"ನಿನಗೆ ನಾಚಿಕೆ ಆಗಲ್ವಾ? ಅಂತ ಮೇಕಪ್ಮ್ಯಾನ್ ಮುಖಕ್ಕೆ ಹೊಡೆದಂತೆ ಹೇಳಿದ್ದ": ಕೇಂದ್ರ ಸಚಿವೆ ಸ್ಮೃತಿ ಇರಾನಿ
ದಶಕಗಳ ಹಿಂದೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದರು. ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು. 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' ಧಾರಾವಾಹಿಯಲ್ಲಿ ಆರೇಳು ವರ್ಷ ನಟಿಸಿದ್ದರು. ಆ ಧಾರಾವಾಹಿಯ ತುಳಸಿ ಪಾತ್ರ ಬಹಳ ಹೆಸರು ತಂದುಕೊಟ್ಟಿತ್ತು. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಆ ದಿನಗಳನ್ನು ಸ್ಮೃತಿ ಇರಾನಿ ನೆನಪಿಸಿಕೊಂಡಿದ್ದಾರೆ.
ಜೀ ಟಿವಿಯ 'ರಾಮಾಯಣ' ಧಾರಾವಾಹಿಯಲ್ಲಿ ಸ್ಮೃತಿ ಇರಾನಿ ಸೀತೆ ಪಾತ್ರದಲ್ಲಿ ನಟಿಸಿದ್ದರು. ವಿರುದ್ಧ್, ಮೇರೆ ಅಪ್ನೆ, ತೀನ್ ಬಹುರಾಯಿಯಾನ್ ಸೇರಿದಂತೆ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದು ಮಾತ್ರವಲ್ಲದೇ ಕಿರುತೆರೆ ಕಾರ್ಯಕ್ರಮಗಳ ನಿರೂಪಕಿಯಾಗಿ, ನಿರ್ಮಾಪಕಿಯಾಗಿಯೂ ಗುರ್ತಿಸಿಕೊಂಡಿದ್ದರು. ಒಂದಷ್ಟು ನಾಟಕಗಳಲ್ಲಿ ನಟಿಸಿದ್ದ ಸ್ಮೃತಿ 3 ಸಿನಿಮಾಗಳಲ್ಲೂ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ಧಾರಾವಾಹಿಗಳಲ್ಲಿ ನಟಿಸುವಾಗ ಒಮ್ಮೆ ಮೇಕಪ್ ಮ್ಯಾನ್ ಒಬ್ಬ ಅವಮಾನಿಸಿದ್ದ ಎಂದು ಕೇಂದ್ರ ಸಚಿವೆ ಈಗ ಹೇಳಿಕೊಂಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡುತ್ತಾ "'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' ಧಾರಾವಾಹಿಯ ಮೊದಲ ವರ್ಷ ನನಗೆ ದಿನಕ್ಕೆ 1800 ರೂ. ಕೊಟ್ಟರು. ಆಗ ಇನ್ನು ನನ್ನ ಬಳಿ ಸ್ವಂತ ಕಾರು ಕೂಡ ಇರಲಿಲ್ಲ. ಜುಬಿನ್ ಇರಾನಿ ಜೊತೆ ಮದುವೆ ಆದ ಮೇಲೆ ಇಬ್ಬರಿಗೂ ಸೇರಿ 30,000 ರೂ. ಬರ್ತಿತ್ತು. ಆದರೂ ಕೂಡ ನಾನು ಆಟೋ ರಿಕ್ಷಾದಲ್ಲೇ ಧಾರಾವಾಹಿ ಶೂಟಿಂಗ್ ಸೆಟ್ಗೆ ಓಡಾಡುತ್ತಿದ್ದೆ. ಒಂದು ದಿನ ನನ್ನ ಮೇಕಪ್ ಮ್ಯಾನ್ ನನಗೆ ಅವಮಾನ ಮಾಡಿದ್ದ"
"ನಾನು ಪ್ರತಿದಿನ ಕಾರಿನಲ್ಲಿ ಬರ್ತಿದ್ದೀನಿ, ನೀವೂ ಹೀಗೆ ಆಟೋದಲ್ಲಿ ಬರೋದಕ್ಕೆ ನಾಚಿಕೆ ಆಗೋದಿಲ್ವಾ? ಅಂತ ಮುಖಕ್ಕೆ ಹೊಡೆದಂತೆ ಹೇಳಿದ್ದ. ಸ್ವಂತವಾಗಿ ಯಾವುದಾದರೂ ಗಾಡಿ ತಗೋಬಹುದು ಅಲ್ಲದೇ ಎಂದ. ಆಗ ನನಗೆ ಬಹಳ ಅವಮಾನ ಎನಿಸಿತ್ತು. ಮತ್ತೊಂದು ಕಡೆ ಸೀರಿಯಲ್ ಸೆಟ್ನಲ್ಲಿ ಯಾವುದೇ ಕೂಲ್ ಡ್ರಿಂಕ್ಸ್, ತಿಂಡಿ ತೆಗೆದುಕೊಳ್ಳಲು ಬಿಡುತ್ತಿರಲಿಲ್ಲ. ಯಾಕಂದರೆ ಆ ತಿಂಡಿ ಅಲ್ಲಿರುವ ವಸ್ತುಗಳ ಮೇಲೆ ಬಿದ್ದರೆ ಕ್ಲೀನ್ ಮಾಡೋದು ಯಾರು? ಅನ್ನೋದು ಯೂನಿಟ್ ಸಮಸ್ಯೆ ಆಗಿತ್ತು."

"ಅದೇ ಕಾರಣಕ್ಕೆ ಯಾವಾದಾದರೂ ಟೀ ಬೇಕು ಎನಿಸಿದರೆ ಸೆಟ್ನಿಂದ ಹೊರಗೆ ಬಂದು ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದೆ" ಎಂದು ಸ್ಮೃತಿ ಇರಾನಿ ಹೇಳಿಕೊಂಡಿದ್ದಾರೆ. ಇದೇ ರೀತಿ
ಮೇಕಪ್ ಮ್ಯಾನ್ ಅವಮಾನಿಸಿದ್ದನ್ನು ನೆನಪಿಸಿಕೊಂಡ ಕೇಂದ್ರ ಸಚಿವೆ ಸ್ಮೃತಿ ಇರಾನಿ 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' ಶೂಟಿಂಗ್ ವೇಳೆ ತಮಗೆ ಗರ್ಭಪಾತವಾದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಂದು ಶೂಟಿಂಗ್ನಲ್ಲಿ ಇದ್ದಾಗಲೇ ಆರೋಗ್ಯ ಸರಿಯಲ್ಲದಂತಾಗಿ ಸೆಟ್ನಲ್ಲಿ ಮನೆಗೆ ಹೋಗಲು ಅವಕಾಶ ಕೇಳಿದ್ದರಂತೆ. ಆದರೆ ಸಂಜೆವರೆಗೂ ಶೂಟಿಂಗ್ ಮಾಡಿ ಹೋಗಬೇಕಾಯಿತ್ತಂತೆ. ದಾರಿಯಲ್ಲಿ ಹೋಗುವಾಗಲೇ ರಕ್ತಸ್ರಾವವಾಯಿತು. ಆಟೋ ಚಾಲಕನ ಸಹಾಯದಿಂದ ಆಸ್ಪತ್ರೆ ತಲುಪಿದೆ. ಅಂತಹ ಸಮಯದಲ್ಲಿ ನರ್ಸ್ ಒಬ್ಬರು ಆಟೋಗ್ರಾಫ್ ಕೇಳಿ ಬಂದರು. ಆಗ ನಾನು ನನಗೆ ಗರ್ಭಪಾತವಾದಂತಿದೆ ಎಂದು ಹೇಳಿದ್ದೆ"

ಗರ್ಭಪಾತವಾದ ಮರುದಿನ 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' ಟೀನಿಂದ ಶೂಟಿಂಗ್ ಬರುವಂತೆ ಕರೆ ಬಂತು. ಗರ್ಭಪಾತವಾಗಿದೆ ಎಂದು ಹೇಳಿದರೂ ಕರೆ ಮಾಡಿದ್ದ ವ್ಯಕ್ತಿ ಸಮಸ್ಯೆ ಇಲ್ಲ, ಮಧ್ಯಾಹ್ನದ ಶಿಫ್ಟ್ಗೆ ಬನ್ನಿ ಎಂದು ಹೇಳಿದ್ದರು. ಆದರೆ ಅದೇ ಸಮಯದಲ್ಲಿ ಸ್ಮೃತಿ 'ರಾಮಾಯಣ್' ಧಾರಾವಾಹಿಯಲ್ಲೂ ನಟಿಸುತ್ತಿದ್ದರು. ಆ ಧಾರಾವಾಹಿ ನಿರ್ದೇಶಕ ರವಿ ಚೋಪ್ರಾ ವಿಶ್ರಾಂತಿ ಪಡೆಯಲು ಹೇಳಿದ್ದರು" ಎಂದು ಸ್ಮೃತಿ ಇರಾನಿ ವಿವರಿಸಿದ್ದಾರೆ.


Click it and Unblock the Notifications











