ಕ್ರಿಕೆಟಿಗ ಗಂಗೂಲಿ ಬಯೋಪಿಕ್ ಹೀರೊ ಆಯ್ಕೆ; ಸ್ವತಃ ಖಚಿತಪಡಿಸಿದ ದಾದಾ
ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ನಾಯಕರಲ್ಲಿ ಒಬ್ಬರು ಸೌರವ್ ಗಂಗೂಲಿ. ಭಾರತೀಯ ಕ್ರಿಕೆಟ್ ತಂಡವನ್ನು ಉತ್ತುಂಗಕ್ಕೆ ಕೊಂಡೊಯ್ದವರು ದಾದಾ. ವಿಶ್ವಕಪ್ ಗೆಲ್ಲದ ಹೊರತಾಗಿಯೂ ಸೌರವ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್ನ ಶ್ರೇಷ್ಠ ನಾಯಕರಲ್ಲಿ ಒಬ್ಬರು. 25 ವರ್ಷಗಳ ಹಿಂದೆ ಮ್ಯಾಚ್ ಫಿಕ್ಸಿಂಗ್ ಪ್ರಕರಣದಿಂದ ಪಾತಾಳಕ್ಕೆ ಕುಸಿದ ತಂಡವನ್ನು ಕಟ್ಟಿ ಬೆಳೆಸಿದ್ದು ಇದೇ ಗಂಗೂಲಿ.
2003ರಲ್ಲಿ ಭಾರತ ತಂಡವನ್ನು ಗಂಗೂಲಿ ವಿಶ್ವಕಪ್ ಫೈನಲ್ವರೆಗೂ ಕೊಂಡೊಯ್ದಿದ್ದರು. ಆಕ್ರಮಣಕಾರಿ ಮನೋಭಾವದಿಂದ ಗುರ್ತಿಸಿಕೊಂಡಿದ್ದ ಅವರು ಮೈದಾನಕ್ಕಿಳಿದರೆ ನಿಜವಾದ ಹೋರಾಟಗಾರ. ಇವತ್ತಿಗೂ ದಾದಾ ಆಟ ಕ್ರಿಕೆಟ್ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ. ಈಗಾಗಲೇ ಧೋನಿ, ಸಚಿನ್ ತೆಂಡೂಲ್ಕರ್ ಜೀವನಾಧರಿತ ಚಿತ್ರಗಳು ಬಂದಿವೆ. ಬಹಳ ದಿನಗಳಿಂದ ಗಂಗೂಲಿ ಬಯೋಪಿಕ್ ಬಗ್ಗೆಯೂ ಚರ್ಚೆ ನಡೀತಿದೆ.

ಅಭಿಮಾನಿಗಳ ಪಾಲಿನ ಬಂಗಾಳದ ಮಹಾರಾಜ ಗಂಗೂಲಿ ಜೀವನಾಧರಿತ ಸಿನಿಮಾ ಮಾಡುವ ಬಗ್ಗೆ ಸುದ್ದಿ ಕೇಳಿಬರುತ್ತಲೇ ಇದೆ. ಆದರೆ ಚಿತ್ರದಲ್ಲಿ ದಾದಾ ಪಾತ್ರ ಮಾಡುವುದು ಯಾರು? ಎನ್ನುವ ಚರ್ಚೆ ಕೂಡ ಅದರಲ್ಲಿದೆ. ಆಯುಷ್ಮಾನ್ ಖುರಾನ, ರಣ್ಬೀರ್ ಕಪೂರ್ ಸೇರಿ ಹಲವರು ಹೆಸರುಗಳು ಗಂಗೂಲಿ ಪಾತ್ರಕ್ಕೆ ಕೇಳಿಬಂದಿತ್ತು. ಆದರೆ ತಮ್ಮ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎಂದು ಸ್ವತಃ ದಾದಾ ಈಗ ಸ್ಪಷ್ಟಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ "ನಟ ರಾಜ್ಕುಮಾರ್ ರಾವ್ ಲೀಡ್ ರೋಲ್ನಲ್ಲಿ ನಟಿಸುತ್ತಾರೆ. ಆದರೆ ಡೇಟ್ಸ್ ಸಮಸ್ಯೆಯಿಂದ ತಡವಾಗುತ್ತಿದೆ. ಸಿನಿಮಾ ತೆರೆಗೆ ಬರಲು ಇನ್ನು ಒಂದು ವರ್ಷ ಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ.
ಗುರುವಾರ(ಫೆಬ್ರವರಿ 21) ಸಂಜೆ ಸೌರವ್ ಗಂಗೂಲಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ದುರ್ಗಾಪುರ ಎಕ್ಸ್ಪ್ರೆಸ್ ವೇನಲ್ಲಿ ಕಾರು ಡಿಕ್ಕಿಯಾಗಿದೆ ಎಂದು ವರದಿಯಾಗಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾರಿಗೂ ಸಮಸ್ಯೆ ಆಗಿಲ್ಲ. ಪೆಟ್ಟಾಗಿಲ್ಲ. ಗಂಗೂಲಿ ಅವರ ಕಾನ್ವೇ ವಾಹನಕ್ಕೆ ಕೊಂಚ ಡ್ಯಾಮೇಜ್ ಆಗಿದೆ ಎಂದು ಹೇಳಲಾಗುತ್ತಿದೆ.

1992ರಲ್ಲಿ ಭಾರತ ತಂಡದ ಪರ ಸೌರವ್ ಗಂಗೂಲಿ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. 1996ರಲ್ಲಿ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಅವಕಾಶ ಪಡೆದಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ್ದರು. ಒಟ್ಟು 311 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ದಾದಾ 22 ಶತಕ, 72 ಅರ್ಧ ಶತಕ ಸೇರಿ 11363 ರನ್ ಗಳಿಸಿದ್ದಾರೆ. ಅದೇ ರೀತಿ 113 ಟೆಸ್ಟ್ ಪಂದ್ಯಗಳನ್ನು ಆಡಿ 16 ಶತಕ, 35 ಅರ್ಧ ಶತಕ ದಾಖಲಿಸಿ 7212 ರನ್ ಕಲೆ ಹಾಕಿದ್ದರು.
ತಮ್ಮ ನಾಯಕತ್ವದಲ್ಲಿ ಸೆಹ್ವಾಗ್, ಯುವರಾಜ್ ಸಿಂಗ್, ಕೈಫ್, ಜಹೀರ್ ಖಾನ್, ಇರ್ಫಾನ್ ಫಠಾಣ್, ನೆಹ್ರಾ, ಹರ್ಭಜನ್ ಸಿಂಗ್ ರೀತಿಯ ಒಳ್ಳೆ ಆಟಗಾರರನ್ನು ಪ್ರೋತ್ಸಾಹಿಸಿದರು. ವಿದೇಶಗಳಲ್ಲಿ ಭಾರತ ತಂಡ ಸಾಧನೆ ಕಮ್ಮಿ ಎನ್ನುತ್ತಿದ್ದ ಸಮಯದಲ್ಲಿ ಹೊರ ದೇಶಗಳಲ್ಲಿ ಕೂಡ ಸರಣಿ ಗೆಲ್ಲುವಂತೆ ಮಾಡಿದ್ದರು. ಬಿಸಿಸಿಐ ಅಧ್ಯಕ್ಷರಾಗಿಯೂ ದಾದಾ ಸೇವೆ ಸಲ್ಲಿಸಿದ್ದಾರೆ.
ನಾಯಕನಾಗಿ ಭಾರತ ಕ್ರಿಕೆಟ್ ತಂಡವನ್ನು 146 ಏಕದಿನ ಪಂದ್ಯಗಳಲ್ಲಿ ಗಂಗೂಲಿ ಮುನ್ನಡೆಸಿದ್ದರು. ಅದರಲ್ಲಿ 76 ಪಂದ್ಯಗಳಲ್ಲಿ ತಂಡ ಗೆದ್ದಿದ್ದರೆ 65 ಪಂದ್ಯಗಳಲ್ಲಿ ಸೋಲುಂಡಿತ್ತು. ಟೆಸ್ಟ್ ವಿಚಾರಕ್ಕೆ ಬಂದರೆ 49 ಪಂದ್ಯಗಳಲ್ಲಿ ತಂಡದ ನಾಯಕರಾಗಿದ್ದರು. 21 ಪಂದ್ಯಗಳಲ್ಲಿ ಗೆದ್ದಿದ್ದರೆ 13ರಲ್ಲಿ ಸೋಲುವಂತಾಗಿತ್ತು. ಗಂಗೂಲಿ ಹಾಗೂ ಧೋನಿ ಇಬ್ಬರಲ್ಲಿ ನನ್ನ ಪ್ರಕಾರ ಗಂಗೂಲಿ ಶ್ರೇಷ್ಠ ನಾಯಕ ಎಂದು ಸ್ವತಃ ಸೆಹ್ವಾಗ್ ಹೇಳಿದ್ದರು.


Click it and Unblock the Notifications











