ಮರೆಯಾದ ಮತ್ತೊಂದು ದಂತಕಥೆ, ಬಾಲಿವುಡ್ನ ಪ್ರಖ್ಯಾತ ನಟ ಸತೀಶ್ ಶಾ ನಿಧನ
ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಇದಕ್ಕೆ ಸತೀಶ್ ಶಾ ಅವರ ನಿಧನ ಮತ್ತೊಂದು ಉದಾಹರಣೆ.
ಹೌದು, ಈ ವರ್ಷ ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ ಅನೇಕ ತಾರೆಯರು ಒಬ್ಬರಾದ ಮೇಲೊಬ್ಬರಂತೆ ನಮ್ಮನ್ನು ಅಗಲುತ್ತಿದ್ದಾರೆ. ಬಿ.ಸರೋಜಾ ದೇವಿ.. ಕೋಟಾ ಶ್ರೀನಿವಾಸ್ ರಾವ್.. ಧೀರಜ್ ಕುಮಾರ್.. ಮುಖುಲ್ ದೇವ್.. ಫಿಶ್ ವೆಂಕಟ್.. ದಿನೇಶ್ ಮಂಗಳೂರು.. ಯಶವಂತ ಸರದೇಶಪಾಂಡೆ.. ರಾಜು ತಾಳಿಕೋಟೆ.. ಪಂಕಜ್ ಧೀರ್.. ಗೋವರ್ಧನ್ ಅಸ್ರಾನಿ..

ಹೀಗೆ ಭಾರತೀಯ ಚಿತ್ರರಂಗಕ್ಕೆ ಸೇವೆಯನ್ನು ಸಲ್ಲಿಸಿ.ತಮ್ಮದೇ ಕೊಡುಗೆಯನ್ನು ನೀಡಿದ ತಾರೆಯರನ್ನು ಒಬ್ಬರಾದ ಮೇಲೊಬ್ಬರಂತೆ ಕಳೆದುಕೊಂಡು ಚಿತ್ರರಂಗ ದುಃಖದಲ್ಲಿದೆ.ಹೀಗಿರುವಾಗ ಇಂದು (ಅಕ್ಟೋಬರ್ 25) ಭಾರತೀಯ ಚಿತ್ರರಂಗದ ಮತ್ತೊಬ್ಬ ಶ್ರೇಷ್ಠ ನಟ ಸತೀಶ್ ಶಾ ಕೊನೆಯುಸಿರೆಳೆದಿದ್ದಾರೆ.
ತಮ್ಮ ಅದ್ಭುತ ಹಾಸ್ಯ ಪ್ರಜ್ಞೆ ಮತ್ತು ವಿಶಿಷ್ಟ ನಟನಾ ಶೈಲಿಗೆ ಹೆಸರುವಾಸಿಯಾಗಿದ್ದ ಸತೀಶ್ ಶಾ, ಕಳೆದ ಕೆಲ ದಿನಗಳಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಇಂದು ( ಅಕ್ಟೋಬರ್ 25 ) ಚಿಕಿತ್ಸೆ ಫಲಕಾರಿಯಾಗದೇ ಸತೀಶ್ ಶಾ ತಮ್ಮ 74ನೇ ವಯಸ್ಸಿನಲ್ಲಿ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸತೀಶ್ ಶಾ ಅವರ ನಿಧನಕ್ಕೆ ಹಿಂದಿ ಕಿರುತೆರೆ ವಲಯ ಮತ್ತು ಬಾಲಿವುಡ್ ಕಂಬನಿ ಮಿಡಿದಿದ್ದು ಹಲವಾರು ಜನ ಸಂತಾಪ ಸೂಚಿಸಿದ್ದಾರೆ. ಸತೀಶ್ ಶಾ ಅವರನ್ನು ನೆನೆದು ಕಂಬನಿ ಮಿಡಿದಿದ್ದಾರೆ. ಸತೀಶ್ ಶಾ ಅವರ ನಿಧನದ ಸುದ್ದಿಯನ್ನು ನಿರ್ಮಾಪಕ ಅಶೋಕ್ ಪಂಡಿತ್ ಖಚಿತ ಪಡಿಸಿದ್ದು ಪ್ರಸಿದ್ದ ನಟ ಮತ್ತು ಮಹಾನ್ ವ್ಯಕ್ತಿ ಸತೀಶ್ ಶಾ ಮೂತ್ರಪಿಂಡ ವೈಫಲ್ಯದಿಂದ ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿ ಕೇಳಿ ತುಂಬಾ ದುಖ ಆಗುತ್ತಿದೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
25 ಜೂನ್ 1951ರಲ್ಲಿ ಮುಂಬೈನಲ್ಲಿ ಹುಟ್ಟಿದ್ದ ಸತೀಶ್ ಶಾ, 1984ರಲ್ಲಿ ಕುಂದನ್ ಶಾ ನಿರ್ದೇಶನದ ''ಯೇ ಜೋ ಹೈ ಜಿಂದಗಿ'' ಧಾರಾವಾಹಿಯಲ್ಲಿ ಹೊಟ್ಟೆ ಹುಣ್ಣಾಗುವಂತೆ ಎಲ್ಲರನ್ನು ನಗಿಸಿದ್ದರು. ವಿಶೇಷ ಅಂದರೆ 55 ಸಂಚಿಕೆ ಪ್ರಸಾರವಾದ ಈ ಧಾರಾವಾಹಿಯಲ್ಲಿ 55 ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದರು ಸತೀಶ್ ಶಾ.
''ಸಾರಾಭಾಯಿ ವರ್ಸಸ್ ಸಾರಾಭಾಯಿ'' ಸತೀಶ್ ಶಾ ಅಭಿನಯದ ಮತ್ತೊಂದು ಪ್ರಮುಖ ಮತ್ತು ಮೈಲಿಗಲ್ಲು ಸ್ಥಾಪಿಸಿದ ಧಾರಾವಾಹಿ. ಇನ್ನು 1984ರಲ್ಲಿಯೇ ಕುಂದನ್ ಶಾ ನಿರ್ದೇಶನದ ''ಜಾನೇ ಭಿ ದೋ ಯಾರೋ'' ಚಿತ್ರದಲ್ಲಿ ಇವರು ನಿರ್ವಹಿಸಿದ್ದ ಮುನ್ಸಿಪಲ್ ಕಮಿಷನರ್ ಡಿ'ಮೆಲ್ಲೋ' ಪಾತ್ರವನ್ನು ಚಿತ್ರರಸಿಕರು ಯಾವತ್ತು ಮರೆಯಲಾರರು.
''ಯೇ ಜೋ ಹೈ ಜಿಂದಗಿ''.. ''ಮೈ ಹೂ ನಾ''.. ''ಕಹೋ ನಾ ಪ್ಯಾರ್ ಹೈ''.. ''ಕಲ್ ಹೋ ನಾ ಹೋ''.. ''ಫನಾ''.. ''ಹಮ್ ಆಪ್ಕೇ ಹೈ ಕೌನ್''.. ''ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೇ''.. ''ಸಾತಿಯಾ''.. ''ಚಲ್ತೇ ಚಲ್ತೇ''.. ''ಭೂತನಾಥ್''.. ''ರಾ ಒನ್''.. ಹೀಗೆ 200ಕ್ಕೂ ಅಧಿಕ ಚಿತ್ರಗಳಲ್ಲಿ ಸತೀಶ್ ಶಾ ಅಭಿನಯಿಸಿದ್ದರು. ತಮ್ಮ ಅಭಿನಯದಿಂದ ಕೋಟ್ಯಂತರ ಜನರ ಹೃದಯವನ್ನು ಗೆದ್ದಿದ್ದರು.
ಇನ್ನು 1998ರಲ್ಲಿ ಕನ್ನಡದಲ್ಲಿ ತೆರೆಗೆ ಬಂದ ಅಬ್ಬಾಸ್.. ಮಾಧವನ್.. ಪ್ರಕಾಶ್ ರಾಜ್ ಅಭಿನಯದ ''ಶಾಂತಿ ಶಾಂತಿ ಶಾಂತಿ'' ಚಿತ್ರದಲ್ಲಿ ಸತೀಶ್ ಶಾ ಅಭಿನಯಿಸಿದ್ದರು. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದರು. ಸತೀಶ್ ಶಾ ಅಭಿನಯದ ದಕ್ಷಿಣ ಭಾರತದ ಏಕೈಕ ಚಿತ್ರ ಕನ್ನಡದ್ದು ಎನ್ನುವುದು ವಿಶೇಷ. 2014ರಲ್ಲಿ ಬಂದ ''ಹಮ್ಶಕಲ್ಸ್'' ಸತೀಶ್ ಶಾ ಅಭಿನಯದ ಕೊನೆಯ ಚಿತ್ರ.


Click it and Unblock the Notifications











