ಅತ್ಯಾಚಾರ ಸಂತ್ರಸ್ತೆಯನ್ನು ನೀವು ಹೀಗೆಯೇ ಕೇಳುತ್ತೀರಾ: ತಾಪ್ಸಿ ಆಕ್ರೋಶ
'ನಿಮ್ಮಿಂದ ಅತ್ಯಾಚಾರಕ್ಕೆ ಒಳಪಟ್ಟ ಸಂತ್ರಸ್ತೆಯನ್ನು ಮದುವೆಯಾಗುತ್ತೀರಾ?' ಎಂದು ಸುಪ್ರೀಂಕೋರ್ಟ್ ಬೆಂಚ್ ಒಂದು ಅತ್ಯಾಚಾರ ಆರೋಪಿಯನ್ನು ಕೇಳಿರುವುದು ಬಹಳ ಚರ್ಚೆಯಾಗುತ್ತಿದೆ. ನಟಿ ತಾಪ್ಸಿ ಪನ್ನು ಸಹ ಈ ಬಗ್ಗೆ ಮಾತನಾಡಿದ್ದಾರೆ.
ಸರ್ಕಾರಿ ನೌಕರನೊಬ್ಬ ಅಪ್ರಾಪ್ತೆ ಮೇಲೆ ಕೆಲವು ವರ್ಷಗಳ ಕಾಲ ಸತತ ಅತ್ಯಾಚಾರ ಮಾಡಿದ್ದ. ಈ ಪ್ರಕರಣವು ಸುಪ್ರೀಂಕೋರ್ಟ್ ಪೀಠದ ಮುಂದೆ ಬಂದಾಗ ವಿಚಾರಣೆ ವೇಳೆ, 'ನೀವು ಈಗ ಸಂತ್ರಸ್ತೆಯನ್ನು ಮದೆಯಾಗಲು ಸಾಧ್ಯವೇ?' ಎಂದು ಪ್ರಶ್ನಿಸಿದೆ.
ಸಿಜೆಐ ಎಸ್ಎ ಬೋಬ್ಡೆ ನೇತೃತ್ವದ ಪೀಠದ ಈ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಟಿ ತಾಪ್ಸಿ ಪನ್ನು ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, 'ಸಂತ್ರಸ್ತೆಯ ಇಷ್ಟವನ್ನು ಯಾರಾದರೂ ಕೇಳಿದ್ದೀರಾ?, ತನ್ನನ್ನು ಅತ್ಯಾಚಾರ ಮಾಡಿದವರನ್ನು ಮದುವೆಯಾಗಲು ಸಂತ್ರಸ್ತೆಗೆ ಇಷ್ಟವಿರುತ್ತದೆಯೇ? ಇದೇನು ಸಮಸ್ಯೆಗೆ ಪರಿಹಾರವೊ ಅಥವಾ ಶಿಕ್ಷೆಯೋ? ಇದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ' ಎಂದಿದ್ದಾರೆ ನಟಿ ತಾಪ್ಸಿ ಪನ್ನು.

ತಾಪ್ಸಿ ಪನ್ನು ಮಾತ್ರವಲ್ಲದೆ, ಗಾಯಕಿ ಸೋನಾ ಮಹೋಪಾತ್ರಾ ಸಹ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, 'ಇದೆಂಥಹಾ ಪರಿಹಾರ. ಸಂತ್ರಸ್ತೆಯನ್ನು ಮದುವೆಯಾಗಿ 'ನ್ಯಾಯ' ಒದಗಿಸುವ ವಿಧಾನ ಹಳೆ ಬಾಲಿವುಡ್ ಕಾಲದ್ದು. ಭಾರತ ಈ ಹಂತಕ್ಕೆ ಇಳಿಯಿತೇ?' ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಸೋನಾ.
"ಆ ಹುಡುಗಿ ಮೇಲೆ ಅತ್ಯಾಚಾರ ನಡೆಸುವ ಮುನ್ನ ಈ ಬಗ್ಗೆ ಯೋಚಿಸಬೇಕಿತ್ತು. ಈಗ ಆಕೆಯನ್ನು ನೀವು ಮದುವೆಯಾಗಲು ಸಾಧ್ಯವೇ? ನಿಮಗೆ ಈ ಬಗ್ಗೆ ನಾವು ಒತ್ತಾಯಿಸುತ್ತಿಲ್ಲ" ಎಂದು ಪೀಠ ಕೇಳಿದೆ. ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ವಕೀಲರಿಗೆ ಸಮಯ ನೀಡಲಾಗಿತ್ತು. "ನಾನು ಆಕೆಯನ್ನು ಮದುವೆಯಾಗುವ ಸ್ಥಿತಿಯಲ್ಲಿಲ್ಲ. ನನಗೆ ಈಗಾಗಲೇ ಮದುವೆಯಾಗಿದೆ" ಎಂದು ಆರೋಪಿ ಹೇಳಿದ್ದಾನೆ.
ಒಂಬತ್ತನೇ ತರಗತಿ ಓದುತ್ತಿದ್ದ ಬಾಲಕಿ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದು, "ತನಗೆ ಸಹಕರಿಸದಿದ್ದರೆ ಆಸಿಡ್ ಹಾಕುವುದಾಗಿ ಆತ ಬೆದರಿಕೆ ಹಾಕಿದ್ದ. ಒಂದು ವರ್ಷದಿಂದ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದ" ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.
Recommended Video
ಅತ್ಯಾಚಾರ ಆರೋಪಿಗೆ ನ್ಯಾಯಾಲಯವು ಬಂಧನದಿಂದ ನಾಲ್ಕು ವಾರಗಳ ಕಾಲ ರಕ್ಷಣೆ ನೀಡಿದೆ. ಆರೋಪಿಯು ಸರ್ಕಾರಿ ಉದ್ಯೋಗಿ ಆಗಿತ್ತು, 48 ಗಂಟೆಗಳ ಕಾಲ ಬಂಧನದಲ್ಲಿ ಇರಿಸಿದರೆ ನೌಕರಿಯಿಂದ ಅಮಾನತ್ತು ಮಾಡುತ್ತಾರೆ ಎಂದು ಕಾರಣ ನೀಡಿ ಆತ ಜಾಮೀನು ಪಡೆದುಕೊಂಡಿದ್ದ.


Click it and Unblock the Notifications











