ಶಾರುಖ್ ಖಾನ್ ಮಾಡಿರುವ ತಪ್ಪಾದರೂ ಏನು? ಸುಪ್ರೀಂಕೋರ್ಟ್ ಪ್ರಶ್ನೆ
ಶಾರುಖ್ ಖಾನ್ ವಿರುದ್ಧ 2017 ರಲ್ಲಿ ದಾಖಲಾಗಿದ್ದ ಪ್ರಕರಣವೊಂದನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಅಲ್ಲದೆ, 'ಸೆಲೆಬ್ರಿಟಿಗಳಿಗೂ ಹಕ್ಕುಗಳಿವೆ' ಎಂದು ಒತ್ತಿ ಹೇಳಿದೆ.
2017 ರಲ್ಲಿ ಶಾರುಖ್ ಖಾನ್ ಸಿನಿಮಾ ಪ್ರಚಾರದ ವೇಳೆ ಉಂಟಾದ ನೂಕು-ನುಕ್ಕಲಿಗನಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಮುಖಂಡ ಜಿತೇಂದರ್ ಸೋಲಂಕಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
2017 ರಲ್ಲಿ ಶಾರುಖ್ ಖಾನ್ ನಟನೆಯ 'ರಯೀಸ್' ಸಿನಿಮಾದ ಪ್ರಚಾರವನ್ನು ಗುಜರಾತ್ನ ವಡೋದರಾ ರೈಲ್ವೆ ಸ್ಟೇಶನ್ನಲ್ಲಿ ಮಾಡುವಾಗ ಉಂಟಾದ ನೂಕು-ನುಗ್ಗಲಿನಿಂದಾಗಿ ವ್ಯಕ್ತಿಯೊಬ್ಬ ನಿಧನ ಹೊಂದಿದ್ದ. ಇದರ ವಿರುದ್ಧ ಗುಜರಾತ್ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಾಗಿತ್ತು. ಹೈಕೋರ್ಟ್ನಲ್ಲಿ ಪ್ರಕರಣವನ್ನು ರದ್ದು ಮಾಡಲಾಯಿತು.
ಆದರೆ ಪ್ರಕರಣ ದಾಖಲಿಸಿದ್ದ ಕಾಂಗ್ರೆಸ್ ಮುಖಂಡ ಜಿತೇಂದರ್ ಸೋಲಂಕಿ, ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಲ್ಲಿಯೂ ಅವರಿಗೆ ಹಿನ್ನಡೆ ಉಂಟಾಗಿದ್ದು, ಶಾರುಖ್ ಖಾನ್ ವಿರುದ್ಧ ಪ್ರಕರಣವನ್ನು ವಜಾ ಮಾಡಲಾಗಿದೆ.

ಶಾರುಖ್ ಖಾನ್ ಮಾಡಿರುವ ತಪ್ಪಾದರೂ ಏನು?
''ಈ ವ್ಯಕ್ತಿ (ಶಾರುಖ್ ಖಾನ್) ಮಾಡಿರುವ ತಪ್ಪಾದರೂ ಏನು? ಈತ ಸೆಲೆಬ್ರಿಟಿ ಆಗಿರುವುದೇ? ಸೆಲೆಬ್ರಿಟಿಗಳಿಗೂ ಹಕ್ಕುಗಳಿವೆ'' ಎಂದು ಪ್ರಕರಣದ ವಿಚಾರಣೆ ಆಲಿಸಿದ ಜಂಟಿ ನ್ಯಾಯಮೂರ್ತಿಗಳಾದ ಅಜಯ್ ರೊಹ್ಟಗಿ ಮತ್ತು ಸಿಟಿ ರವಿಕುಮಾರ್ ಹೇಳಿದ್ದಾರೆ. ಮುಂದುವರೆದು, ಎಲ್ಲರ ಭದ್ರತೆಯ ಜವಾಭ್ದಾರಿಯನ್ನು ಶಾರುಖ್ ಖಾನ್ ಹೊರಲು ಸಾಧ್ಯವಿಲ್ಲ. ಯಾರಾದರೂ ರೈಲಿನಲ್ಲಿ ಪ್ರಯಾಣ ಮಾಡಬೇಕಾದರೆ ಇತರರ ಜೀವದ ಜವಾಬ್ದಾರಿಯನ್ನು ಹೊರಲು ಹೇಗೆ ಸಾಧ್ಯವಿಲ್ಲವೊ ಹಾಗೆಯೇ ಶಾರುಖ್ ಖಾನ್ ಸಹ ಇತರರ ಜೀವಕ್ಕೆ ಜವಾಬ್ದಾರರಾಗಿರುವುದಿಲ್ಲ ಎಂದಿದ್ದಾರೆ.

ಶಾರುಖ್ ಖಾನ್ಗೂ ಹಕ್ಕುಗಳಿವೆ: ನ್ಯಾಯಾಲಯ
ಇತರ ಸಾರ್ವಜನಿಕರಿಗೆ ರೈಲಿನಲ್ಲಿ ಪ್ರಯಾಣಿಸುವ ಹಕ್ಕು ಹೇಗಿದೆಯೋ ಹಾಗೆಯೇ ಶಾರುಖ್ ಖಾನ್ಗೂ ಹಕ್ಕು ಇದೆ'' ಎಂದಿದ್ದಾರೆ. ''ಶಾರುಖ್ ಖಾನ್ ಸೆಲೆಬ್ರಿಟಿ ಹಾಗೆಂದು ಎಲ್ಲವನ್ನೂ ಆತ ಕಂಟ್ರೋಲ್ ಮಾಡಬೇಕು, ಎಲ್ಲದರ ಜವಾಬ್ದಾರಿ ಹೊರಬೇಕು ಎಂಬುದು ಸರಿಯಲ್ಲ. ಈ ವಿಷಯವನ್ನು ಇಲ್ಲಿಗೆ ಬಿಟ್ಟು ಇನ್ನೂ ಮುಖ್ಯವಾದ ವಿಷಯಗಳ ಬಗ್ಗೆ ಗಮನ ಹರಿಸೋಣ'' ಎಂದಿದ್ದಾರೆ.

ರೈಲಿನಲ್ಲಿ ಪ್ರಯಾಣಿಸಿ ಪ್ರಚಾರ ಮಾಡಿದ್ದ ಶಾರುಖ್ ಖಾನ್
2017 ರಲ್ಲಿ 'ರಯೀಸ್' ಸಿನಿಮಾದ ಪ್ರಚಾರಕ್ಕಾಗಿ ಮುಂಬೈನಿಂದ ದೆಹಲಿಗೆ ಕ್ರಾಂತಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ರೈಲು ವಡೋಧರಾಕ್ಕೆ ಬಂದಾಗ ಶಾರುಖ್ ಖಾನ್ ಅನ್ನು ನೋಡಲು ಜನ ಮುಗಿಬಿದ್ದರು. ಈ ಸಮಯ ಶಾರುಖ್ ಖಾನ್ ರೈಲಿನಿಂದ ಸ್ಮೈಲಿ ಬಾಲ್ಗಳು, ಟಿ ಶರ್ಟ್ಗಳನ್ನು ಜನರತ್ತ ಎಸೆದರು. ಅದನ್ನು ಎತ್ತಿಕೊಳ್ಳಲು ಹೋಗಿ ಇನ್ನಷ್ಟು ಕಾಲ್ತುಳಿತವಾಯ್ತು. ಅದೇ ಸಮಯದಲ್ಲಿ ಫರ್ಹೀದ್ ಖಾನ್ ಪಠಾಣ್ ಎಂಬ ಸ್ಥಳೀಯ ರಾಜಕಾರಣಿಯೊಬ್ಬರು ಸಹ ಕಾಲ್ತುಳಿಕ್ಕೆ ಸಿಲುಕಿದ್ದರು. ಗಾಯಗೊಂಡಿದ್ದ ಫರ್ಹೀದ್ ಖಾನ್ ಪಠಾಣ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಅವರಿಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಅವರು ಮೃತಪಟ್ಟಿದ್ದರು.

ಶಾರುಖ್ ಖಾನ್ ವಿರುದ್ಧ ದೂರು ದಾಖಲಾಗಿತ್ತು
ಘಟನೆ ಸಂಬಂಧ ಜಿತೇಂಧರ್ ಸೋಲಂಕಿ ಎಂಬುವರು ಶಾರುಖ್ ಖಾನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಯತ್ನಿಸಿದ್ದರು. ಆದರೆ ಅವರ ದೂರನ್ನು ಪೊಲೀಸರು ಸ್ವೀಕರಿಸಿರಲಿಲ್ಲ. ಆಗ ವಡೋಧರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಜಿತೇಂಧರ್, ಶಾರುಖ್ ಖಾನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸುವಂತೆ ಮನವಿ ಸಲ್ಲಿಸಿದ್ದರು. ಅಂತೆಯೇ ಖಾನ್ ವಿರುದ್ಧ ಸೆಕ್ಷನ್ 336, 337, 338 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತಮ್ಮ ಮೇಲಿ ದಾಖಲಾಗಿಸಿರುವ ಪ್ರಕರಣವನ್ನು ರದ್ದು ಮಾಡಬೇಕೆಂದು ಶಾರುಖ್ ಖಾನ್ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು. ಗುಜರಾತ್ ಹೈಕೋರ್ಟ್, ಪ್ರಕರಣವನ್ನು ವಜಾ ಮಾಡಿತು. ನಂತರ ಗುಜರಾತ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಜಿತೇಂಧರ್ ಸೋಲಂಕಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು ಅಲ್ಲಿಯೂ ಅವರಿಗೆ ಹಿನ್ನಡೆ ಆಗಿದೆ.


Click it and Unblock the Notifications











