ಸಿಬಿಐ ಕೈಗೆ ಸುಶಾಂತ್ ಆತ್ಮಹತ್ಯೆ ಪ್ರಕರಣ: ಕೆಲವರಿಗೆ ನೆಮ್ಮದಿ, ಕೆಲವರಿಗೆ ಭಯ!
ಬಹಳ ಒತ್ತಾಯದ ಬಳಿಕ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸಲಾಗಿದೆ. ಇದು ಮಹಾರಾಷ್ಟ್ರ ಸರ್ಕಾರ ಮತ್ತು ಪೊಲೀಸರಿಗೆ ಹಿನ್ನಡೆಯಾಗಿದೆ.
Recommended Video
ಸುಶಾಂತ್ ಸಿಂಗ್ ಪ್ರಕರಣ ಕುರಿತಂತೆ ಮಹಾರಾಷ್ಟ್ರ ಮತ್ತು ಬಿಹಾರ ಪೊಲೀಸರ ನಡುವೆ ತಿಕ್ಕಾಟ ಶುರುವಾಗಿತ್ತು. ಬಿಹಾರ ಪೊಲೀಸರು ಮಹಾರಾಷ್ಟ್ರ ಪೊಲೀಸರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.
ಅಂತಿಮವಾಗಿ ಸ್ವತಃ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು, ಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐ ಗೆ ವರ್ಗಾಯಿಸಿ ಎಂದು ಮನವಿ ಮಾಡಿದ್ದರು. ಅಂತೆಯೇ ಬಿಹಾರ ಪೊಲೀಸರು ಸಹ ಸುಶಾಂತ್ ಪ್ರಕರಣವನ್ನು ವರ್ಗಾಯಿಸಿರೆಂದು ಮನವಿ ಮಾಡಿದ್ದರು. ಇದೀಗ ಪ್ರಕರಣ ಸಿಬಿಐ ಅಂಗಳ ಸೇರಿದೆ.

ಬಿಹಾರ ಪೊಲೀಸರ ಮನವಿ ಮೇರೆಗೆ
ಇಂದು ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ಬಿಹಾರ ಪೊಲೀಸರ ಮನವಿಯನ್ನು ಮನ್ನಿಸಿ ಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ ಎಂದಿದೆ. ಬಿಜೆಪಿಯ ಸುಬ್ರಹ್ಮಣಿಯನ್ ಸ್ವಾಮಿ ಸೇರಿದಂತೆ ಇನ್ನೂ ಕೆಲವರು ಪ್ರಕರಣದ ಬಗ್ಗೆ ಸಿಬಿಐ ತನಿಖೆ ಆಗಲೆಂದು ಒತ್ತಾಯಿಸಿದ್ದರು.

ತುಷಾರ್ ಮೆಹ್ತಾ ಸುಪ್ರೀಂ ಗೆ ತಿಳಿಸಿದ್ದಾರೆ
ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಕೇಂದ್ರ ವಹಿಸಿದೆ' ಎಂದು ಹೇಳಿದರು.

ಇಬ್ಬರ ಕೋರಿಕೆಯೂ ಒಂದೇ ಆಗಿತ್ತು
ಸುಶಾಂತ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಅರ್ಜಿ ಸಲ್ಲಿಸಿದ್ದರು. ಅದೇ ಮತ್ತೊಂದೆಡೆ ರಿಯಾಳನ್ನು ಮುಖ್ಯ ಆರೋಪಿಯನ್ನಾಗಿ ನೋಡುತ್ತಿರುವ ಬಿಹಾರ ಪೊಲೀಸರು ಸಹ ಸುಶಾಂತ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಕೋರಿದ್ದರು. ಸಿಬಿಐಗೆ ವಹಿಸಿರುವುದು ಯಾರಿಗೆ ಲಾಭವಾಗಲಿದೆ ಎಂಬ ಗೊಂದಲ ಏರ್ಪಟ್ಟಿದೆ.

ಮಹಾರಾಷ್ಟ್ರ ಸಿಎಂ ಪುತ್ರನ ಹೆಸರೂ ಕೇಳಿಬಂದಿದೆ
ಮಹಾರಾಷ್ಟ್ರ ಸರ್ಕಾರವು ಈ ಪ್ರಕರಣವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಮುಂಬೈ ಪೊಲೀಸರೇ ಪ್ರಕರಣದ ತನಿಖೆ ಮಾಡಲಿದ್ದಾರೆ ಎಂದಿತ್ತು. ಆದರೀಗ ಪ್ರಕರಣ ಸಿಬಿಐಗೆ ಹೋಗಿರುವುದು ಮಹಾರಾಷ್ಟ್ರ ಸರ್ಕಾರಕ್ಕೆ ಹಿನ್ನಡೆಯೆಂದೇ ಪರಿಗಣಿಸಬೇಕಾಗಿದೆ. ಸುಶಾಂತ್ ಪ್ರಕರಣದಲ್ಲಿ ಮಹಾರಾಷ್ಟ್ರ ಸಿಎಂ ಪುತ್ರ ಆದಿತ್ಯ ಠಾಕ್ರೆ ಹೆಸರು ಸಹ ಕೇಳಿಬರುತ್ತಿದ್ದು, ಸಿಬಿಐ ಕೈಯಲ್ಲಿ ಪ್ರಕರಣ ಬೇರೊಂದು ತಿರುವು ತೆಗೆದುಕೊಳ್ಳುತ್ತದೆಯೇ ಎಂಬ ಕುತೂಹಲವೂ ಇದೆ.


Click it and Unblock the Notifications











