Don't Miss!
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- News Priyank Kharge Life Threat: ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಮ್ ಗೋಪಾಲ್ ವರ್ಮಾರ 'ದಿ ಅಟಾಕ್ಸ್ ಆಫ್ 26/11'
ಮುಂಬೈನ ತಾಜ್ ಹೋಟೆಲ್ನಲ್ಲಿ 2008ರ ನವೆಂಬರ್ 26ರಂದು ಭೀಕರ ದಾಳಿಯಾಗಿ, ಕಿಟಕಿಗಳಿಗೆ ಹೊತ್ತಿಕೊಂಡ ಹೊಗೆ ಇನ್ನೂ ಆರಿರಲಿಲ್ಲ, ಎಲ್ಲಕಡೆಗೆ ಮೆತ್ತಿಕೊಂಡ ರಕ್ತದ ಕಣಗಳನ್ನು ಇನ್ನೂ ಒರೆಸಿರಲಿಲ್ಲ ಆಗಲೇ ಅಂದಿನ ಮುಖ್ಯಮಂತ್ರಿಯಾಗಿದ್ದ ವಿಲಾಸರಾವ್ ದೇಶಮುಖ್ ಅವರ ಮಗ ರಿತೇಶ್ ಜೊತೆ ಹಾಲಿವುಡ್ ಸ್ಟೈಲಿನ ಬಾಲಿವುಡ್ ನಿರ್ದೇಶಕ, ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರು ಹಾಜರಾಗಿದ್ದರು.
ಅಂದು ರಾಮ್ ಗೋಪಾಲ್ ವರ್ಮಾ ಎಬ್ಬಿಸಿದ್ದ ವಿವಾದದ ಹೊಗೆ ಇನ್ನೂ ಸಣ್ಣದಾಗಿ ಆಡುತ್ತಿರುವ ಹೊತ್ತಿನಲ್ಲೇ ಅವರು 'The Attacks of 26/11' ಎಂಬ ಬಹುಭಾಷೀಯ ವಿವಾದಾತ್ಮಕ ಚಿತ್ರವನ್ನು ಅಂದಾಜು 40 ಕೋಟಿ ರು. ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ. ಚಿತ್ರ ನಿರ್ಮಿಸುವ ಉದ್ದೇಶದಿಂದ ತಾಜ್ ಹೋಟೆಲಿಗೆ ಹೋಗಿರಲಿಲ್ಲ ಎಂದು ಹೇಳಿ ತಿಪ್ಪೆಸಾರಲು ಯತ್ನಿಸಿದ್ದ ಆರ್ಜಿವಿ, ಆಗ ಯಾವ ಕಾರಣಕ್ಕೆ ಅಲ್ಲಿಗೆ ಹೋಗಿದ್ದರು ಎಂಬುದು ಈಗ ಸಾಬೀತು ಮಾಡಿದ್ದಾರೆ.
ವಿವಾದಗಳೇನೇ ಇರಲಿ, ರಾಮ್ ಗೋಪಾಲ್ ವರ್ಮಾ ಅವರು ಈ ಕ್ರೈಂ ಥ್ರಿಲ್ಲರ್ ಚಿತ್ರವನ್ನು ಕೈಗೆತ್ತಿಕೊಂಡಿದ್ದರಿಂದ ಅನೇಕರು ಕೈಹಿಸುಕಿಕೊಂಡಿದ್ದಂತೂ ಖಂಡಿತ. 166 ಜನರನ್ನು ಬಲಿ ತೆಗೆದುಕೊಂಡಿದ್ದ ಈ ಸತ್ಯ ಘಟನೆ ತೆರೆಯ ಮೇಲೆ ಯಾವ ರೀತಿ ತೆರೆದಿಡುತ್ತಾರೆ ಎಂದು ಕಾದು ನೋಡಬೇಕು. ಚಿತ್ರ ಗೆಲ್ಲಲಿ ಸೋಲಲಿ, ಚಿತ್ರಕಥೆಯನ್ನು ಸ್ವತಃ ತಾವೇ ಹೆಣೆಯಲಿ ಅಥವಾ ಹಾಲಿವುಡ್ನಿಂದ ಕದಿಯಲಿ, ವೈವಿಧ್ಯತೆಗಾಗಿ ತುಡಿಯುವ ರಾಮ್ ಗೋಪಾಲ್ ವರ್ಮಾನಂಥವರು ಬಲು ಅಪರೂಪ.
ತೆಲುಗಿನಲ್ಲಿ ಶಿವ, ಹಿಂದಿಯಲ್ಲಿ ಸತ್ಯ, ರಂಗೀಲಾ, ಕಾಲ್, ಡರ್ನಾ ಮನಾ ಹೈ, ಡರ್ನಾ ಜರೂರಿ ಹೈ, ಸರ್ಕಾರ್, ಫೂಂಕ್, ಅಬ್ ತಕ್ ಛಪ್ಪನ್, ರಕ್ತ ಚರಿತ್ರ ಮುಂತಾದ ಸಿನೆಮಾಗಳೇ ರಾಮ್ ಆಯ್ದುಕೊಳ್ಳುವ ವೈವಿಧ್ಯಮಯ ಕಥೆಗಳಿಗೆ ಸಾಕ್ಷಿ. ಹಾಗೆಯೆ, ಬೇರೆ ಯಾರು ತೆಗೆದುಕೊಳ್ಳುವ ಮೊದಲೇ ಮುಂಬೈ ಮೇಲಾದ ಭಯೋತ್ಪಾದಕ ದಾಳಿಯನ್ನು ಹಿಂದಿ, ತೆಲುಗು, ತಮಿಳಿನಲ್ಲಿ ಅವರು ನಿರ್ಮಿಸುತ್ತಿದ್ದಾರೆ. 2013ರ ಆರಂಭದಲ್ಲಿ ಚಿತ್ರ ತೆರೆಗೆ ಅಪ್ಪಳಿಸಲಿದೆ ಎಂದು ಅವರು ಹೇಳಿದ್ದಾರೆ. [ದಿ ಅಟಾಕ್ಸ್ ಆಫ್ 26/11 ಚಿತ್ರಪಟ]
ಈ ಚಿತ್ರದ ವಿಶೇಷಗಳೇನು?
ಅಜ್ಮಲ್ ಕಸಬ್ ಪಾತ್ರಧಾರಿ ಯಾರು?
ಈ ಬಗ್ಗೆ ಸಾಕಷ್ಟು ಕುತೂಹಲವಿತ್ತು. ನೈಜ ಜೀವನದಲ್ಲಿ ಕಸಬ್ ಆಡಿದ ಪಾತ್ರವನ್ನು ತೆರೆಯ ಮೇಲೆ ಯಾರು ತರಲಿದ್ದಾರೆ ಎಂಬ ಆಸಕ್ತಿ ಕುದುರಿತ್ತು. ಈಗ ಆ ಪಾತ್ರವನ್ನು ಕಸಬ್ನನ್ನೇ ಹೆಚ್ಚೂಕಡಿಮೆ ಹೋಲುವ ಸಂಜೀವ್ ಜೈಸ್ವಾಲ್ ಎಂಬ ಕಲಾವಿದ ಮಾಡುತ್ತಿದ್ದಾರೆ. ಕಸಬ್ ತೋರಿದ ಕ್ರೌರ್ಯವನ್ನು ಜೈಸ್ವಾಲ್ ತೋರುತ್ತಾರಾ ಎಂಬುದು ಚಿತ್ರ ತೆರೆಕಂಡಾಗ ತಿಳಿಯಲಿದೆ.
ಪೊಲೀಸ್ ಅಧಿಕಾರಿಯಾಗಿ ನಾನಾ ಪಾಟೇಕರ್
ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಖಡಕ್ ನಟ ಮತ್ತು ರಾಮ್ ಅವರ ಫೆವರೆಟ್ ನಟ ನಾನಾ ಪಾಟೇಕರ್ ಅವರು ನಟಿಸುತ್ತಿದ್ದಾರೆ. ಬಹುಶಃ ಇಂಥ ಕ್ರೈಂ ಥ್ರಿಲ್ಲರ್ ಚಿತ್ರದಲ್ಲಿ ನಾನಾಗಿಂತ ಬೇರೆ ನಟನನ್ನು ಆ ಪಾತ್ರದಲ್ಲಿ ಊಹಿಸಿಕೊಳ್ಳುವುದು ಅಸಾಧ್ಯ. ಅಬ್ ತಕ್ ಛಪ್ಪನ್ ಚಿತ್ರದಲ್ಲಿ ನಾನಾ ಪಾಟೇಕರ್ ಅವರು ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಪಾತ್ರದಲ್ಲಿ ಮಿಂಚಿದ್ದರು.
ಎರಡೂವರೆ ಕೋಟಿ ವೆಚ್ಚದಲ್ಲಿ ತಾಜ್ ಸೆಟ್
ಚಿತ್ರಕ್ಕೆ ನೈಜತೆ ತರುವ ಉದ್ದೇಶದಿಂದ ಉಗ್ರರಿಂದ ಆಕ್ರಮಣಕ್ಕೊಳಗಾಗಿದ್ದ ತಾಜ್ ಹೋಟೆಲ್ ಸೆಟ್ ಅನ್ನು 2.5 ಕೋಟಿ ರು. ವೆಚ್ಚದಲ್ಲಿ ರಾಮ್ ನಿರ್ಮಿಸಿದ್ದಾರೆ. ರಬ್ ನೆ ಬನಾದಿ ಜೋಡಿ ಚಿತ್ರಕ್ಕೆ ಅತ್ಯದ್ಭುತ ಸೆಟ್ ನಿರ್ಮಿಸಿದ್ದ ಉದಯ್ ಪ್ರಕಾಶ್ ಸಿಂಗ್ ಅವರು The Attacks of 26/11 ಚಿತ್ರಕ್ಕೂ ಕಲಾ ನಿರ್ದೇಶಕರಾಗಿದ್ದಾರೆ.
ಜೀವನದ ಅತ್ಯಂತ ಪ್ರಮುಖ ಸಿನೆಮಾ
ಈ ಚಿತ್ರ ತಮ್ಮ ಜೀವನದ ಅತ್ಯಂತ ಪ್ರಮುಖ ಸಿನೆಮಾಗಳಲ್ಲಿ ಒಂದು ಎಂದು ರಾಮ್ ಗೋಪಾಲ್ ವರ್ಮಾ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸಹಜವಾಗಿ ತಮ್ಮೆಲ್ಲ ಪ್ರತಿಭೆಯನ್ನು ಚಿತ್ರದ ನಿರ್ಮಾಪಕ, ನಿರ್ದೇಶಕರಾಗಿ ರಾಮ್ ಧಾರೆಯೆರೆಯುತ್ತಿದ್ದಾರೆ. ಈ ಹಿಂದೆ ಕೂಡ ಇಷ್ಟೇ ಮಹತ್ವಾಕಾಂಕ್ಷೆ ಇಟ್ಟು ಅವರು ನಿರ್ಮಿಸಿದ್ದ ಸಿನೆಮಾಗಳು ಫ್ಲಾಪ್ ಆಗಿವೆ. ಆದರೆ, ಈ ಚಿತ್ರ ಕೈಬಿಡುವುದಿಲ್ಲ ಎಂಬ ವಿಶ್ವಾಸ ಅವರಿಗೆ.
7 ನಿಮಿಷಗಳ ಪ್ರಮೋ ಪೊಲೀಸರಿಗಾಗಿ ಬಿಡುಗಡೆ
ಮುಂಬೈ ದಾಳಿ ನಡೆಸಿದ ಉಗ್ರ ಅಜ್ಮಲ್ ಕಸಬ್ ಸಿಕ್ಕಿಬಿದ್ದು ಈಗ ಗಲ್ಲಿಗೇರಿರುವ ಸಂದರ್ಭದಲ್ಲಿ ರಾಮ್ ಗೋಪಾಲ್ ವರ್ಮಾ ಅವರ ಈ ಬ್ಲಾಕ್ ಬಸ್ಟರ್ ಸಿನೆಮಾ ಭಾರೀ ಆಸಕ್ತಿ ಕೆರಳಿಸಿದೆ. ಈ ಸಿನೆಮಾವನ್ನು ಅವರು ಪರಾಗ್ ಸಾಂಘ್ವಿ (ಆಲಂಬ್ರಾ ಎಂಟರ್ಟೇನ್ಮೆಂಟ್) ಜೊತೆ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ 7 ನಿಮಿಷಗಳ ಪ್ರಮೋವನ್ನು ಪೊಲೀಸರಿಗಾಗಿ ಈಗಾಗಲೆ ಬಿಡುಗಡೆ ಮಾಡಲಾಗಿದೆ.
ಅಲ್ ಹುಸೇನಿ ಹಡಗು ಪಯಣದಿಂದ ಆರಂಭ
ಉಗ್ರರು ಸಮುದ್ರದ ಮುಖಾಂತರ ಪಾಕಿಸ್ತಾನದಿಂದ ಮುಂಬೈ ತೀರಕ್ಕೆ ಬರಲು ಬಳಸಿದ ಅಲ್ ಹುಸೇನಿ ಬೋಟಿನ ಮಾದರಿಯನ್ನೇ ಚಿತ್ರದಲ್ಲಿಯೂ ನಿರ್ಮಿಸಲಾಗಿದೆ. ಆ ಪಯಣದಿಂದ ಹಿಡಿದು ಅಜ್ಮಲ್ ಅಮೀರ್ ಕಸಬ್ ಪುಣೆಯ ಯರವಾಡಾ ಜೈಲಿನಲ್ಲಿ ಗಲ್ಲಿಗೇರುವವರೆಗೆ ಚಿತ್ರ ಎಲ್ಲ ಹಂತಗಳನ್ನು ಎಳೆಎಳೆಯಾಗಿ ಮೂರು ಗಂಟೆಯಲ್ಲಿ ಬಿಚ್ಚಿಡಲಿದೆ.
ರಕ್ತಪಾತ್ರ ಮಾತ್ರವಲ್ಲ ಮಾನವೀಯತೆಯೂ ಇದೆ
ಈ ಚಿತ್ರ ಉಗ್ರರು ಹರಿಸಿದ ರಕ್ತಪಾತ್ರವನ್ನು ಮಾತ್ರ ಬಿಂಬಿಸುವುದಿಲ್ಲ. ಭಯೋತ್ಪಾಕರನ್ನು ಹಿಡಲು ಪೊಲೀಸರು, ಕಮಾಂಡೋಗಳು ತೋರಿದ ಸಾಹಸವನ್ನು ಮತ್ತು ಮಾನವೀಯತೆಯ ಮುಖವನ್ನು ಕೂಡ ಚಿತ್ರ ತೆರೆಯ ಮೇಲೆ ತೆರೆದಿಡಲಿದೆ ಎಂದು ವರ್ಮಾ ಹೇಳಿದ್ದಾರೆ. ಚಿತ್ರ ಬಿಡುಗಡೆ ಮಾಡುವ ಮುನ್ನ ಹತರಾದ ಪೊಲೀಸ್ ಅಧಿಕಾರಿಗಳ ಸಂಬಂಧಿಗಳ ಸಮ್ಮುಖದಲ್ಲೂ ಒಮ್ಮೆ ವರ್ಮಾ ಪ್ರದರ್ಶಿಸಲಿ.
ವರ್ಮಾ ಪ್ರಯೋಗಶೀಲತೆಗೊಂದು ಶಭಾಸ್
ಎಂಥದೇ ವಿವಾದವಿರಲಿ ಅದರ ಬೆನ್ನು ರಾಮ್ ಗೋಪಾಲ್ ವರ್ಮಾ ಬೆನ್ನತ್ತುತ್ತಾರೆ ಮತ್ತು ವಿವಾದಗಳೇ ಅವರ ಬೆನ್ನತ್ತಿ ಬರುತ್ತವೆ ಎಂಬುದನ್ನು ಅವರೇ ಸ್ವತಃ ಅಲ್ಲಗಳೆಯುವುದಿಲ್ಲ. ಅವರ ನಿಲುವು, ನಿರ್ಧಾರ, ಸಿನೆಮಾ ಮಾಡುವ ರೀತಿ, ವಿವಾದಗಳೇನೇ ಇರಲಿ, ಅವರ ಡೇರಿಂಗ್ ನೇಚರ್ ಮತ್ತು ಸಿನೆಮಾಗಾಗಿ ಅವರು ಆಯ್ದುಕೊಳ್ಳುವ ವಿಷಯಕ್ಕಾಗಿ ಮತ್ತು ಅವರ ಪ್ರಯೋಗಶೀಲತೆ, ಸೃಜನಶೀಲತೆಗೆ ಅವರಿಗೆ ಒಂದು ಶಭಾಸ್ ಹೇಳಲೇಬೇಕು.