ಕೆಟ್ಟ ಮೇಲೆ ಬುದ್ಧಿ ಬಂತು!: 'ಆದಿಪುರುಷ್' ಹೊಸ ರಿಲೀಸ್ ಡೇಟ್ ಘೋಷಣೆ
ಕಳೆದೊಂದು ವಾರದಿಂದ 'ಆದಿಪುರುಷ್' ಸಿನಿಮಾ ರಿಲೀಸ್ ಡೇಟ್ ಪೋಸ್ಟ್ಪೋನ್ ಆಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈಗ ಅದು ಪಕ್ಕಾ ಆಗಿದೆ. ಸಿನಿಮಾ ಟೀಸರ್ ಹಾಗೂ ಪೋಸ್ಟರ್ ಬಗ್ಗೆ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ರೀ ಶೂಟ್ ಮಾಡಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ.
ಜನವರಿ 12ರಂದು ಸಂಕ್ರಾಂತಿ ಹಬ್ಬಕ್ಕೆ 'ಆದಿಪುರುಷ್' ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಅಭಿಮಾನಿಗಳು ಆ ದಿನ ಯಾವಾಗ ಬರುತ್ತೋ ನೆಚ್ಚಿನ ನಟನನ್ನು ಶ್ರೀರಾಮನ ವೇಷದಲ್ಲಿ ಯಾವಾಗ ನೋಡುತ್ತಿವೋ ಎಂದು ಕಾಯುತ್ತಿದ್ದರು. ಆದರೆ ಇನ್ನು 6 ತಿಂಗಳು ಹೆಚ್ಚು ಕಾಯುವಂತಾಗಿದೆ. ಜನವರಿ ಬದಲು ಜೂನ್ 16ಕ್ಕೆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಚಿತ್ರತಂಡ ಘೋಷಿಸಿದೆ. 6 ತಿಂಗಳಲ್ಲ ಇನ್ನು ಎಷ್ಟು ತಡವಾದರೂ ಪರವಾಗಿಲ್ಲ. ಸಿನಿಮಾ ಚೆನ್ನಾಗಿ ಬಂದರೆ ಅಷ್ಟೇ ಸಾಕು ಎನ್ನುತ್ತಿದ್ದಾರೆ ಅಭಿಮಾನಿಗಳು.
ಎಕ್ಸ್ಸೆನ್ಸ್ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿ ನಿರ್ದೇಶಕ ಓಂ ರಾವುತ್ ರಾಮಾಯಣ ಕಾವ್ಯವನ್ನು ಈ ಚಿತ್ರದಲ್ಲಿ ತೆರೆಗೆ ತರ್ತಿದ್ದಾರೆ. ಪ್ರಭಾಸ್ ಶ್ರೀರಾಮನಾಗಿ ಕಾಣಿಸಿಕೊಂಡರೆ ಕೃತಿ ಸನೂನ್ ಸೀತಾದೇವಿಯಾಗಿ ಬಣ್ಣ ಹಚ್ಚಿದ್ದಾರೆ. ಸನ್ನಿ ಸಿಂಗ್ ಲಕ್ಷ್ಮಣನಾಗಿ ಸೈಫ್ ಅಲಿಖಾನ್ ರಾವಣಾಸುರನಾಗಿ ಮಿಂಚಿದ್ದಾರೆ.

ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ಟೀಸರ್
ಕೆಲ ದಿನಗಳ ಹಿಂದೆ ಅಯೋಧ್ಯೆಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ 'ಆದಿಪುರುಷ್' ಸಿನಿಮಾ ಟೀಸರ್ ರಿಲೀಸ್ ಆಗಿತ್ತು. ಆದರೆ ಕೆಟ್ಟ ಗುಣಮಟ್ಟದ ಗ್ರಾಫಿಕ್ಸ್ ನೋಡಿ ಸಿನಿರಸಿಕರು ಬೇರಸಗೊಂಡಿದ್ದರು. ಇನ್ನು ಹನುಮಂತ, ರಾವಣಾಸುರ ಪಾತ್ರಗಳ ವೇಷಭೂಷಣದ ಬಗ್ಗೆಯೂ ಚಕಾರ ಎತ್ತಿದ್ದರು. ಅಯೋಧ್ಯೆಯ ರಾಮ ಮಂದಿರದ ಅರ್ಚಕರಾದ ಸತ್ಯೇಂದ್ರ ದಾಸ್ ಅವರು ಈ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. 'ಆದಿಪುರುಷ್' ಸಿನಿಮಾದಲ್ಲಿ ಶ್ರೀರಾಮ, ಹನುಮಂತ ಮತ್ತು ರಾವಣನನ್ನು ತಪ್ಪಾಗಿ ಚಿತ್ರಿಸಲಾಗಿದೆ. ಹೀಗಾಗಿ 'ಆದಿಪುರುಷ್' ಚಿತ್ರವನ್ನು ನಿಷೇಧಿಸಬೇಕು ಎಂದಿದ್ದಾರೆ. ಇನ್ನು ನೆಟ್ಟಿಗರಂತೂ ಸಿಕ್ಕಾಪ್ಟೆ ಟ್ರೋಲ್ ಮಾಡಿದ್ದರು.

6 ತಿಂಗಳು ತಡವಾಗಿ ಸಿನಿಮಾ ರಿಲೀಸ್
ಅಂದಾಜು 300 ಕೋಟಿ ರೂ. ಬಜೆಟ್ನಲ್ಲಿ 'ಆದಿಪುರುಷ್' ಸಿನಿಮಾ ನಿರ್ಮಾಣ ಆಗಿದೆ ಎನ್ನಲಾಗುತ್ತಿದೆ. ಆದರೆ ಚಿತ್ರದ ಟೀಸರ್ ನೋಡಿದಾಗ ಆ ರೀತಿ ಅನ್ನಿಸುವುದಿಲ್ಲ. ಯಾವುದೋ ಮಕ್ಕಳ ಆನಿಮೇಷನ್ ಸಿನಿಮಾ ನೋಡಿದಂತೆ ಭಾಸವಾಗುತ್ತಿದೆ. ಇದೇ ಕಾರಣಕ್ಕೆ ಪ್ರಭಾಸ್ ಅಭಿಮಾನಿಗಳು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ 100 ಕೋಟಿ ರೂ. ಬಜೆಟ್ನಲ್ಲಿ ಚಿತ್ರದ ಕೆಲ ದೃಶ್ಯಗಳನ್ನು ರೀ ಶೂಟ್ ಮಾಡಲು ಚಿತ್ರತಂಡ ಮುಂದಾಗಿದೆ. ಪ್ರಭಾಸ್ ಕೂಡ ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಕಂಪ್ಲೀಟ್ ಗ್ರಾಫಿಕ್ಸ್ ಬದಲಾಯಿಸೋ ಸಾಹಸಕ್ಕೆ ಕೈ ಹಾಕಲಾಗುತ್ತಿದೆ. ರೀ ವರ್ಕ್ಗೆ ಸಾಕಷ್ಟು ಸಮಯ ಬೇಕಿರುವ ಕಾರಣ 6 ತಿಂಗಳು ತಡವಾಗಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.

ಓಂ ರಾವುತ್ ಹೇಳಿದ್ದೇನು?
ಹೊಸ ರಿಲೀಸ್ ಡೇಟ್ ಘೋಷಿಸಿರುವ ನಿರ್ದೇಶಕರು "ಜೈ ಶ್ರೀ ರಾಮ್. 'ಆದಿಪುರುಷ್' ಬರೀ ಸಿನಿಮಾ ಅಲ್ಲ. ಪ್ರಭು ಶ್ರೀರಾಮನ ಮೇಲಿನ ನಮ್ಮ ಭಕ್ತಿ ಮತ್ತು ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಮೇಲಿನ ನಮ್ಮ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ವೀಕ್ಷಕರಿಗೆ ಸಂಪೂರ್ಣ ದೃಶ್ಯವೈಭವದ ಅನುಭವವನ್ನು ನೀಡಲು, ನಾವು ಚಿತ್ರದಲ್ಲಿ ಕೆಲಸ ಮಾಡುವ ತಂಡಗಳಿಗೆ ಹೆಚ್ಚಿನ ಸಮಯವನ್ನು ನೀಡಬೇಕಾಗಿದೆ. ಭಾರತವೇ ಹೆಮ್ಮೆ ಪಡುವಂತಹ ಸಿನಿಮಾ ಮಾಡಲು ನಾವು ಬದ್ಧರಾಗಿದ್ದೇವೆ. ನಿಮ್ಮ ಬೆಂಬಲ, ಪ್ರೀತಿ ಮತ್ತು ಆಶೀರ್ವಾದವೇ ನಮ್ಮನ್ನು ಮುನ್ನಡೆಸುತ್ತಿದೆ" ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಥಿಯೇಟರ್ನಲ್ಲಿ ನೋಡಿ ಎಂದಿದ್ದ ತಂಡ
ಇನ್ನು 'ಆದಿಪುರುಷ್' ಟೀಸರ್ ಟ್ರೋಲ್ ಬಗ್ಗೆ ಮಾತನಾಡಿದ್ದ ಚಿತ್ರತಂಡ ಇದು ಥಿಯೇಟರ್ಗಾಗಿ ಮಾಡಿದ ಸಿನಿಮಾ. ಇದು ಹೊಸ ಟೆಕ್ನಾಲಜಿ. ಅದನ್ನು 3D ಕನ್ನಡದಲ್ಲಿ ದೊಡ್ಡ ಪರದೆಯಲ್ಲಿ ನೋಡಿ ಆನಂದಿಸಬೇಕು. ಮೊಬೈಲ್, ಕಂಪ್ಯೂಟರ್ನಲ್ಲಿ ಅಂತಹ ಅನುಭವ ಸಿಗುವುದಿಲ್ಲ. ಇನ್ನು ನಾವು ಯಾರ ಭಾವನೆಗೂ ಧಕ್ಕೆ ಆಗುವಂತೆ ಚಿತ್ರದಲ್ಲಿ ಪಾತ್ರಗಳನ್ನು ಚಿತ್ರಿಸಿಲ್ಲ, ಇವತ್ತಿನ ಟ್ರೆಂಡ್ಗೆ ತಕ್ಕಂತೆ ರಾವಣನ ಲುಕ್ ಇದೆ ಎಂದಿದ್ದರು. ಆಂಧ್ರ, ತೆಲಂಗಾಣದಲ್ಲಿ ಕೆಲವೆಡೆ ಥಿಯೇಟರ್ಗಳಲ್ಲಿ ಟೀಸರ್ ಪ್ರದರ್ಶಿಸಿ ಈಗ ಹೇಳಿ ಹೇಗಿದೆ ಎಂದು ಕೇಳಿದ್ದರು. ಆದರೂ ಪ್ರೇಕ್ಷಕರ ಅಸಮಾಧಾನ ಕಮ್ಮಿ ಆಗಿರಲಿಲ್ಲ. ಹಾಗಾಗಿ ಈಗ ಚಿತ್ರವನ್ನು ತಿದ್ದಿ ತೀಡುವ ಕೆಲಸ ಶುರುವಾಗಿದೆ.


Click it and Unblock the Notifications











