ಅವನಿನ್ನೂ ಮಗು: ಶಾರುಖ್ ಮಗನ ಬೆಂಬಲಕ್ಕೆ ಸುನಿಲ್ ಶೆಟ್ಟಿ
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಎನ್ಸಿಬಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದಾರೆ. ಆರ್ಯನ್ ವಿರುದ್ದ ಅಕ್ರಮ ಡ್ರಗ್ಸ್ ಸೇವನೆ ಆರೋಪವನ್ನು ಎನ್ಸಿಬಿ ಹೊರಿಸಿದೆ.
ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿರುವ ಆರ್ಯನ್ ಖಾನ್ ಅನ್ನು ಇಂದೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದು, ಎನ್ಸಿಬಿಯು ಆರ್ಯನ್ ಅನ್ನು ತನ್ನ ವಶಕ್ಕೆ ಪಡೆದುಕೊಳ್ಳಲಿದೆ. ಆರ್ಯನ್ ಕೆಲವು ದಿನವಾದರೂ ಜೈಲಿನಲ್ಲಿ ಕಳೆಯಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಮಧ್ಯೆ ಆರ್ಯನ್ ಬೆಂಬಲಕ್ಕೆ ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ ನಿಂತಿದ್ದಾರೆ. ಕನ್ನಡದ 'ಪೈಲ್ವಾನ್' ಸಿನಿಮಾದಲ್ಲಿಯೂ ನಟಿಸಿರುವ ಸುನಿಲ್ ಶೆಟ್ಟಿ, 'ಆರ್ಯನ್ ಇನ್ನೂ ಮಗು ಅವನಿಗೆ ತುಸು ಉಸಿರಾಡಲು ಅವಕಾಶ ಕೊಡಿ' ಎಂದು ಮನವಿ ಮಾಡಿದ್ದಾರೆ.

''ಯಾವುದೇ ಕಡೆ ರೇಡ್ ಆದಾಗ ಅಲ್ಲಿನ ಎಲ್ಲರನ್ನೂ ವಶಕ್ಕೆ ಪಡೆದುಕೊಳ್ಳಲಾಗುತ್ತದೆ. ಈಗಲೂ ಹಾಗೆಯೇ ಆಗಿದೆ. ಆ ಮಗು ಡ್ರಗ್ಸ್ ಸೇವಿಸಿತ್ತು, ಆ ಮಗು ಹಾಗೆ ಮಾಡಿತ್ತು, ಈ ಮಗು ಹೀಗೆ ಮಾಡಿದೆ ಎಂದೆಲ್ಲ ಹೇಳಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದೆ, ಆ ಮಗುವಿಗೆ (ಆರ್ಯನ್) ಸ್ವಲ್ಪ ಉಸಿರಾಡಲು ಅವಕಾಶ ಮಾಡಿಕೊಡಿ'' ಎಂದಿದ್ದಾರೆ ಸುನಿಲ್ ಶೆಟ್ಟಿ.
ಬಾಲಿವುಡ್ ಮೇಲೆ ಮಾಧ್ಯಮದವರು ಮುರಿದು ಬೀಳುವುದು ಸಾಮಾನ್ಯ ಎಂಬಂತಾಗಿದೆ. ಯಾವಾಗಲೇ ಬಾಲಿವುಡ್ ಉದ್ಯಮದಲ್ಲಿ ಸಣ್ಣದಾಗಿ ಏನಾದರೂ ಆದರೂ ಅದನ್ನೇ ದೊಡ್ಡದು ಮಾಡಿ ಹೇಳಲಾಗುತ್ತದೆ. ಇದರಿಂದ ಸಾಮಾನ್ಯ ಜನ 'ಇದು ನಿಜವೇನೋ?' ಎಂದುಕೊಳ್ಳುತ್ತಾರೆ. ಈಗ ನಡೆದಿರುವ ಘಟನೆಯಲ್ಲಿ ನಿಜವಾದ ವರದಿಗಳು ಹೊರಗೆ ಬರಲಿ. ಅಲ್ಲಿಯವರೆಗೆ ಆ ಮಗುವನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ'' ಎಂದಿದ್ದಾರೆ ಸುನಿಲ್ ಶೆಟ್ಟಿ.
ಸುನಿಲ್ ಶೆಟ್ಟಿ ಮತ್ತು ಶಾರುಖ್ ಖಾನ್ ಬಹಳ ಹಳೆಯ ಗೆಳೆಯರು 'ಮೈ ಹೂ ನಾ' ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದಾರೆ. ಶಾರುಖ್ ಖಾನ್ ನಟನೆಯ 'ಓಂ ಶಾಂತಿ ಓಂ' ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಸುನಿಲ್ ಶೆಟ್ಟಿ ತನ್ನ ಗೆಳೆಯನ ಮಗನ ಪರವಾಗಿ ನಿಂತಿದ್ದಾರೆ.
ಮುಂಬೈ ತೀರಕ್ಕೆ ಸಮೀಪದಲ್ಲಿ ಸಮುದ್ರ ಮಧ್ಯೆ ಐಶಾರಾಮಿ ಕ್ರೂಸ್ ಶಿಪ್ನಲ್ಲಿ ಆರ್ಯನ್ ಮತ್ತು ಗೆಳೆಯರು ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ. ಪಾರ್ಟಿ ಮಾಡುತ್ತಿರುವಾಗ ದಾಳಿ ನಡೆಸಿದ ಎನ್ಸಿಬಿ ಹಲವರನ್ನು ವಶಕ್ಕೆ ಪಡೆದಿತ್ತು. ಹಲವು ಗಂಟೆಗಳ ವಿಚಾರಣೆ ಬಳಿಕ ಇದೀಗ ಶಾರುಖ್ ಖಾನ್ ಪುತ್ರ ಹಾಗೂ ಇನ್ನಿಬ್ಬರನ್ನು ಎನ್ಸಿಬಿ ಬಂಧಿಸಿ, ಎಫ್ಐಆರ್ ದಾಖಲಿಸಿದೆ.


Click it and Unblock the Notifications











