ಶಾರುಖ್ ಖಾನ್, ಅಜಯ್ ದೇವಗನ್ಗೆ ಸಂಕಷ್ಟ, ದೊಡ್ಡವರ ಸಹವಾಸ ಮಾಡಿ ಕೆಟ್ಟ ಟೈಗರ್ ಶ್ರಾಫ್...!
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬಾಸು.
ಈ ಕಾರಣಕ್ಕೆ ಸಮಾಜಕ್ಕೆ ಉಪಕಾರಿಯಾಗದ ಅನೇಕರು, ಕಾಸು ಸಿಗುತ್ತೆ ಅನ್ನುವ ಕಾರಣಕ್ಕೆ ಸಮಾಜಕ್ಕೆ ಅಪಾಯಕಾರಿಯಾದ ಉತ್ಪನ್ನಗಳ ಜಾಹೀರಾತುಗಳನ್ನ ಮಾಡ್ತಾರೆ. ಯಾರಾದರೂ ಹಾಳಾಗಿ ಹೋಗಲಿ ನಾವು ನಮ್ಮ ಮನೆಯವರು ಚೆನ್ನಾಗಿದ್ದರೆ ಸಾಕು ಎಂದು ತಪ್ಪು ಸಂದೇಶವನ್ನ ನೀಡಿ ಕೈ ತೊಳೆದುಕೊಳ್ಳುತ್ತಾರೆ.ಆದರೆ ಇವರ ಈ ಜಾಹೀರಾತುಗಳಿಂದ ಆಗುವ ಪರಿಣಾಮ ದೊಡ್ಡದು ಮತ್ತು ಗಾಢವಾದದ್ದು. ಯಾಕೆಂದರೆ ಸಿನಿಮಾ ತಾರೆಯರನ್ನ ದೇವರೆಂದು ಪೂಜಿಸುವವರ ಸಂಖ್ಯೆ ನಮ್ಮಲ್ಲಿ ತುಸು ಹೆಚ್ಚೇ ಇದೆ.

ಇನ್ನೂ.. ತಮ್ಮ ನೆಚ್ಚಿನ ತಾರೆಯರ ಹಾವ-ಭಾವ ಅವರ ಜೀವನ ಶೈಲಿಯನ್ನ ಅನುಸರಿಸುವವರು ಕೂಡ ಇದ್ದಾರೆ. ಆದರೂ ಚಿತ್ರತಾರೆಯರಲ್ಲಿ ತಾವು ಮಾಡಿದ್ದೇ ಸರಿ ಎನ್ನುವ ಅಹಂ ಇರುತ್ತೆ. ಇದಕ್ಕೆ ವಿಮಲ್ ಜಾಹೀರಾತಿಗಿಂತ ಮತ್ತೊಂದು ಉದಾಹರಣೆ ಇಲ್ಲ.
ಹೌದು, ವಿಮಲ್ ನ ಪ್ಯಾಕೇಟ್ ತುಂಡರಿಸಿ ಅಜಯ್ ದೇವಗನ್ ಮತ್ತು ಶಾರುಖ್ ಖಾನ್ ಬಾಯಲ್ಲಿ ಹೇಳಿ ಕೇಸರಿ ಎಂಬ ಡೈಲಾಗ್ ಹೊಂದಿರುವ ಜಾಹೀರಾತು ನೀವು ನೋಡಿಯೇ ನೋಡಿರುತ್ತೀರಾ. ಇಲ್ಲಿಯವರೆಗೆ ಈ ಜಾಹೀರಾತಿನ ವಿರುದ್ಧ ಅನೇಕರು ಸಮರ ಸಾರಿದ್ದಾರೆ. ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರನ್ನು ಮನಸೋ ಇಚ್ಚೆ ಟ್ರೋಲ್ ಕೂಡ ಮಾಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಬದಲಿಗೆ ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎನ್ನುವಂತೆ ಇವರಿಬ್ಬರ ಜೊತೆ ಟೈಗರ್ ಶ್ರಾಫ್ ಕೂಡ ಸೇರಿಕೊಂಡಿದ್ದಾರೆ. ಪಾನ್ ಮಸಾಲಾ ಜಾಹೀರಾತಿನ ಪ್ರಚಾರವನ್ನು ಮಾಡುತ್ತಿದ್ದಾರೆ.
ಸದ್ಯದ ಸಮಾಚಾರ ಏನೆಂದರೆ ಈ ಮೂವರಿಗೆ ಈಗ ಜೈಪುರದ ಜಿಲ್ಲಾ ಗ್ರಾಹಕ ಆಯೋಗ ನೊಟೀಸ್ ಜಾರಿ ಮಾಡಿದೆ. ಇಷ್ಟೇ ಅಲ್ಲ ಮೂವರ ಜೊತೆಯಲ್ಲಿ ಈ ಗುಟ್ಕಾ ತಯಾರಿಕಾ ಕಂಪನಿ ಜೆಬಿ ಇಂಡಸ್ಟ್ರೀಗೆ ಕೂಡ ಸಮನ್ಸ್ ಕಳುಹಿಸಲಾಗಿದ್ದು ಇದೇ ಮಾರ್ಚ್ 19ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆಯನ್ನು ನೀಡಲಾಗಿದೆ.
ಆರೋಗ್ಯಕ್ಕೆ ಹಾನಿಯುಂಟು ಮಾಡುವುದಲ್ಲದೇ ಅದರಲ್ಲಿ ಕೇಸರಿ ಇದೆ ಎಂದು ದಾರಿ ತಪ್ಪಿಸುವ ಹೇಳಿಕೆಗಳನ್ನು ಈ ಜಾಹೀರಾತಿನ ಮೂಲಕ ನೀಡಲಾಗುತ್ತಿದೆ ಎಂದು ಜೈಪುರದ ನಿವಾಸಿ ಯೋಗೆಂದ್ರ ಸಿಂಗ್ ಬಡಿಯಾಲ್ ಜಿಲ್ಲಾ ಗ್ರಾಹಕ ಆಯೋಗಕ್ಕೆ ನೀಡಿದ್ದ ದೂರಿನ ಹಿನ್ನೆಲೆ ಈ ನೋಟಿಸ್ನ ಜಾರಿ ಮಾಡಲಾಗಿದ್ದು, ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ನಿಯಮವನ್ನು ಈ ಜಾಹೀರಾತು ಉಲ್ಲಂಘಿಸುತ್ತದೆ ಸಾರ್ವಜನಿಕರ ದಾರಿಯನ್ನು ಕೂಡ ಈ ಜಾಹೀರಾತು ತಪ್ಪಿಸುತ್ತೆ ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಕೇಸರ್ ಉತ್ಪನ್ನ ಎಂದು ಪ್ರಚಾರ ಮಾಡಲಾಗುತ್ತೆ ಆದರೆ ವಾಸ್ತವದಲ್ಲಿ ಇದು ಗುಟ್ಕಾ ಎಂದು ಕಿಡಿಯನ್ನು ಕಾರಿದ್ದಾರೆ.
ಅಂದ್ಹಾಗೇ ಈ ತರ ಸ್ಟಾರ್ಸ್ಗಳಿಗೆ ನೋಟಿಸ್ ನೀಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ 2023ರಲ್ಲಿ ಮೋತಿಲಾಲ್ ಯಾದವ್ ಎಂಬ ವಕೀಲರು ಅಲಹಾಬಾದ್ನ ಹೈಕೋರ್ಟ್ನಲ್ಲಿ ಆರೋಗ್ಯಕ್ಕೆ ಹಾನಿಕಾರವಾದ ಉತ್ಪನ್ನಗಳನ್ನು ಚಿತ್ರರಂಗದ ತಾರೆಯರು ಪ್ರಚಾರ ಮಾಡುವುದನ್ನು ವಿರೋಧಿಸಿ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಸರ್ಕಾರದಿಂದ ಪ್ರಶಸ್ತಿಗಳನ್ನು ಪಡೆದವರು ಈ ರೀತಿ ಮಾಡುವುದು ಸೂಕ್ತವಲ್ಲ ಎಂಬ ವಾದ ಮಾಡಿದ್ದರು. ಆಗಲೂ ಕೂಡ ಇದೇ ವಿಮಲ್ ಜಾಹೀರಾತಿನ ವಿಚಾರಕ್ಕೆ ಅಜಯ್ ದೇವಗನ್, ಶಾರುಖ್ ಖಾನ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ವ್ಯತ್ಯಾಸವೆಂದರೆ ಆಗ ಇವರಿಬ್ಬರ ಜೊತೆ ಅಕ್ಷಯ್ ಕುಮಾರ್ ಇದ್ದರು. ಈಗ ಟೈಗರ್ ಶ್ರಾಫ್ ಇದ್ದಾರೆ ಅಷ್ಟೇ.


Click it and Unblock the Notifications











