ಬೆಂಗಳೂರಿನ ಜನರ ಸಹಾಯಕ್ಕೆ ಧಾವಿಸಿದ ಸುನಿಲ್ ಶೆಟ್ಟಿ
ದೇಶದಾದ್ಯಂತ ಕೊರೊನಾ ಎರಡನೇ ತೀವ್ರವಾಗಿ ತಟ್ಟಿದೆ. ಅದರಲ್ಲಿಯೂ ಮುಂಬೈ ಮತ್ತು ಬೆಂಗಳೂರುಗಳಲ್ಲಿ ಪರಿಸ್ಥಿತಿ ವಿಷಮಕ್ಕೆ ಹೋಗಿದೆ. ಮುಂಬೈ ಮತ್ತು ಬೆಂಗಳೂರುಗಳಲ್ಲಿ ಆಸ್ಪತ್ರೆ ಬೆಡ್ ಮತ್ತು ಆಮ್ಲಜನಕ್ಕೆ ತೀವ್ರ ತತ್ವಾರವಾಗಿದೆ.
ಆಮ್ಲಜನಕ ಅಲಭ್ಯತೆ ಸಮಸ್ಯೆ ನೀಗಿಸಲು ಸರ್ಕಾರದ ಜೊತೆಗೆ ಹಲವು ಸೆಲೆಬ್ರಿಟಿಗಳು ಸಹ ಕೈಜೋಡಿಸುತ್ತಿದ್ದು, ಇದೀಗ ಮಂಗಳೂರು ಮೂಲದವರೇ ಆಗಿರುವ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ಉಚಿತವಾಗಿ ಆಮ್ಲಜನಕ ಸಾಂದ್ರಕಗಳನ್ನು ನೀಡಲು ಮುಂದಾಗಿದ್ದಾರೆ.
ಎನ್ಜಿಓ ಜೊತೆ ಕೈಜೋಡಿಸಿರುವ ಸುನಿಲ್ ಶೆಟ್ಟಿ ಆಮ್ಲಜನಕ ಸಾಂದ್ರಕ ಯಂತ್ರ (ಆಕ್ಸಿಜನ್ ಕಾನ್ಸನ್ಟ್ರೇಟರ್) ಗಳನ್ನು ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಈ ಯಂತ್ರಗಳ ಅತ್ಯಂತ ಹೆಚ್ಚು ಅವಶ್ಯಕತೆ ಇರುವ ಬೆಂಗಳೂರು ಹಾಗೂ ಮುಂಬೈಗಳಲ್ಲಿ ಈ ಯಂತ್ರಗಳನ್ನು ವಿತರಿಸಲು ಮುಂದಾಗಿದ್ದಾರೆ.

ಕೆವಿಎನ್ ಫೌಂಡೇಶನ್ ಜೊತೆ ಕೈಜೋಡಿಸಿರುವ ಸುನಿಲ್ ಶೆಟ್ಟಿ, 'ಮಿಷನ್ ಮಿಲಿಯನ್ ಏರ್' ಹೆಸರಿನ ಅಭಿಯಾನ ಆರಂಭಿಸಿದ್ದು ಅವಶ್ಯಕತೆ ಇರುವವರ ಮನೆಗಳಿಗೆ ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ತಲುಪಿಸುವ ಯೋಜನೆ ಹಾಕಿಕೊಂಡಿದ್ದಾರೆ. ಇದಕ್ಕೆ 'ಫೀಡ್ ಬೆಂಗಳೂರು', 'ಫೀಡ್ ಮುಂಬೈ' ಎಂಬ ಟ್ವಿಟ್ಟರ್ ಹ್ಯಾಷ್ಟ್ಯಾಗ್ ಹಾಗೂ ಖಾತೆಯನ್ನು ತೆರೆಯಲಾಗಿದೆ.
ಕನ್ನಡದ ಪೈಲ್ವಾನ್ ಸಿನಿಮಾದಲ್ಲಿ ನಟಿಸಿರುವ ಸುನಿಲ್ ಶೆಟ್ಟಿಗೆ ಕರ್ನಾಟಕದ ಮೇಲೆ ವಿಶೇಷ ಮಮತೆ ಇದೆ. ಸುನಿಲ್ ಶೆಟ್ಟಿ ಮೂಲತಃ ಮಂಗಳೂರು ಮೂಲದವರು.
Recommended Video
ಇಂದಷ್ಟೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಅವರ ಪತ್ನಿ ಟ್ವಿಂಕಲ್ ಖನ್ನಾ ಅವರುಗಳು 100 ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ಉಚಿತವಾಗಿ ನೀಡಿದ್ದಾರೆ. ಸಲ್ಮಾನ್ ಖಾನ್ ಅವರು ಕೊರೊನಾ ವಾರಿಯರ್ಗಳಿಗೆ ಉಚಿತವಾಗಿ ಆಹಾರ ಸರಬರಾಜು ಮಾಡುತ್ತಿದ್ದಾರೆ. ಸೋನು ಸೂದ್ ಅವರು ಬೆಂಗಳೂರು ಪೊಲೀಸರಿಗಾಗಿ ಆಮ್ಲಜನಕ ಸಾಂದ್ರಕ ಯಂತ್ರ ನೀಡಿದ್ದಾರೆ. ಹೀಗೆ ಹಲವಾರು ನಟರು ತಮ್ಮ ಕೈಲಾದ ಸಹಾಯಗಳನ್ನು ಮಾಡುತ್ತಲೇ ಇದ್ದಾರೆ.


Click it and Unblock the Notifications











