ಸುಶಾಂತ್ ಸಿಂಗ್ ಸಾವಿನ ಪ್ರಕರಣ: 'ರಿಪಬ್ಲಿಕ್ ಟಿವಿ' ವರದಿಯನ್ನು ಪ್ರಶ್ನಿಸಿದ ಹೈಕೋರ್ಟ್
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಬಿತ್ತರಿಸಿದ ವರದಿಯನ್ನು ಮುಂಬೈ ಹೈಕೋರ್ಟ್ ಪ್ರಶ್ನೆ ಮಾಡಿದೆ. ತನಿಖೆ ನಡೆಯುತ್ತಿರುವ ಪ್ರಕರಣದಲ್ಲಿ ಯಾರನ್ನು ಬಂಧಿಸಬೇಕೆಂದು ವೀಕ್ಷಕರನ್ನು ಕೇಳುವುದು ಮತ್ತು ಒಬ್ಬ ವ್ಯಕ್ತಿಯ ಹಕ್ಕುಗಳನ್ನು ಉಲ್ಲಂಘಿಸುವುದನ್ನು ತನಿಖಾ ವರದಿಗಾರಿಕೆ ಎಂದು ಕರೆಯುತ್ತೀರಾ? ಎಂದು ಹೈಕೋರ್ಟ್ ರಿಪಬ್ಲಿಕ್ ಟಿವಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಈ ಪ್ರಕರಣದಲ್ಲಿ ಬೇಜವಾಬ್ದಾರಿ ವರದಿ ಪ್ರಸಾರ ಮಾಡಿದ ಚಾನಲ್ ವಿರುದ್ಧ ದೂರು ಯಾಕೆ ದಾಖಲಿಸಿಲ್ಲ, ಸುಮೋಟೋ ಕ್ರಮ ಯಾಕೆ ಕೈಗೊಂಡಿಲ್ಲ ಎಂದು ನ್ಯೂಸ್ ಬ್ರಾಡ್ ಕಾಸ್ಟರ್ಸ್ ಫೆಡರೇಶನ್( NBF) ಅನ್ನು ಕೋರ್ಟ್ ಪ್ರಶ್ನೆ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಗಿರೀಶ್ ಎಸ್ ಕುಲಕರ್ಣಿ ವಿಭಾಗೀಯ ಪೀಠವು ಬುಧವಾರ ಈ ಪ್ರಕರಣ ವಿಚಾರಣೆ ನಡೆಸಿತು. ಮಹಾರಾಷ್ಟ್ರದ ಎಂಟು ಮಾಜಿ ಹಿರಿಯ ಪೊಲೀಸ್ ಅಧಿಕಾರಿಗಳು, ಕಾರ್ಯಕರ್ತರು, ವಕೀಲರು ಮತ್ತು ಎನ್ ಜಿ ಒಗಳು ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಮಾಧ್ಯಮ ವರದಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.

ರಿಪಬ್ಲಿಕ್ ಟಿವಿ ಪರ ವಕೀಲೆ ಮಾಲ್ವಿಕಾ ತ್ರಿವೇದಿ ವಾದ ಮಂಡಿಸಿ, ಮುಂಬೈ ಪೊಲೀಸರನ್ನು ನಿಂದಿಸಲಾಗಿದೆ ಎನ್ನುವ ಆರೋಪವನ್ನು ತಳ್ಳಿಹಾಕಿದ್ದಾರೆ. ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಮುಂಬೈ ಪೊಲೀಸರ ತನಿಖೆಯಲ್ಲಿ ಕೆಲವು ಲೋಪವಿತ್ತು. ಹಾಗಾಗಿ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿದೆ ಎಂದು ವಕೀಲೆ ಮಾಲ್ವಿಕಾ ಹೇಳಿದ್ದಾರೆ.
ಅಲ್ಲದೆ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ಬೇಡಿಕೆಯನ್ನು ಸುಶಾಂತ್ ಸಿಂಗ್ ಕುಟುಂಬದವರು ಮಾಡಿದ್ದರು. ಸೆಲೆಬ್ರಿಟಿ ನಿಧನದ ಬಗ್ಗೆ ಸತ್ಯ ತಿಳಿಯುವ ಕುತೂಹಲ ಜನರು ಬಯಸಿದ್ದರು. ಹಾಗಾಗಿ ಈ ಸಾವಿನ ಕುರಿತಾಗಿ ಸತ್ಯ ತಿಳಿಸುವ ಕೆಲಸ ಈ ಚಾನೆಲ್ ಮಾಡಿದೆ ಎಂದು ವಕೀಲೆ ಮಾಲ್ವಿಕಾ ತ್ರಿವೇದಿ ಕೋರ್ಟ್ ಗೆ ಉತ್ತರಿಸಿದ್ದಾರೆ.
ರಿಯಾ ಚಕ್ರವರ್ತಿಯನ್ನು ಬಂಧಿಸುವಂತೆ ಹ್ಯಾಶ್ ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಸಾರ್ವಜನಿಕರನ್ನು ಕೇಳುವುದು ತನಿಖಾ ವರದಿಗಾರಿಕೆಯ ಭಾಗವೇ? ಎಂದು ಕೋರ್ಟ್ ಪ್ರಶ್ನೆ ಮಾಡಿದೆ. ಕೆಲವು ಆತ್ಮಹತ್ಯೆ ವರದಿಗೆ ಮಾರ್ಗಸೂಚಿಗಳಿವೆ. ಯಾವುದೇ ಪ್ರಚೋದನಕಾರಿ ಶೀರ್ಷಿಕೆ ಬಳಸಬಾರದು, ಸತ್ತವರ ಬಗ್ಗೆ ನಿಮಗೆ ಗೌರವವಿಲ್ಲವೇ? ಇದು ತುಂಬಾ ದುರದೃಷ್ಟಕರ ಎಂದು ನ್ಯಾಯಾಲಯ ಹೇಳಿದೆ.


Click it and Unblock the Notifications











