು ನಿರ್ದೇಶಕ ಆಕ್ಷನ್ ಕಟ್ ಹೇಳಿರುವುದರಿಂದ ಕೊಂಚ ನಿರೀಕ್ಷೆ ಮೂಡಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಮೊದಲ ದಿನವೇ ಆಕ್ಷನ್ ಥ್ರಿಲ್ಲರ್ ಸಿನಿಮಾ ಭರ್ಜರಿ ಓಪನಿಂಗ್ ಪಡೆಯುವ ನಿರೀಕ್ಷೆ ಮೂಡಿದೆ.


Click it and Unblock the Notifications











