ನಾನು ಬಂದಿದ್ದು ನನ್ನ 'ಕಲೆ' ಮಾರಲು, 'ನನ್ನನ್ನಲ್ಲ' ; ಕಹಿ ಅನುಭವ ಹಂಚಿಕೊಂಡ ಯಶ್ 'ರಾಮಾಯಣ' ಚಿತ್ರದ ನಟಿ
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಮಾತು ಇದೆ. ಈ ಮಾತು ಚಿತ್ರರಂಗಕ್ಕೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ.. ಹೊರಗಡೆಯಿಂದ ತುಂಬಾನೇ ಕಲರ್ ಫುಲ್ ಆಗಿ ಕಾಣುವ ಈ ಬಣ್ಣದ ಲೋಕದಲ್ಲಿ ನಾನಾ ಬಗೆಯ ವೇಷಭೂಷಣ ಹಾಕಿಕೊಂಡ ಹಲವಾರು ಜನ ಇದ್ದಾರೆ. ಅದರಲ್ಲಿಯೂ ನಾಯಕಿಯಾಗಿ ನೆಲೆಯೂರಬೇಕೆಂದು ಕನಸೊತ್ತು ಬರುವ ಹಲವರ ಪಾಲಿಗೆ ಚಿತ್ರರಂಗ ಕಲ್ಲು ಮುಳ್ಳಿನ ಹಾದಿಯೇ.
ಅಡಿಗಡಿಗೂ ಸವಾಲುಗಳಿಗೆ ಇಲ್ಲಿ ಎದೆಯೊಡ್ಡಬೇಕಾಗುತ್ತದೆ. ಪಾತ್ರಕ್ಕೆ ಪಲ್ಲಂಗವೇರಬೇಕು ಎಂಬ ಷರತ್ತನ್ನು ಒಪ್ಪಿಕೊಂಡರೆ ಮಾತ್ರ ಇಲ್ಲಿ ಅವಕಾಶ ಎಂದು ದುಷ್ಟ ವ್ಯವಸ್ಥೆಯೊಂದು ಇವರಿಗೆ ಮಾನಸಿಕ ಕಿರಿಕಿರಿ ನೀಡುತ್ತದೆ.

ಚಿತ್ರರಂಗದಲ್ಲಿ ಇಂದು ಹೆಸರು ಮಾಡಿರುವವರು.. ಹೆಸರು ಮಾಡಲಾಗದೇ ಮನೆ ಸೇರಿದವರು.. ಒಂದಿಲ್ಲೊಂದು ದಿನ.. ಒಂದಿಲ್ಲೊಂದು ರೀತಿಯಲ್ಲಿ.. ಈ ಝಗಮಗ ಲೋಕದಲ್ಲಿನ ವಿಕೃತ ಲೋಕವನ್ನು ಕಂಡು ಬೆಚ್ಚಿ ಬಿದ್ದಿಯೇ ಬಿದ್ದಿರುತ್ತಾರೆ. ಇದಕ್ಕೆ ಪುರಾವೆ ಎನ್ನುವಂತೆ ಇಲ್ಲಿಯವರೆಗೆ ಹಲವಾರು ಜನ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ಸಾಲಿಗೆ ಈಗ ಇಂದಿರಾ ಕೃಷ್ಣನ್ ಸೇರಿಕೊಂಡಿದ್ಧಾರೆ.
ಹೌದು. ಇಂದಿರಾ ಕೃಷ್ಣನ್.. ಕಿರುತೆರೆಯ ಪ್ರಖ್ಯಾತ ನಟಿ. ಆದರೆ.. ಎಲ್ಲರಂತೆ ಒಂದು ಕಾಲದಲ್ಲಿ ನಾಯಕಿಯಾಗಬೇಕು.. ಬೆಳ್ಳಿ ತೆರೆಯ ಮೇಲೆ ಮಿಂಚಬೇಕು ಎಂಬ ಕನಸು ಇವರಲ್ಲಿ ಕೂಡ ಇತ್ತು. ಈ ಕನಸಿನ ಬೆನ್ನೇರಿ 1995ರಲ್ಲಿ ''ಓಡಿಯಾ'' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಇಂದಿರಾ ಕೃಷ್ಣನ್ 2003ರಲ್ಲಿ ಸಲ್ಮಾನ್ ಖಾನ್ ಅಭಿನಯದ ''ತೇರೆ ನಾಮ್'' ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು.
ಆದರೆ, ಇಷ್ಟರಲ್ಲಾಗಲೇ ಇವರ ಕನಸು ಕಮರಿತ್ತು. ಚಿತ್ರರಂಗದ ಒಳಹುಳುಕುಗಳ ಅರಿವು ಆಗಿತ್ತು. ಹೀಗಾಗಿಯೇ 1997ರಲ್ಲಿಯೇ ಬೆಳ್ಳಿ ತೆರೆಯಿಂದ ಕಿರುತೆರೆಯತ್ತ ಇಂದಿರಾ ವಾಲಿದರು. ಇದೀಗ ವರ್ಷಗಳ ನಂತರ ತಮ್ಮ ಈ ನಿರ್ಧಾರದ ಹಿಂದಿನ ಕಾರಣವನ್ನು ಇಂದಿರಾ ಕೃಷ್ಣನ್ ಹೇಳಿದ್ದಾರೆ.
ಈ ಕುರಿತು ''ಬಾಲಿವುಡ್ ಬಬಲ್''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಇಂದಿರಾ ಕೃಷ್ಣನ್, ನನಗೆ.. ಹಿಂದಿಯಲ್ಲಾಗಲಿ ಅಥವಾ ಮುಂಬೈನಲ್ಲಾಗಲಿ.. ಕಾಸ್ಟಿಂಗ್ ಕೌಚ್ ಅನುಭವ ಆಗಿಲ್ಲ. ಆದರೆ.. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಆಗಿದೆ ಎಂದು ಹೇಳಿದ್ದಾರೆ.

ದಕ್ಷಿಣ ಭಾರತದಲ್ಲಿ ನನ್ನನ್ನೂ ಖ್ಯಾತ ನಿರ್ಮಾಪಕರೊಬ್ಬರು ತಮ್ಮ ಅದ್ಧೂರಿ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದ್ದರು. ಆದರೆ.. ಕೊನೆ ಕ್ಷಣದಲ್ಲಿ ನನಗೆ ಅವರು ಮಾತನಾಡುವ ರೀತಿ.. ಅವರ ಹಾವ-ಭಾವ.. ನನ್ನ ಮೇಲೆ ಅವರಿಗೆ ಇದ್ದ ನಿರೀಕ್ಷೆ.. ಎಲ್ಲವೂ ಅನುಮಾನಕ್ಕೆ ಎಡೆ ಮಾಡಿ ಕೊಡಲು ಶುರು ಮಾಡಿದವು. ನಾಳೆಯಿಂದ ಚಿತ್ರೀಕರಣ ಪ್ರಾರಂಭವಾದರೆ.. ಆ ನಂತರ ಸಂಬಂಧ ಹಾಳಾದರೆ.. ಎನ್ನುವ ಪ್ರಶ್ನೆ ನನಗೆ ಕಾಡಲು ಶುರುವಾಯ್ತು ಎಂದು ಹೇಳಿರುವ ಇಂದಿರಾ ಕೃಷ್ಣನ್ ಆ ನಂತರ ನಾನು ಅವರಿಗೆ ನಾನು ನನ್ನಲ್ಲಿನ ಕಲೆ ಮತ್ತು ಪ್ರತಿಭೆಯನ್ನು ಮಾರಲು ಬಂದಿದ್ದೇನೆ ಹೊರತು ನನ್ನನ್ನಲ್ಲ ಎಂದು ಹೇಳಿದೆ, ನನ್ನ ಮಾತುಗಳಿಂದ ನಿಮಗೆ ನೋವಾಗಬಹುದು ಆದರೆ ವಿಷಯ ಸ್ಪಷ್ಟವಾಗಿದ್ದರೆ ಇಬ್ಬರಿಗೆ ಒಳ್ಳೆಯದು ಎಂದು ಹೇಳಿ ಆ ಚಿತ್ರದಿಂದ ಹೊರ ಬಂದೆ ಎಂದು ಹೇಳಿದ್ದಾರೆ.
ಇನ್ನು ಕೇವಲ ಇದೊಂದೇ ಅನುಭವ ಅಲ್ಲ ನನಗೆ ಈ ರೀತಿಯ ಹಲವು ಅನುಭವಗಳಾಗಿವೆ ಪಾತ್ರಕ್ಕೆ ಪಲ್ಲಂಗವೇರದ ಕಾರಣ ಹಲವು ಚಿತ್ರಗಳನ್ನು ಕೂಡ ನಾನು ಕಳೆದುಕೊಂಡಿದ್ದೇನೆ ಎಂದಿರುವ ಇಂದಿರಾ ಕೃಷ್ಣನ್ ಈ ಎಲ್ಲಾ ಕಾರಣಗಳಿಂದ ನಾನು ಕಿರುತೆರೆಗೆ ಬಂದೆ ಎಂದು ಹೇಳಿದ್ಧಾರೆ. ಕಿರುತೆರೆಯಲ್ಲಿ ನನಗೆ ಹೆಸರು ಸಿಕ್ತು, ಕೀರ್ತಿ ಸಿಕ್ತು, ಮಾನಸಿಕ ನೆಮ್ಮದಿ ಕೂಡ ಸಿಕ್ತು ಎಂದು ಕೂಡ ಇಂದಿರಾ ಕೃಷ್ಣನ್ ಹೇಳಿದ್ಧಾರೆ.
ಅಂದ್ಹಾಗೇ ಇಂದಿರಾ ಕೃಷ್ಣನ್ ಸದ್ಯ ನಮ್ಮ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ರಣ್ಭೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ ''ರಾಮಾಯಣ'' ಚಿತ್ರದಲ್ಲಿ ಅಭಿನಯಿಸಿದ್ಧಾರೆ. ಈ ಚಿತ್ರದಲ್ಲಿ ಇವರದ್ದು ''ಕೌಸಲ್ಯೆ''ಯ ಪಾತ್ರ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಚಿತ್ರತಂಡ ಪಾತ್ರವರ್ಗದ ಬಗ್ಗೆ ಹೆಚ್ಚಿನ ಸುಳಿವನ್ನು ನೀಡಿಲ್ಲವಾದರೂ ಸ್ವತ: ಇಂದಿರಾ ಕೃಷ್ಣನ್ ಇತ್ತೀಚೆಗೆ ಬಿಡುಗಡೆಯಾದ ''ರಾಮಾಯಣ'' ಚಿತ್ರದ ಟೈಟಲ್ ಟೀಸರ್ನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಭಾಗವಾಗಿದ್ದಕ್ಕೆ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











