ಲಿಯಾರಿಯ ರಕ್ತಚರಿತ್ರೆ ಬರೆಯಲು ಮತ್ತೆ ಬಂದ ಹಮ್ಜಾ ; ಧುರಂಧರ್ 2 ಟ್ರೇಲರ್- ರಣವೀರ್ ಸಿಂಗ್ ಧಗಧಗ
ಪ್ಯಾನ್ ಇಂಡಿಯಾ ಅಲೆಯಿಂದಾಗಿ ''ಬಾಲಿವುಡ್'' ಬೆಚ್ಚಿ ಬಿದ್ದು ವರ್ಷಗಳೇ ಆಗಿವೆ. ಮೊದಲೆಲ್ಲ ದಕ್ಷಿಣ ಭಾರತೀಯ ಚಿತ್ರರಂಗವನ್ನು ಲೇವಡಿ ಮಾಡುತ್ತಿದ್ದ ಹಿಂದಿ ಉದ್ಯಮ ಈ ಪ್ಯಾನ್ ಇಂಡಿಯಾ ಗಾಳಿಯಿಂದ ಚಡಪಡಿಸುತ್ತಿದೆ.
ಯಾಕೆಂದರೆ ಬದಲಾದ ಈ ಕಾಲದಲ್ಲಿ ಯಶ್.. ಅಲ್ಲು ಅರ್ಜುನ್.. ಪ್ರಭಾಸ್.. ಜ್ಯೂ.ಎನ್.ಟಿ.ಆರ್.. ಹೀಗೆ ಸೌತ್ ಇಂಡಿಯಾದ ಅನೇಕ ಸ್ಟಾರ್ಗಳು ಹಿಂದಿ ಮಾರುಕಟ್ಟೆಯನ್ನು ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ. ತಮ್ಮದೇ ಆದ ಅಭಿಮಾನಿ ಬಳಗವನ್ನು ಉತ್ತರ ಭಾರತದಲ್ಲಿ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಕ್ಷಿಣದ ಈ ಸ್ಟಾರ್ಗಳ ಹಾವಳಿಯನ್ನು ಕಂಡು ಬಾಲಿವುಡ್ ಕಳೆದ ವರ್ಷಾಂತ್ಯದವರೆಗೆ ಅಕ್ಷರಶಃ ತಲೆ ಮೇಲೆ ಕೈ ಹೊತ್ತು ಕುಂತಿತ್ತು. ಹಿಂದಿ ಪ್ರೇಕ್ಷಕರು ಮಾತ್ರವಲ್ಲದೇ ವಿಮರ್ಷಕರು ಕೂಡ ಬಾಲಿವುಡ್ ಕಥೆ ಖತಂ ಎಂದುಕೊಂಡಿದ್ದರು. ಈ ಸಮಯದಲ್ಲಿ ಲಿಯಾರಿಯ ಬೀದಿಯಿಂದ ಎದ್ದು ಬಂದ ''ಧುರಂಧರ್'' ಮಲಗಿದ್ದ ಬಾಲಿವುಡ್ನ ಬಡಿದೆಬ್ಬಿಸಿತ್ತು. ಹೊಸ ಹುರುಪು ತುಂಬಿತ್ತು. ಬಾಕ್ಸಾಫೀಸ್ನಲ್ಲಿ ಐತಿಹಾಸಿಕ ದಾಖಲೆಯನ್ನು ಕೂಡ ಬರೆದಿತ್ತು. ಈಗ ''ಧುರಂಧರ್ 2'' ಸರದಿ.
ಹೌದು, ಅಸಂಖ್ಯಾತ ಜನ ಕಾತುರದಿಂದ ಕಾಯುತ್ತಿದ್ದ ಘಳಿಗೆ ಕೊನೆಗೂ ಬಂದಿದೆ. ''ಧುರಂಧರ್ 2'' ಟ್ರೇಲರ್ ಬಿಡುಗಡೆಯಾಗಿದೆ. ನಿರೀಕ್ಷಿಸಿದಂತೆ ಲಿಯಾರಿಯ ರಕ್ತ ಸಿಕ್ತ ಅಧ್ಯಾಯದ ಸುಳಿವನ್ನೂ ಈ ಟ್ರೇಲರ್ ನೀಡಿದೆ. ನಿರೀಕ್ಷೆಯ ಮಟ್ಟವನ್ನೂ ಖೂಡ ತಲುಪಿರುವ ಟ್ರೇಲರ್ ಸದ್ಯ ಹಲವರಿಗೆ ಹುಚ್ಚಿಡಿಸಿದೆ. ಇದಕ್ಕೆ ಈ ಟ್ರೇಲರ್ ಕಳೆಗಡೆ ಯೂಟ್ಯೂಬ್ನಲ್ಲಿ ಹರಿದು ಬಂದಿರುವ ಜನಾಭಿಪ್ರಾಯವೇ ಸಾಕ್ಷಿ.
ಇನ್ನು ''ಧುರಂಧರ್'' ಕಣ್ತುಂಬಿಕೊಂಡವರಿಗೆ ಆ ಚಿತ್ರದ ಕ್ಲೈಮ್ಯಾಕ್ಸ್ ಇನ್ನೂ ನೆನಪಿರಬಹುದು. ಅಕ್ಷಯ್ ಖನ್ನಾ ಅವರ ಗಾಡಿ ರೋಕ್ ಡೈಲಾಗ್ನ ಯಾರು ಮರೆತಿರಲಾರರು. ಆಸ್ಪತ್ರೆಯ ಸನ್ನಿವೇಶ ಕೂಡ ಅಷ್ಟೇ. ''ಧುರಂಧರ್ 2'' ಕಥೆ ಇಲ್ಲಿಂದನೇ ಶುರುವಾಗಲಿದೆ.
ರೆಹಮಾನ್ ಡಕಾಯಿತ್ ಹ*ತ್ಯೆಯ ನಂತರ ಹಮ್ಜಾ ಅಲಿ ಮಜಾರಿ ಹೇಗೆ ಲಿಯಾರಿಯ ಲೀಡರ್ ಆಗ್ತಾನೆ..? ಮೇಜರ್ ಇಕ್ಬಾಲ್ ಕಥೆಯನ್ನು ಹೇಗೆ ಮುಗಿಸುತ್ತಾನೆ..? ಹಮ್ಜಾಗೆ ಎದುರಾಗುವ ಸವಾಲುಗಳೇನು..? ಎನ್ನುವುದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿರುವುದು ಸ್ಪಷ್ಟವಾಗಿದೆ. ಇದರ ನಡುವೆ ಹಮ್ಜಾ ಅಲಿ ಮಜಾರಿಯಾಗುವ ಮುನ್ನ ಸಾಮಾನ್ಯ ವ್ಯಕ್ತಿಯಾಗಿದ್ದ ಜಸ್ಕಿರತ್ ಸಿಂಗ್ ರಂಗಿ ಬದುಕಿನಲ್ಲೇನಾಗಿತ್ತು..? ಹಮ್ಜಾ ಆಗಲು ಜಸ್ಕಿರತ್ ಸಿಂಗ್ ರಂಗಿ ಒಪ್ಪಿಕೊಂಡಿದ್ದೇಕೆ..? ಮತ್ತು ಹೇಗೆ..? ಎನ್ನುವ ಪ್ರಶ್ನೆಗೆ ಕೂಡ ಉತ್ತರ ಸಿಗಲಿದೆ.

ಮೊದಲ ಭಾಗದಲ್ಲಿ ಚಿತ್ರದ ಸಂಗೀತ ಮಾತ್ರವಲ್ಲದೇ ಡೈಲಾಗ್ಗಳು ಕೂಡ ಕಿಕ್ ನೀಡಿದ್ದವು. ಉದಾಹರಣೆಗೆ ''ಘಾಯಲ್ ಹೂ ಇಸ್ಲಿಯೇ ಘಾತಕ್ ಹು''.. ''ನಜರ್ ಔರ್ ಸಬರ್''.. ಇತ್ಯಾದಿ. ಈ ಬಾರಿಯೂ ಕೂಡ ಈ ಚುರುಕಾದ ಚುಟುಕಾದ ಸಂಭಾಷಣೆಗಳು ಇಲ್ಲಿವೆ. ಆ ಪೈಕಿ ''ಹೌಸಲಾ, ಇಂಧನ್, ಬದ್ಲಾ'' ಡೈಲಾಗ್ ಈಗಾಗಲೇ ಹಲವರ ಬಾಯಲ್ಲಿ ನಲಿಯುತ್ತಿದೆ. "ಜಹಾ ದರ್ದ್ ಹೈ, ವಹಾ ಮರ್ದ್ ಹೈ'' ಡೈಲಾಗ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಅಕ್ಷಯ್ ಖನ್ನಾ ಹೊರತು ಪಡಿಸಿದರೆ ಮೊದಲ ಭಾಗದಲ್ಲಿದ್ದ ಬಹುತೇಕರು ''ಧುರಂಧರ್ 2''ನಲ್ಲಿ ಮುಂದುವರೆದಿದ್ದಾರೆ. ಇನ್ನೂ ಮೊದಲ ಭಾಗದಲ್ಲಿ ಅಕ್ಷಯ್ ಖನ್ನಾ ಮತ್ತು ರಣವೀರ್ ಸಿಂಗ್ ಪಾತ್ರದ ಸುತ್ತ ಚಿತ್ರದ ಕಥೆ ಸುತ್ತಿತ್ತು. ಈ ಬಾರಿ ಅರ್ಜುನ್ ರಾಂಪಾಲ್ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ವಿಚಾರವನ್ನು ಕೂಡ ಟ್ರೇಲರ್ ಸ್ಪಷ್ಟ ಪಡಿಸಿದೆ.
ಅಂದ್ಹಾಗೇ ಈ ಬಾರಿ ''ಧುರಂಧರ್ 2'' ಬಡೇ ಸಾಬ್ ಎಂಬ ಪಾತ್ರ ಕೂಡ ಇದೆ. ಈ ಪಾತ್ರ ಸುತ್ತ ಈಗಾಗಲೇ ಹಲವರಲ್ಲಿ ಕುತೂಹಲ ಮನೆ ಮಾಡಿದೆ. ಇಮ್ರಾನ್ ಹಶ್ಮಿ.. ಸಲ್ಮಾನ್ ಖಾನ್.. ಹೀಗೆ ಹಲವರ ಹೆಸರು ಈ ಪಾತ್ರದ ಜೊತೆ ತಳುಕು ಹಾಕಿಕೊಂಡಿದೆ. ಹೀಗಾಗಿ ಟ್ರೇಲರ್ ನಲ್ಲಿ ಬಡೇ ಸಾಬ್ ದರ್ಶನವಾಗಬಹುದು ಎಂದು ಹಲವರು ಅಂದುಕೊಂಡಿದ್ದರು. ಆದರೆ, ಆ ಬಡೇ ಸಾಬ್ ಯಾರು ಎನ್ನುವುದಕ್ಕೆ ಚಿತ್ರಮಂದಿರದಲ್ಲಿಯೇ ಉತ್ತರ ಸಿಗಲಿ ಎಂದೋ ಏನೋ ಆದಿತ್ಯ ಧರ್ 3 ನಿಮಿಷ 25 ಸೆಕೆಂಡ್ ಇರುವ ಟ್ರೇಲರ್ ನಲ್ಲಿ ಯಾವ ಸುಳಿವನ್ನು ಕೂಡ ಬಿಟ್ಟು ಕೊಟ್ಟಿಲ್ಲ.
ಒಟ್ನಲ್ಲಿ ಸದ್ಯ ''ಧುರಂಧರ್ 2'' ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದ ಮೇಲೀನ ನಿರೀಕ್ಷೆಯನ್ನು ಹೆಚ್ಚಿಸಿದೆ. ಮಾರ್ಚ್ 19ರಂದು ''ಧುರಂಧರ್ 2'' ಜಾತ್ರೆ ಭಾರತದಲ್ಲಿ ಹೇಗೆ ನಡೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ಇದಕ್ಕೂ ಮುನ್ನ ಮಾರ್ಚ್ 18ರಂದು ಚಿತ್ರತಂಡ ಪ್ರಿಮಿಯರ್ ಪ್ರದರ್ಶನ ಹಮ್ಮಿಕೊಂಡಿದ್ದು ಆಸಕ್ತ ಚಿತ್ರಪ್ರೇಮಿಗಳು ಒಂದು ದಿನ ಮೊದಲೇ ಚಿತ್ರವನ್ನು ನೋಡಬಹುದು.


Click it and Unblock the Notifications











