ಕೊರೊನಾ ವೈರಸ್ ಭೀತಿ: ತಲೈವಿ ಚಿತ್ರಕ್ಕೆ ಮತ್ತೆ ನಿರಾಸೆ
ಕೊರೊನಾ ವೈರಸ್ ಎರಡನೇ ಅಲೆಯಿಂದ ಮತ್ತೊಂದು ಚಿತ್ರ ಸಂಕಷ್ಟಕ್ಕೆ ಸಿಲುಕಿದೆ. ಭಾರತೀಯ ಚಿತ್ರ ಪ್ರಪಂಚದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ತಲೈವಿ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.
ಈ ಮೊದಲು ನಿರ್ಧರಿಸಿದಂತೆ ಏಪ್ರಿಲ್ 23 ರಂದು ತಲೈವಿ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ತೆರೆಗೆ ಬರಬೇಕಿತ್ತು. ಅದಕ್ಕೆ ಬೇಕಾದ ತಯಾರಿ ಸಹ ನಡೆದಿತ್ತು. ಆದರೆ ದೇಶದಲ್ಲಿ ಕೋವಿಡ್ ಪ್ರಕರಣ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡ ಪರಿಣಾಮ ಬಿಡುಗಡೆಯಿಂದ ಹಿಂದೆ ಸರಿದಿದೆ.
ಈ ಕುರಿತು ಚಿತ್ರತಂಡ ಅಧಿಕೃತವಾಗಿ ಪ್ರಕಟಣೆ ಬಿಡುಗಡೆ ಮಾಡಿದೆ. ''ನಮ್ಮ ಚಿತ್ರಕ್ಕೆ ಸಿಕ್ಕಿರುವ ಪ್ರೀತಿಗೆ ಧನ್ಯವಾದ. ಏಕಕಾಲದಲ್ಲಿ ಎಲ್ಲಾ ಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡಬೇಕಿದೆ. ಆದರೆ ದೇಶದ ಕೆಲವು ಭಾಗಗಳಲ್ಲಿ ಕೊರನಾ ಕೇಸ್ ಹೆಚ್ಚಾಗುತ್ತಿರುವ ಕಾರಣ ಸದ್ಯಕ್ಕೆ ತಲೈವಿ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಾಂಕವನ್ನು ತಿಳಿಸುತ್ತೇವೆ'' ಎಂದು ಹೇಳಿದೆ.

ಕೊರೊನಾ ಕಾಟಕ್ಕೆ ತಲೈವಿ ಮಾತ್ರವಲ್ಲ, ಇದಕ್ಕೂ ಮುಂಚೆ ಬಿಡುಗಡೆಯಾಗಬೇಕಿದ್ದ ಹಲವು ಚಿತ್ರಗಳು ಮುಂದಕ್ಕೆ ಹೋಗಿದೆ. ಏಪ್ರಿಲ್ 30ಕ್ಕೆ 'ಸೂರ್ಯವಂಶಿ' ಬರಬೇಕಿತ್ತು. ಅಕ್ಷಯ್ ಕುಮಾರ್ ಸಿನಿಮಾ ಮುಂದೂಡಿಕೆ ಮಾಡಿಕೊಂಡಿದೆ.
ಸೈಫ್ ಅಲಿ ಖಾನ್, ರಾಣಿ ಮುಖರ್ಜಿ ನಟನೆಯ 'ಬಂಟಿ ಔಟ್ ಬಬ್ಲಿ', ವಿಕ್ಕಿ ಕೌಶಲ್ ನಟನೆಯ 'ಸರ್ದಾರ್ ಉದ್ಧಮ್ ಸಿಂಗ್' ಚಿತ್ರವೂ ರಿಲೀಸ್ ಮುಂದಕ್ಕೆ ಹಾಕಿಕೊಂಡಿದೆ.
ಇನ್ನುಳಿದಂತೆ ಎಎಲ್ ವಿಜಯ್ ನಿರ್ದೇಶನದ ತಲೈವಿ ಸಿನಿಮಾದಲ್ಲಿ ಅರವಿಂದ್ ಸ್ವಾಮಿ ಎಂಜಿಆರ್ ಪಾತ್ರದಲ್ಲಿ, ಪ್ರಕಾಶ್ ರಾಜ್ ಕರುಣಾನಿಧಿ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











