ಸಿಕಂದರ್ ಚಿತ್ರಕ್ಕಿಂತ ಮದರಾಸಿ ದೊಡ್ಡ ಬ್ಲಾಕ್ ಬಸ್ಟರ್-ಮುರಗದಾಸ್ ಬಗ್ಗೆ ವ್ಯಂಗ್ಯವಾಡಿದ ಸಲ್ಮಾನ್ ಖಾನ್
ಚಿತ್ರವೊಂದು ಗೆದ್ದಾಗ ಆ ಚಿತ್ರ ಗೆದ್ದಿದ್ದೇ ನನ್ನಿಂದ ಎಂದು ಹಲವರು ಕ್ರೆಡಿಟ್ ತೆಗೆದುಕೊಳ್ಳಲು ಮುಂದೆ ಬರುತ್ತಾರೆ. ಆದರೆ.. ಅದೇ ಚಿತ್ರ ಸೋತರೆ..? ಆ ಚಿತ್ರದ ಸುತ್ತ ಹಲವು ಪ್ರಶ್ನೆಗಳು ಎದ್ದೇಳುತ್ತಾವೆ. ತಂಡದಲ್ಲಿಯೇ ಬಿರುಕು ಮೂಡುತ್ತೆ. ಹೀಗಾಗಿಯೇ ಗೆಲುವಿಗೆ ಹಲವಾರು ಜನ ಅಪ್ಪ-ಅಮ್ಮ ಆದರೆ ಸೋಲು ಅನಾಥ ಎಂದು ಹಿಂದೊಮ್ಮೆ ಅಮಿತಾಬ್ ಬಚ್ಚನ್ ಹೇಳಿದ್ದರು.
ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರದ ಸೋಲಿನ ವಿಚಾರದಲ್ಲಿ ಈ ಮಾತು ಅಕ್ಷರಶ ನಿಜವಾಗಿದೆ. ಹೌದು, ಅಸಲಿಗೆ ಕೆಳ ದಿನಗಳ ಹಿಂದೆ ಸಿಕಂದರ್ ಸೋಲಿನ ಕುರಿತು ಚಿತ್ರದ ನಿರ್ದೇಶಕ ಎ.ಆರ್.ಮುರಗದಾಸ್ ಮಾತನಾಡಿದ್ದರು. ಸೋಲಿಗೆ ಸಲ್ಮಾನ್ ಖಾನ್ ಅವರೇ ನೇರಹೊಣೆ ಎಂದು ಹೇಳಿದ್ದರು.

ಈ ಕುರಿತು ''ವಲೈಪೇಚು ವಾಯ್ಸ್''ನ ಯೂಟ್ಯೂಬ್ ಪಾಡ್ಕಾಸ್ಟ್ನಲ್ಲಿ ಮಾತನಾಡಿದ್ದ ಎ.ಆರ್.ಮುರಗದಾಸ್ ಚಿತ್ರದ ಕಥೆಯಲ್ಲಿ ಯಾವುದೇ ಲೋಪ ಇರಲಿಲ್ಲ ಬದಲಿಗೆ ತುಂಬಾ ಭಾವನಾತ್ಮಕವಾದ ಕಥೆ ಅದು ಆದರೆ
ಸಲ್ಮಾನ್ ಖಾನ್ ಅವರ ಸಹಕಾರ ನನಗೆ ಸಿಗಲಿಲ್ಲ ಎಂದಿದ್ದರು.
ಇಷ್ಟೇ ಅಲ್ಲ ಮುಂದುವರೆದು ''ಸಿಕಂದರ್'' ಚಿತ್ರದ ಚಿತ್ರೀಕರಣಕ್ಕೆ ಸಲ್ಮಾನ್ ಖಾನ್ ಬರುತ್ತಿದ್ದಿದ್ದೇ ರಾತ್ರಿ 8ರ ನಂತರ ಅವರ ಈ ಧೋರಣೆಯಿಂದ ಬೆಳಗ್ಗೆ ಸೆರೆ ಹಿಡಿಯಬೇಕಾದ ದೃಶ್ಯಗಳನ್ನೆಲ್ಲಾ ನಾವು ಅನಿವಾರ್ಯವಾಗಿ ರಾತ್ರಿ ಹೊತ್ತಿನಲ್ಲಿ ಗ್ರೀನ್ ಮ್ಯಾಟ್ನಲ್ಲಿ ಸೆರೆ ಹಿಡಿಯಬೇಕಾಯ್ತು ಇದು ಚಿತ್ರದ ಮೇಲೆ ಮತ್ತು ತಂಡದ ಮೇಲೆ ಪರಿಣಾಮ ಬೀರಿತು ಎಂದು ಹೇಳಿದ್ದ ಮುರಗದಾಸ್ ನಮ್ಮ ಸಿನಿಮಾದಲ್ಲಿ ಬಾಲ ಕಲಾವಿದರಿದ್ದರು. ಅವರಿಗೆ ತುಂಬಾನೇ ಸಮಸ್ಯೆಯಾಯ್ತು ಎಂದು ಹೇಳಿದ್ದರು.ತಡರಾತ್ರಿಯವರೆಗೆ ಚಿತ್ರೀಕರಣ ನಡೆಯುತ್ತಿದ್ದ ಹಿನ್ನೆಲೆ ಮಕ್ಕಳು ದಣಿದು ಬಿಡುತ್ತಿದ್ದರು.ನಿದ್ದೆಗೆ ಜಾರಿ ಬಿಡುತ್ತಿದ್ದರು. ಮಕ್ಕಳಿರುವ ದೃಶ್ಯಗಳನ್ನು ನಾವು ರಾತ್ರಿ 2ರವರೆಗೆ ಚಿತ್ರೀಕರಣ ಮಾಡಿದ್ದೇವೆ ಶಾಲೆಯಿಂದ ಅವರು ಮನೆಗೆ ಮರಳುವ ದೃಶ್ಯಗಳನ್ನು ಚಿತ್ರೀಕರಿಸುವಾಗ ಅವರಿಗೆ ನಿದ್ದೆ ಬಂದಿದ್ದರೂ ಎಚ್ಚರವಾಗಿರುವಂತೆ ಅವರು ಅಭಿನಯಿಸಬೇಕಿತ್ತು ಎಂದು ಹೇಳಿದ್ದರು.
''ಸಿಕಂದರ್'' ಮಾಡಲು ಅಕ್ಷರಶಃ ನಾನು ಹೆಣಗಾಡಿದೆ ಎಂದು ಹೇಳಿದ್ದ ಎ.ಆರ್.ಮುರಗದಾಸ್ ಕೊನೆ ಕ್ಷಣದಲ್ಲಿ ಕಥೆಯಲ್ಲಿ ಬದಲಾವಣೆಗಳನ್ನು ಮಾಡಲಾಯ್ತು. ಕಥೆಯ ಮೇಲೆ ಸಿನಿಮಾದ ಮೇಲೆ ನನ್ನ ನಿಯಂತ್ರಣ ಕೂಡ ತಪ್ಪಿ ಹೋಯಿತು ಎಂದಿದ್ದರು. ಮುರಗದಾಸ್ ಅವರ ಈ ಮಾತುಗಳಿಗೆ ಸಲ್ಮಾನ್ ಖಾನ್ ಈಗ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.
ಈ ಕುರಿತು ನಿನ್ನೆಯ ( ಅಕ್ಟೋಬರ್ 12 ) ''ಬಿಗ್ ಬಾಸ್- ವೀಕೆಂಡ್ ಕಾ ವಾರ್''ನಲ್ಲಿ ಮಾತನಾಡಿರುವ ಸಲ್ಮಾನ್ ಖಾನ್ ''ಸಿಕಂದರ್'' ಚಿತ್ರದ ಕಥಾಹಂದರ ಚೆನ್ನಾಗಿತ್ತು. ಆದರೆ ನಾನು ರಾತ್ರಿ 9ಕ್ಕೆ ಬರುತ್ತಿದ್ದೆ ಇದರಿಂದ ಗೊಂದಲವಾಯ್ತು ಎಂದು ಅವರು (ಎ ಆರ್ ಮುರಗದಾಸ್ ) ಹೇಳಿದ್ದಾರೆ. ಆದರೆ, ನನ್ನ ಪಕ್ಕೆಲುಬು ಮುರಿದಿತ್ತು. ಅವರು ಇದನ್ನು ಹೇಳಿರಲಿಕ್ಕಿಲ್ಲ ಎಂದು ಹೇಳಿದ್ದಾರೆ.

ಮುಂದುವರೆದು ಅವರ ಮತ್ತೊಂದು ಚಿತ್ರ ''ಮದರಾಸಿ'' ಬಿಡುಗಡೆಯಾಗಿದೆ. ಆ ಚಿತ್ರದ ನಾಯಕ ಬೆಳಗ್ಗೆ ಆರಕ್ಕೆ ಬರುತ್ತಿದ್ದರು. ಆ ಚಿತ್ರ ದೊಡ್ಡ ಬ್ಲಾಕ್ ಬಸ್ಟರ್ ಆಗಿದೆ ಎಂದು ನಕ್ಕಿದ್ದಾರೆ. ಈ ಮೂಲಕ ಎಆರ್ ಮುರಗದಾಸ್ ಅವರ ವ್ಯಂಗ ಮಾಡಿದ್ಧಾರೆ.
ಇಷ್ಟಕ್ಕೆ ಸುಮ್ಮನಾಗದ ಸಲ್ಮಾನ್ ಖಾನ್ ಆರಂಭದಲ್ಲಿ ''ಸಿಕಂದರ್'' ಎ.ಆರ್ ಮುರಗದಾಸ್ ಮತ್ತು ನಿರ್ಮಾಪಕ ಸಾಜಿದ್ ನಾಡಿಯಾವಾಲಾ ಅವರದ್ದಾಗಿತ್ತು. ಆದರೆ ಆ ನಂತರ ಸಾಜಿದ್ ಚಿತ್ರದಿಂದ ಹೊರ ನಡೆದರು. ಆ ನಂತರ ಮೆಲ್ಲನೆ ಮುರಗದಾಸ್ ತಮ್ಮ ಜವಾಬ್ಧಾರಿಯಿಂದ ಜಾರಿಕೊಂಡರು. ದಕ್ಷಿಣದ ಚಿತ್ರ ಮಾಡಲು ಹೋದರು ಎಂದು ಹೇಳಿದ್ದಾರೆ. ''ಬಿಗ್ ಬಾಸ್'' ವೇದಿಕೆಯಲ್ಲಿ ''ಸಿಕಂದರ್'' ಚಿತ್ರ ಮಾಡಿದ್ದಕ್ಕೆ ನನಗೆ ಈಗ ಪಶ್ಚಾತಾಪವಾಗುತ್ತಿದೆ ಎಂದು ಕೂಡ ಹೇಳಿದ್ದಾರೆ.


Click it and Unblock the Notifications











