ಗೂಢಾಚಾರನಾಗಿ ಪಾಕಿಸ್ತಾನದಲ್ಲಿ ಒಂದು ದಿನ ; ಅಜ್ಞಾನದ ಅಂಧಕಾರನಾ ? ದೇಶಭಕ್ತಿನಾ ?
ಸೋಶಿಯಲ್ ಮೀಡಿಯಾದಲ್ಲಿ ಯಾವಾಗ ಯಾವ ವಿಚಾರ ಟ್ರೆಂಡ್ ಆಗುತ್ತದೆ ಎಂದು ಹೇಳುವುದಕ್ಕೆ ಆಗಲ್ಲ. ರೀಲ್ಸ್ ವಿಚಾರಕ್ಕೆ ಬಂದರೆ ಜನ ಮರುಳೋ ಜಾತ್ರೆ ಮರುಳೋ ಎಂದು ಸರಿ ತಪ್ಪು ಚರ್ಚಿಸದೇ ಒಬ್ಬರನ್ನು ನೋಡಿ ಮತ್ತೊಬ್ಬರು ರೀಲ್ಸ್ ಮಾಡುತ್ತಾರೆ. ಸದ್ಯ 'ಪಾಕಿಸ್ತಾನದಲ್ಲಿ ಸ್ಪೈ ಆಗಿ ಒಂದು ದಿನ' ರೀಲ್ಸ್ ಟ್ರೆಂಡ್ ಹುಟ್ಟಾಕ್ಕಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ.
ನೆಟ್ಟಿಗರು ಈ ರೀಲ್ಸ್ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಕೆಲವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದಿತ್ಯಾ ಧರ್ ನಿರ್ದೇಶನದ 'ಧುರಂಧರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಭಾರತದ ಗೂಢಚಾರಿಗಳು ಶತ್ರುರಾಷ್ಟ್ರ ಪಾಕಿಸ್ತಾನದಲ್ಲಿ ಹೇಗೆ ಕೆಲಸ ಮಾಡಿದ್ದರು ಎಂಬುದನ್ನು ಈ ಸಿನಿಮಾದಲ್ಲಿ ಸೊಗಸಾಗಿ ತೋರಿಸಲಾಗಿದೆ. 2001ರಲ್ಲಿ ನಡೆದ ಸಂಸತ್ ಮೇಲಿನ ದಾಳಿ ಬಳಿಕ ಭಾರತದ ಗುಪ್ತಚರ ಇಲಾಖೆ ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಹಮ್ಜಾ ಅಲಿ ಮಜಹರಿ ವೇಷದಲ್ಲಿ ಸ್ಪೈ ಆಗಿ ಹೋಗಿ ಜಸ್ಕಿರತ್ ಸಿಂಗ್ ರಂಗಿ ಭಯೋತ್ಪಾದಕರ ಮಾಹಿತಿ ಕಲೆ ಹಾಕುವ ಕಥೆ ಚಿತ್ರದಲ್ಲಿದೆ.

ಶತ್ರು ರಾಷ್ಟ್ರದಲ್ಲಿ ಸ್ಪೈ ಆಗಿ ಕೆಲಸ ಮಾಡುವುದು ಅಷ್ಟು ಸುಲಭವಲ್ಲ. ಜೀವನನ್ನೇ ಪಣಕ್ಕಿಟ್ಟು ನಮ್ಮ ಗೂಢಾಚಾರಿಗಳು ಅಲ್ಲಿ ಕೆಲಸ ಮಾಡುತ್ತಾರೆ. ಆದರೆ ಇಂತಹ ಗಂಭೀರ ವಿಚಾರವನ್ನು ರೀಲ್ಸ್ ಮಾಡಿ ತಮಾಷೆ ಮಾಡುತ್ತಿರುವುದು ವಿಪರ್ಯಾಸವೇ ಸರಿ. ಯಾರೋ ಒಬ್ಬರು ಮಾಡಿದರೂ ಎಂದು ಹಿಂದು ಮುಂದು ನೋಡದೇ ಕಂಟೆಂಟ್ ಕ್ರಿಯೇಟರ್ಸ್ ಇದನ್ನು ಅನುಸರಿಸುತ್ತಿದ್ದಾರೆ. "ಪಾಕಿಸ್ತಾನದಲ್ಲಿ ಹಿಂದೂ ಸ್ಪೈ", "ಪಾಕಿಸ್ತಾನದಲ್ಲಿ ಬೆಂಗಳೂರಿನ ಸ್ಪೈ", "ಪಾಕಿಸ್ತಾನದಲ್ಲಿ ಕರ್ನಾಟಕದ ಸ್ಪೈ", "ಪಾಕಿಸ್ತಾನದಲ್ಲಿ ತಮಿಳು ಸ್ಪೈ" ಹೀಗೆ ಸಾಕಷ್ಟು ರೀಲ್ಸ್ ವೈರಲ್ ಆಗುತ್ತಿದೆ.
ಶತ್ರು ರಾಷ್ಟ್ರದ ಒಳಗೆ ನುಸುಳಿ ವೇಷ ಬದಲಿಸಿಕೊಂಡು ಭಯೋತ್ಪಾದಕರ ಮಾಹಿತಿ ಸಂಗ್ರಹಿಸುವುದು ಅಷ್ಟು ಸುಲಭ ಅಲ್ಲ. ಅದಕ್ಕೆ ಮೈಯೆಲ್ಲಾ ಕಣ್ಣಾಗಿರಬೇಕು. ಅಲ್ಲಿನ ನಡೆ, ನುಡಿ, ರೀತಿ ರಿವಾಜು ಎಲ್ಲಾ ಕಲಿತು ಅವರಲ್ಲಿ ಒಬ್ಬರಾಗಿ ಬದುಕಬೇಕು. ಒಂದು ವೇಳೆ ಸಿಕ್ಕಿಬಿದ್ದರೆ ಸಾವು ಗ್ಯಾರಂಟಿ ಎನ್ನಲಾಗುತ್ತದೆ. ಹೀಗೆ ಸ್ಪೈ ಆಗಿ ಅಲ್ಲಿಗೆ ಹೋಗುವವರು ಸಣ್ಣದೊಂದು ತಪ್ಪು ಮಾಡಿ ತಗ್ಲಾಕಿಕೊಂಡರೆ ಕೊಂದುಬಿಡ್ತಾರೆ ಎನ್ನುವ ಥೀಮ್ನಲ್ಲಿ ತಮಾಷೆಯಾಗಿ ಹೀಗೆ ರೀಲ್ಸ್ ಮಾಡಲಾಗುತ್ತಿದೆ. ಆದರೆ ಈ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ಇದರಲ್ಲಿ ತಪ್ಪೇನಿದೆ ಎನ್ನುವುದು ಕೆಲವರ ವಾದ. ಆದರೆ ಒಂದು ಗಂಭೀರ ವಿಚಾರವನ್ನು ತಮಾಷೆ ಮಾಡಿ ನಮ್ಮ ಸೈನಿಕರು, ಗೂಢಾಚಾರಿಗಳನ್ನು ಅವಮಾನಿಸುವ ಕೆಲಸ ನಡೀತಿದೆ ಎಂದು ಸಾಕಷ್ಟು ಮಂದಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕೊನೆ ಪಕ್ಷ "ಪಾಕಿಸ್ತಾನದಲ್ಲಿ ಸ್ಪೈ ಆಗಿ ನಾನು" ಎಂದು ವೀಡಿಯೋ ಮಾಡಿ. ಬೆಂಗಳೂರಿಗ, ಕನ್ನಡಿಗ, ತಮಿಳುನಾಡಿನವನು, ಆಂಧ್ರದವನು ಎಂದು ಹೇಳುವುದನ್ನು ಬಿಡಿ. ನಮ್ಮನ್ನು ನಾವು ಗೇಲಿ ಮಾಡಿಕೊಳ್ಳುವುದು ಬೇಡ. ಒಂದು ಹಂತದವರೆಗೆ ತಮಾಷೆ ಸರಿ. ಆದರೆ ಯಾವುದೂ ಅತಿಯಾಗಬಾರದು. ಸೈನಿಕರು, ಗೂಢಾಚಾರಿಗಳ ತರಬೇತಿ, ಶ್ರಮದ ಬಗ್ಗೆ ನಿಮಗೆ ಗೊತ್ತಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಡಿಸೆಂಬರ್ 5ರಂದು ತೆರೆಗೆ ಬಂದಿದ್ದ 'ಧುರಂಧರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ಈ ವರ್ಷ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಕನ್ನಡದ 'ಕಾಂತಾರ-1' ಪಾತ್ರವಾಗಿದೆ. ಆದರೆ ರಣ್ವೀರ್ ಸಿಂಗ್ ಸಿನಿಮಾ ಆರ್ಭಟ ನೋಡಿದರೆ ಶೀಘ್ರದಲ್ಲೇ ಆ ದಾಖಲೆ ಅಳಿಸಿ ಹಾಕುವಂತಿದೆ.


Click it and Unblock the Notifications











