ಪ್ರವಾಹ ಪೀಡಿತರ ಸಹಾಯಕ್ಕೆ ಮುಂದಾದ ರಿಯಲ್ ಹೀರೋ ಸೋನು ಸೂದ್
ಬಾಲಿವುಡ್ ನಟ ಸೋನ್ ಸೂದ್ ಕೇವಲ ನಟನೆಯಿಂದ ಮಾತ್ರವಲ್ಲದೆ ಸಮಾಜಮುಖಿ ಕೆಲಸಗಳು, ಕಷ್ಟದಲ್ಲಿ ಇದ್ದವರಿಗೆ ನೆರವಿನ ಹಸ್ತ ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅವರು ಮಾಡಿದ ಮಹತ್ಕಾರ್ಯದಿಂದಲೂ ಜನಪ್ರಿಯತೆಯನ್ನು ಪಡೆದಿದ್ದಾರೆ. ಈ ಎಲ್ಲಾ ಕೆಲಸಗಳಿಂದಾಗಿ ರಿಯಲ್ ಹೀರೊ ಎಂಬ ಬಿರುದ್ದನ್ನು ಜನರಿಂದ ಪಡೆದಿರುವ ಸೋನು ಸೂದ್ರನ್ನ ಜನ ದೇವರಂತೆ ಕಾಣುತ್ತಾರೆ. ದಿ ರಿಯಲ್ ಹೀರೋ ಅಂತ ಸೋನು ಸೂದ್ ಇದೀಗ ಮತ್ತೊಂದು ಮಹತ್ಕಾರ್ಯಕ್ಕೆ ಕೈ ಹಾಕಿದ್ದಾರೆ.
ಸೋನು ಸೂದ್ ಎಲ್ಲಿ ಕಷ್ಟ ಅಂತ ಜನ ತಿಳಿಸುತ್ತಾರೋ ಅವರಿಗೆ ಸದಾ ಸಹಾಯ ಮಾಡುತ್ತಾರೆ. ಹೀಗಾಗಿ ಜನರು ಕೂಡ ಸೋನು ಸೂದ್ ಕಡೆಯಿಂದ ಸಹಾಯ ಬೇಕಿದ್ದಲ್ಲಿ ಅವರನ್ನು ಸೋಷಿಯಲ್ ಮೀಡಿಯಾ ಮೂಲಕ ಸಂಪರ್ಕಿಸುತ್ತಾರೆ. ಸಾಕಷ್ಟು ಮಂದಿ ತಮ್ಮ ಅಣ್ಣ, ತಂಗಿ, ಅಪ್ಪ ಹೀಗೆ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿ ಸೋನು ಸೂದ್ ಕಡೆಯಿಂದ ಹಣ ಸಹಾಯ ಪಡೆಯುತ್ತಿದ್ದಾರೆ. ಅಂತೆಯೇ ಇತ್ತೀಚೆಗೆ ಸೋನು ಸೂದ್ ಟ್ವಿಟ್ಟರ್ನಲ್ಲಿ ಆಂಧ್ರಪ್ರದೇಶದ ವ್ಯಕ್ತಿಯೋರ್ವ "ಸೋನು ಸೂದ್ ಅವರೇ, ನೆಲ್ಲೂರು ಮತ್ತು ತಿರುಪತಿಯಲ್ಲಿ ಅತಿವೃಷ್ಠಿಯಿಂದ ತೀವ್ರವಾಗಿ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಮ್ಮ ಮನೆಗಳಿಗೆ ನೀರು ನುಗ್ಗಿ ತುಂಬಾ ಸಮಸ್ಯೆಯಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಮನೆಗಳನ್ನು ಕಳೆದುಕೊಂಡಿದ್ದಾರೆ. ಜನ ಬೀದಿಪಾಲಾಗುತ್ತಿದ್ದಾರೆ. ತಿನ್ನೋದಕ್ಕೆ ಆಹಾರ ಕೂಡ ಸಿಗುತ್ತಿಲ್ಲ, ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದೇವೆ. ದಯವಿಟ್ಟು ನಮಗೆ ಸಹಾಯ ಮಾಡಿ" ಎಂದು ಮನವಿ ಮಾಡಿಕೊಂಡಿದ್ದಾನೆ.
ಇದನ್ನು ಗಮನಿಸಿ ಪ್ರತಿಕ್ರಿಯಿಸಿರೋ ಸೋನು ಸೂದ್ "ಮರಳಿ ನಿಮ್ಮ ಮನೆಗಳನ್ನು ನಿರ್ಮಿಸುವ ಸಮಯ ಬಂದಿದೆ" ಎಂದು ಭರವಸೆಯನ್ನು ನೀಡಿದ್ದಾರೆ. ಎಲ್ಲರಿಗೂ ತಿಳಿದಿರುವ ಹಾಗೆ ಆಂಧ್ರಪ್ರದೇಶದಲ್ಲಿ ಭೀಕರವಾಗಿ ಮಳೆ ಸುರಿಯುತ್ತಿದೆ. ಈ ಮಳೆಯಿಂದಾಗಿ ಅಲ್ಲಿನ ಜನ ಕಂಗಾಲಾಗಿದ್ದಾರೆ. ಈ ಮಳೆಯ ಅಬ್ಬರಕ್ಕೆ ಅದೆಷ್ಟೋ ಮನೆಗಳು ಕುಸಿಯುತ್ತಿದ್ದು, ಚಿತ್ರಾವತಿ ನದಿ ಅಪಾಯ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದೆ. ಸಾಕಷ್ಟು ಹಳ್ಳಿಗಳು ಮುಳುಗಡೆಯಾಗುತ್ತಿದ್ದು, ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಭಾರತೀಯ ವಾಯುಪಡೆ ಹೆಲಿಕಾಪ್ಟರ್ ಬಳಸಿ ರಕ್ಷಣೆ ಮಾಡುತ್ತಿದೆ. ಹಾಗೆ ತಿರುಪತಿ ದೇವಾಲಯದಲ್ಲೂ ನೂರಾರು ಮಂದಿ ಭಕ್ತರು ಮಳೆಗೆ ಸಿಲುಕಿದ್ದಾರೆ. ವಾಪಸ್ ತೆರಳಲೂ ಆಗದೇ ಅಲ್ಲೇ ಪರದಾಡುತ್ತಿದ್ದಾರೆ. ತಿರುಪತಿಯ ಹೊರವಲಯದಲ್ಲಿ ಹರಿಯುವ ಸ್ವರ್ಣಮುಖಿ ನದಿ ಕೂಡ ಉಕ್ಕಿ ಹರಿಯುತ್ತಿದೆ. ಇಲ್ಲಿ ಹಲವಾರು ಮಂದಿ ಪ್ರವಾಹದಲ್ಲಿ ಸಿಲುಕಿದ್ದು, ದೇವಾಲಯಕ್ಕೆ ತೆರಳುವ ರಸ್ತೆಗಳು, ರೈಲ್ವೆ ಹಳಿಗಳು ನಾಶವಾಗಿದೆ. ವಾಹನ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ. ಚಿತ್ತೂರು, ಕಡಪ, ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳಲ್ಲಿ ಅಪಾರ ಹಾನಿ ಸಂಭವಿಸುತ್ತಿದೆ.

ಹೀಗೆ ಬಾರಿ ಸಂಕಷ್ಟದಲ್ಲಿರುವ ಅಲ್ಲಿನ ಜನತೆಗೆ ಸಹಾಯ ಮಾಡಲು ಸೋನು ಸೂದ್ ಮುಂದಾಗಿದ್ದು, ತನ್ನ ಟ್ರಸ್ಟ್ ಸದಸ್ಯರಲ್ಲಿ ಹೇಗೆ ಸಹಾಯ ಮಾಡಬಹುದು ಎಂಬ ಬಗ್ಗೆ ಈಗಾಗಲೇ ಚರ್ಚೆ ಕೂಡ ನಡೆಸಿದ್ದಾರೆ. ಇನ್ನೆರೆಡು ದಿನದಲ್ಲಿ ಅಲ್ಲಿನ ಜನರ ನೆರವಿಗೆ ಧಾವಿಸುವ ಸೋನು ಸೂದ್, ಪ್ರವಾಹ ಸ್ಥಿತಿ ಸರಿಯಾದ ನಂತರ ತನ್ನ ಕೈಲಾದಷ್ಟು ಮನೆ ಕಳೆದುಕೊಂಡಿರುವ ಮಂದಿಗೆ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸೋನು ಸೂದು ಸಾಕಷ್ಟು ಮಂದಿಗೆ ನೆರವಾಗಿದ್ದರು. ತಮ್ಮ ಟ್ರಸ್ಟ್ ಮೂಲಕ ದೇಶದ ಮೂಲೆ ಮೂಲೆಗೆ ಆಕ್ಸಿಜನ್ ಸಪ್ಲೈ ಮಾಡಿಸಿದ್ದರು. ಅದೆಷ್ಟೋ ಜನರ ಜೀವಕ್ಕೆ ಆಸರೆಯಾಗಿದ್ದ ಸೋನು ಸೂದ್ ಕಾರ್ಯವನ್ನು ನೆನೆದು ಜನ ಅವರನ್ನು ದೇವರಂತೆ ಕಾಣುತ್ತಿದ್ದಾರೆ. ಅವರ ಫೋಟೊವನ್ನಿಟ್ಟು ಪೂಜಿಸುತ್ತಿದ್ದಾರೆ. ಈಗ ಪ್ರವಾಹದಿಂದ ಕಷ್ಟದಲ್ಲಿರುವ ಜನರ ಸಹಾಯಕ್ಕೆ ಸೋನು ಸೂದ್ ಮುಂದಾಗಿದ್ದು, ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications










