ಕಿಡ್ನಿ ವೈಫಲ್ಯದಿಂದ ಗಾಯಕಿ ಅನುರಾಧಾ ಪೌಡ್ವಾಲ್ ಪುತ್ರ ಸಾವು
ಹಿನ್ನೆಲೆ ಗಾಯಕಿ ಅನುರಾಧ ಪೌಡ್ವಾಲ್ ಅವರ ಪುತ್ರ ಆದಿತ್ಯ ಪೌಡ್ವಾಲ್ ಶನಿವಾರ ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಆದಿತ್ಯ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
35 ವರ್ಷದ ಆದಿತ್ಯ ಪೌಡ್ವಾಲ್ ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೂತ್ರಪಿಂಡ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದಿದೆ.
ಸಂಯೋಜಕ-ಗಾಯಕ ಶಂಕರ್ ಮಹಾದೇವನ್ ಈ ಸುದ್ದಿಯನ್ನು ದೃಢಪಡಿಸಿದ್ದು ಆದಿತ್ಯ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಆದಿತ್ಯ ಪೌಡ್ವಾಲ್ ಸಂಗೀತ ವ್ಯವಸ್ಥಾಪಕ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದರು. ತಮ್ಮ ತಾಯಿಯಂತೆ ಭಕ್ತಿ ಸಂಗೀತದ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದರು. ಕೊನೆಯದಾಗಿ ನವಾಜುದ್ದೀನ್ ಸಿದ್ದಿಕಿ ಅಭಿನಯದ ಠಾಕ್ರೆ ಚಿತ್ರದ 'ಸಾಹೇಬ್ ತು' ಹಾಡನ್ನು ಆದಿತ್ಯ ನಿರ್ಮಿಸಿದ್ದರು.
ಕರ್ನಾಟಕದ ಕಾರವಾರ ಮೂಲದವರಾಗಿದ್ದ ಅನುರಾಧಾ ಪೌಡ್ವಾಲ್ ಪ್ರಸಿದ್ಢ ಗಾಯಕಿ. ಅನೇಕ ಭಕ್ತಿಗೀತೆಗಳನ್ನು ಹಾಡಿದ್ದಾರೆ. ಅತ್ಯಂತ ಕಡಿಮೆ ವಯಸ್ಸಿನಲ್ಲಿ ಕಿರಿಯ ಸಂಗೀತ ನಿರ್ದೇಶಕಿಯಾಗಿ ಅವರ ಹೆಸರು 'ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್'ನಲ್ಲಿದೆ.


Click it and Unblock the Notifications











