Don't Miss!
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- News ಬೆಳಗಾವಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಮನ್ಸ್ ಜಾರಿ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಗುವಿಗೆ ಪುನರ್ಜನ್ಮ ನೀಡಿದ ಸೋನು ಸೂದ್ ಸಹಾಯಹಸ್ತ
ಮನುಷ್ಯನಿಗೆ ಶ್ರೀಮಂತಿಕೆ ಬಂದಾಗ ಸಾಧಾರಣವಾಗಿ ಅಹಂಕಾರ ಹೆಚ್ಚುತ್ತದೆ. ಜನರನ್ನು ಸಮಾಜವನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ಒಂದು ಕಾಲದಲ್ಲಿ ಏನೂ ಇಲ್ಲದವರು ಸ್ಟಾರ್ ಗಳಾಗಿ ಬದಲಾದ ಮೇಲೆ ಅವರ ಬೆಳವಣಿಗೆಗೆ ಕಾರಣಕರ್ತರಾದ ವ್ಯಕ್ತಿಗಳನ್ನು ಕೂಡ ಮರೆತುಬಿಡುತ್ತಾರೆ. ಸ್ಟಾರ್ ಸೆಲೆಬ್ರೆಟಿಗಳಾಗಿ ಮೆರೆಯುವ ಇಂತಹ ವ್ಯಕ್ತಿಗಳ ಮಧ್ಯೆ ತಾನು ಬೆಳೆದ ಸಮಾಜಕ್ಕೆ, ಜನಗಳಿಗೆ ಋಣಿಯಾಗಿರುವಂತೆ ಕೆಲಸಗಳನ್ನು ಮಾಡುವವರು ಕೆಲವೇ ಕೆಲವು ಮಂದಿ ಇರುತ್ತಾರೆ ಅಂತಹ ಅಪರೂಪದ ವ್ಯಕ್ತಿಗಳ ಪೈಕಿ ನಟ ಸೋನು ಸೂದ್ ಕೂಡ ಒಬ್ಬರು.
ಮೂಲತಃ ಪಂಜಾಬಿ ಕುಟುಂಬಕ್ಕೆ ಸೇರಿದ ಸೋನು ಸೂದ್, ನಾಗಪುರದ ಯಶವಂತರಾವ್ ಚೌಹನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದವರು. 1999ರಲ್ಲಿ ತಮಿಳು ಚಿತ್ರ 'ಕಲ್ಲಜಗಾರ' ಚಿತ್ರದ ಮೂಲಕ ಸಿನಿಮಾ ರಂಗವನ್ನು ಪ್ರವೇಶ ಮಾಡಿದರು. 2000ರಲ್ಲಿ 'ಹ್ಯಾಂಡ್ಸಪ್' ತೆಲುಗು ಚಿತ್ರದ ಮೂಲಕ ತೆಲುಗು ಚಿತ್ರರಂಗವನ್ನು ಪ್ರವೇಶಿಸಿದರು.2001ರಲ್ಲಿ 'ಮಜುನು' ಚಿತ್ರದ ಮೂಲಕ ಹಿಂದಿ ಚಿತ್ರರಂಗವನ್ನು ಕೂಡ ಪ್ರವೇಶ ಮಾಡಿದರು. ಹೀಗೆ ಮೂರು ಚಿತ್ರರಂಗಗಳಲ್ಲಿ ಸಕ್ರಿಯರಾದ ಸೋನು ಸೂದ್ ಪೋಷಕ ಪಾತ್ರದಲ್ಲಿ, ವಿಲನ್ ಪಾತ್ರದಲ್ಲಿ ಕೂಡ ಮಿಂಚಿದರು. ಆದರೆ ಸೋನು ಸೂದ್ ಪ್ರತಿಭೆಗೆ ತಕ್ಕ ಮನ್ನಣೆ ಮಾತ್ರ ಸಿಗದೆ ನಿರಾಶೆ ಹೊಂದಿದ್ದರು.
'ಅರುಂಧತಿ' ಮೂಲಕ ಖ್ಯಾತಿಗಳಿಸಿದ ಸೋನು ಸೂದ್
ಅದು 2009ರ ವರ್ಷ 'ಅರುಂಧತಿ' ಚಿತ್ರ ಬಿಡುಗಡೆಯಾದ ಮೇಲೆ ಎಲ್ಲ ಕಡೆ ಇದೊಂದೆ ಡೈಲಾಗ್.
ಅರುಂಧತಿಯಲ್ಲಿ ಪಶುಪತಿ ಮಾಂತ್ರಿಕನಾಗಿ ಮಾಡಿದ ಅಭಿನಯಕ್ಕೆ ಇಡೀ ದೇಶವೇ ನಿಬ್ಬೆರಗಾಯಿತು. 'ಅರುಂಧತಿ' ಹೊತ್ತಿಗೆ ಸೋನು ಸೂದ್ ತಕ್ಕಮಟ್ಟಿಗೆ ಪೋಷಕ ನಟನಾಗಿ ವಿಲನ್ ಆಗಿ, ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದರು. ಆದರೆ 'ಅರುಂಧತಿ' ಚಿತ್ರ ಸೋನು ಸೂದ್ ಅವರ ಸಿನಿಮಾ ಬದುಕನ್ನು ಬದಲಾಯಿಸಿತು. ಇದೆ ಚಿತ್ರದ ಮೂಲಕ ಅನುಷ್ಕಾ ಶೆಟ್ಟಿ ಕೂಡ ದೊಡ್ಡ ಮಟ್ಟದ ಸ್ಟಾರ್ ಗಿರಿಯನ್ನು ಪಡೆದುಕೊಂಡಿದ್ದು. ಒಟ್ಟಿನಲ್ಲಿ 'ಅರುಂಧತಿ' ಚಿತ್ರದ ಮೂಲಕ ಸೋನು ಸೂದ್ ಮನೆಮಾತಾದರು. ಇಲ್ಲಿಂದ ಮುಂದೆ ತೆಲುಗು-ತಮಿಳು ಜೊತೆಗೆ ಬಾಲಿವುಡ್ ನಲ್ಲಿ ಅತ್ಯಂತ ಬೇಡಿಕೆಯ ನಟನಾಗಿ ಸೋನು ಸೂದ್ ಬೆಳೆದರು.
ಸಿನಿಮಾಗಳಲ್ಲಿ ವಿಲನ್ ನಿಜ ಜೀವನದ ಹೀರೋ
ಅನೇಕ ಹೀರೋಗಳು ತಮ್ಮ ವೈಯಕ್ತಿಕ ಬದುಕಿನಲ್ಲಿ ವಿಲನ್ ಗಳಂತೆ ವರ್ತಿಸಿ ತಮ್ಮ ಮಾನ ಕಳೆದುಕೊಂಡ ಘಟನೆಗಳನ್ನು ನೋಡಿದ್ದೇವೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಸಿನಿಮಾಗಳಲ್ಲಿ ವಿಲನ್ ಆದ ಸೋನು ಜೀವನದಲ್ಲಿ ಮಾತ್ರ ಹೀರೋ ಆಗಿ ನಿಸ್ವಾರ್ಥರಾಗಿ ಸೇವೆ ಮಾಡುತ್ತಿದ್ದಾರೆ. ಅದರಲ್ಲೂ ಕರೋನದ ಸಂಕಷ್ಟದ ಸಮಯದಲ್ಲಿ ಜನಸಾಮಾನ್ಯರಿಗೆ ಸೋನು ಮಾಡಿದ ಸಹಾಯವನ್ನು ಯಾರು ಮರೆಯಲು ಸಾಧ್ಯ? ದೂರದ ಊರುಗಳಿಗೆ ತೆರಳಬೇಕಿದ್ದ ಕೂಲಿಕಾರ್ಮಿಕರಿಗೆ ಬಸ್ಸಿನ ವ್ಯವಸ್ಥೆಗಳನ್ನು ಮಾಡಿದರು. ಅಂಬುಲೆನ್ಸ್, ಆಕ್ಸಿಜನ್ ಕೊರತೆಯಾದಾಗ ಅದನ್ನು ನೀಗಿಸಲು ತುರ್ತು ಕ್ರಮಗಳನ್ನು ಕೈಗೊಂಡರು. ಹೀಗಾಗಿಯೇ ಜನ ಸರ್ಕಾರಕ್ಕೆ ಮೊರೆ ಹೋಗುವುದಕ್ಕಿಂತ ಸೋನು ಸೂದ್ ಅವರಿಗೆ ಮೊರೆಹೋಗಿದ್ದೆ ಆ ಸಮಯದಲ್ಲಿ ಹೆಚ್ಚು. ಇಂತಹ ಸೋನು ಸೂದ್ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ, ಅದು ಕೂಡ ಅವರ ಮಾನವೀಯತೆಯ ಗುಣದಿಂದಲೇ.
ಮಗುವಿಗೆ ಹೃದಯ ಚಿಕಿತ್ಸೆ ಮಾಡಿಸಿದ ಸೋನು ಸೂದ್
ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯ ಕಂಚೆಪೊಗು ಕೃಷ್ಣ-ಬಿಂದು ಪ್ರಿಯ ದಂಪತಿಗಳಿಗೆ ಈ ವರ್ಷ ಮುದ್ದಾದ ಒಂದು ಗಂಡು ಮಗು ಜನಿಸಿದೆ. ಆದರೆ ಆ ಮಗುವಿಗೆ ಹಾರ್ಟ್ ನಲ್ಲಿ ಹೋಲ್ ಇದ್ದು ಇದರ ಚಿಕಿತ್ಸೆಗಾಗಿ ಆರು ಲಕ್ಷ
ಖರ್ಚಾಗುತ್ತದೆ ಅಂತ ವೈದ್ಯರು ತಿಳಿಸಿದ್ದಾರೆ. ಕೃಷ್ಣ ಖಾಸಗಿ ಕಂಪನಿಯೊಂದರ ಸಾಧಾರಣ ಉದ್ಯೋಗಿ. ಚಿಕಿತ್ಸೆಗೆ ಬೇಕಾದ ಹಣವನ್ನು ಹೊಂದಿಸುವ ಸಾಮರ್ಥ್ಯವಿಲ್ಲದೆ ಕಂಗಾಲಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಕೆಲವರು ಪ್ರಕಟಿಸಿ ಕೃಷ್ಣನ ಸಹಾಯಕ್ಕೆ ನಿಲ್ಲುವಂತೆ ಕೋರಿಕೊಂಡಿದ್ದರು. ಈ ವಿಷಯವನ್ನು ಸಾಮಾಜಿಕ ಜಾಲತಾಣದ ಮೂಲಕ ಗಮನಿಸಿದ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ತಿರುವೂರಿನಲ್ಲಿರುವ ಜನ ವಿಜ್ಞಾನ ವೇದಿಕೆಯ ಕಾರ್ಯಕರ್ತರು ಸೋನು ಸೂದ್ ಅವರ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಸೋನು ಸೂದ್ ಅವರು ಮಗುವಿನೊಂದಿಗೆ ಆ ದಂಪತಿಗಳನ್ನು ಮುಂಬೈಗೆ ಕರೆಸಿಕೊಂಡಿದ್ದಾರೆ.
ಯಶಸ್ವಿಯಾದ ಶಸ್ತ್ರಚಿಕಿತ್ಸೆ
ಮುಂಬೈಯಲ್ಲಿನ ಪ್ರಸಿದ್ಧ ವಾಡಿಯಾ ಆಸ್ಪತ್ರೆಯಲ್ಲಿ ಶನಿವಾರ ಮಗುವಿಗೆ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಯಿತು. ಈಗ ಮಗುವಿನ ಆರೋಗ್ಯ ಉತ್ತಮಗೊಂಡಿದೆ.ತಮ್ಮ ಮಗುವಿಗೆ ಪುನರ್ಜನ್ಮ ನೀಡಿದ ಸೋನು ಸೂದ್ ಅವರಿಗೆ ಈ ದಂಪತಿಗಳು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಸೋನು ಸೂದ್ ಅವರ ಈ ಮಾನವೀಯ ಗುಣ ಮತ್ತು ನಡತೆ ಇತರ ಚಲನಚಿತ್ರ ನಟ-ನಟಿಯರಿಗೆ ಆದರ್ಶವಾಗಲಿ, ಅವರು ಕೂಡ ಸೋನು ಸೂದ್ ಅವರಂತೆ ಸಮಾಜಮುಖಿ ಕಾರ್ಯಗಳನ್ನು ಮಾಡಲಿ ಎಂಬುವುದು ಪ್ರತಿಯೊಬ್ಬರ ಆಶಯವಾಗಿದೆ.