ಫಸ್ಟ್ ವೀಕೆಂಡ್ ಬಾಕ್ಸಾಫೀಸ್ನಲ್ಲಿ 'ದಿ ಕೇರಳ ಸ್ಟೋರಿ' ಆರ್ಭಟ: 3 ದಿನಕ್ಕೆ ವಿವಾದಾತ್ಮಕ ಚಿತ್ರ ಗಳಿಸಿದ್ದೆಷ್ಟು?
ದೇಶಾದ್ಯಂತ ಭಾರೀ ಚರ್ಚೆ ಹುಟ್ಟಾಕ್ಕಿರುವ 'ದಿ ಕೇರಳ ಸ್ಟೋರಿ' ನಿಧಾನವಾಗಿ ಸದ್ದು ಮಾಡಲು ಆರಂಭಿಸಿದೆ. ಈಗಾಗಲೇ ಕೆಲವೆಡೆ ಸಿನಿಮಾ ಪ್ರದರ್ಶನ ನಿಲ್ಲಿಸಲಾಗುತ್ತಿದೆ. ಆದರೂ ಕೂಡ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ. ಮೊದಲ ದಿನ ಸಾಧಾರಣ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ ಶನಿವಾರ, ಭಾನುವಾರ ಚೇತರಿಸಿಕೊಂಡಿದೆ. ಇದು ಮತ್ತೊಂದು 'ಕಾಶ್ಮೀರ್ ಫೈಲ್ಸ್' ಆಗುವ ಸುಳಿವು ಸಿಗುತ್ತಿದೆ.
ಸುದೀಪ್ತೊ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಚಿತ್ರದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ ಹಾಗೂ ಸೋನಿಯಾ ಬಾಲಾನಿ ಲೀಡ್ ರೋಲ್ಗಳಲ್ಲಿ ನಟಿಸಿದ್ದಾರೆ. ರಿಲೀಸ್ಗೂ ಮೊದಲೇ ಈ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡಬಾರದು ಎಂದು ಕೇರಳದಲ್ಲಿ ಒತ್ತಡ ಶುರುವಾಗಿತ್ತು. ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳೇ ಸಿನಿಮಾ ಬಿಡುಗಡೆ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸಿನಿಮಾ ಬಿಡುಗಡೆಗೆ ಕೋರ್ಟ್ ಅಸ್ತು ಎಂದಿತ್ತು. ಇದೀಗ ಫಸ್ಟ್ ವೀಕೆಂಡ್ ಮುಗಿಸಿ 4ನೇ ದಿನ ಸಿನಿಮಾ ಪ್ರದರ್ಶನ ಕಾಣ್ತಿದೆ.

ಕೇರಳದಲ್ಲಿ ಬಲವಂತವಾಗಿ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಿ ಅವರನ್ನು ಭಯೋತ್ಪಾದನೆಗೆ ದೂಡಲಾಗುತ್ತಿದೆ ಎನ್ನುವ ವಿಚಾರವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ವ್ಯವಸ್ಥಿತ ಮತಾಂತರ ಸುತ್ತಾ ಸಿನಿಮಾ ಕಥೆ ಸುತ್ತುತ್ತದೆ. ಈ ಸಿನಿಮಾದಲ್ಲಿ ಹೇಳಿರುವುದು ಕಟ್ಟು ಕತೆ, ಇದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಹಾಗಾಗಿ ಸಿನಿಮಾ ಬಿಡುಗಡೆ ಮಾಡಲು ಅವಕಾಶ ಕೊಡಬಾರದು ಎಂದು ಕೆಲವರು ಆಗ್ರಹಿಸಿದ್ದರು. ಐಪಿಎಲ್ ಭರಾಟೆ ನಡುವೆಯೂ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರೇಕ್ಷಕರನ್ನು ಥಿಯೇಟರ್ಗಳಿಗೆ ಸೆಳೀತಿದೆ.
ಫಸ್ಟ್ ವೀಕೆಂಡ್ 35. 25 ಕೋಟಿ ರೂ. ಗಳಿಕೆ
ಭಾರತದಲ್ಲಿ ಶುಕ್ರವಾರ 8.03 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಸಿನಿಮಾ ಶನಿವಾರ 11.22 ಕೋಟಿ ರೂ. ಹಾಗೂ ಭಾನುವಾರ 16 ಕೋಟಿ ರೂ. ಗಳಿಕೆ ಕಂಡು ಸಂಚಲನ ಸೃಷ್ಟಿಸಿದೆ. ಒಟ್ಟಾರೆ ಫಸ್ಟ್ ವೀಕೆಂಡ್ನಲ್ಲಿ ಸಿನಿಮಾ 35. 25 ಕೋಟಿ ರೂ. ಬಾಚಿ ಗೆಲುವಿನ ಓಟ ಮುಂದುವರೆಸಿದೆ. ಶನಿವಾರಕ್ಕಿಂತ ಭಾನುವಾರ ಸಿನಿಮಾ ನೋಡಿದವರ ಸಂಖ್ಯೆ ಹೆಚ್ಚಾಗಿದ್ದು ವಾರದ ದಿನವಾದ ಸೋಮವಾರ ಕೂಡ ಒಳ್ಳೆ ಗಳಿಕೆ ಕಾಣುವ ಸಾಧ್ಯತೆಯಿದೆ. ಕಳೆದ ವರ್ಷ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಕೂಡ ಇದೇ ರೀತಿ ನಿಧಾನವಾಗಿ ಬಾಕ್ಸಾಫೀಶ್ ಶೇಕ್ ಮಾಡಿತ್ತು.

ತಮಿಳುನಾಡಿನಲ್ಲಿ ಪ್ರದರ್ಶನ ರದ್ದು
ಚಿತ್ರಕ್ಕೆ ಸಿಗುತ್ತಿರುವ ನೀರಸ ಪ್ರತಿಕ್ರಿಯೆ ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ತಮಿಳುನಾಡಿನ ಬಹುತೇಕ ಕಡೆಗಳಲ್ಲಿ ಸಿನಿಮಾ ಪ್ರದರ್ಶನ ನಿಲ್ಲಿಸಲಾಗಿದೆ. ಈ ಬಗ್ಗೆ ತಮಿಳುನಾಡು ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ಮಾಲೀಕರ ಸಂಘದ ಅಧ್ಯಕ್ಷ ತಿರುಪ್ಪೂರ್ ಸುಬ್ರಮಣ್ಯ ಮಾತನಾಡಿ "ಪಿವಿಆರ್ನಂತಹ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಪ್ರದರ್ಶಿಸುವ ಥಿಯೇಟರ್ಗಳು ಮಾತ್ರ 'ದಿ ಕೇರಳ ಸ್ಟೋರಿ' ಪ್ರದರ್ಶನಕ್ಕೆ ಮುಂದಾಗಿದ್ದವು. ಉಳಿದಂತೆ ಸ್ಥಳಿಯ ಥಿಯೇಟರ್ನವರು ಸಿನಿಮಾ ಪ್ರದರ್ಶನಕ್ಕೆ ಮುಂದಾಗಿರಲಿಲ್ಲ. ಸ್ಟಾರ್ಗಳು ಚಿತ್ರದಲ್ಲಿ ಇಲ್ಲದೇ ಇರುವುದೇ ಇಲ್ಲಿ ಸಿನಿಮಾ ಪ್ರದರ್ಶನಕ್ಕೆ ನಿರಾಸಕ್ತಿ ತೋರಲು ಕಾರಣ" ಎಂದಿದ್ದಾರೆ.
"ಇನ್ನು ಕೊಯಂಬತ್ತೂರಿನಲ್ಲಿ 2 ದಿನ ಸಿನಿಮಾ ಪ್ರದರ್ಶನ ಮಾಡಿದ್ದರು. ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಪ್ರತಿಭಟನೆ, ವಿವಾದ ಹಾಗೂ ಪ್ರೇಕ್ಷಕರು ನಿರಾಸಕ್ತಿ ಕಾರಣದಿಂದ ಥಿಯೇಟರ್ ಮಾಲೀಕರು ಸಿನಿಮಾ ಪ್ರದರ್ಶನ ರದ್ದು ಮಾಡಿದ್ದಾರೆ" ಎಂದು ಅವರು ಹೇಳಿದ್ದಾರೆ. ಒಟ್ಟಾರೆ ಸಾಕಷ್ಟು ಗೊಂದಲದ ನಡುವೆಯೂ 'ದಿ ಕೇರಳ ಸ್ಟೋರಿ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











