ಬರಲಿದೆ ಶ್ರೀದೇವಿ ಕುರಿತ ಪುಸ್ತಕ, ಅಲ್ಲಾದರೂ ಸಿಗುತ್ತಾ ನಟಿಯ ನಿಗೂಢ ಸಾವಿಗೆ ಕಾರಣ!
ಬಹುಭಾಷಾ ನಟಿ ಶ್ರೀದೇವಿ ನಿಧನ ಹೊಂದಿ ಐದು ವರ್ಷಗಳಾಗಿವೆ. ಬಹುಭಾಷಾ ತಾರೆಯಾಗಿದ್ದ ಶ್ರೀದೇವಿ ಸಿನಿಮಾಗಳಲ್ಲಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿ ಯಶಸ್ಸು ಗಳಿಸುತ್ತಿರುವಾಗಲೇ ನಿಗೂಢವಾಗಿ ದೂರದ ದುಬೈನಲ್ಲಿ ನಿಧನ ಹೊಂದಿದರು.
ಶ್ರೀದೇವಿಯ ಜೀವನ ಇದೀಗ ಪುಸ್ತಕ ರೂಪದಲ್ಲಿ ಹೊರಬರುತ್ತಿದ್ದು, ಈ ವಿಷಯವನ್ನು ಸ್ವತಃ ಶ್ರೀದೇವಿಯ ಪತಿ, ಖ್ಯಾತ ನಿರ್ಮಾಪಕ ಬೋನಿ ಕಪೂರ್ ಬಹಿರಂಗಪಡಿಸಿದ್ದಾರೆ. ಈ ಪುಸ್ತಕವು ಮುಂದೊಂದು ದಿನ ಸಿನಿಮಾ ಆಗುವ ಸಾಧ್ಯತೆಯೂ ಇದೆ.
ಮಾಧ್ಯಮದೊಟ್ಟಿಗೆ ಈ ವಿಷಯ ಹಂಚಿಕೊಂಡಿರುವ ಬೋನಿ ಕಪೂರ್, ''ಶ್ರೀದೇವಿಗೆ ನಟನೆ ಎಂದರೆ ಬಹಳ ಇಷ್ಟವಿತ್ತು. ತನ್ನ ನಟನಾ ಕಲೆಯನ್ನು ಅಭಿಮಾನಿಗಳಿಗೆ ಪ್ರದರ್ಶಿಸುವುದು ಆಕೆಗೆ ಬಹು ಇಷ್ಟ. ಆದರೆ ವೈಯಕ್ತಿಕ ಜೀವನದಲ್ಲಿ ಆಕೆ ಬಹಳ ಶಿಸ್ತಿನ, ಹೆಚ್ಚು ಜನರೊಟ್ಟಿಗೆ ಬೆರೆಯದ ವ್ಯಕ್ತಿಯಾಗಿದ್ದರು. ಆದರೆ ನಮ್ಮದೇ ಕುಟುಂಬದ ವ್ಯಕ್ತಿಯಂತಿರುವ ಬರಹಗಾರ ಧೀರಜ್ ಕುಮಾರ್ ಈಗ ಶ್ರೀದೇವಿಯ ಜೀವನವನ್ನು ಪುಸ್ತಕ ರೂಪದಲ್ಲಿ ತರುತ್ತಿದ್ದಾರೆ'' ಎಂದಿದ್ದಾರೆ.

''ಧೀರಜ್ ಕುಮಾರ್ ನಮ್ಮದೇ ಕುಟುಂಬ ಸದಸ್ಯರಂತೆ. ಅವರು ಸಂಶೋಧಕರು, ಬರಹಗಾರರು, ಅಂಕಣ ಬರಹಗಾರರು ಸಹ ಆಗಿದ್ದಾರೆ. ಶ್ರೀದೇವಿಯ ಜೀವನದ ಬಗ್ಗೆ ಅಧ್ಯಯನ ಮಾಡಿ, ಹಲವು ಕಡೆಗಳಿಂದ ಮಾಹಿತಿ ಕಲೆ ಹಾಕಿ, ನಮ್ಮ ಕುಟುಂಬದವರನ್ನು ಸೇರಿದಂತೆ ಹಲವರೊಟ್ಟಿಗೆ ಮಾತುಕತೆ ನಡೆಸಿ ಶ್ರೀದೇವಿಯ ಜೀವನ ಚರಿತ್ರೆ 'ಶ್ರೀದೇವಿ: ದಿ ಲೈಫ್ ಆಫ್ ಎ ಲೆಜೆಂಡ್' ಬರೆದಿದ್ದಾರೆ. ಆ ಪುಸ್ತಕ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ'' ಎಂದಿದ್ದಾರೆ.
ನಟಿ ಶ್ರೀದೇವಿಯ ಜೀವನ ಕತೆಯೊಟ್ಟಿಗೆ ಪುಸ್ತಕದಲ್ಲಿ ಅವರ ಸಾವಿನ ಕುರಿತೂ ಸಹ ಮಾಹಿತಿ ಇರಲಿದೆಯೇ ಎಂಬ ಕುತೂಹಲ ಅಭಿಮಾನಿಗಳದ್ದು, ಏಕೆಂದರೆ ಶ್ರೀದೇವಿ ಸಾವಿನ ಬಗ್ಗೆ ಈಗಲೂ ಗೊಂದಲಗಳಿವೆ.
2018 ರ ಫೆಬ್ರವರಿಯಲ್ಲಿ ಮದುವೆಯೊಂದರಲ್ಲಿ ಭಾಗವಹಿಸಲು ಪುತ್ರಿಯೊಟ್ಟಿಗೆ ದುಬೈಗೆ ತೆರಳಿದ್ದ ಶ್ರೀದೆವಿ ಮದುವೆ ಮುಗಿದ ಮೇಲೆ ಶಾಪಿಂಗ್ ಮಾಡಲೆಂದು ಕೆಲವು ದಿನ ಅಲ್ಲೇ ಉಳಿದರು. ಮದುವೆ ಮುಗಿಸಿಕೊಂಡು ಭಾರತಕ್ಕೆ ವಾಪಸ್ಸಾಗಿದ್ದ ಪತಿ ಬೋನಿ ಕಪೂರ್, ಕೆಲವು ದಿನಗಳ ಬಳಿಕ ಹಠಾತ್ತನೆ ಶ್ರೀದೇವಿ ಇದ್ದ ಹೋಟೆಲ್ಗೆ ಹೋದರು. ಪತಿಯೊಡನೆ ತುಸು ಸಮಯ ಮಾತುಕತೆ ಮಾಡಿದ ಬಳಿಕ ಶ್ರೀದೇವಿ ಸ್ನಾನಕ್ಕೆಂದು ಬಾತ್ರೂಂಗೆ ಹೋದವರು ಬಾತ್ಟಬ್ನಲ್ಲಿ ಮುಳುಗಿ ಜೀವ ಬಿಟ್ಟರು.
ಶ್ರೀದೇವಿ ಮದ್ಯದ ಮತ್ತಿನಲ್ಲಿದ್ದ ಕಾರಣ ಬಾತ್ಟಬ್ನಲ್ಲಿ ಮುಳುಗಿ ಸತ್ತಿದ್ದಾರೆ ಎನ್ನಲಾಗಿತ್ತು. ದುಬೈ ಪೊಲೀಸರು ಪ್ರಕರಣದ ತನಿಖೆ ನಡೆಸಿ ಇದೇ ವಾದವನ್ನು ಒಪ್ಪಿ ಪ್ರಕರಣಕ್ಕೆ ಅಂತ್ಯ ಹಾಡಿದರು. ಆದರೂ ಹಲವು ಶ್ರೀದೇವಿ ಅಭಿಮಾನಿಗಳು ಇಂದಿಗೂ ಆಕೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ.


Click it and Unblock the Notifications











