ಅಸುನೀಗಿದ ಶ್ರೀದೇವಿ ಬಗ್ಗೆ ಕೆಲ ವಿಶಿಷ್ಟ ಸಂಗತಿಗಳು
ತಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸಿ, ತಿಂಡಿ ತಿನಿಸುಗಳ ಬಗ್ಗೆಯೂ ಎಚ್ಚರಿಕೆ ವಹಿಸುತ್ತಿದ್ದ ಬಾಲಿವುಡ್ ನಟಿ ಶ್ರೀದೇವಿಯವರು ಹಠಾತ್ತನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಮ್ಮ ಅವಿಸ್ಮರಣೀಯ ನಟನೆಯ ಮೂಲಕ ಇಡೀ ಭಾರತ ಚಿತ್ರರಂಗವನ್ನು ಆವರಿಸಿಕೊಂಡಿದ್ದ ಶ್ರೀದೇವಿ ಕಪೂರ್ ಅವರ ಬಗ್ಗೆ ಹಲವು ಗೊತ್ತಿರುವ, ಕೆಲವಾರು ಗೊತ್ತಿಲ್ಲದ ಆಸಕ್ತಿಕರ ವಿಷಯಗಳು ಇಲ್ಲಿವೆ.
ಹಿಂದಿ ನಿನೆಮಾದ ಪ್ರಪ್ರಥಮ ಮಹಿಳಾ ಸೂಪರ್ ಸ್ಟಾರ್ ಎಂಬ ಪಟ್ಟ ಧರಿಸಿದ ಹೆಗ್ಗಳಿಕೆ ಶ್ರೀದೇವಿ ಅವರದು. ಭಾಷೆ ಬರದಿದ್ದರೂ, ಅಪರಿಚಿತ ಮಂದಿಯ ನಡುವೆ ತಮ್ಮ ಸೌಂದರ್ಯ, ವೃತ್ತಿಪರತೆ ಮತ್ತು ಅಭಿನಯದಿಂದಲೇ ಎಲ್ಲರ ಹೃದಯವನ್ನು ಗೆದ್ದವರು ಶ್ರೀದೇವಿ.
ಬಾಳಿನಲ್ಲಿ ಹಲವಾರು ಏರಿಳಿತ ಕಂಡರೂ ಅವರ ಮುಖದಲ್ಲಿ ನಗು ಎಂದೂ ಮಾಸಿರಲಿಲ್ಲ. ಮೊದಲ ಪತಿ ಮಿಥುನ್ ಚಕ್ರವರ್ತಿ ಎಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ನಂತರ ಅವರು, ಇಬ್ಬರು ಮಕ್ಕಳ ತಂದೆಯಾಗಿದ್ದ ಬೋನಿ ಕಪೂರ್ ಅವರನ್ನ ಪ್ರೇಮಿಸಿ ವಿವಾಹವಾಗಿ ಜಾಹ್ನವಿ ಮತ್ತು ಖುಷಿ ಇಬ್ಬರು ಪುತ್ರಿಯರನ್ನೂ ಪಡೆದರು.
ಮದುವೆಯ ಹಿಂದಿನ ದಿನ ಎಲ್ಲರೊಂದಿಗೆ ಖುಷಿಖುಷಿಯಾಗಿ ಮಾತನಾಡಿಕೊಂಡು, ಚಿತ್ರಗಳನ್ನು ತೆಗೆದುಕೊಂಡು ಇನ್ಸ್ಟಾಗ್ರಾಂನಲ್ಲಿಯೂ ಹಾಕಿದ್ದರು. ಆದರೆ, ವಿಧಿಯ ಲೆಕ್ಕಾಚಾರ ಬೇರೆಯೇ ಆಗಿದ್ದು. ತಾನೊಂದು ಬಗೆದರೆ ಮಾನವ, ಬೇರೊಂದು ಬಗೆವುದು ದೈವ!

ಬಾಲ ಕಲಾವಿದೆಯಾಗಿ ಶ್ರೀದೇವಿ ಪಾದಾರ್ಪಣ
* ಶ್ರೀದೇವಿ ಹುಟ್ಟಿದ್ದು 1963ರ ಆಗಸ್ಟ್ 13ರಂದು. ಆದರೆ, ಅವರು ತಮ್ಮ ಹುಟ್ಟುಹಬ್ಬ ಆಚರಿಸುವುದನ್ನೇ ದ್ವೇಷಿಸುತ್ತಿದ್ದರು.
* ಶ್ರೀದೇವಿಯವರ ಹುಟ್ಟುಹೆಸರು 'ಶ್ರೀ ಅಮ್ಮ ಯಾಂಗರ್ ಅಯ್ಯಪ್ಪನ್'. ಅವರ ಅಪ್ಪ ವಕೀಲರಾಗಿದ್ದರು.
* ಅವರು ತಮ್ಮ ಸಿನೆಮಾ ಜೀವನವನ್ನು 4ನೇ ವಯಸ್ಸಿನಲ್ಲಿ ಭಕ್ತಿಪ್ರಧಾನ ಚಿತ್ರ 'ತುನೈವನ್'ನಿಂದ ಆರಂಭಿಸಿದರು.
* ಶ್ರೀದೇವಿಯವರು 1974ರಲ್ಲಿ 'ಜೂಲಿ' ಚಿತ್ರದೊಂದಿಗೆ ಹಿಂದಿಯಲ್ಲಿ ಅಡಿಯಿಟ್ಟರು. ಆದರೆ, ನಾಯಕಿಯಾಗಿ ಅಭಿನಯಿಸಿದ ಪ್ರಥಮ ಚಿತ್ರ 1979ರಲ್ಲಿ ನಟಿಸಿದ 'ಸೋಲ್ವಾ ಸಾವನ್'.

ಭಾಷೆ ಬರದಿದ್ದರೂ ಹಿಂದಿಯಲ್ಲಿ ಮಿಂಚಿದ ತಾರೆ
* ಅವರ ಮಾತೃಭಾಷೆ ತಮಿಳು. ಬಾಲಿವುಡ್ ಸೇರಿದಾಗ ಹಿಂದಿಯಲ್ಲಿ ಮಾತನಾಡಲು ಕಷ್ಟಪಡುತ್ತಿದ್ದರು.
* ಅವರು ಕನ್ನಡದಲ್ಲಿ 6 ಸಿನೆಮಾ ಸೇರಿದಂತೆ ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲಿಯೂ ಅಭಿನಯ ಚಾತುರ್ಯ ತೋರಿದ್ದಾರೆ.
* ನಟಿ ನಾಜ್ ಅವರು ಶ್ರೀದೇವಿಗೆ ಧ್ವನಿ ನೀಡುತ್ತಿದ್ದರು. 'ಆಖರಿ ರಾಸ್ತಾ' (1986) ಚಿತ್ರಕ್ಕೆ ಖ್ಯಾತ ನಟಿ ರೇಖಾ ಡಬ್ ಮಾಡಿದ್ದರು. ಶ್ರೀದೇವಿಯವರು ಮೊದಲ ಬಾರಿಗೆ ತಾವೇ ಡಬ್ ಮಾಡಿದ್ದು 'ಚಾಂದನಿ' (1989) ಚಿತ್ರಕ್ಕೆ.
* ಉತ್ತಮ ಹಾಡುಗಾರ್ತಿಯೂ ಆಗಿದ್ದ ಅವರು 'ಸದಮಾ' (1983), 'ಚಾಂದನಿ' (1989), 'ಗರ್ಜನ' (1991) ಮತ್ತು 'ಕ್ಷಣ ಕ್ಷಣಂ' (1991) ಚಿತ್ರಗಳಲ್ಲಿ ಹಾಡಿದ್ದರು.

ಶ್ರೀದೇವಿ ಅದೃಷ್ಟ ಚೆನ್ನಾಗಿತ್ತು
* ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಅವರ 'ಜುರಾಸಿಕ್ ಪಾರ್ಕ್' (1993) ಚಿತ್ರದಲ್ಲಿ ನಟಿಸಲು ಅವರಿಗೆ ಕರೆ ಬಂದಿತ್ತು. ಅವರು ಬಾಲಿವುಡ್ ನಲ್ಲಿ ಬಿಜಿ ಇದ್ದಿದ್ದರಿಂದ ನಿರಾಕರಿಸಿದ್ದರು.
* ಶ್ರೀದೇವಿಯವರು 'ನಗೀನಾ' ಮತ್ತು 'ಚಾಂದನಿ' ಚಿತ್ರಕ್ಕೆ ಮೊದಲ ಆಯ್ಕೆ ಆಗಿರಲಿಲ್ಲ. 'ನಗೀನಾ' ಚಿತ್ರಕ್ಕೆ ಮೊದಲಿಗೆ ಜಯಪ್ರದಾ ಮತ್ತು 'ಚಾಂದನಿ' ಚಿತ್ರಕ್ಕೆ ರೇಖಾರನ್ನು ಆಯ್ಕೆ ಮಾಡಲಾಗಿತ್ತು. ಅದೃಷ್ಟ ಹೇಗಿರುತ್ತೆ ನೋಡಿ.
* 'ಚಾಲ್ ಬಾಜ್' (1989) ಚಿತ್ರದ 'ಜಾನೇ ಕಹಾಸೆ ಆಯಿ ಹೈ' ಹಾಡಿಗಾಗಿ ಶೂಟ್ ಮಾಡುವಾಗ ಅವರಿಗೆ 103 ಡಿಗ್ರಿ ಸುಡುವ ಜ್ವರ. ಆದರೂ, ಪಟ್ಟುಬಿಡದೆ ಚಿತ್ರೀಕರಿಸಿದ್ದು ಅವರ ವೃತ್ತಿಪರತೆಗೆ ಸಾಕ್ಷಿ.

ಫಿಲ್ಮಂಫೇರ್ ಪ್ರಶಸ್ತಿಗಳು
2013 - ನಗೀನಾ ಮತ್ತು ಮಿ.ಇಂಡಿಯಾ ಚಿತ್ರಕ್ಕಾಗಿ ಫಿಲ್ಮಂಫೇರ್ ವಿಶೇಷ ಪ್ರಶಸ್ತಿ
1992 - ಲಮ್ಹೆ ಚಿತ್ರಕ್ಕಾಗಿ ಫಿಲ್ಮಂಫೇರ್ ಅತ್ಯುತ್ತಮ ನಟಿ
1990 - ಚಾಲ್ಬಾಜ್ ಚಿತ್ರಕ್ಕಾಗಿ ಫಿಲ್ಮಂಫೇರ್ ಅತ್ಯುತ್ತಮ ನಟಿ
1991 - ಕ್ಷಣಕ್ಷಣಂ ಚಿತ್ರಕ್ಕಾಗಿ ಫಿಲ್ಮಂಫೇರ್ ಅತ್ಯುತ್ತಮ ನಟಿ (ತೆಗುಲು)
1982 - ಮೀಂಡಮ್ ಕೋಕಿಲಾ ಚಿತ್ರಕ್ಕಾಗಿ ಫಿಲ್ಮಂಫೇರ್ ಅತ್ಯುತ್ತಮ ನಟಿ (ತಮಿಳು
1977 - 16 ವಯತಿನಿಲೆ ಚಿತ್ರಕ್ಕಾಗಿ ಫಿಲ್ಮಂಫೇರ್ ವಿಶೇಷ ಪ್ರಶಸ್ತಿ - ದಕ್ಷಿಣ

ಪದ್ಮಶ್ರೀ ಮತ್ತಿತರ ಪ್ರಶಸ್ತಿ
2013ರಲ್ಲಿ ಪದ್ಮಶ್ರೀ, ನಾಗರಿಕ ಪ್ರಶಸ್ತಿ ನೀಡಿ ಭಾರತ ಸರಕಾರ ಶ್ರೀದೇವಿ ಅವರನ್ನು ಗೌರವಿಸಿದೆ. ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಶ್ರೀದೇವಿ ಪ್ರಶಸ್ತಿ ಸ್ವೀಕರಿಸಿದ್ದರು. 1981 - ಮೂಂಡ್ರಮ್ ಪಿರೈ ಚಿತ್ರಕ್ಕಾಗಿ ಅತ್ಯುತ್ತಮ ನಟಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು.


Click it and Unblock the Notifications











