12,000 ಹಾಡು, 20 ಭಾಷೆ ; ಹಾಡು ನಿಲ್ಲಿಸಿದ ಸ್ವರ ಸಾಮ್ರಾಜ್ಞಿ ಆಶಾ ಭೋಸ್ಲೆ - ಬಹು ಅಂಗಾಗ ವೈಫಲ್ಯದಿಂದ ನಿಧನ
ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ ಅನೇಕ ತಾರೆಯರು ಒಬ್ಬರಾದ ಮೇಲೊಬ್ಬರಂತೆ ನಮ್ಮನ್ನು ಅಗಲುತ್ತಿದ್ದಾರೆ. ಧರ್ಮೇಂದ್ರ.. ಬಿ.ಸರೋಜಾ ದೇವಿ.. ಕೋಟಾ ಶ್ರೀನಿವಾಸ್ ರಾವ್.. ಧೀರಜ್ ಕುಮಾರ್.. ಮುಖುಲ್ ದೇವ್.. ಫಿಶ್ ವೆಂಕಟ್.. ದಿನೇಶ್ ಮಂಗಳೂರು.. ಯಶವಂತ ಸರದೇಶಪಾಂಡೆ.. ರಾಜು ತಾಳಿಕೋಟೆ.. ಪಂಕಜ್ ಧೀರ್.. ಸತೀಶ್ ಶಾ.. ಗೋವರ್ಧನ್ ಅಸ್ರಾನಿ.. ಅಭಿನಯ್.. ಝರೀನ್ ಖಾನ್..ಕಾಮಿನಿ ಕೌಶಾಲ್..
ಹೀಗೆ ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ ತಾರೆಯರನ್ನು ಒಬ್ಬರಾದ ಮೇಲೊಬ್ಬರಂತೆ ಕಳೆದುಕೊಂಡು ಚಿತ್ರರಂಗ ದುಃಖದಲ್ಲಿದೆ. ಹೀಗಿರುವಾಗ ಇಂದು (ಏಪ್ರಿಲ್ 12) ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಬರ ಸಿಡಿಲು ಬಡಿದಿದ್ದು, ಭಾರತೀಯ ಚಿತ್ರರಂಗದ ಸ್ವರ ಸಾಮ್ರಾಜ್ಞಿ ಆಶಾ ಭೋಸ್ಲೆ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಹೃದಯಾಘಾತದ ಹಿನ್ನೆಲೆ ಶನಿವಾರ (ಏಪ್ರಿಲ್ 11) ಆಶಾ ಭೋಸ್ಲೆ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರವಿವಾರ ಚಿಕಿತ್ಸೆ ಫಲಿಸದೆ ಆಶಾ ಭೋಸ್ಲೆ ನಿಧನರಾಗಿದ್ದು, ಬಹು ಅಂಗಾಂಗ ವೈಫಲ್ಯದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಆಶಾ ಭೋಸ್ಲೆ ಅವರ ನಿಧನದ ಸುದ್ದಿಯನ್ನು ಬಿಜೆಪಿ ನಾಯಕ ಆಶಿಶ್ ಶೆಲಾರ್ ಈ ದೃಢಪಡಿಸಿದ್ದಾರೆ.
ಆಶಾ ಭೋಂಸ್ಲೆ ಅವರ ನಿಧನಕ್ಕೆ ದೇಶದ ಗಣ್ಯರು, ಬಾಲಿವುಡ್ ತಾರೆಯರು ಮತ್ತು ಜಾಗತಿಕ ಮಟ್ಟದ ಸಂಗೀತಗಾರರು ಕಂಬನಿ ಮಿಡಿದಿದ್ದಾರೆ. 'ಆಶಾ ತಾಯಿ' ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಆಶಾ ಭೋಸ್ಲೆ ಕೇವಲ ಒಬ್ಬ ಗಾಯಕಿಯಾಗಿರಲಿಲ್ಲ. ಬದಲಿಗೆ ಭಾರತೀಯ ಸಾಂಸ್ಕೃತಿಕ ಲೋಕದ ಅವಿಭಾಜ್ಯ ಅಂಗವಾಗಿದ್ದರು.
ಆಶಾ ಅವರ ಅಕ್ಕ ಲತಾ ಮಂಗೇಶ್ಕರ್ ಅವರ ಕಂಠ 'ದೈವಿಕ' ಎಂದು ಗುರುತಿಸಲ್ಪಟ್ಟರೆ, ಆಶಾ ಅವರ ಧ್ವನಿ 'ವೈವಿಧ್ಯತೆ'ಗೆ ಹೆಸರಾಗಿತ್ತು. ಶಾಸ್ತ್ರೀಯ ಸಂಗೀತದಿಂದ ಹಿಡಿದು ಪಾಪ್, ಕ್ಯಾಬರೆ ಮತ್ತು ಗಜಲ್ ವರೆಗೆ ಅವರು ನೀಡಿದ ಕೊಡುಗೆ ಅಪಾರ. ಪ್ರತಿಯೊಂದು ಹಾಡಿಗೂ ಅವರು ತುಂಬುತ್ತಿದ್ದ ಜೀವ ಮತ್ತು ಭಾವನೆಗಳು ಇಂದಿಗೂ ಅಪ್ರತಿಮ.
ಅಕ್ಕ ಲತಾ ಮಂಗೇಶ್ಕರ್ ಅವರ ನೆರಳಿನಿಂದ ಹೊರಬಂದು, ತನ್ನದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡಿದ್ದ ಆಶಾ ಭೋಸ್ಲೆ, ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ 12,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದರು. ಈ ಮೂಲಕ ಅಪರೂಪದ ದಾಖಲೆ ಬರೆದಿದ್ದರು.

ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್ ಮತ್ತು ಆಶಾ ಭೋಸ್ಲೆ ಅವರ ಜೋಡಿ ಬಾಲಿವುಡ್ ಸಂಗೀತದ ದಿಕ್ಕನ್ನೇ ಬದಲಿಸಿತು. ''ದಮ್ ಮಾರೋ ದಮ್ ಇರಬಹುದು''.. ''ಚುರಾ ಲಿಯಾ ಹೈ ತುಮ್ನೆ'' ಹಾಡು ಇರಬಹುದು. ವೆಸ್ಟರ್ನ್ ಬೀಟ್ಸ್ ಮತ್ತು ಇಂಡಿಯನ್ ಕ್ಲಾಸಿಕ್ ಸಂಗೀತ ಸಮಿಶ್ರದಂತೆ ಇರುವ ಇವರ ಈ ಹಾಡುಗಳು ಇಂದಿಗೂ ಯುವ ಪೀಳಿಗೆಯನ್ನು ಹುಚ್ಚೆದ್ದು ಕುಣಿಸುತ್ತವೆ.
ಗಾಯಕಿಯಾಗಿ ಮಾತ್ರವಲ್ಲದೆ ಒಬ್ಬ ವ್ಯಕ್ತಿಯಾಗಿಯೂ ಆಶಾ ಭೋಸ್ಲೆ ಅವರ ವ್ಯಕ್ತಿತ್ವ ಸ್ಫೂರ್ತಿದಾಯಕವಾದದ್ದು. ಜೀವನದಲ್ಲಿ ಎದುರಾದ ವೈಯಕ್ತಿಕ ನೋವುಗಳು ಮತ್ತು ವೃತ್ತಿಜೀವನದ ಸವಾಲುಗಳನ್ನು ಅವರು ನಗುಮುಖದಿಂದಲೇ ಎದುರಿಸಿದರು. ಸಂಗೀತದ ಹೊರತಾಗಿ ಅಡುಗೆ ಕಲೆಯಲ್ಲೂ ಅಪಾರ ಆಸಕ್ತಿ ಹೊಂದಿದ್ದ ಆಶಾ ಭೋಸ್ಲೆ ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ತಮ್ಮದೇ ಆದ ರೆಸ್ಟೋರೆಂಟ್ಗಳನ್ನು ಹೊಂದಿದ್ದರು.
ಪದ್ಮ ವಿಭೂಷಣ (2008), ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (2000) ಮಹಾರಾಷ್ಟ್ರ ಭೂಷಣ (1997), ನೈಟಿಂಗೇಲ್ ಆಫ್ ಏಷ್ಯಾ, ಸಿಂಗರ್ ಆಫ್ ದಿ ಮಿಲೇನಿಯಂ, ಹೀಗೆ ಹತ್ತು ಹಲವು ಪ್ರಶಸ್ತಿ ಮತ್ತು ಗೌರವಕ್ಕೆ ಭಾಜನರಾಗಿದ್ದ ಆಶಾ ಭೋಸ್ಲೆ ''ಉಮ್ರಾವ್ ಜಾನ್'' ಮತ್ತು ''ಇಜಾಝತ್'' ಚಿತ್ರಕ್ಕೆ ಎರಡು ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದರು. 2001ರಲ್ಲಿ ಜೀವನಶ್ರೇಷ್ಠ ಸಾಧನೆಗಾಗಿ ಫಿಲ್ಮ್ಫೇರ್ ಲೈಫ್ಟೈಮ್ ಅಚೀವ್ಮೆಂಟ್ ಅವಾರ್ಡ್ ಕೂಡ ಆಶಾ ಭೋಸ್ಲೆ ಅವರಿಗೆ ಲಭಿಸಿತ್ತು.
ಹೀಗೆ ತಮ್ಮ ಬದುಕಿನ 8 ದಶಕ ಸಂಗೀತಕ್ಕೆ ಮುಡಿಪಾಗಿಟ್ಟ ಆಶಾ ಭೋಸ್ಲೆ ಅವರ ಅಂತಿಮ ಸಂಸ್ಕಾರವು ಇಂದು (ಏಪ್ರಿಲ್ 12) ಸಂಜೆ 4 ಗಂಟೆಗೆ ದಾದರ್ನ ಶಿವಾಜಿ ಪಾರ್ಕ್ ಸ್ಮಶಾನ ಭೂಮಿಯಲ್ಲಿ ನಡೆಯಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.


Click it and Unblock the Notifications











