ರಣ್ಬೀರ್-ಯಶ್ 'ರಾಮಾಯಣ' ಚಿತ್ರಕ್ಕೆ ಹನುಮಂತ ಸಿಕ್ಕಿಬಿಟ್ಟ; ಪಾತ್ರದ ಬಗ್ಗೆ ಹೇಳಿದ್ದೇನು?
ರಾಕಿಂಗ್ ಸ್ಟಾರ್ ಯಶ್ ಈಗಾಗಲೇ ಬಾಲಿವುಡ್ ಪ್ರೇಕ್ಷಕರಿಗೆ ಪರಿಚಿತರಾಗಿಬಿಟ್ಟಿದ್ದಾರೆ. ಇದೀಗ 'ರಾಮಾಯಣ' ಚಿತ್ರದಲ್ಲಿ ರಾವಣನಾಗಿ ಬಾಲಿವುಡ್ ಅಂಗಳಕ್ಕೆ ಅಧಿಕೃತವಾಗಿ ಕಾಲಿಡುತ್ತಿದ್ದಾರೆ. ಎರಡು ಭಾಗಗಳಾಗಿ ಚಿತ್ರ ತೆರೆಗೆ ಬರಲಿದೆ. ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಶ್ರೀರಾಮನಾಗಿ ರಣ್ಬೀರ್ ಕಪೂರ್ ಹಾಗೂ ಸೀತಾಮಾತೆಯಲ್ಲಿ ಸಾಯಿಪಲ್ಲವಿ ನಟಿಸುತ್ತಿದ್ದಾರೆ. ಈಗಾಗಲೇ ಮೊದಲ ಭಾಗದ ಬಹುತೇಕ ಚಿತ್ರೀಕರಣ ಪೂರ್ಣವಾಗಿದೆ. ಶೀಘ್ರದಲ್ಲೇ ಎರಡನೇ ಭಾಗ ಸೆರೆ ಹಿಡಿಯಲು ಚಿತ್ರತಂಡ ಮುಂದಾಗಿದೆ. ಪಾರ್ಟ್-1ನಲ್ಲಿ ರಾವಣನ ಪಾತ್ರ ಚಿಕ್ಕದಾಗಿ ಇರುತ್ತದೆ. ಎರಡನೇ ಭಾಗದಲ್ಲಿ ಯಶ್ ಆರ್ಭಟ ಜೋರಾಗಿ ಇರುತ್ತದೆ ಎನ್ನಲಾಗ್ತಿದೆ.

ನಿತೇಶ್ ತಿವಾರಿ ರಾಮಾಯಣ ಕಾವ್ಯವನ್ನು ತೆರೆಗೆ ತರುವ ಪ್ರಯತ್ನ ಮಾಡುತ್ತಾರೆ. ಈಗಾಗಲೇ ಸಾಕಷ್ಟು ಬಾರಿ ರಾಮಾಯಣ ಕಾವ್ಯವನ್ನು ಕಟ್ಟಿಕೊಟ್ಟಿದ್ದರೂ ಮತ್ತೊಮ್ಮೆ ಹೊಸ ರೂಪದಲ್ಲಿ ಕಥೆ ಪ್ರೇಕ್ಷಕರ ಮುಂದೆ ಬರಲಿದೆ. ಇವತ್ತಿನ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಿನಿಮಾ ರೂಪ ತಳೆಯುತ್ತಿದೆ.
'ರಾಮಾಯಣ' ಚಿತ್ರದಲ್ಲಿ ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದೀಗ ಸ್ವತಃ ಸನ್ನಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಮೊದಲ ಭಾಗದ ಚಿತ್ರೀಕರಣ ಮುಗಿಸಿರುವುದಾಗಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಸನ್ನಿ ಡಿಯೋಲ್ ರಾಮಾಯಣ ಚಿತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಹೊಸ ರೀತಿಯಲ್ಲಿ ಸಿನಿಮಾ ತೆರೆಗೆ ಬರ್ತಿದೆ ಎಂದು ವಿವರಿಸಿದ್ದಾರೆ.
"ರಾಮಾಯಣ ಬಹಳ ದೀರ್ಘವಾದ ಪ್ರಾಜೆಕ್ಟ್. ಕಾರಣ ಅವರು 'ಅವತಾರ್' ಹಾಗೂ 'ಪ್ಲಾನೆಟ್ ಆಫ್ ಏಪ್ಸ್' ರೀತಿಯಲ್ಲಿ ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ. ಆ ತಂತ್ರಜ್ಞರೆಲ್ಲಾ ಈ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ನಿರ್ದೇಶಕರಿಗೆ ಸಿನಿಮಾ ಹೇಗಿರಬೇಕು, ಪಾತ್ರಗಳು ಹೇಗಿರಬೇಕು ಎಂಬ ಸ್ಪಷ್ಟನೆ ಇದೆ" ಎಂದು ಸನ್ನಿ ಡಿಯೋಲ್ ಹೇಳಿದ್ದಾರೆ.
ಇತ್ತೀಚೆಗೆ ಕೆಲ ಪೌರಾಣಿಕ ಹಾಗೂ ಐತಿಹಾಸಿಕ ಸಿನಿಮಾಗಳಲ್ಲಿ ಪಾತ್ರಗಳನ್ನು ವಿಭಿನ್ನವಾಗಿ ಚಿತ್ರಿಸುವ ಪ್ರಯತ್ನ ನಡೆದಿತ್ತು. ಮುಖ್ಯವಾಗಿ ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಸಿನಿಮಾ ಬಹಳ ಟೀಕೆಗೆ ಗುರಿಯಾಗಿತ್ತು. ಸನ್ನಿ ಡಿಯೋಲ್ ಪರೋಕ್ಷವಾಗಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. "ರಾಮಾಯಣ ಚಿತ್ರದಲ್ಲಿ ಸ್ಪೆಷಲ್ ಎಫೆಕ್ಟ್ಸ್ ಇರುತ್ತದೆ. ಆದರೆ ಅದು ಬಹಳ ನೈಜವಾಗಿರುತ್ತದೆ. ನಿಜಕ್ಕೂ ಹೇಳ್ತೀನಿ ಈ ಸಿನಿಮಾ ಅದ್ಭುತವಾಗಿ ಇರಲಿದ್ದು ಎಲ್ಲರೂ ಇಷ್ಟಪಡುತ್ತಾರೆ" ಎಂದು ಸನ್ನಿ ಡಿಯೋಲ್ ಹೇಳಿದ್ದಾರೆ.
ತಾವು ಹನುಮಂತನ ಪಾತ್ರ ಮಾಡಿರುವ ಬಗ್ಗೆ ಸನ್ನಿ ಡಿಯೋಲ್ ಮಾತನಾಡಿಲ್ಲ. ಆದರೆ ಅದೇ ಪಾತ್ರದಲ್ಲಿ ಅವರು ನಟಿಸಿದ್ದಾರೆ ಎನ್ನಲಾಗ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ. ಇನ್ನು ರಾವಣನಾಗಿ ನಟಿಸುವುದರ ಜೊತೆಗೆ ಯಶ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಈ ಮೂಲಕ ಬಾಲಿವುಡ್ನಲ್ಲಿ ದೊಡ್ಡದಾಗಿ ಯಶ್ ಅಡಿ ಇಟ್ಟಿದ್ದಾರೆ.
'ರಾಮಾಯಣ' ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ ಎನ್ನುವ ಬಗ್ಗೆ ಬಹಳ ಚರ್ಚೆ ನಡೀತಿದೆ. ಕೈಕೇಯಿ ಆಗಿ ಲಾರಾ ದತ್ತ, ಮಂಥರೆ ಆಗಿ ಶೀಬಾ ಚಡ್ಡಾ, ಲಕ್ಷ್ಮಣನಾಗಿ ರವಿ ದುಬೆ, ಕೌಸಲ್ಯೆ ಆಗಿ ಇಂದ್ರ ಕೃಷ್ಣನ್, ದಶರಥನಾಗಿ ಅರುಣ್ ಗೋವಿಲ್, ಇಂದ್ರದೇವನಾಗಿ ಕುನಾಲ್ ಕಪೂರ್, ಶೂರ್ಪನಖಿಯಾಗಿ ರಕುಲ್ ಪ್ರೀತ್ಸಿಂಗ್ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ.
2026ರ ದೀಪಾವಳಿ ಸಂಭ್ರಮದಲ್ಲಿ 'ರಾಮಾಯಣ' ಪಾರ್ಟ್-1 ತೆರೆಗೆ ಬರಲಿದೆ. ಬಳಿಕ 2027ರ ದೀಪಾವಳಿಗೆ ಪಾರ್ಟ್-2 ಬಿಡುಗಡೆ ಆಗಲಿದೆ. ಇನ್ನು ರಣ್ಬೀರ್ ಕಪೂರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಫಸ್ಟ್ ಪಾರ್ಟ್ ಚಿತ್ರೀಕರಣ ಮುಗಿಸಿದ್ದೀನಿ, ಆದಷ್ಟು ಬೇಗ ಎರಡನೇ ಭಾಗದ ಚಿತ್ರೀಕರಣ ಶುರುವಾಗುತ್ತದೆ ಎಂದಿದ್ದರು. ರಾವಣನಾಗಿ ಯಶ್ ನಟಿಸಿರುವುದರಿಂದ ಸ್ಯಾಂಡಲ್ವುಡ್ನಲ್ಲಿ ಕೂಡ 'ರಾಮಾಯಣ' ಸಿನಿಮಾ ಕುತೂಹಲ ಮೂಡಿಸಿದೆ.


Click it and Unblock the Notifications











