'ದಿ ಕೇರಳ ಸ್ಟೋರಿ' ತಂಡಕ್ಕೆ ಅಪಘಾತ: ನಿರ್ದೇಶಕ ಸುದೀಪ್ತೊ ಸೇನ್, ನಟಿ ಅದಾ ಶರ್ಮಾಗೆ ಪೆಟ್ಟು
ವಿವಾದಾತ್ಮಕ 'ದಿ ಕೇರಳ ಸ್ಟೋರಿ' ದೇಶಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 100 ಕೋಟಿ ಕ್ಲಬ್ ಸೇರಿ ದಾಖಲೆ ಬರೆದಿದೆ. ಸದ್ಯ ಚಿತ್ರತಂಡ ಸಕ್ಸಸ್ ಸಂಭ್ರಮದಲ್ಲಿ ಊರೂರು ಸುತ್ತಾಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದೆ. ಇದೆಲ್ಲದರ ನಡುವೆ ರಸ್ತೆ ಅಪಘಾತದಲ್ಲಿ ನಿರ್ದೇಶಕ ಸುದೀಪ್ತೋ ಸೇನ್, ನಟಿ ಅದಾ ಶರ್ಮಾ ಗಾಯಗೊಂಡಿರುವ ಸುದ್ದಿ ಬಂದಿದೆ.
ಮುಂಬೈನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಹೋಗುವಾಗ ತಂಡ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ. ಕೇರಳದಲ್ಲಿ ಬಲವಂತವಾಗಿ ಯುವತಿಯರನ್ನು ಮತಾಂತರ ಮಾಡಿ ಭಯೋತ್ಪಾದನೆ ಚಟುವಟಿಕೆ ನೂಕಲಾಗುತ್ತಿದೆ ಎನ್ನುವ ವಿಚಾರವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. 'ದಿ ಕೇರಳ ಸ್ಟೋರಿ' ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ವೀಕೆಂಡ್ ಮಾತ್ರವಲ್ಲ ವಾರದ ದಿನಗಳಲ್ಲೂ ಸಿನಿಮಾ ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿದೆ. ಕೆಲವೆಡೆ ಸಿನಿಮಾ ಪ್ರದರ್ಶನಕ್ಕೆ ಹಿಂದೇಟು ಹಾಕಿದರೆ ಇನ್ನು ಕೆಲವೆಡೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.

ನಿನ್ನೆ(ಮೇ 14) ಚಿತ್ರತಂಡ ಮುಂಬೈನಲ್ಲಿ ಕಾರ್ಯಕ್ರಮ ಮುಗಿಸಿ ತೆಲಂಗಾಣದ ಕರೀಂ ನಗರಕ್ಕೆ ತೆರಳಬೇಕಿತ್ತು. ಅಪಘಾತವಾದ ಕಾರಣ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ಇನ್ನು 'ದಿ ಕೇರಳ ಸ್ಟೋರಿ' ತಂಡಕ್ಕೆ ಅಪಘಾತವಾಗಿದೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಚಿತ್ರತಂಡವೇ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಎಲ್ಲದ್ದರೂ ಬ್ರೇಕ್ ಹಾಕಿದೆ.

ನಿರ್ದೇಶಕ ಸುದೀಪ್ತೋ ಸೇನ್, ಅದಾ ಶರ್ಮಾ ಇಬ್ಬರು ಪ್ರತಿಕ್ರಿಯೆ ನೀಡಿದ್ದಾರೆ."ನಾನು ಚೆನ್ನಾಗಿದ್ದೇನೆ ಸ್ನೇಹಿತರೇ. ನಮ್ಮ ಅಪಘಾತದ ಬಗ್ಗೆ ಹರಿದಾಡುತ್ತಿರುವ ಸುದ್ದಿಯಿಂದಾಗಿ ನನಗೆ ಸಾಕಷ್ಟು ಸಂದೇಶಗಳು ಬರುತ್ತಿವೆ. ಇಡೀ ತಂಡ, ನಾವೆಲ್ಲರೂ ಚೆನ್ನಾಗಿದ್ದೇವೆ, ಗಂಭೀರವಾದದ್ದೇನೂ ಇಲ್ಲ, ಆದರೆ ನಿಮ್ಮೆಲ್ಲರ ಕಾಳಜಿಗೆ ಧನ್ಯವಾದ" ಎಂದು ಅದಾ ಶರ್ಮಾ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಆ ನಂತರ ಅಭಿಮಾನಿಗಳ ಮತ್ತಷ್ಟು ಟ್ವೀಟ್ಗಳಿಗೆ ರಿಪ್ಲೇ ಮಾಡಿದ್ದಾರೆ.
ಇದಕ್ಕೂ ಮುನ್ನ ನಿರ್ದೇಶಕ ಸುದಿಪ್ತೋ ಸೇನ್ ಟ್ವೀಟ್ ಮಾಡಿ "ಇಂದು ನಾವು ನಮ್ಮ ಚಿತ್ರದ ಬಗ್ಗೆ ಮಾತನಾಡಲು ಕರೀಂನಗರಕ್ಕೆ ಭೇಟಿ ನೀಡಬೇಕಾಗಿತ್ತು. ದುರದೃಷ್ಟವಶಾತ್ ತುರ್ತು ಆರೋಗ್ಯ ಸಮಸ್ಯೆಯಿಂದಾಗಿ ನಮಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಕರೀಂನಗರದ ಜನತೆಗಯಲ್ಲಿ ಕ್ಷಮೆಯಾಚಿಸುತ್ತೇನೆ. ನಮ್ಮ ಹೆಣ್ಣು ಮಕ್ಕಳನ್ನು ರಕ್ಷಿಸಲು ಈ ಸಿನಿಮಾ ಮಾಡಿದ್ದೇವೆ. ದಯವಿಟ್ಟು ನಮ್ಮನ್ನು ಬೆಂಬಲಿಸುತ್ತಿರಿ" ಎಂದು ಬರೆದುಕೊಂಡಿದ್ದರು.
ಅಪಘಾತದ ವಿಚಾಋ ವೈರಲ್ ಆಗುತ್ತಿದ್ದಂತೆ ಮತ್ತೊಂದು ಟ್ವೀಟ್ ಮಾಡಿದ ನಿರ್ದೇಶಕ "ನಮ್ಮ ಆರೋಗ್ಯದ ಬಗ್ಗೆ ನಿಮ್ಮ ಕಾಳಜಿಗಾಗಿ ತುಂಬಾ ಧನ್ಯವಾದಗಳು. ನಿಮ್ಮ ಕರೆಗಳು ಮತ್ತು ಕಾಳಜಿಯ ಸಂದೇಶಗಳಲ್ಲಿ ನಾವು ಮುಳುಗಿದ್ದೇವೆ. ನಾವು ಈಗ ಸಂಪೂರ್ಣವಾಗಿ ಚೆನ್ನಾಗಿದ್ದೇವೆ. ನಾಳೆ ನಾವು ನಮ್ಮ ಪ್ರಚಾರ ಕಾರ್ಯಕ್ರಮಗಳನ್ನು ಪುನರಾರಂಭಿಸುತ್ತೇವೆ. ದಯವಿಟ್ಟು ನಮ್ಮನ್ನು ಬೆಂಬಲಿಸುವುದನ್ನು ಮುಂದುವರಿಸಿ. ಪ್ರೀತಿ ಮತ್ತು ಬೆಳಕು" ಎಂದಿದ್ದಾರೆ.
ಇನ್ನು 'ದಿ ಕೇರಳ ಸ್ಟೋರಿ' ಸಿನಿಮಾ ಕಲೆಕ್ಷನ್ ವಿಚಾರಕ್ಕೆ ಬಂದರೆ ಶನಿವಾರದ ವೇಳೆಗೆ ಸಿನಿಮಾ 112.99 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಅಂದಾಜಿಸಲಾಗಿದೆ. ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ನಿಧಾನವಾಗಿ ವಿದೇಶಗಳಲ್ಲಿ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಆಸ್ಟ್ರೇಲಿಯಾದಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ. 40ಕ್ಕೂ ಅಧಿಕ ದೇಶಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಶೀಘ್ರದಲ್ಲೇ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲೂ ಸಿನಿಮಾ ಪ್ರದರ್ಶನ ಪುನರಾರಂಭವಾಗುವ ಸಾಧ್ಯತೆಯಿದೆ.
ಪಶ್ಚಿಮ ಬಂಗಾಳ ಸರ್ಕಾರ ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆ ಕಾರಣ ನೀಡಿ 'ದಿ ಕೇರಳ ಸ್ಟೋರಿ' ಸಿನಿಮಾ ಬ್ಯಾನ್ ಮಾಡಿದೆ. ಪ್ರೇಕ್ಷಕರು ಸಿನಿಮಾ ನೋಡಲು ಬರುತ್ತಿಲ್ಲ ಎನ್ನುವ ನೆಪವೊಡ್ಡಿ ತಮಿಳುನಾಡಿನ ಥಿಯೇಟರ್ ಮಾಲೀಕರು ಸಿನಿಮಾ ಪ್ರದರ್ಶನಕ್ಕೆ ಬ್ರೇಕ್ ಹಾಕಿದ್ದಾರೆ. ಆದರೆ 2 ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.


Click it and Unblock the Notifications











