ದುರಾದೃಷ್ಟದ ಪರಾಕಾಷ್ಠೆ; ಬಿಡುಗಡೆಯಾಗದೇ 3 ವರ್ಷದಿಂದ ಡಬ್ಬಾದಲ್ಲಿಯೇ ಕೊಳೆಯುತ್ತಿವೆ ಈ ಸ್ಟಾರ್ ನಟಿಯ 3 ಸಿನಿಮಾಗಳು
''ಅದೃಷ್ಟ'' ಅನ್ನೋದು ಅಷ್ಟು ಸುಲಭವಾಗಿ ಯಾರ ಸ್ವತ್ತು ಆಗಲ್ಲ. ರಾತ್ರೋರಾತ್ರಿ ಆರಕ್ಕೇರಿದವರು ಮಾರನೇ ದಿನವೇ ಮೂರಕ್ಕಿಳಿದು ಬಿಡುತ್ತಾರೆ. ''ಲಕ್'' ಅನ್ನುವ ''ಕಿಕ್'' ಅಷ್ಟು ಸುಲಭಕ್ಕೆ ಯಾರಿಗೂ ಹತ್ತಲ್ಲ. ಆದರೆ ಇದನ್ನರಿಯದ ಅನೇಕರು ಬಣ್ಣದ ಲೋಕದಲ್ಲಿ ಡಿಮ್ಯಾಂಡ್ ಇದ್ದಾಗ, ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಿಕೊಳ್ಳುತ್ತಾರೆ. ಇನ್ನು ತಡೆಯುವರು ಯಾರು ಇಲ್ಲ ಎಂಬ ಭ್ರಮೆಯಲ್ಲಿ ಓಡಾಡಲು ಶುರು ಮಾಡುತ್ತಾರೆ. ಹೇಗೂ ''ಓಡುವ ಕುದುರೆ'' ಎಂದು ಬಣ್ಣದ ಮಂದಿ ಇವರ ಮೇಲೆ ಬಾಜಿ ಕಟ್ತಾರೆ ಕೂಡ.
ಆದರೆ.. ಸಮಯ, ಕೆಲವೊಮ್ಮೆ ಸಮಸ್ಯೆಯನ್ನ ತಂದೊಡ್ಡುತ್ತದೆ. ಅದೃಷ್ಟ ಕೈ ಕೊಟ್ಟಾಗ ಚಿನ್ನದಂತಿದ್ದ ಬದುಕು ಚಿತ್ರಾನ್ನವಾಗುತ್ತದೆ. ಇದಕ್ಕೆ ವಾಣಿ ಕಪೂರ್ ಸದ್ಯದ ಉದಾಹರಣೆ. ಹೌದು, ವಾಣಿ ಕಪೂರ್.. ಬಾಲಿವುಡ್ನ ಬೋಲ್ಡ್ ಚೆಲುವೆ. ಚಿತ್ರರಂಗದಲ್ಲಿ 13 ವರ್ಷ ಪೂರೈಸಿರುವ ವಾಣಿ ಕಪೂರ್ ಅಭಿನಯದ ಮೊದಲ ಚಿತ್ರ ''ಶುದ್ದ್ ದೇಸಿ ರೊಮ್ಯಾನ್ಸ್'' ಆದರೂ ಜನರ ಕಣ್ಣು ಇವರ ಮೇಲೆ ಬಿದ್ದಿದ್ದು ''ಬೇಫಿಕ್ರೆ'' ಚಿತ್ರ ತೆರೆಗೆ ಬಂದಾಗ.

''ಬೇಫಿಕ್ರೆ''ಯಲ್ಲಿ ಬಹುತೇಕ ಬಿಕಿನಿಯಲ್ಲಿಯೇ ಕಾಣಿಸಿಕೊಂಡ ವಾಣಿ ಕಪೂರ್ ಚಿತ್ರದ ನಾಯಕ ರಣ್ವೀರ್ ಸಿಂಗ್ ಅವರ ತುಟಿಗೆ 23 ಬಾರಿ ಲೊಚ ಲೊಚ ಕಿಸ್ ಮಾಡಿದ್ದರು. ಈ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಹಾಕಿದ್ದರು. ''ಬೇಫಿಕ್ರೆ'' ನಂತರ ಹೃತಿಕ್ ರೋಷನ್ ಜೊತೆ ''ವಾರ್'' ಚಿತ್ರದಲ್ಲಿ ಕೂಡ ಕಾಣಿಸಿಕೊಂಡ ವಾಣಿ ಕಪೂರ್ ಆ ನಂತರ ''ಬೆಲ್ ಬಾಟಂ''.. ''ಚಂದಿಗಡ್ ಕರೇ ಆಶಿಕಿ''.. ''ಶಮ್ಶೇರಾ.''. ಹೀಗೆ ಒಂದಾದ ಮೇಲೊಂದು ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ನಿಜಕ್ಕೂ ವಾಣಿ ಅದೃಷ್ಟ ಖುಲಾಯಿಸಿದ್ದ ದಿನಗಳವು.
ಆದರೆ ಈಗ ವಾಣಿ ಕಪೂರ್ ಗೆ ಅದೃಷ್ಟ ಕೈ ಕೊಟ್ಟಿದೆ. ಇದಕ್ಕೆ ಪುರಾವೆ ಎನ್ನುವಂತೆ ವಾಣಿ ಕಪೂರ್ ಅಭಿನಯದ ಮೂರು ಚಿತ್ರಗಳು ಕಳೆದ ಮೂರು ವರ್ಷಗಳಿಂದ ಡಬ್ಬಾದಲ್ಲಿಯೇ ಕೊಳೆಯುತ್ತಿವೆ.
ಹೌದು, ''ಬತ್ತ್ಮೀಜ್ ಗಿಲ್''.. ''ಸರ್ವಗುಣ್ ಸಂಪನ್ನ್''. ಮತ್ತು ''ಅಬೀರ್ ಗುಲಾಲ್''.. ಮೂರು ವರ್ಷವಾದರೂ ಬಿಡುಗಡೆಯ ಭಾಗ್ಯ ಕಾಣದ ವಾಣಿ ಕಪೂರ್ ಅಭಿನಯದ ಮೂರು ಚಿತ್ರಗಳಿವು. ಈ ಮೂರರಲ್ಲಿ ಶೋನಾಲಿ ರತ್ತನ್ ದೇಶಮುಖ್ ನಿರ್ದೇಶನದ ''ಸರ್ವಗುಣ್ ಸಂಪನ್ನ್'' ಚಿತ್ರದ ಚಿತ್ರೀಕರಣ 2023ರಲ್ಲಿಯೇ ಮುಕ್ತಾಯವಾಗಿದೆ.
ಇನ್ನೂ ಈ ಚಿತ್ರಕ್ಕೆ ಹಣ ಹೂಡಿದ್ದು ಹೊಸ ನಿರ್ಮಾಣ ಸಂಸ್ಥೆಯಲ್ಲಿ. ನಿರ್ಮಾಣ ಸಂಸ್ಥೆ ದಿವಾಳಿ ಕೂಡ ಆಗಿಲ್ಲ. ಬದಲಿಗೆ ''ಸ್ತ್ರೀ''.. ''ಸ್ತ್ರೀ 2''.. ''ಮುಂಜ್ಯಾ''.. ''ಭೇಡಿಯಾ''.. ಅಂತಹ ಚಿತ್ರಗಳನ್ನು ನಿರ್ಮಾಣ ಮಾಡಿರುವ ದಿನೇಶ್ ವಿಜನ್ ಅವರ ''ಮ್ಯಾಡಾಕ್ ಸಂಸ್ಥೆ'' ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಆದರೂ ಕೂಡ ಚಿತ್ರ ಬಿಡುಗಡೆಯಾಗಿಲ್ಲ. ''ವೆರೈಟಿ ಇಂಡಿಯಾ'' ವರದಿಯ ಪ್ರಕಾರ ಈ ಚಿತ್ರದ ಓಟಿಟಿ ಹಕ್ಕುಗಳು ಬಿಕರಿಯಾಗುತ್ತಿಲ್ಲ. ಹೀಗಾಗಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿ ಕೈ ಸುಟ್ಟುಕೊಳ್ಳುವ ಬದಲು ಡಬ್ಬಾದಲ್ಲಿ ಚಿತ್ರವನ್ನು ಇಡುವುದೇ ಉತ್ತಮ ಎಂದು ದಿನೇಶ್ ವಿಜನ್ ನಿರ್ಧಾರ ಮಾಡಿದ್ದಾರೆ.

ಇನ್ನೂ ''ಬತ್ತ್ಮೀಜ್ ಗಿಲ್'' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು 2024ರಲ್ಲಿ. ಆಯುಷ್ಮಾನ್ ಖುರಾನಾ ಅವರ ಸಹೋದರ ಅಪರಶಕ್ತಿ ಖುರಾನ ಈ ಚಿತ್ರದಲ್ಲಿ ವಾಣಿ ಕಪೂರ್ ಗೆ ನಾಯಕನಾಗಿದ್ದಾರೆ. ನವಜೋತ್ ಗುಲಾಟಿ ನಿರ್ದೇಶನದ ಈ ಹಾಸ್ಯ ಚಿತ್ರದಲ್ಲಿ ಪರೇಶ್ ರಾವಲ್ ಅಂತಹ ದಿಗ್ಗಜ ಕೂಡ ಇದ್ದಾರೆ. ಲಂಡನ್ನಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಆದರೆ ಎರಡು ವರ್ಷವಾದರೂ ಬಿಡುಗಡೆಯ ಭಾಗ್ಯ ಮಾತ್ರ ಇನ್ನೂ ಈ ಚಿತ್ರಕ್ಕೆ ಸಿಕ್ಕಿಲ್ಲ. ಈ ಎರಡು ಚಿತ್ರಗಳ ಕಥೆ ಹೀಗಾದರೆ ''ಅಬೀರ್ ಗುಲಾಲ್'' ಕಥೆ ಸ್ವಲ್ಪ ಭಿನ್ನವಾಗಿದೆ.
ಹೌದು. ''ಅಬೀರ್ ಗುಲಾಲ್'' ಬಿಡುಗಡೆಯಾಗಿದೆ. ಆದರೆ ಭಾರತದಲ್ಲಿ ಈ ಚಿತ್ರದ ಬಿಡುಗಡೆಗೆ ಅವಕಾಶ ಸಿಕ್ಕಿಲ್ಲ. ಯಾಕೆಂದರೆ ಈ ಚಿತ್ರದ ಕಥಾನಾಯಕ ಬೇರೆ ಯಾರು ಅಲ್ಲ ಬದಲಿಗೆ ಫವಾದ್ ಖಾನ್. ಪಾಕಿಸ್ತಾನದ ಪ್ರಜೆಯಾದ ಫವಾದ್ 9 ವರ್ಷಗಳ ನಂತರ ಮಾಡಿದ ಹಿಂದಿ ಚಿತ್ರ ಇದು.
ಇನ್ನೇನೂ ಈ ಚಿತ್ರ ಬಿಡುಗಡೆಯಾಗಬೇಕು ಎನ್ನುವಷ್ಟರಲ್ಲಿ ಏಪ್ರಿಲ್ 2025ರಲ್ಲಿ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ದಾಳಿ ಮಾಡಿದ್ದರು. ಅಮಾಯಕರ ಪ್ರಾಣ ತೆಗೆದಿದ್ದರು. ಈ ಹಿನ್ನೆಲೆ ಈ ಚಿತ್ರವನ್ನು ಭಾರತದಲ್ಲಿ ನಿಷೇಧಿಸಲಾಯ್ತು. ಬಿಡುಗಡೆ ಮಾಡಲು ಚಿತ್ರತಂಡ ಹಲವು ಸರ್ಕಸ್ ಮಾಡಿತಾದರೂ ಅವಕಾಶ ಸಿಗಲಿಲ್ಲ. ಈ ಹಿನ್ನೆಲೆ ಬೇರೆ ದಾರಿ ಇಲ್ಲದೇ ಸೆಪ್ಟೆಂಬರ್ 12-2025ರಂದು ಈ ಚಿತ್ರವನ್ನು ಭಾರತವನ್ನು ಹೊರತು ಪಡಿಸಿ ಬೇರೆ ಕಡೆ ಬಿಡುಗಡೆ ಮಾಡಲಾಯ್ತು. ಓಟಿಟಿಯಲ್ಲಿ ಈ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ.
ಹೀಗೆ ವಾಣಿ ಕಪೂರ್ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾಗದೇ ಡಬ್ಬಾದಲ್ಲಿಯೇ ಉಳಿದಿವೆ. ಮತ್ತೊಂದು ಕಡೆ ವಾಣಿ ಕಪೂರ್ ಅವಕಾಶಗಳ ಕೊರತೆಯನ್ನು ಕೂಡ ಎದುರಿಸುತ್ತಿರುವಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಇವರ ವಿಕ್ಕಿಪೀಡಿಯಾ ಪ್ರಕಾರ ಇವರ ಕೈಯಲ್ಲಿ ಸದ್ಯ ಯಾವ ಚಿತ್ರ ಕೂಡ ಇಲ್ಲ.
ಒಟ್ನಲ್ಲಿ ವಾಣಿ ಕಪೂರ್ ಅವರಿಗೆ ಈಗ ಮತ್ತೊಂದು ಅವಕಾಶ ಬೇಕಿದೆ. ವೃತ್ತಿ ಬದುಕನ್ನು ಮತ್ತೊಮ್ಮೆ ವಾಣಿ ಕಪೂರ್ ಆರಂಭದಿಂದ ಶುರು ಮಾಡಬೇಕಿದೆ. ಈ ವರ್ಷ ವಾಣಿ ಕಪೂರ್ ಬದುಕಿನಲ್ಲಿ ಪವಾಡ ನಡೆಯುತ್ತಾ..? ವೃತ್ತಿ ಜೀವನ ತಿರುವು ಪಡೆಯುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











