ರಾಜೇಶ್ ಖನ್ನಾಗೆ ಎಷ್ಟು ಹೆಂಡತಿಯರು? ಆಶೀರ್ವಾದ ಬಂಗಲೆಯ ಅಸಲಿ ಒಡತಿ ಯಾರು? ಶಾಕ್ ನೀಡಿದ ಹೈಕೋರ್ಟ್
ರಾಜೇಶ್ ಖನ್ನಾ ಕೇವಲ ಹೆಸರಲ್ಲ. ಬಾಲಿವುಡ್ನ ಅಚ್ಚಳಿಯದ ಛಾಪು. ಭಾರತದ ಮೊದಲ ಸೂಪರ್ ಸ್ಟಾರ್. ಅಂದಕಾಲತ್ತಿಲ್ ಇವರ ಕಾರ್ ಮೇಲಿನ ಧೂಳನ್ನು ಮಹಿಳೆಯರು ಹಣೆಗೆ ತಿಲಕವಾಗಿ ಹಚ್ಚಿಕೊಳ್ಳುತ್ತಿದ್ದರು. ಇವರ ಕಾರಿನ ಗ್ಲಾಸ್ಗಳ ಮೇಲೆ ಮುತ್ತಿನ ಮಳೆಗೈದ ಚೆಲುವೆಯರಿಗೇನು ಕಡಿಮೆ ಇಲ್ಲ. ಆ ಕಾಲದಲ್ಲಿ ಬಾಲಿವುಡ್ನ ಕೇರ್ ಆಫ್ ಅಡ್ರೆಸ್ ಆಗಿದ್ದರು ಈ ಕಾಕಾ.
ಇಂಥಾ ರಾಜೇಶ್ ಖನ್ನಾ ಅವರ ವೈಯಕ್ತಿಕ ಬದುಕು ಇವರ ವೃತ್ತಿ ಬದುಕಿನಷ್ಟು ವರ್ಣರಂಜಿತವಾಗಿರಲಿಲ್ಲ. ಸಂಸಾರದ ಸುಖ ರಾಜೇಶ್ ಖನ್ನಾಗೆ ಸಿಗಲೇ ಇಲ್ಲ. ಖ್ಯಾತಿಯ ತುತ್ತ ತುದಿಯಲ್ಲಿದ್ದಾಗ ಚಿತ್ರರಂಗಕ್ಕೆ ಆಗಷ್ಟೇ ಬಂದಿದ್ದ, ತನ್ನ ಮೊದಲ ಚಿತ್ರ ಬಾಬಿಯ ಬಿಡುಗಡೆಯನ್ನು ಎದುರು ನೋಡುತ್ತಿದ್ದ ಡಿಂಪಲ್ ಕಪಾಡಿಯಾಗೆ ಮನ ಸೋತ ರಾಜೇಶ್ ಖನ್ನಾ ತಡಮಾಡದೇ ಮದುವೆ ಮಾಡಿಕೊಂಡರು.

ಅಚ್ಚರಿ ಅಂದರೆ ಆಗ ಡಿಂಪಲ್ ಕಪಾಡಿಯಾಗೆ ಕೇವಲ 16ರ ಹರೆಯ. ಮತ್ತೊಂದು ಕಡೆ ಮದುವೆಯಾದಾಗ ರಾಜೇಶ್ ಖನ್ನಾಗೆ 30 ವರ್ಷ. ಈ ಹಿನ್ನೆಲೆ ಆ ಕಾಲದಲ್ಲಿ ಇವರ ಮದುವೆ ತುಂಬಾನೇ ಸದ್ದು ಮಾಡಿತ್ತು. ವಿವಾದಕ್ಕೀಡಾಗಿತ್ತು. ಹೀಗೆ ಡಿಂಪಲ್ ಕಪಾಡಿಯಾ ಅವರ ಜೊತೆ ಮದುವೆಯಾದ ರಾಜೇಶ್ ಖನ್ನಾ ಆ ನಂತರ ಸಂಸಾರ ಮಾಡಿದ್ದು ಕೇವಲ 9ವರ್ಷ ಮಾತ್ರ. ತಮ್ಮ ಪ್ರೀತಿಯ ಸಂಕೇತವಾಗಿ ಟ್ವಿಂಕಲ್ ಖನ್ನಾ ಮತ್ತು ರಿಂಕಿ ಖನ್ನಾ ಎಂಬ ಇಬ್ಬರು ಮಕ್ಕಳಿದ್ದರೂ ಕೂಡ ಭಿನ್ನಾಭಿಪ್ರಾಯದಿಂದ ಇಬ್ಬರು ದೂರವಾದರು.
ಹಾಗಂಥ ಇಬ್ಬರು ವಿಚ್ಚೇದನ ಪಡೆಯಲಿಲ್ಲ. ಹಾದಿ ಬೀದಿ ರಂಪ ಮಾಡಲಿಲ್ಲ. ರಾಜೇಶ್ ಖನ್ನಾ ಅಗಲುವ ಕೊನೆಯ ದಿನದವರೆಗೆ ಡಿಂಪಲ್ ಕಪಾಡಿಯಾ, ರಾಜೇಶ್ ಖನ್ನಾ ಅವರ ಪತ್ನಿಯೆಂದೇ ಗುರುತಿಸಿಕೊಂಡರು. ಮನದಲ್ಲಿ ಬಿರುಕು ಮೂಡಿತ್ತು, ಮನೆಗಳು ಬದಲಾಗಿದ್ದವು. ಆದರೆ ಎಲ್ಲೋ ಒಂದು ಕಡೆ ಪ್ರೀತಿ ಇಬ್ಬರಲ್ಲೂ ಹಾಗೇ ಇತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಇಬ್ಬರು ಒಬ್ಬರನ್ನೊಬ್ಬರು ಮರೆತು ಬೇರೊಂದು ಮದುವೆಯಾಗಲಿಲ್ಲ. ಆದರೆ ಈ ಕಥೆಯಲ್ಲಿ ರಾಜೇಶ್ ಖನ್ನಾ ನಿಧನದ ನಂತರ ಟ್ವಿಸ್ಟ್ ಎದುರಾಯ್ತು. ಈ ತಿರುವಿನ ಹೆಸರೇ ಅನಿತಾ ಅಡ್ವಾಣಿ.
ಹೌದು, ಅನಿತಾ ಅಡ್ವಾಣಿ.. ತಮ್ಮನ್ನು ತಾವು ರಾಜೇಶ್ ಖನ್ನಾ ಅವರ ಎರಡನೇ ಪತ್ನಿ ಎಂದು ಹಲವು ವರ್ಷಗಳಿಂದ ಹೇಳಿಕೊಂಡು ಬಂದ ಮಹಿಳೆ. ಡಿಂಪಲ್ ಕಪಾಡಿಯಾ ಅವರಿಂದ ದೂರವಾಗಿ ತಮ್ಮ ಭವ್ಯವಾದ ಆಶೀರ್ವಾದ್ ಬಂಗಲೆಯಲ್ಲಿ ರಾಜೇಶ್ ಖನ್ನಾ ಏಕಾಂಗಿಯಾಗಿದ್ದಾಗ ಅವರ ದೇಖಾರೇಖಿ ಮಾಡಿದ್ದು ನಾನೇ ಎನ್ನುವ ವಾದವನ್ನು ಅನಿತಾ ಅಡ್ವಾಣಿ, ರಾಜೇಶ್ ಖನ್ನಾ ನಿಧನದ ನಂತರ ಮಾಡುತ್ತಲೇ ಬಂದಿದ್ದಾರೆ. ಅನಾರೋಗ್ಯದ ಸಮಯದಲ್ಲಿ ಅವರ ಆರೈಕೆ ಮಾಡಿರುವುದಾಗಿ ಹೇಳಿರುವ ಅನಿತಾ ಅವರಿಗಾಗಿ ಕರ್ವಾ ಚೌತ್ ವೃತವನ್ನು ಕೂಡ ನಾನು ಮಾಡಿದ್ದೇನೆ ಎಂದು ಹೇಳಿದ್ದಾರೆ.
ನಾವು ಲಿವ್ ಇನ್ ಸಂಬಂಧದಲ್ಲಿದ್ದೆವು ನಮ್ಮ ಮನೆಯಲ್ಲಿ ಚಿಕ್ಕ ದೇವಸ್ಥಾನವಿತ್ತು. ನಾನು ಕಪ್ಪು ಮಣಿಗಳಿರುವ ಚಿನ್ನದ ಮಂಗಳಸೂತ್ರ ಮಾಡಿಸಿದ್ದೆ. ಅವರು ಅದನ್ನು ನನಗೆ ಹಾಕಿದರು. ನಂತರ ಸಿಂಧೂರ ಹಚ್ಚಿ, ಇಂದಿನಿಂದ ನೀನು ನನ್ನ ಜವಾಬ್ದಾರಿ'ಎಂದರು. ಹಾಗೆ ಒಂದು ರಾತ್ರಿ ನಮ್ಮ ಮದುವೆ ನಡೆದುಹೋಯಿತು ಎಂದು ಕಳೆದೊಂದುವರೆ ದಶಕದಿಂದ ಹೇಳುತ್ತಲೇ ಬಂದಿದ್ದಾರೆ.

ಇನ್ನೂ ರಾಜೇಶ್ ಖನ್ನಾ ನಿಧನಾದ ನಂತರ ''ಆಶೀರ್ವಾದ'' ಬಂಗಲೆಯಿಂದ ತಮ್ಮನ್ನೂ ಹೊರಹಾಕಲಾಯಿತು ಎಂದು ಆರೋಪ ಮಾಡಿದ್ದ ಅನಿತಾ ಅಡ್ವಾಣಿ, ರಾಜೇಶ್ ಖನ್ನಾ ಅವರ ಅಧಿಕೃತ ಪತ್ನಿ ಡಿಂಪಲ್ ಕಪಾಡಿಯಾ, ಅಳಿಯ ಅಕ್ಷಯ್ ಕುಮಾರ್ ಮತ್ತು ಮಗಳು ಟ್ವಿಂಕಲ್ ಖನ್ನಾ ವಿರುದ್ಧ ಬಾಂದ್ರಾ ನ್ಯಾಯಾಲಯದಲ್ಲಿ ಕೌಟುಂಬಿಕ ಹಿಂಸಾಚಾರದ ಕ್ರಿಮಿನಲ್ ದೂರು ದಾಖಲಿಸಿದ್ದರು.
ಆದರೆ, 2015ರಲ್ಲಿ ಬಾಂಬೆ ಹೈಕೋರ್ಟ್ ಅರ್ಜಿ ವಜಾಗೊಳಿಸಿತ್ತು. ಅನಿತಾ ಅವರು ಎಂದಿಗೂ ರಾಜೇಶ್ ಖನ್ನಾ ಕುಟುಂಬದ ಸದಸ್ಯರೊಂದಿಗೆ ಒಂದೇ ಮನೆಯಲ್ಲಿ ವಾಸಿಸಿರಲಿಲ್ಲ, ಆದ್ದರಿಂದ ಆ ಕೇಸ್ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
ಇದಾದ ನಂತರ ಅನಿತಾ ಅಡ್ವಾಣಿ ತಮಗೆ 'ಪತ್ನಿ' ಎಂಬ ಕಾನೂನು ಮಾನ್ಯತೆ ಮತ್ತು ಆಸ್ತಿಯಲ್ಲಿ ಪಾಲು ಬೇಕೆಂದು 2017ರಲ್ಲಿ ಅನಿತಾ ನ್ಯಾಯಾಲಯದ ಮೊರೆ ಹೋಗಿದ್ದರು. ಆಗ ಡಿಂಪಲ್ ಕಪಾಡಿಯಾ, ಅಕ್ಷಯ್ ಕುಮಾರ್ ಮತ್ತು ಮಕ್ಕಳಾದ ಟ್ವಿಂಕಲ್ ಖನ್ನಾ.. ರಿಂಕಿ ಖನ್ನಾ.. ವಿರೋಧ ಮಾಡಿದ್ದರು. ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು ಕೂಡ ರಾಜೇಶ್ ಖನ್ನಾ ಅವರಿಂದ ಡಿಂಪಲ್ ಕಪಾಡಿಯಾ ಅಧಿಕೃತವಾಗಿ ವಿಚ್ಚೇದನ ಪಡೆದಿಲ್ಲ ಈ ಹಿನ್ನೆಲೆ ಎರಡನೇ ಮದುವೆಯಾಗಿರುವ ವಾದದಲ್ಲಿ ಅರ್ಥ ಇಲ್ಲ ಎಂದು ವಾದ ಮಾಡಿದ್ದರು. ಈ ಹಿನ್ನೆಲೆ ಕೆಳ ನ್ಯಾಯಾಲಯ ಅನಿತಾ ಅಡ್ವಾಣಿ ಅವರ ಅರ್ಜಿಯನ್ನು ತಿರಸ್ಕರಿಸಿತ್ತು.
ಹೀಗಾಗಿ ಅನಿತಾ ಆ ನಂತರ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಈಗ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿ ಶರ್ಮಿಳಾ ದೇಶಮುಖ್ ಅವರಿದ್ದ ಪೀಠವು ಈ ಪ್ರಕರಣವನ್ನು ಸುದೀರ್ಘವಾಗಿ ವಿಚಾರಣೆ ನಡೆಸಿ ಮಹತ್ವದ ತೀರ್ಪು ನೀಡಿದೆ. ಯಾವುದೇ ಸಂಬಂಧವನ್ನು ಮದುವೆ ಎಂದು ಪರಿಗಣಿಸಬೇಕಾದರೆ ಅದಕ್ಕೆ ಕಾನೂನುಬದ್ಧ ಅರ್ಹತೆ ಇರಬೇಕು. ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಅವರ ವಿವಾಹವು ಕಾನೂನುಬದ್ಧವಾಗಿ ಕೊನೆಗೊಂಡಿರಲಿಲ್ಲ. ಈ ಕಾರಣಕ್ಕೆ ಅನಿತಾ ಅಡ್ವಾಣಿ ಅವರನ್ನು ಪತ್ನಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅನಿತಾ ಅವರ ಅರ್ಜಿಯನ್ನು ವಜಾಗೊಳಿಸಿದೆ. ಇದರಿಂದ ಅನಿತಾ ಅಡ್ವಾಣಿ ಅವರ 14 ವರ್ಷಗಳ ಕಾನೂನು ಹೋರಾಟವು ಸದ್ಯಕ್ಕೆ ಹೈಕೋರ್ಟ್ನಲ್ಲಿ ಅಂತ್ಯಗೊಂಡಿದೆ. ಮುಂದೆ ಅನಿತಾ ಅಡ್ವಾಣಿ ಸುಪ್ರೀಂ ಕೋರ್ಟ್ ಹೋಗುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











