ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸುಶ್ಮಿತಾ ಸೇನ್ ಮಾಜಿ ಅತ್ತಿಗೆ, ಜೀವನಕ್ಕಾಗಿ ಬಟ್ಟೆ ಮಾರುತ್ತಿರುವ ನಟಿ..!
ಜನಸಾಮಾನ್ಯರ ದೃಷ್ಟಿಯಲ್ಲಿ ಸಿನಿಮಾರಂಗ ಅಂದ ತಕ್ಷಣವೇ ಕಣ್ತುಂಬ ಕೇವಲ ಬಣ್ಣಗಳೇ ತುಂಬಿಕೊಳ್ಳುತ್ತವೆ. ಹಾಗೆ ನೋಡಿದರೆ ಬೇರೆಲ್ಲ ಉದ್ಯಮಕ್ಕಿಂತಾ ಅನಿಶ್ಚಿತತೆ, ಅಭದ್ರತೆ ಇಲ್ಲಿ ಸ್ವಲ್ಪ ಹೆಚ್ಚೇ ಇದೆ. ಈ ಕ್ಷೇತ್ರದಲ್ಲಿ ಇವತ್ತಲ್ಲಾ ನಾಳೆ ಗೆಲ್ಲುತ್ತೇವೆ, ಆ ಮೂಲಕ ಬದುಕಲ್ಲಿ ಬೆಳಕು ಮೂಡುತ್ತದೆ ಎಂಬ ಭರವಸೆಯಿಂದ ಕಾದು ಕುಂತ ಅದೆಷ್ಟೋ ಜನ ಕಾರ್ಮಿಕರು, ಕಲಾವಿದರು ಮತ್ತು ತಂತ್ರಜ್ಞರು ಇಲ್ಲಿದ್ದಾರೆ.
ಇನ್ನು ಹಲವರು ಕಾದು ಕೊನೆಗೆ ಸುಸ್ತಾಗಿ ಕೊನೆಗೆ ಮನೆ ಕಡೆ ಮುಖ ಮಾಡುತ್ತಾರೆ. ಜೀವನ ನಿರ್ವಹಣೆಗೆ ಬೇರೆ ಉದ್ಯಮದತ್ತ ಮುಖ ಮಾಡುತ್ತಾರೆ. ಇದಕ್ಕೆ ಚಾರು ಅಸೋಪಾ ಸದ್ಯದ ಉದಾಹರಣೆ. ಹೌದು, ಚಾರು ಅಸೋಪಾ. ಹಿಂದಿಯ ಪ್ರಸಿದ್ಧ ಕಿರುತೆರೆ ನಾಯಕಿ. ಬಲ್ವೀರ್ ಮತ್ತು ಮೇರೆ ಅಂಗನೇ ಮೇ ಇವರ ಜನಪ್ರಿಯ ಧಾರಾವಾಹಿಗಳು. 2009ರಿಂದ ಇಲ್ಲಿಯವರೆಗೆ ಹಲವಾರು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ಚಾರು ಅಸೋಪಾ ಭುವನ ಸುಂದರಿ ಸುಶ್ಮಿತಾ ಸೇನ್ ಅವರ ಮಾಜಿ ಅತ್ತಿಗೆ ಕೂಡ ಹೌದು.

ಸುಶ್ಮಿತಾ ಸೇನ್ ಅವರ ಸಹೋದರ ರಾಜೀವ್ ಸೇನ್ ಅವರನ್ನು ಚಾರು 2019ರಲ್ಲಿ ಮದುವೆಯಾಗಿದ್ದರು. ಇಬ್ಬರಿಗೆ ಜಿಯಾನ ಎಂಬ ಮಗಳಿದ್ದಾಳೆ. 2023ರಲ್ಲಿ ರಾಜೀವ್ ಅವರಿಂದ ದೂರವಾದ ಚಾರು ಆ ನಂತರ ತಮ್ಮ ಮಗಳನ್ನು ತಾವೇ ನೋಡಿಕೊಳ್ಳುತ್ತಿದ್ಧಾರೆ.
ಇಂಥಾ ಚಾರು ಇದೀಗ ಮುಂಬೈಗೆ ಗುಡ್ ಬೈ ಹೇಳಿ ತಮ್ಮ ಊರು ಸೇರಿಕೊಂಡಿದ್ದಾರೆ. ಆಕ್ಟಿಂಗ್ ಮಾಡುವುದನ್ನು ಬಿಟ್ಟು ಆನ್ಲೈನ್ನಲ್ಲಿ ಬಟ್ಟೆ ಮಾರುತ್ತಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಚಾರು ಅಸೋಪಾ ಮುಂಬೈನಲ್ಲಿ ಜೀವನ ನಡೆಸುವುದು ಸುಲಭ ಅಲ್ಲ ಮನೆಯ ಬಾಡಿಗೆ ಮತ್ತು ಖರ್ಚು ವೆಚ್ಚ ಸೇರಿಸಿದರೆ ಒಂದರಿಂದ ಒಂದೂವರೆ ಲಕ್ಷ ತಿಂಗಳಿಗೆ ಬೇಕಾಗುತ್ತಿತ್ತು ಎಂದು ಹೇಳಿದ್ದಾರೆ.
ಮಗಳನ್ನು ದಾದಿ ಬಳಿ ಬಿಟ್ಟು ಚಿತ್ರೀಕರಣಕ್ಕೆ ಹೋಗಲು ನನಗೆ ಮನಸಾಗುತ್ತಿರಲಿಲ್ಲ ತುಂಬಾ ಕಷ್ಟವಾಗುತ್ತಿತ್ತು ಹೀಗಾಗಿ ನನ್ನೂರು ರಾಜಸ್ಥಾನದ ಬಿಕಾನೇರ್ಗೆ ಹೋಗಿದ್ದೇನೆ ಅಲ್ಲಿ ನನ್ನ ಪೋಷಕರ ಜೊತೆ ನಾನು ಮತ್ತು ನನ್ನ ಮಗಳು ವಾಸ ಮಾಡುತ್ತಿದ್ದೇವೆ ಎಂದು ಹೇಳಿರುವ ಚಾರು ಅಸೋಪಾ, ಈ ಕಾರಣದಿಂದ ನಾನು ನನ್ನೂರಿಗೆ ಬಂದು ಸ್ವಂತ ಉದ್ಯಮವನ್ನು ಶುರು ಮಾಡಿದ್ದೇನೆ ಎಂದು ಹೇಳಿದ್ಧಾರೆ. ಇದು ಆತುರ ಆತುರವಾಗಿ ತೆಗೆದುಕೊಂಡ ನಿರ್ಧಾರವಲ್ಲ ತುಂಬಾನೇ ಯೋಚಿಸಿ ತೆಗೆದುಕೊಂಡ ನಿರ್ಧಾರ ಎಂದು ಕೂಡ ಹೇಳಿದ್ದಾರೆ.
ಇನ್ನು ಸಾಮಾನ್ಯವಾಗಿ ಚಿತ್ರರಂಗದವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ, ಜೀವನಕ್ಕಾಗಿ ಬೇರೆ ಕೆಲಸ ಮಾಡಲು ಮುಂದಾದಾಗ ಪ್ರೋತ್ಸಾಹಿಸುವರಿಗಿಂತ ಕಾಲೆಳೆಯುವರೇ ಜಾಸ್ತಿ. ಸೆಲೆಬ್ರಿಟಿಗಳ ಜೀವನ ಶೈಲಿ ಕಂಡು ಅನೇಕರು ಟ್ರೋಲ್ ಮಾಡಲು ಶುರು ಮಾಡುತ್ತಾರೆ. ಈ ಕುರಿತು ಕೂಡ ಮಾತನಾಡಿರುವ ಚಾರು ಏನಾದರು ಹೊಸದು ಶುರು ಮಾಡಿದಾಗ ಎಲ್ಲರು ಕಷ್ಟಪಡುತ್ತಾರೆ, ಜನ ಕೂಡ ಆಡಿಕೊಳ್ಳುತ್ತಾರೆ, ನನ್ನ ವಿಚಾರದಲ್ಲಿ ಕೂಡ ಇದೇ ಆಗಿದೆ ಎಂದು ಹೇಳಿದ್ದಾರೆ. ಹಾಗಂಥ ನಾನು ಸುಮ್ಮನಾಗಿಲ್ಲ ಬದಲಿಗೆ ಆರ್ಡರ್ ತೆಗೆದುಕೊಳ್ಳುವುದರಿಂದ ಹಿಡಿದು ಎಲ್ಲವನ್ನು ಕೂಡ ನಿಭಾಯಿಸುತ್ತಿದ್ದೇನೆ ಎಂದಿರುವ ಚಾರು ಚಿತ್ರೀಕರಣ ಇದ್ದಾಗ ಮಾತ್ರ ಮುಂಬೈಗೆ ಬರಲಿದ್ದೇನೆ ಎಂದು ಹೇಳಿದ್ದಾರೆ.
ತಮ್ಮ ಮಾಜಿ ಗಂಡ ಮತ್ತು ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ಬಗ್ಗೆ ಕೂಡ ಮಾತನಾಡಿರುವ ಚಾರು ಅಸೋಪಾ, ರಾಜೀವ್ ಯಾವಾಗ ಬೇಕಿದ್ದರು ಬಿಕಾನೇರ್ಗೆ ಬರಬಹುದು, ತಮ್ಮ ಮಗಳನ್ನು ನೋಡಬಹುದು ಮಾತನಾಡಿಸಿಕೊಂಡು ಹೋಗಬಹುದು, ನನಗೆ ಯಾವ ಸಮಸ್ಯೆ ಕೂಡ ಇಲ್ಲ ಎಂದು ಹೇಳಿದ್ದಾರೆ. ನನ್ನ ಸ್ಥಿತಿಗತಿಯ ಕುರಿತು ಎಲ್ಲವನ್ನೂ ರಾಜೀವ್ಗೆ ಹೇಳಿಯೇ ನಾನು ಮುಂಬೈದಿಂದ ಊರಿಗೆ ಬಂದಿದ್ದು ಎಂದು ಹೇಳಿದ್ದಾರೆ. ಆದರೆ ರಾಜೀವ್ ಸೇನ್ ಈ ವಿಚಾರದಲ್ಲಿ ಹೇಳುವುದೇ ಬೇರೆ.
ತಮ್ಮ ಮಾಜಿ ಪತ್ನಿಯ ಕುರಿತು ಹಿಂದೂಸ್ತಾನ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಾಜೀವ್ ಸೇನ್,ನನ್ನ ಮಗಳನ್ನು ನನ್ನಿಂದ ದೂರ ಇಡುವ ಕಲೆ ಆಕೆಗೆ ಮೊದಲಿಂದ ಚೆನ್ನಾಗಿ ಕರಗತವಾಗಿದೆ ಎಂದು ಹೇಳಿದ್ದಾರೆ. ನನ್ನ ಮಗಳು ಜಿಯಾನಾ ಬಗ್ಗೆ ಯೋಚನೆ ಮಾಡಿದಾಗೆಲ್ಲ ನನಗೆ ಬೇಸರವಾಗುತ್ತೆ ಎಂದಿರುವ ರಾಜೀವ್ ಅವಳಿಂದ ನನ್ನ ಮಗಳು ಕೂಡ ನರಳುವಂತಾಗಿದೆ ಎಂದು ಹೇಳಿದ್ದಾರೆ.
ಕೊನೆಯ ಬಾರಿ ನಾನು ಜಿಯಾನಾಳನ್ನು ಭೇಟಿ ಮಾಡಿದ್ದು ಜನವರಿಯಲ್ಲಿ ಅವಳನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿರುವ ರಾಜೀವ್, ನಾನು ದೆಹಲಿಯಲ್ಲಿದ್ದಾಗ ಬಿಕಾನೇರ್ಗೆ ಜಿಯಾನಾಳನ್ನು ನೋಡಲು ಬರಬಹುದೇ ಎಂದು ಕೇಳಲು ಚಾರುಗೆ ಕರೆ ಮಾಡಿದ್ದೆ ಆದರೆ ಆಕೆ ಯಾವ ಪ್ರತಿಕ್ರಿಯೆಯನ್ನು ಕೂಡ ನೀಡಲಿಲ್ಲ ಎಂದಿರುವ ರಾಜೀವ್, ಅವನು ಬಿಕಾನೇರ್ಗೆ ಬಂದು ಮಗಳನ್ನು ಭೇಟಿಯಾಗಬಹುದು ಅವನಿಗೆ ಎಲ್ಲಾ ಹಕ್ಕುಗಳಿವೆ ಎಂದು ಆಕೆ ಹೇಳುತ್ತಾಳೆ ಆದರೆ ಬೇಸರದ ವಿಚಾರ ಏನೆಂದರೆ ನನಗೆ ಯಾವ ಹಕ್ಕುಗಳು ಕೂಡ ಇಲ್ಲ ಎಂದು ಹೇಳಿದ್ದಾರೆ. ನಾನು ಪ್ರಯತ್ನ ಮಾಡಿದರು ಕೂಡ ಪ್ರತಿಫಲ ಸಿಗದಿದ್ದಾಗ ಏನೂ ಮಾಡಲು ಸಾಧ್ಯ ಇಲ್ಲ ಎಂದು ಕೂಡ ರಾಜೀವ್ ಹೇಳಿದ್ದಾರೆ.
ಇನ್ನು ತಮ್ಮ ಮಾಜಿ ಪತ್ನಿಗೆ ಎದುರಾದ ಆರ್ಥಿಕ ಸಮಸ್ಯೆಯ ಕುರಿತು ಕೂಡ ಮಾತನಾಡಿರುವ ರಾಜೀವ್, ಚಾರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾಳೆ ಅದರಲ್ಲಿ ಯಾವ ಅನುಮಾನ ಇಲ್ಲ ಆದರೆ ಹಣಕಾಸಿನ ಸಮಸ್ಯೆ ಇದೆ ಎನ್ನುವುದನ್ನು ನಾನು ಒಪ್ಪಲಾರೆ ಎಂದು ಹೇಳಿದ್ದಾರೆ. ಅವಳು ತನ್ನ ಸಹೋದರ ಅವನ ಪತ್ನಿಯ ಜೊತೆ ಕ್ರೂಸ್ ಟ್ರಿಪ್ಗೆ ಹೋಗಬಲ್ಲಳು, ಎಲ್ಲರ ಟಿಕೆಟ್ಗಳನ್ನು ಕೂಡ ಅವಳೇ ಖರೀದಿಸಬಲ್ಲಳು, ಅಷ್ಟೊಂದು ಆರ್ಥಿಕ ಸದೃಢತೆ ಆಕೆಗಿದೆ ಹೀಗಿರುವಾಗ ಹಣ ಇಲ್ಲ ಎನ್ನುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದ್ದಾರೆ. ಅವಳ ದೈನಂದಿನ ಚಟುವಟಿಕೆಗಳನ್ನು ನೋಡುತ್ತಿದ್ದರೆ ಆಕೆಗೆ ಯಾವ ಆರ್ಥಿಕ ಸಮಸ್ಯೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತೆ ಎಂದು ಕೂಡ ಹೇಳಿದ್ದಾರೆ.
ಮುಂದುವರೆದು ಮಗಳು ಜಿಯಾನಾ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಮನಸ್ತಾಪಗಳನ್ನೆಲ್ಲ ಮರೆತು ಮರಳಿ ಮನೆಗೆ ಬಂದು ಬಿಡು ಎಂದು ನಾನು ಹಲವಾರು ಬಾರಿ ಚಾರುಗೆ ಹೇಳಿದ್ದೇನೆ ಎಂದಿರುವ ರಾಜೀವ್ ಸೇನ್, ನಮ್ಮ ಮಗಳಿಗೆ ಸ್ವಂತ ಮನೆ ಇರುತ್ತೆ, ತನ್ನ ಮನೆಯಲ್ಲಿ ಅವಳಿಗೆ ಸ್ವತಂತ್ರ್ಯ ಇರುತ್ತೆ, ಬದುಕು ಸ್ಥಿರವಾಗಿರುತ್ತೆ, ಹೀಗಾಗಿ ಹಳೆಯದನ್ನೆಲ್ಲ ಮರೆತು ಮಗಳಿಗಾಗಿ ಮನೆಗೆ ಬಾ ಎಂದು ನಾನು ಕಳೆದ ತಿಂಗಳು ಕೂಡ ಅವಳಿಗೆ ಹೇಳಿದ್ದೇ ಆದರೆ ಅವಳ ಮನಸಿನಲ್ಲಿ ಏನು ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಆಕೆಯ ಸುತ್ತಮುತ್ತ ಇರುವ ಜನರು ಆಕೆಯ ಮೇಲೆ ಪ್ರಭಾವವನ್ನು ಬೀರುತ್ತಿರಬಹುದು, ಇಲ್ಲಸಲ್ಲದ ವಿಚಾರ ಆಕೆಯ ತಲೆಗೆ ತುಂಬುತ್ತಿರಬಹುದು ಎಂದಿರುವ ರಾಜೀವ್ ಸೇನ್, ಇನ್ನಾದರೂ ಮಗಳ ಭವಿಷ್ಯದ ಬಗ್ಗೆ ಆಕೆ ಆಲೋಚನೆಯನ್ನು ಮಾಡಿ ಮನೆಗೆ ಮರಳಿ ಬರುವಂತಾಗಲಿ ಎಂದು ಹೇಳಿದ್ದಾರೆ.
ನನ್ನ ತಂದೆ ತನ್ನ ಜವಾಬ್ದಾರಿಯನ್ನು ನಿರ್ವಹಿಸಲಿಲ್ಲ ಎಂದು ಮುಂದೆ ನನ್ನ ಮಗಳು ನನ್ನನ್ನೂ ಶಪಿಸಬಹುದು, ನನ್ನ ಬಗ್ಗೆ ಆಕೆಯಲ್ಲಿ ದ್ವೇಷ ಬೆಳೆಯಬಹುದು ಆದರೆ ನನ್ನ ಜೊತೆ ಇದ್ದವರಿಗೆ ನನ್ನ ತಪ್ಪು ಇಲ್ಲ ಎನ್ನುವುದು ಗೊತ್ತಿದೆ ಎಂದಿರುವ ರಾಜೀವ್ ತನ್ನ ಇಮೇಜ್ನ ಚಾರು ತಾನೇ ಡ್ಯಾಮೇಜ್ ಮಾಡಿಕೊಳ್ಳುತ್ತಿದ್ದಾಳೆ ಎಂದು ಹೇಳಿದ್ದಾರೆ.


Click it and Unblock the Notifications











