ಮೋದಿ ಬೆಂಬಲ.. ಮಧ್ಯಪ್ರದೇಶದಲ್ಲಿ ಟ್ಯಾಕ್ಸ್ ಫ್ರೀ.. ಮತ್ತೊಂದು 'ಕಾಶ್ಮೀರ್ ಫೈಲ್ಸ್' ಆಗುತ್ತಾ 'ದಿ ಕೇರಳ ಸ್ಟೋರಿ'?
ದೇಶಾದ್ಯಂತ ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ' ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕೆಲವೆಡೆ ಟೀಕೆ, ವಿವಾದಕ್ಕೆ ಹೆದರಿ ಸಿನಿಮಾ ಪ್ರದರ್ಶಿಸದಿರಲು ಥಿಯೇಟರ್ ಮಾಲೀಕರು ನಿರ್ಧರಿಸಿದ್ದರು. ಇನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಈ ಚಿತ್ರವನ್ನು ಬೆಂಬಲಿಸಿ ಮಾತನಾಡಿದ್ದಾರೆ. ಮಧ್ಯಪ್ರದೇಶ ಸರ್ಕಾರ ತರಿಗೆ ವಿನಾಯಿತಿ ಘೋಷಿಸಿದೆ. ಸಿನಿಮಾ ನಿಧಾನವಾಗಿ ಸಂಚಲನ ಸೃಷ್ಟಿಸುತ್ತಿದೆ.
ಕೇರಳದಲ್ಲಿ ಕೆಲ ಹುಡುಗಿಯರನ್ನು ಬಲವಂತವಾಗಿ ಮತಾಂತರ ಮಾಡಿ ಭಯೋತ್ಪಾದನೆಗೆ ದೂಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿತ್ತು. ಇದೇ ವಿಚಾರವನ್ನು ಆಧರಿಸಿ ನಿರ್ಮಾಣವಾಗಿರುವ 'ದಿ ಕೇರಳ ಸ್ಟೋರಿ' ಸಿನಿಮಾ ಭಾರೀ ವಿವಾದ ಸೃಷ್ಟಿಸಿದೆ. ಈ ಸಿನಿಮಾದಲ್ಲಿ ಹೇಳಿರುವುದು ಬರೀ ಕಟ್ಟು ಕಥೆ ಎಂದು ಕಾಂಗ್ರೆಸ್ ಸೇರಿದಂತೆ ಕೇರಳದಲ್ಲಿ ಕೆಲ ಪಕ್ಷಗಳು ಆಕ್ರೋಶ ವ್ಯಕ್ತಪಡಿಸ್ತಿವೆ. ಸಿನಿಮಾ ಬಿಡುಗಡೆಗೆ ಅವಕಾಶ ಕೊಡಬಾರದು ಎನ್ನುವ ಆಗ್ರಹ ಕೂಡ ವ್ಯಕ್ತವಾಗಿತ್ತು. ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಸಿನಿಮಾ ರಿಲೀಸ್ಗೆ ತಡೆ ನೀಡಲು ಕೋರ್ಟ್ ನಿರಾಕರಸಿತ್ತು.

ವಿರೋಧದ ನಡುವೆಯೂ 'ದಿ ಕೇರಳ ಸ್ಟೋರಿ' ಚಿತ್ರವನ್ನು ಸಾಕಷ್ಟು ಜನ ಬೆಂಬಲಿಸುತ್ತಿದ್ದಾರೆ. ಚಿತ್ರದಲ್ಲಿ ಅದಾ ಶರ್ಮಾ, ಸಿದ್ದಿ ಇದಾನಿ, ಯೋಗಿತಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸುದೀಪ್ತೋ ಸೇನ್ ನಿರ್ದೇಶನದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ತಿದೆ. ಇದೆಲ್ಲದರ ನಡುವೆ ಸಿನಿಮಾ ನೋಡಿದವರು, ಚೆನ್ನಾಗಿದೆ ಎಮೋಷನಲ್ ಕಂಟೆಂಟ್ ಸಿನಿಮಾದಲ್ಲಿದೆ. ಇಂತಹ ಸಿನಿಮಾ ಮಾಡೋಕೆ ಧೈರ್ಯ ಬೇಕು ಎನ್ನುತ್ತಿದ್ದಾರೆ. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಚಿತ್ರಕ್ಕೆ ಸಾಧಾರಣ ಓಪನಿಂಗ್ ಸಿಕ್ಕಿದೆ. ಮೊದಲ ದಿನ ಸಿನಿಮಾ ಅಂದಾಜು 7ರಿಂದ 8 ಕೋಟಿ ರೂ. ಗಳಿಸಿದೆ.

'ದಿ ಕೇರಳ ಸ್ಟೋರಿ' ಸಿನಿಮಾ ನಿಧಾನವಾಗಿ ಥಿಯೇಟರ್ಗಳಲ್ಲಿ ಸದ್ದು ಮಾಡುವ ಸುಳಿವು ಸಿಗುತ್ತಿದೆ. ಸಿನಿಮಾ ಮೆಚ್ಚಿಕೊಂಡವರು ಮತ್ತಷ್ಟು ಜನರಿಗೆ ಹೇಳಿ ಮೌತ್ ಟಾಕ್ನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಥಿಯೇಟರ್ಗಳಿಗೆ ಬರುವ ನಿರೀಕ್ಷೆಯಿದೆ. ಬಳ್ಳಾರಿಯಲ್ಲಿ ಚುನಾವಣ ಪ್ರಚಾರದಲ್ಲಿ ಭಾಗಿ ಆಗಿದ್ದ ಪ್ರಧಾನಿ ನರೇಂದ್ರ ಮೋದಿ ಕೂಡ 'ದಿ ಕೇರಳ ಸ್ಟೋರಿ' ಸಿನಿಮಾ ಬಗ್ಗೆ ಮಾತನಾಡಿದ್ದಾರೆ. "ಇದು ಕೇರಳದಲ್ಲಿ ನಡೆದಿರುವ ಕರಾಳ ಘಟನೆಗಳನ್ನು ಆಧರಿಸಿದ ಸಿನಿಮಾ, ಕಾಂಗ್ರೆಸ್ನವರು ಚಿತ್ರವನ್ನು ಬ್ಯಾನ್ ಮಾಡಲು ಒತ್ತಾಯಿಸಿ ಭಯೋತ್ಪಾದಕರ ಜೊತೆಗೆ ನಿಂತಿದ್ದಾರೆ" ಎಂದಿದ್ದಾರೆ.

'ದಿ ಕೇರಳ ಸ್ಟೋರಿ' ಸಿನಿಮಾ ಕೇರಳದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ಚಿತ್ರಣವನ್ನು ಬಟಾಬಯಲು ಮಾಡಿದೆ. ದುರಾದೃಷ್ಟಕರ ಸಂಗತಿ ಏನು ಅಂದ್ರೆ ಕಾಂಗ್ರೆಸ್ ಪಕ್ಷ ಈ ಭಯೋತ್ಪಾದಕರ ಮನಸ್ಥಿತಿಯವರ ಬೆಂಬಲಕ್ಕೆ ನಿಂತಿದೆ. ಆ ಮೂಲಕ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಾಲದ್ದಕ್ಕೆ ಈ ಭಯೋತ್ಪಾದನೆಯ ಪ್ರವೃತ್ತಿಯೊಂದಿಗೆ ನಂಟು ಹೊಂದಿರುವರ ಜೊತೆ ಹಿಂಬಾಗಿಲಿನ ರಾಜಕೀಯ ಮಾತುಕತೆಗಳನ್ನು ಕಾಂಗ್ರೆಸ್ ನಡೆಸುತ್ತಿದೆ" ಪ್ರಧಾನಿ ಮೋದಿ ಚಾಟಿ ಬೀಸಿದ್ದಾರೆ.
ಇನ್ನು ಮಧ್ಯಪ್ರದೇಶದಲ್ಲಿ 'ದಿ ಕೇರಳ ಸ್ಟೋರಿ' ಚಿತ್ರಕ್ಕೆ ಸರ್ಕಾರ ತೆರೆಗೆ ವಿನಾಯಿತಿ ನೀಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ ನೀಡಿದ್ದಾರೆ. "ದಿ ಕೇರಳ ಸ್ಟೋರಿ ಸಿನಿಮಾ ಭಯೋತ್ಪಾದನೆಯ ಭಯಾನಕ ಸತ್ಯವನ್ನು ಬಹಿರಂಗಪಡಿಸಿದೆ. ಮಧ್ಯಪ್ರದೇಶದಲ್ಲಿ ಚಿತ್ರದ ತೆರಿಗೆ ವಿನಾಯಿತಿಗೆ ನಿರ್ಧರಿಸಲಾಗಿದೆ ಎಂದು ಬರೆದು ವಿಡಿಯೋ ಶೇರ್ ಮಾಡಿದ್ದಾರೆ. ಈ ಹಿಂದೆ 'ದಿ ಕಾಶ್ಮೀರ್ ಫೈಲ್ಸ್' ಚಿತ್ರಕ್ಕೂ ಇದೇ ರತಿ ಕೆಲವೆಡೆ ತೆರಿಗೆ ವಿನಾಯಿತಿ ಘೋಷಿಸಲಾಗಿತ್ತು. ಮೊದಲ ದಿನ ಕೇವಲ 3.5 ಕೋಟಿ ರೂ. ಗಳಿಸಿದ ಸಿನಿಮಾ ಮುಂದೆ 250 ಕೋಟಿ ರೂ. ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. 'ದಿ ಕೇರಳ ಸ್ಟೋರಿ' ವಿಚಾರದಲ್ಲೂ ಇದೇ ಪುನರಾವರ್ತನೆ ಆಗುವ ನಿರೀಕ್ಷೆಯಿದೆ.


Click it and Unblock the Notifications











