ತೆರಿಗೆ ವಂಚನೆ ಆರೋಪದ ಬಳಿಕ ನಟ ಸೋನು ಸೂದ್ ಮೊದಲ ಪ್ರತಿಕ್ರಿಯೆ
ಬಹುಭಾಷಾ ನಟ ಸೋನು ಸೂದ್ ಮನೆ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆಯ ಸರ್ವೆ ಮತ್ತು 20 ಕೋಟಿ ರೂ.ಗೂ ಅಧಿಕ ತೆರಿಗೆ ವಂಚನೆ ಆರೋಪದ ಬಗ್ಗೆ ನಟ ಸೋನು ಸೂದ್ ಕೊನೆಗೂ ಮೌನ ಮುರಿದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿರುವ ಸೋನು ಸೂದ್, ತನ್ನ ಫೌಂಡೇಶನ್ ನ ಪ್ರತಿ ರೂಪಾಯಿ ಕೂಡ ಒಂದು ಜೀವ ಉಳಿಸುವುದ್ದಕ್ಕಾಗಿ ಕಾಯುತ್ತಿದೆ ಎಂದು ಹೇಳಿದ್ದಾರೆ. ಇನ್ನು ಕಳೆದ ನಾಲ್ಕು ದಿನಗಳಿಂದ ಅತಿಥಿಗಳ (ಅಧಿಕಾರಿಗಳ) ಜೊತೆ ಬ್ಯುಸಿಯಾಗಿದ್ದೆ, ನಿಮ್ಮ ಸೇವೆಗೆ ಬರಲು ಸಾಧ್ಯವಾಗಿಲ್ಲ ಎಂದು ಸೋನು ಸೂದ್ ಹೇಳಿದ್ದಾರೆ.
"ನೀವು ಯಾವಾಗಲು ನಿಮ್ಮ ಕತೆಯನ್ನು ಹೇಳಬೇಕಾಗಿಲ್ಲ. ಸಮಯ ಬರುತ್ತದೆ" ಎಂದು ಸೋನು ಹೇಳಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಟ ಸೋನು ಸೂದ್ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿದ್ದು, ಇದನ್ನು ಸರ್ವೆ ಎಂದು ಹೇಳಿಕೊಂಡಿರುವ ಐಟಿ ಅಧಿಕಾರಿಗಳು ಸೋನು ಸೂದ್ ₹ 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಸತತ ಮೂರು ದಿನಗಳ ಕಾಲ ಸೋನು ಮನೆ, ಕಚೇರಿಗಳ ಮೇಲೆ ಸಮೀಕ್ಷೆ ನಡೆಸಿದ ಐಟಿ ಅಧಿಕಾರಿಗಳು, ನಟನಿಗೆ ಸಂಬಂಧಿಸಿದ ನಾನ್ ಪ್ರಾಫಿಟ್ ಸಂಸ್ಥೆಯು, ₹ 2.1 ಕೋಟಿಗಳನ್ನು ವಿದೇಶಿ ಮೂಲಗಳಿಂದ ಸಂಗ್ರಹಿಸಿದೆ ಎಂದಿದೆ. ಇದು ಸರ್ಕಾರದ ವಿದೇಶಿ ಹಣ ಸ್ವೀಕಾರದ ಕಾನೂನಿಗೆ ವಿರುದ್ಧವಾಗಿದೆ ಎಂದು ಇಲಾಖೆ ತಿಳಿಸಿದೆ.
ಈ ಬಗ್ಗೆ ಸೋನು ಸೂದ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ನನ್ನ ಫೌಂಡೇಶನ್ನ ಪ್ರತಿ ರೂಪಾಯಿ ಕೂಡ ಮೌಲ್ಯವಾದ ಜೀವವನ್ನು ಉಳಿಸಲು ಮತ್ತು ಅಗತ್ಯವಿರುವವರನ್ನು ತಲುಪಲು ತನ್ನ ಸರದಿಗಾಗಿ ಕಾಯುತ್ತಿದೆ. ಅನೇಕ ಸಂದರ್ಭಗಳಲ್ಲಿ ಮಾನವೀಯ ಕೆಲಸಕ್ಕಾಗಿ ನನ್ನ ಅನುಮೋದನೆ ಶುಲ್ಕವನ್ನು ದಾನ ಮಾಡಲು ನಾನು ಬ್ರಾಂಡ್ ಗಳನ್ನು ಪ್ರೋತ್ಸಾಹಿಸಿದ್ದೇನೆ. ಇದು ಮುಂದುವರೆಯುತ್ತದೆ" ಎಂದು ಹೇಳಿದ್ದಾರೆ.

"ಕಳೆದ ನಾಲ್ಕು ದಿನಗಳಿಂದ ಕೆಲವು ಅತಿಥಿಗಳೊಂದಿಗೆ ಚರ್ಚೆಮಾಡುತ್ತಿದ್ದೀನಿ. ಹಾಗಾಗಿ ನಿಮ್ಮ ಸೇವೆಯಲ್ಲಿ ಇರಲು ಸಧ್ಯವಾಗಿಲ್ಲ. ಇಲ್ಲಿ ನಾನು ಮತ್ತೆ ಮರಳಿದ್ದೇನೆ. ನಿಮ್ಮ ಸೇವಿಗಾಗಿ ಮತ್ತು ಜೀವನಕ್ಕಾಗಿ" ಎಂದು ಸೋನು ಸೂದ್ ಹೇಳಿದ್ದಾರೆ. ಸೋನು ಸೂದ್ ಮನೆ ಮತ್ತು ಕಚೇರಿ ಮೇಲಿನ ಐಟಿ ದಾಳಿಯನ್ನು ಆಮ್ ಆದ್ಮಿ ಮತ್ತು ಶಿವಸೇನೆ ಪ್ರಶ್ನೆ ಮಾಡಿತ್ತು.
ಇದೀಗ ಸೋನು ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ದೇಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸೋನು ಜೀ ನಿಮಗೆ ಹೆಚ್ಚಿನ ಶಕ್ತಿ ಸಿಗಲಿ. ನೀವು ಲಕ್ಷಾಂತರ ಭಾರತೀಯರಿಗೆ ಹೀರೋ ಆಗಿದ್ದೀರಿ" ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ "ಸೋನು ಸೂದ್ ಅವರ ಕಂಪನಿ ಮತ್ತು ಲಕ್ನೋ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯ ನಡುವಿನ ಇತ್ತೀಚಿನ ಒಪ್ಪಂದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ" ಎನ್ನಲಾಗಿದೆ. ಈ ಒಪ್ಪಂದದ ಬಳಿಕ ತೆರಿಗೆ ವಂಚನೆ ಆರೋಪದ ಮೇಲೆ ಸಮೀಕ್ಷೆ ಕಾರ್ಯಾಚರಣೆ ಆರಂಭವಾಗಿದೆ ಎನ್ನಲಾಗಿದೆ. ಲಕ್ನೋದ ಸಂಸ್ಥೆಯಲ್ಲಿ ಸೋನು ಸೂದ್ ಅಕ್ರಮ ಹಣವನ್ನು ಹೂಡಿದ್ದಾರೆ. ಈ ಕುರಿತು ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಜೊತೆಗೆ ಲಕ್ನೋದ ಕಂಪೆನಿಯು ₹ 65 ಕೋಟಿಗೂ ಅಧಿಕ ಬೋಗಸ್ ಕಾಂಟ್ರಾಕ್ಟ್ ಪಡೆದಿದೆ. ಹೆಚ್ಚಿನ ತನಿಖೆ ನಡೆಸಲು ಈ ದಾಳಿ ನಡೆದಿದೆ ಎನ್ನುವ ಮಾಹಿತಿ ನೀಡಲಾಗಿದೆ.
ಸೋನು ಸೂದ್ ವಿರುದ್ಧ ಕೇಳಿಬರುತ್ತಿರುವ ಆರೋಪದ ಪ್ರಕಾರ, ಕೋವಿಡ್ 19 ಸಮಯದಲ್ಲಿ ನಟ ಸೋನು ಸೂದ್ ಅವರ ಮಾನವೀಯ ಕೆಲಸಗಳು ಭಾರಿ ಪ್ರಶಂಸೆಗೆ ಕಾರಣವಾಗಿತ್ತು. ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಅಂದರೆ ಜುಲೈನಲ್ಲಿ ಸ್ಥಾಪಿಸಲಾದ ಅವರ ಲಾಭರಹಿತ ಸೂದ್ ಚಾರಿಟಿ ಫೌಂಡೇಶನ್ ಈ ವರ್ಷದ ಏಪ್ರಿಲ್ ವರೆಗೂ 18 ಕೋಟಿ ರೂ.ಗೂ ಅಧಿಕ ದೇಣಿಗೆ ಸಂಭ್ರಹಿಸಿದೆ. ಅದರಲ್ಲಿ 1.9 ಕೋಟಿ ರೂ ಪರಿಹಾರ ಕಾರ್ಯಕ್ಕಾಗಿ ಖರ್ಚು ಮಾಡಲಾಗಿದೆ ಮತ್ತು ಉಳಿದ 17 ಕೋಟಿ ರೂ. ಲಾಭರಹಿತ ಬ್ಯಾಂಕ್ ಖಾತೆಯಲ್ಲಿ ಬಳಕೆಯಾಗದೆ ಉಳಿದಿದೆ ಎಂದು ಆದಾಯ ತೆರಿಗೆ ಇಲಾಖೆ ಆರೋಪ ಮಾಡಿದೆ.


Click it and Unblock the Notifications











