'ರಾಮಾಯಣ' ಚಿತ್ರದ ಬರಹಗಾರನ ಬಗ್ಗೆ ಯಾಕೆ ಆತಂಕ? ಫುಲ್ ಟ್ರೋಲ್
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ನಟಿಸುತ್ತಿದ್ದಾರೆ. ಟೈಟಲ್ ಟೀಸರ್ನಿಂದಲೇ ಸಿನಿಮಾ ಇನ್ನಿಲ್ಲದ ನಿರೀಕ್ಷೆ ಹುಟ್ಟಾಕ್ಕಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.
ನಿಮಿತ್ ಮಲ್ಹೋತ್ರಾ ಅಂದಾಜು 800 ಕೋಟಿ ರೂ. ಬಜೆಟ್ನಲ್ಲಿ 'ರಾಮಾಯಣ' ಚಿತ್ರ ತೆರೆಗೆ ತರುತ್ತಿದ್ದಾರೆ. ಮೊದಲ ಭಾಗ ಮುಂದಿನ ವರ್ಷ ದೀಪಾವಳಿಗೆ ತೆರೆಗೆ ಬರಲಿದೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದೆ. ಈಗಾಗಲೇ ಮೊದಲ ಭಾಗದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ರಾವಣನ ವೇಷದಲ್ಲಿ ನಟ ಯಶ್ ಕೂಡ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.

'ರಾಮಾಯಣ' ಇಂಟ್ರಡಕ್ಷನ್ ಟೀಸರ್ ಸೂಪರ್ ಹಿಟ್ ಆಗಿದೆ. ಕೊನೆ 10 ಸೆಕೆಂಡ್ಗಳಲ್ಲಿ ಬರುವ ಗ್ಲಿಂಪ್ಸ್ ಸಿನಿರಸಿಕರ ಮನಗೆದ್ದಿದೆ. ಶ್ರೀರಾಮನಾಗಿ ರಣ್ಬೀರ್ ಪರಾಕ್ರಮ, ರಾವಣನಾಗಿ ಯಶ್ ಆರ್ಭಟ ನೋಡಿ ಖುಷಿಯಾಗಿದ್ದಾರೆ. ಐಮ್ಯಾಕ್ಸ್ ಫಾರ್ಮೆಟ್ನಲ್ಲಿ ಇಡೀ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಇಡೀ ಪ್ರಪಂಚಕ್ಕೆ ರಾಮಾಯಣ ಕಥೆಯನ್ನು ಹೇಳುವ ಸಾಹಸ ಮಾಡುತ್ತಿದ್ದಾರೆ. ಅದಕ್ಕಾಗಿ ಯಾವುದೇ ವಿಚಾರದಲ್ಲಿ ಚಿತ್ರತಂಡ ರಾಜಿ ಆಗುತ್ತಿಲ್ಲ.
ನಟ ಯಶ್ ನಟಿಸುವುದರ ಜೊತೆಗೆ ಚಿತ್ರದ ಸಹ ನಿರ್ಮಾಪಕನಾಗಿ ಕೈ ಜೋಡಿಸಿದ್ದಾರೆ. ಹಾಗಾಗಿ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಆಸ್ಕರ್ ವಿಜೇತರಾದ ಎ. ಆರ್ ರಹಮಾನ್ ಹಾಗೂ ಹ್ಯಾನ್ಸ್ ಜಿಮ್ಮರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಒಬ್ಬರು ಕ್ರಿಶ್ಚಿಯನ್ ಮತ್ತೊಬ್ಬರು ಮುಸ್ಲಿಂ ಇಬ್ಬರೂ ಸೇರಿ 'ರಾಮಾಯಣ' ಚಿತ್ರಕ್ಕೆ ಸಂಗೀತ ಕೊಡುವುದು ಯಾವ ನ್ಯಾಯ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
'ರಾಮಾಯಣ' ಫಸ್ಟ್ ಗ್ಲಿಂಪ್ಸ್ ಬಗ್ಗೆ ಎಲ್ಲೆಡೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ರಣ್ಬೀರ್ ಕಪೂರ್ ಮೀರಿ ಯಶ್ ಅಬ್ಬರಿಸುವ ಸಾಧ್ಯತೆಯಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಕೆಲವರು ಮೊಸರಲ್ಲಿ ಕಲ್ಲು ಹುಡುವ ಕೆಲಸ ಮಾಡುತ್ತಿದ್ದಾರೆ. ಚಿತ್ರದ ಬರಹಗಾರ ಶ್ರೀಧರ್ ರಾಘವನ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಟೈಟಲ್ ಕಾರ್ಡ್ನಲ್ಲಿ Written by Sridhar Raghavan ಎಂದು ಹಾಕಿದ್ದಾರೆ. ರಾಮಾಯಣ ಬರೆದಿದ್ದು ವಾಲ್ಮೀಕಿ ಅಲ್ಲವೇ? ಶ್ರೀಧರ್ ರಾಘವನ್ ಎಂದು ಹಾಕಿದ್ದು ಎಷ್ಟು ಸರಿ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ವಾಲ್ಮೀಕಿ ಬರೆದ 'ರಾಮಾಯಣ' ಕಾವ್ಯ ಆಧರಿಸಿ ಸಾಕಷ್ಟು ಜನ ಕವಿಗಳು ಕಾವ್ಯಗಳನ್ನು ರಚಿಸಿದ್ದಾರೆ. ಆ ಕಥೆ ಸಿನಿಮಾ, ನಾಟಕ, ಧಾರಾವಾಹಿ ರೂಪದಲ್ಲಿ ಬಂದಿದೆ. ಆದರೆ ನೀವೇ ರಾಮಾಯಣ ಬರೆದ ಕ್ರೆಡಿಟ್ ತಗೊಂಡರೆ ಹೇಗೆ? ಎಂದು ವ್ಯಂಗ್ಯವಾಡುತ್ತಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಿಮಿತ್ ಮಲ್ಹೋತ್ರಾ ಜೊತೆ ಸೇರಿ ಶ್ರೀಧರ್ ರಾಘವನ್ ಚಿತ್ರಕಥೆ ಸಿದ್ಧಪಡಿಸಿದ್ದಾರೆ, ಅದಕ್ಕೆ ಹೆಸರು ಹಾಕಿದ್ದಾರೆ ಎಂದು ಕೆಲವರು ಬೆಂಬಲ ಸೂಚಿಸುತ್ತಿದ್ದಾರೆ.
ಅಂದಹಾಗೆ ಶ್ರೀಧರ್ ರಾಘವನ್ ಹಲವು ಬಾಲಿವುಡ್ ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದಾರೆ. 'ಖಾಕಿ', 'ವಾರ್', 'ಪಠಾಣ್', 'ಟೈಗರ್- 3', 'ಯುದ್ರ' ಚಿತ್ರಗಳು ಈ ಲಿಸ್ಟ್ನಲ್ಲಿದೆ. ಅವರು ಚಿತ್ರಕಥೆ ಒದಗಿಸಿರುವ ಕೆಲ ಚಿತ್ರಗಳು ಹಿಟ್ ಆಗಿದ್ದರೆ ಕೆಲವು ಫ್ಲಾಪ್ ಆಗಿವೆ. ಸೋತ ಸಿನಿಮಾಗಳನ್ನು ತೋರಿಸಿ ಇಂತಹ ಚಿತ್ರಕಥೆಳನ್ನು ಕೊಟ್ಟ ಬರಹಗಾರ 'ರಾಮಾಯಣ' ಚಿತ್ರಕ್ಕೂ ಕೆಲಸ ಮಾಡುತ್ತಿರುವುದು ಭಯವಾಗ್ತಿದೆ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಸಿನಿಮಾ ಬರುವರೆಗೂ ಸುಮ್ಮನಿರಿ, ಏನೇನೋ ಮಾತನಾಡಬೇಡಿ ಎಂದು ಒಂದಷ್ಟು ಮಂದಿ ಪರ ಮಾತನಾಡುತ್ತಿದ್ದಾರೆ.


Click it and Unblock the Notifications











