ಡೈಪರ್ ಹಾಕಿಕೊಳ್ಳುವ ವಯಸ್ಸಿನಲ್ಲಿ ‘ಮೋದಿ ಜಪ’ ; ಮೊಮ್ಮಗಳ ಬೆಳಗಿನ ದಿನಚರಿ ಹೇಳಿ ಟ್ರೋಲ್ ಆದ ಸುನಿಲ್ ಶೆಟ್ಟಿ
ವ್ಯಕ್ತಿ ಪೂಜೆ ಪ್ರಜಾಪ್ರಭುತ್ವಕ್ಕೆ ಮಾರಕ. ಆದರೆ ಈಗೀಗ ವ್ಯಕ್ತಿಯ ವೈಭವಿಕರಣವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಅದರಲ್ಲಿಯೂ ರಾಜಕೀಯದಲ್ಲಿ ವ್ಯಕ್ತಿಯನ್ನು ದೇವರಂತೆ ಬಿಂಬಿಸಿ ಅವರ ಆಚಾರ-ವಿಚಾರ-ಆಲೋಚನೆಯನ್ನು ವಿಮರ್ಶೆ ಮಾಡದೇ ಒಪ್ಪಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ.
ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಚಿತ್ರರಂಗದಲ್ಲಿಯೂ ಹಲವರು ಓಲೈಕೆ ರಾಜಕಾರಣ ಮಾಡುತ್ತಾರೆ. ಇದಕ್ಕೆ ಅವರ ಮನದಲ್ಲಿರುವ ಭಯ ಕಾರಣನಾ..? ಅಥವಾ ಬೌದ್ದಿಕ ದಾಸ್ಯ ಕಾರಣನಾ..? ಗೊತ್ತಿಲ್ಲ. ಸುಖಾಸುಮ್ಮನೆ ಕುಂತಲ್ಲಿ ನಿಂತಲ್ಲಿ ಚಿತ್ರರಂಗದ ಕೆಲವರು ರಾಜಕಾರಣಿಗಳನ್ನು ಹೊಗಳುತ್ತಿರುತ್ತಾರೆ. ಉದಾಹರಣೆಗೆ ಸುನಿಲ್ ಶೆಟ್ಟಿ.

ಹೌದು, ಸಾಮಾನ್ಯವಾಗಿ ಬಾಲ್ಯದಲ್ಲೇ ಸಾಧನೆಗೈದ ಹಲವು ಮಕ್ಕಳ ಕಥೆಯನ್ನು ನಾವು ನೀವು ಕೇಳಿರುತ್ತೇವೆ. ಉದಾಹರಣೆಗೆ ಮೂರು ವರ್ಷದ ಬಾಲಕಿಯ ಅಸಾಧಾರಣ ಸ್ಮರಣ ಶಕ್ತಿ. ನಾಲ್ಕೇ ವರ್ಷಕ್ಕೆ ಗಣಿತದ ಜಟಿಲವಾದ ಲೆಕ್ಕ ಬಿಡಿಸಿದ ಬಾಲಕ. ಇತ್ಯಾದಿ.. ಇತ್ಯಾದಿ.
ಆದರೆ ಈಗ ಈ ಕಥೆಗಳನ್ನು ನಾವು ನೀವು ಮರೆಯಬೇಕು. ಯಾಕೆಂದರೆ.. ಮೂಲ್ಕಿ ಬಳಿಯ ಬಪ್ಪನಾಡು ನನ್ನ ಜನ್ಮಸ್ಥಾನ ಎನ್ನುವ ಮಂಗಳೂರು ಮೂಲದ ಸುನಿಲ್ ಶೆಟ್ಟಿ ಹೇಳಿದ ಕಥೆಯೇ ಹಾಗಿದೆ. ಆ ಪ್ರಕಾರ ಇವರ 15 ತಿಂಗಳ ಮೊಮ್ಮಗಳು ಬೇರೆ ಮಕ್ಕಳಂತೆ ಅಲ್ಲ.
ಬೇರೆ ಮಕ್ಕಳು ಬೆಳಗ್ಗೆ ಎದ್ದು ಆಟಿಕೆ ಸಾಮಾನು ಬೇಕೆಂದು ಹಠ ಮಾಡಿದರೆ, ಸುನಿಲ್ ಶೆಟ್ಟಿಯ ಮೊಮ್ಮಗಳು ತನ್ನ ಬೆಳಗಿನ ದಿನಚರಿಯನ್ನು ಮೋದಿ ನಾಮಸ್ಮರಣೆಯಿಂದ ಮಾಡುತ್ತಾಳಂತೆ. ಮುಂಜಾನೆ ಎದ್ದ ತಕ್ಷಣ ಮನೆಯಲ್ಲಿರುವ ಸಾಯಿಬಾಬಾ ಪುಸ್ತಕ ತೆರೆಯುವ ಮೊಮ್ಮಗಳು ಆ ನಂತರ ಸಾಯಿಬಾಬಾ ಫೋಟೊ ಪಕ್ಕದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭಾವ ಚಿತ್ರ ನೋಡಿ ಸಂಭ್ರಮಿಸುತ್ತಾಳಂತೆ.
ಮೋದಿ ಅವರ ಫೋಟೊ ಕಂಡು ಕೇವಲ ''ಮೋದಿ ಜಿ'' ಎಂದು ಕೂಗುವುದಲ್ಲದೇ ನೇರವಾಗಿ ಮನೆಯ ದೇವರ ಕೋಣೆಗೆ ಅಂಬೆಗಾಲಿಡುತ್ತಾ ಧಾವಿಸುತ್ತಾಳಂತೆ. ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಮುಂದೆ ನಿಂತು, "ಮೋದಿ ಜಿ" ಎಂದು ಜಪಿಸುತ್ತಾ, ಲಾಡು ನೈವೇದ್ಯ ಅರ್ಪಿಸುತ್ತಾಳಂತೆ.

ಇವೆಲ್ಲವನ್ನು ನವಿಕಾ ಕುಮಾರ್ ಅವರ ಎದುರು ಕುಳಿತು ಹೇಳಿ ಸದ್ಯ ಸುನಿಲ್ ಶೆಟ್ಟಿ ನಗೆಪಾಟಲಿಗೀಡಾಗಿದ್ದಾರೆ. ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಹಲವರ ಆಕ್ರೋಶಕ್ಕೆ ಕೂಡ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣ ತೆರೆದರೆ ಸಾಕು ಅಲ್ಲಿ ಕೇವಲ ಸುನಿಲ್ ಶೆಟ್ಟಿ ಅವರ ಈ ವ್ಯಕ್ತಿ ಪೂಜೆ ಕಣ್ಣಿಗೆ ಕಾಣಿಸುತ್ತಿದೆ.
ಹೀಗಾಗಿಯೇ ರಾಜಕೀಯ ಶಾಸ್ತ್ರದಲ್ಲಿ ಪಿಎಚ್ಡಿ ಮಾಡಿದವರಿಗೂ ಬರದ ಇಂತಹ ದೇಶಭಕ್ತಿ ಮತ್ತು ರಾಜಕೀಯ ಪ್ರಜ್ಞೆ ಕೇವಲ 15 ತಿಂಗಳ ಮಗುವಿಗೆ ಬಂದಿರುವುದು ನಿಜಕ್ಕೂ ಪವಾಡವೇ ಸರಿ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಹಲವರು, ಸುನಿಲ್ ಶೆಟ್ಟಿಯ "ಮೋದಿ ಭಕ್ತಿ"ಗೆ ನಮನ ಮಾಡುತ್ತಿದ್ಧಾರೆ.
15 ತಿಂಗಳ ಮಗುವಿಗೆ ಮಣ್ಣು ತಿನ್ನಬಾರದು ಎಂಬ ಕನಿಷ್ಠ ಜ್ಞಾನವೂ ಇರುವುದಿಲ್ಲ, ಟಿವಿ ರಿಮೋಟ್ ಯಾವುದು ಫೋನ್ ಯಾವುದು ಎನ್ನುವುದು ಕೂಡ ಗೊತ್ತಿರುವುದಿಲ್ಲ. ಆದರೆ, ಸುನಿಲ್ ಶೆಟ್ಟಿ ಅವರ ಈ ಕಥೆಯ ಮುಂದೆ ವಿಜ್ಞಾನ, ಜ್ಞಾನಗಳೆಲ್ಲಾ ಯಾವ ಲೆಕ್ಕ ಹೇಳಿ? ಎಂದು ಪ್ರಶ್ನೆ ಮಾಡುತ್ತಿರುವ ಹಲವರು ಇಷ್ಟೊಂದು ಚಮಚಾಗಿರಿಯನ್ನು ಮಾಡಬಾರದಿತ್ತು ಎನ್ನುತ್ತಿದ್ದಾರೆ.
ಇನ್ನು ಕೆಲವರು ವ್ಯಕ್ತಿಯ ಓಲೈಕೆಗಾಗಿ, ಐಟಿ/ಇಡಿ ದಾಳಿಯಿಂದ ತಪ್ಪಿಸಿಕೊಳ್ಳಲು 15 ತಿಂಗಳ ಮಗುವನ್ನು ಉಪಯೋಗಿಸಬಾರದಿತ್ತು ಎನ್ನುತ್ತಿದ್ದಾರೆ. ರಾಜಕೀಯ ನಿಷ್ಠೆಯನ್ನು ಸಾಬೀತುಪಡಿಸಲು ಅಂಬೆಗಾಲಿಡುವ ಮಗುವನ್ನು ಬಳಸಿಕೊಳ್ಳುವುದು ಕೂಡ ಒಂದು ವಿಭಿನ್ನವಾದ ಪಿಆರ್ (PR) ತಂತ್ರ ಎಂದು ಕೂಡ ಕೆಲವರು ವಿಶ್ಲೇಷಿಸುತ್ತಿದ್ದಾರೆ.
ಒಟ್ನಲ್ಲಿ ಮಗುವಿನ ತೊದಲು ನುಡಿಯಲ್ಲಿ ಸುನಿಲ್ ಶೆಟ್ಟಿಗೆ ''ಮೋದಿ ಭಕ್ತಿ'' ಕಂಡಿದೆ. ಅದನ್ನೇ ''ದೇಶ ಭಕ್ತಿ'' ಮಾತ್ರ ಅಲ್ಲ ''ಮ್ಯಾಜಿಕಲ್ ಶಕ್ತಿ'' ಎಂದು ಸುನಿಲ್ ಶೆಟ್ಟಿ ಅಂದುಕೊಂಡಿದ್ದಾರೆ. ಸಂದರ್ಶನದಲ್ಲಿ ಖುದ್ದು ಸುನಿಲ್ ಶೆಟ್ಟಿ ಈ ಮಾತನ್ನು ಕೂಡ ಹೇಳಿದ್ದಾರೆ.


Click it and Unblock the Notifications